Hari Hara Veera Mallu Trailer: ಔರಂಗಜೇಬ್ ಎದುರು ವೀರಮಲ್ಲು ಧರ್ಮಯುದ್ಧ, ಫ್ಯಾನ್ಸ್ ಫಿದಾ
ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ 'ಹರಿಹರ ವೀರಮಲ್ಲು' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಔರಂಗಜೇಬ್ ವಿರುದ್ಧ ವೀರಮಲ್ಲು ಆರ್ಭಟದ ಝಲಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಜುಲೈ 24ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಬಹುಕೋಟಿ ವೆಚ್ಚದಲ್ಲಿ ಈ ಐತಿಹಾಸಿಕ ಕಥಾಹಂದರದ ಸಿನಿಮಾ ತೆರೆಗೆ ತರಲಾಗುತ್ತಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಹರಿಹರ ವೀರಮಲ್ಲು' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಕ್ರಿಶ್ ಹಾಗೂ ಜೋತಿಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಎಂ. ಎಂ ಕೀರವಾಣೀ ಸಂಗೀತ ಚಿತ್ರಕ್ಕಿದೆ. ಪವನ್ ಕಲ್ಯಾಣ್ ಜೊತೆಗೆ ಬಾಬಿ ಡಿಯೋಲ್, ನಿಧಿ ಅಗರ್ವಾಲ್, ನರ್ಗೀಸ್ ಫಕ್ರಿ, ಸತ್ಯರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. 'ಬಾಹುಬಲಿ' ಸಿನಿಮಾ ರೀತಿ ಆಕ್ಷನ್ ಸನ್ನಿವೇಶಗಳು, ಯುದ್ಧ ಸನ್ನಿವೇಶಗಳು ಚಿತ್ರದಲ್ಲಿದೆ.

ಮೊಘಲರ ಆಳ್ವಿಕೆಯ ಕಾಲಘಟ್ಟದಲ್ಲಿ ಚಿತ್ರದ ಕಥೆ ಸಾಗುತ್ತದೆ. ಮೊಘಲರಿಂದ ಕೋಹಿನೂರ್ ವಜ್ರವನ್ನು ಕದಿಯಲು ಮುಂದಾಗುವ ವೀರಮಲ್ಲು ಸಾಹಸವನ್ನು ಕಟ್ಟಿಕೊಡಲಾಗಿದೆ. ಅದ್ಧೂರಿ ವಿಷ್ಯುವಲ್ಸ್, ಹೈವೋಲ್ಟೇಜ್ ಆಕ್ಷನ್ ಸನ್ನಿವೇಶಗಳು, ಪವನ್ ಡೈಲಾಗ್ ಧಮಾಕ, ಕೀರವಾಣಿ ಬಿಜಿಎಂ ಸೇರಿಸಿ ಟ್ರೈಲರ್ ಕಟ್ ಮಾಡಲಾಗಿದೆ. ಅಭಿಮಾನಿಗಳು ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದು ಫಸ್ಟ್ ಡೇ ಫಸ್ಟ್ ಸಿನಿಮಾ ನೋಡುವುದು ಪಕ್ಕಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಔರಂಗಜೇಬ್ ಪಾತ್ರದಲ್ಲಿ ಬಾಬಿ ಡಿಯೋಲ್ ನಟಿಸಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಹಿಂದುವಾಗಿ ಬದುಕಲು ಸುಂಕ ಪಾವತಿಸಬೇಕಾದ ಸಮಯ. ಈ ದೇಶದ ಶ್ರಮ ಬಾದ್ಷಾ ಪಾದದ ಕೆಳಗೆ ತುಳಿದು ಹಾಕುತ್ತಿರುವ ಸಮಯ. ನಿಜವಾದ ಯೋಧನ ಉದಯಕ್ಕೆ ಪ್ರಕೃತಿಯೇ ಕಾಯುತ್ತಿರು ಸಮಯ, ಎನ್ನುವ ವಾಯ್ಸ್ ಓವರ್ ಹಿನ್ನೆಲೆಯಲ್ಲಿ 'ಹರಿಹರ ವೀರಮಲ್ಲು' ಟ್ರೈಲರ್ ಶುರುವಾಗುತ್ತದೆ. ಬಳಿಕ ಔರಂಗಜೇಬ್ ಆರ್ಭಟದ ದರ್ಶನವಾಗುತ್ತದೆ. ಮುಂದೆ ವೀರಮಲ್ಲು ಆಗಿ ಪವನ್ ಕಲ್ಯಾಣ್ ದರ್ಬಾರ್ ಝಲಕ್ ತೋರಿಸಿದ್ದಾರೆ. "ಯಾವಾಗಲೂ ಮೇಕೆನ ತಿನ್ನೋ ಹುಲಿನ ನೋಡಿರ್ತೀಯಾ. ಈಗ ಹುಲಿನ ಹೊಡೆದು ಹಾಕುವ ಹೆಬ್ಬುಲಿಯನ್ನು ನೋಡ್ತಿಯಾ" ಎನ್ನುವ ಪವನ್ ಖಡಕ್ ಡೈಲಾಗ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ.
