ಪವನ್ ಕಲ್ಯಾಣ್ ಹೊಸ ಸಿನಿಮಾ ಸೆಟ್ನಿಂದ ಹಲವು ಸುದ್ದಿಗಳು
ಜನವರಿ 10, 2018ರಲ್ಲಿ ಬಿಡುಗಡೆ ಆಗಿದ್ದ 'ಅಜ್ಞಾತವಾಸಿ' ಸಿನಿಮಾ ಬಳಿಕ ಸಿನಿಮಾದಿಂದ ದೂರ ಉಳಿದಿದ್ದ ಪವನ್ ಕಲ್ಯಾಣ್ 'ವಕೀಲ್ ಸಾಬ್' ಮೂಲಕ ಮತ್ತೆ ಸಿನಿಮಾಕ್ಕೆ ಕಾಲಿರಿಸಿದ್ದು ಸಾಲು-ಸಾಲು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
'ವಕೀಲ್ ಸಾಬ್' ಚಿತ್ರೀಕರಣ ಜಾರಿಯಲ್ಲಿರುವಾಗಲೇ ನಾಲ್ಕು ಹೊಸ ಸಿನಿಮಾ ಒಪ್ಪಿಕೊಂಡಿರುವ ಪವನ್ ಕಲ್ಯಾಣ್ ಅದರಲ್ಲಿ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಒಂದು ಸಿನಿಮಾದ ಚಿತ್ರೀಕರಣ ಭಾರಿ ತುರಿಸಿನಿಂದ ಸಾಗುತ್ತಿದೆ.
ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ನಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ಅಂತಿಮ ಹಂತಕ್ಕೆ ಬಂದಿದೆ. ಸಿನಿಮಾದ ಕುರಿತು ಹಲವು ಸುದ್ದಿಗಳು ಒಮ್ಮೆಗೆ ಹೊರಬಿದ್ದಿದ್ದು, ಪವನ್ ಅಭಿಮಾನಿಗಳಿಗೆ ಹಬ್ಬವಾಗಿ ಮಾರ್ಪಟ್ಟಿದೆ.
ಸಿನಿಮಾದ ಚಿತ್ರೀಕರಣ ಅಂತ್ಯವಾಗುವ ಮುನ್ನವೇ ಸಿನಿಮಾದ ಡಬ್ಬಿಂಗ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕಿಗಾಗಿ ಬಾಲಿವುಡ್ನ ದೊಡ್ಡ ಪ್ರೊಡಕ್ಷನ್ ಹೌಸ್ ಯತ್ನಿಸುತ್ತಿದ್ದು, ಭಾರಿ ಮೊತ್ತದ ಆಫರ್ ಅನ್ನೇ ನಿರ್ಮಾಪಕರಿಗೆ ನೀಡಿದೆ. ಪವನ್ ಕಲ್ಯಾಣ್ಗೆ ದಕ್ಷಿಣ ಭಾರತದಲ್ಲಿ ಮಾತ್ರವೇ ಅಲ್ಲದೆ ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶಗಳಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ ಹಾಗಾಗಿ ಪವನ್ ಸಿನಿಮಾದ ಹಿಂದಿ ಡಬ್ಬಿಂಗ್ಗೆ ದೊಡ್ಡ ಬೇಡಿಕೆ ಇದೆ.

ಸಿನಿಮಾದಲ್ಲಿ ಪವನ್ ಕಲ್ಯಾಣ್ ಪಾತ್ರದ ಹೆಸರು
'ಅಯ್ಯಪ್ಪನುಂ ಕೋಶಿಯುಂ' ಮಲಯಾಳಂ ಸಿನಿಮಾದಲ್ಲಿ ಬಿಜು ಮೆನನ್ ನಿರ್ವಹಿಸಿದ್ದ ಪೊಲೀಸ್ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿರುವುದು ಈ ಹಿಂದೆಯೇ ಗೊತ್ತಾಗಿತ್ತು. ಮಲಯಾಳಂ ಸಿನಿಮಾದಲ್ಲಿ ಪೊಲೀಸ್ ಪಾತ್ರದ ಹೆಸರು ಅಯ್ಯಪ್ಪನ್ ನಾಯರ್ ಎಂದಿತ್ತು. ತೆಲುಗಿನಲ್ಲಿ ಪವನ್ ಕಲ್ಯಾಣ್ ಪಾತ್ರದ ಹೆಸರು ಭೀಮ್ಲ ನಾಯಕ್ ಎಂದಿದೆ.

