ಹೆದರಿದರೇ ಪವನ್ ಕಲ್ಯಾಣ್? ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ
ಆಂಧ್ರ ಪ್ರದೇಶದಲ್ಲಿ ಸಿನಿಮಾ ರಂಗ ಹಾಗೂ ಸರ್ಕಾರದ ನಡುವೆ ತೀವ್ರ ಸಂಘರ್ಷ ನಡೆಯುತ್ತಿದ್ದು, ಪವನ್ ಕಲ್ಯಾಣ್ ಹಾಗೂ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಈ ಸಂಘರ್ಷದ ಕೇಂದ್ರ ಸ್ಥಾನದಲ್ಲಿದ್ದಾರೆ.
ಚಿತ್ರಮಂದಿರಗಳ ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಜಗನ್ ಮೋಹನ್ ರೆಡ್ಡಿ ತಕರಾರು ಎತ್ತಿದ್ದು, ಚಿತ್ರರಂಗದ ಮನವಿಗೆ ವಿರುದ್ಧ ಚಿತ್ರಮಂದಿರಗಳ ಟಿಕೆಟ್ ದರ ಏರಿಸುವ ಬದಲು ಧಾರುಣವಾಗಿ ಇಳಿಸಿದ್ದಾರೆ. ಇದಕ್ಕೆ ಚಿತ್ರರಂಗ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಒಂದು ಹೆಜ್ಜೆ ಮುಂದೆ ಹೋದ ಪವನ್ ಕಲ್ಯಾಣ್, ಜಗನ್ ಮೋಹನ್ ರೆಡ್ಡಿ ಅವರನ್ನು ಏಕವಚನ ಬಳಸಿ ನಿಂದಿಸಿದ್ದರು.
ಇದು ಜಗನ್ ಹಾಗೂ ಪವನ್ ಕಲ್ಯಾಣ್ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು, ಜಗನ್ ಸರ್ಕಾರ ಈಗಾಗಲೇ ಪವನ್ ಕಲ್ಯಾಣ್ರ 'ವಕೀಲ್ ಸಾಬ್' ಸಿನಿಮಾಕ್ಕೆ ಪರೋಕ್ಷವಾಗಿ ಸಮಸ್ಯೆಗಳನ್ನು ನೀಡಿದೆ. 'ವಕೀಲ್ ಸಾಬ್' ಸಿನಿಮಾದ ಒಂದೇ ಒಂದು ಫ್ಯಾನ್ಸ್ ಶೋ, ಬೆನಿಫಿಟ್ ಶೋ ಆಂಧ್ರದಲ್ಲಿ ನಡೆಯದಂತೆ ಆಂಧ್ರ ಸರ್ಕಾರ ಮಾಡಿತ್ತು. ಇದೀಗ ಪವನ್ ಕಲ್ಯಾಣ್ ನಟನೆಯ ಹೊಸ ಸಿನಿಮಾ 'ಭೀಮ್ಲ ನಾಯಕ್' ಬಿಡುಗಡೆಗೆ ಸಜ್ಜಾಗಿದ್ದು, ಈ ಸಿನಿಮಾಕ್ಕೂ ಆಂಧ್ರದಲ್ಲಿ ಸಮಸ್ಯೆ ಎದುರಾಗಬಹುದು ಎನ್ನಲಾಗಿದೆ. ಇದಕ್ಕೆ ತಕ್ಕಂತೆ ಸಿನಿಮಾದ ಬಿಡುಗಡೆ ದಿನಾಂಕ ಸಹ ಮುಂದೂಡಲಾಗಿದೆ.

ಉಚಿತವಾಗಿ ಪ್ರದರ್ಶಿಸುತ್ತೇನೆಂದು ಸವಾಲು
ಕೆಲವು ದಿನಗಳ ಹಿಂದೆ ವಿಶಾಖಪಟ್ಟಣದಲ್ಲಿ ಪವನ್ರ ಜನಸೇನಾ ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಪವನ್ ಕಲ್ಯಾಣ್, ''ಜಗನ್, ನನ್ನ ಸಿನಿಮಾಗಳಿಗೆ ಸಮಸ್ಯೆ ಕೊಟ್ಟು, ನನ್ನನ್ನು ಆರ್ಥಿಕವಾಗಿ ನಿರ್ನಾಮ ಮಾಡಲು ಯೋಜಿಸಿದ್ದಾರೆ. ಆದರೆ ನಾನು ಇದಕ್ಕೆಲ್ಲ ಭಯ ಪಡುವುದಿಲ್ಲ. ಆಂಧ್ರದಲ್ಲಿ ನನ್ನ ಸಿನಿಮಾಗಳನ್ನು ಬೇಕಾದರೆ ಉಚಿತವಾಗಿ ಪ್ರದರ್ಶನ ಮಾಡುತ್ತೇನೆ'' ಎಂದು ಸವಾಲು ಹಾಕಿದ್ದರು.

ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗುವುದರಲ್ಲಿತ್ತು
ಅಂತೆಯೇ ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್' ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಸಿನಿಮಾವು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಲಿದೆ ಎಂದು ಘೋಷಿಸಲಾಗಿತ್ತು. ಆದರೆ ಅಚಾನಕ್ಕಾಗಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಆಂಧ್ರದಲ್ಲಿ ಪರಿಸ್ಥಿತಿ ತುಸು ತಿಳಿಯಾದ ಮೇಲೆ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ ಎನ್ನಲಾಗುತ್ತಿದೆ. ಹಾಗಾಗಿಯೇ ಸಿನಿಮಾದ ಬಿಡುಗಡೆ ಮುಂದಕ್ಕೆ ಹಾಕಿಕೊಳ್ಳಲಾಗಿದೆ.

ಇತರೆ ಸಿನಿಮಾಗಳಿಗೆ ಸಮಸ್ಯೆ ಆಗದಿರಲೆಂದು ನಿರ್ಧಾರ: ದಿಲ್ ರಾಜು
ಸಿನಿಮಾ ಬಿಡುಗಡೆ ಮುಂದೂಡಿಕೆ ಮಾಡಿರುವ ಬಗ್ಗೆ ಮಾತನಾಡಿರುವ ನಿರ್ಮಾಪಕ ಹಾಗೂ ಪವನ್ ಕಲ್ಯಾಣ್ ಆಪ್ತ ದಿಲ್ ರಾಜು, ಅದೇ ಅವಧಿಯಲ್ಲಿ ಬಿಡುಗಡೆ ಆಗುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಆರ್ಆರ್ಆರ್' ಹಾಗೂ 'ರಾಧೆ-ಶ್ಯಾಮ್' ಸಿನಿಮಾಕ್ಕೆ ಸಹಾಯ ಮಾಡಲೆಂದು 'ಭೀಮ್ಲ ನಾಯಕ್' ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ'' ಎಂದಿದ್ದಾರೆ. 'ಭೀಮ್ಲ ನಾಯಕ್' ಸಿನಿಮಾವನ್ನು ಜನವರಿ 12 ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ ಈಗ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿದೆ. 'ಆರ್ಆರ್ಆರ್' ಸಿನಿಮಾ ಜನವರಿ 07 ಕ್ಕೆ ಬಿಡುಗಡೆ ಆಗುತ್ತಿದೆ. ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಜನವರಿ 14 ಕ್ಕೆ ಬಿಡುಗಡೆ ಆಗಲಿದೆ.

ಮಲಯಾಳಂ ಸಿನಿಮಾ ರೀಮೇಕ್
ಪವನ್ ಕಲ್ಯಾಣ್ ನಟಿಸಿರುವ 'ಭೀಮ್ಲ ನಾಯಕ್' ಸಿನಿಮಾವು ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ತೆಲುಗು ರೀಮೇಕ್. ಮೂಲ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರ್ ಮತ್ತು ಬಿಜು ಮೆನನ್ ನಟಿಸಿದ್ದರು. ತೆಲುಗಿನಲ್ಲಿ ಪವನ್ ಕಲ್ಯಾಣ್ ಎದುರು ಪೃಥ್ವಿರಾಜ್ ಸುಕುಮಾರನ್ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸುತ್ತಿದ್ದಾರೆ. ಮೂಲ ಮಲಯಾಳಂ ಸಿನಿಮಾಕ್ಕೆ ಬದಲಾವಣೆಗಳನ್ನು ಮಾಡಿ ಚಿತ್ರಕತೆ ಬರೆದಿರುವುದು ನಿರ್ದೇಶಕ ತ್ರಿವಿಕ್ರಮ್. ಸಿನಿಮಾದಲ್ಲಿ ಕನ್ನಡತಿ ನಿತ್ಯ ಮೆನನ್, ಸಂಯುಕ್ತಾ ಮೆನನ್, ಮುರುಳಿ ಶರ್ಮಾ ನಟಿಸಿದ್ದಾರೆ. ಸಿನಿಮಾವನ್ನು ಸಾಗರ್ ಕೆ ಚಂದ್ರ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