ಭಾರತದಲ್ಲಿ ತಮ್ಮ ಧ್ವಜ ಹಾರಾಡಬೇಕು ಎಂದು ಬಯಸುವ ಔರಂಗಜೇಬ್. ಆತನ ವಿರುದ್ಧ ಹೋರಾಟಕ್ಕೆ ನಿಂತ ವೀರಮಲ್ಲ. ಇಬ್ಬರ ನಡುವಿನ ಪೈಪೊಟಿಯೇ ಚಿತ್ರದ ಕಥೆ. ಇನ್ನು ಕೋಹಿನೂರ್ ವಜ್ರವನ್ನು ಧಕ್ಕಿಸಿಕೊಳ್ಳುವುದರ ಜೊತೆಗೆ ಸಂಕಷ್ಟಕ್ಕೆ ಸಿಲುಕಿದ ನಾಯಕಿಯನ್ನು ವೀರಮಲ್ಲು ಕಾಪಾಡುತ್ತಾನೆ. ಅದು ಹೇಗೆ ಎನ್ನುವುದನ್ನು ತೆರೆಮೇಲೆ ನೋಡಬೇಕು.
ವೀರಯೋಧನ ಪಾತ್ರದಲ್ಲಿ ಪವರ್ ಸ್ಟಾರ್ ಲುಕ್, ಮ್ಯಾನರಿಸಂ ಹೈಲೆಟ್ ಆಗಿದೆ. ಅಭಿಮಾನಿಗಳ ಗಮನ ಸೆಳೆಸಿದೆ. ಇನ್ನು ಪ್ರತಿಫ್ರೇಮ್ನಲ್ಲಿ ಅದ್ಧೂರಿತನ ನೋಡಬಹುದು. 16ನೇ ಶತಮಾನದ ಕಾಲಘಟ್ಟದಲ್ಲಿ ಈ ಕಥೆ ಸಾಗುತ್ತದೆ. ಅದಕ್ಕೆ ತಕ್ಕಂತೆ ಅಂದಿಕ ಕಾಲಘಟ್ಟವನ್ನು ತೆರೆಮೇಲೆ ತರಲು ಕೋಟಿ ಕೋಟಿ ವ್ಯಯಿಸಲಾಗಿದೆ. ಅಂದಾಜು 200 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎನ್ನಲಾಗ್ತಿದೆ. 5 ವರ್ಷಗಳ ಹಿಂದೆ ಸಿನಿಮಾ ಶುರುವಾಗಿತ್ತು. ಅಂತೂ ಇಂತೂ ಈಗ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ತಡವಾದಂತೆ ಬಜೆಟ್ ಕೂಡ ಹೆಚ್ಚುತ್ತಾ ಬಂದಿತ್ತು.
ಪವನ್ ಕಲ್ಯಾಣ್ ಆಂಧ್ರ ಡಿಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪವನ್ ರಾಜಕೀಯರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದರಿಂದ 'ಹರಿಹರ ವೀರಮಲ್ಲು' ಸಿನಿಮಾ ತಡವಾಗಿತ್ತು. ಇತ್ತೀಚೆಗೆ ಎರಡು ದಿನಗಳ ಕಾಲ ಚಿತ್ರೀಕರಣದಲ್ಲಿ ಅವರು ಭಾಗವಹಿಸಿದ್ದರು. ಹಾಗಾಗಿ ಇದೀಗ ಭರ್ಜರಿ ಪ್ರಚಾರ ಮಾಡಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದೆ. ಪವನ್ ಆಂಧ್ರ ರಾಜಕೀಯರಂಗದಲ್ಲಿ ಸಕ್ಸಸ್ ಕಂಡ ಬಳಿಕ ತೆರೆಗೆ ಬರುತ್ತಿರುವ ಮೊದಲ ಸಿನಿಮಾ ಇದು.


Click it and Unblock the Notifications