ಇಬ್ಬರು ನಾಯಕಿಯರಲ್ಲಿ ನಿತ್ಯಾ ಮೆನನ್ ಒಬ್ಬರು
'ಅಯ್ಯಪ್ಪನುಂ ಕೋಶಿಯುಂ' ನಾಯಕ ಪ್ರಧಾನ ಸಿನಿಮಾ ಆದರೂ ಇಬ್ಬರು ನಾಯಕಿಯರಿದ್ದರು. ತೆಲುಗಿನಲ್ಲಿಯೂ ಇಬ್ಬರು ನಾಯಕಿಯರು ಇರಲಿದ್ದಾರೆ ಎನ್ನಲಾಗಿದೆ. ಪವನ್ ಕಲ್ಯಾಣ್ಗೆ ಐಶ್ವರ್ಯಾ ರಾಜೇಶ್ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದ್ದು, ಸಿನಿಮಾದ ಮತ್ತೊಬ್ಬ ನಾಯಕ ರಾಣಾ ದಗ್ಗುಬಾಟಿ ಎದುರು ನಿತ್ಯಾ ಮೆನನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಂಕ್ರಾಂತಿಗೆ ಸಿನಿಮಾ ಬಿಡುಗಡೆ
ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ನಟಿಸಿರುವ ಈ ಸಿನಿಮಾವು ಸಂಕ್ರಾಂತಿಗೆ ಅಂದರೆ ಮುಂದಿನ ವರ್ಷ ಜನವರಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಬಗ್ಗೆ ನಿರ್ಮಾಪಕರು ಖಾತ್ರಿ ಪಡಿಸಿದ್ದಾರೆ. ಸಿನಿಮಾದ ಹೆಸರು ಘೋಷಣೆ ಬಾಕಿ ಇದ್ದು, ಟೀಸರ್ ಜೊತೆಗೆ ಹೆಸರು ಘೋಷಣೆ ಆಗಲಿದೆ. ಪವನ್ ಕಲ್ಯಾಣ್ ಪೊಲೀಸ್ ಪಾತ್ರ ಮಾಡಿದ ಸಿನಿಮಾಗಳು ಸೋತಿರುವ ಉದಾಹರಣೆ ಬಹಳ ಕಡಿಮೆ ಹಾಗಾಗಿ ಪವನ್ ಅಭಿಮಾನಿಗಳು ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಐತಿಹಾಸಿಕ ಸಿನಿಮಾದಲ್ಲಿ ನಟನೆ
ಇದನ್ನು ಹೊರತಾಗಿ 'ಹರಿಹರ ವೀರ ಮಲ್ಲು' ಹೆಸರಿನ ಐತಿಹಾಸಿಕ ಕತೆಯ ಸಿನಿಮಾದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ಇದೇ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಈ ಸಿನಿಮಾವನ್ನು ರಾಧಾ ಕೃಷ್ಣ (ಕ್ರಿಶ್) ನಿರ್ದೇಶನ ಮಾಡುತ್ತಿದ್ದಾರೆ. ಭಾರಿ ಬಜೆಟ್ನ ಸಿನಿಮಾ ಇದಾಗಿದ್ದು ಸಿನಿಮಾದ ಪೋಸ್ಟರ್ ಹಾಗೂ ಸಣ್ಣ ಟೀಸರ್ ಒಂದು ಈಗಾಗಲೇ ಬಿಡುಗಡೆ ಆಗಿದೆ. ಸಿನಿಮಾದ ಚಿತ್ರೀಕರಣ ಜಾರಿಯಲ್ಲಿದೆ.

ಬಂಡ್ಲ ಗಣೇಶ್ ಜೊತೆ ಸಿನಿಮಾ
ಇವುಗಳ ಹೊರತಾಗಿ ಹರೀಶ್ ಶಂಕರ್ ನಿರ್ದೇಶನದ ಸಿನಿಮಾ ಒಂದರಲ್ಲಿ ಪವನ್ ನಟಿಸುತ್ತಿದ್ದಾರೆ. ಅದರ ಬಳಿಕ ಸುರೇಂದ್ರ ರೆಡ್ಡಿ ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ಪವನ್ ಕಾಣಿಸಿಕೊಳ್ಳಲಿದ್ದಾರೆ. ಇವೆರಡು ಸಿನಿಮಾಗಳ ಬಳಿಕ ಬಂಡ್ಲ ಗಣೇಶ್ ನಿರ್ಮಾಣದ ಹೊಸ ಸಿನಿಮಾದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗಳ ನಡುವೆ ಪವನ್ರ ಆಪ್ತ ನಿರ್ದೇಶಕ ತ್ರಿವಿಕ್ರಮ್ ಸಿನಿಮಾದಲ್ಲಿ ಪವನ್ ನಟಿಸಲಿದ್ದಾರೆ. ಒಟ್ಟಿನಲ್ಲಿ ರಾಜಕೀಯದಿಂದ ದೊಡ್ಡ ವಿರಾಮ ಪಡೆದು ಸತತವಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪವನ್ ಕಲ್ಯಾಣ್.


Click it and Unblock the Notifications











