'ಉಸ್ತಾದ್ ಭಗತ್ ಸಿಂಗ್' ಫಸ್ಟ್ ಗ್ಲಿಂಪ್ಸ್ ಚಿಂದಿ: ಪೋಸ್ಟರ್ ನೋಡಿ ಪೂನಂ ಕೌರ್ ಗರಂ
ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಮತ್ತೊಮ್ಮೆ ಪೊಲೀಸ್ ಆಫೀಸರ್ ಅವತಾರದಲ್ಲಿ ಪವರ್ ಸ್ಟಾರ್ ಅಬ್ಬರಿಸಿದ್ದಾರೆ. ಹರೀಶ್ ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಸಿನಿಮಾ ಭಾರೀ ನಿರೀಕ್ಷೆ ಮೂಡಿದೆ. ಇದೇ ಕಾಂಬಿನೇಷನ್ನಲ್ಲಿ ಈ ಹಿಂದೆ 'ಗಬ್ಬರ್ ಸಿಂಗ್' ಅನ್ನೋ ಸಿನಿಮಾ ಬಂದಿತ್ತು.
ನಿರ್ದೇಶಕ ಹರೀಶ್ ಶಂಕರ್ ನಟ ಪವರ್ ಕಲ್ಯಾಣ್ ಅಭಿಮಾನಿ. ಹಾಗಾಗಿ ತಮ್ಮ ನೆಚ್ಚಿನ ನಟನನ್ನು ಹೇಗೆ ತೆರೆಮೇಲೆ ತೋರಿಸಬೇಕು ಅನ್ನುವುದನ್ನು ಈಗಾಗಲೇ 'ಗಬ್ಬರ್ ಸಿಂಗ್' ಚಿತ್ರದಲ್ಲಿ ಮಾಡಿ ತೋರಿಸಿದ್ದಾರೆ. ಇದೀಗ ಮತ್ತೊಂದು ಅಂತದ್ದೇ ಮ್ಯಾಜಿಕ್ ಕ್ರಿಯೇಟ್ ಮಾಡುವ ಪ್ರಯತ್ನ ಮಾಡ್ತಿದ್ದಾರೆ. ಧರ್ಮಕ್ಕೆ ಹಾನಿಯಾಗಿ ಅಧರ್ಮ ಮೆರೆಯುವ ಸಮಯದಲ್ಲಿ ನಾನು ಅವತಾರ ಎತ್ತಿ ಬರುತ್ತೇನೆ ಎನ್ನುವ ಶ್ರೀಕೃಷ್ಣನ ಮಾತಿನ ಹಿನ್ನಲೆಯಲ್ಲಿ ಗ್ಲಿಂಪ್ಸ್ ಶುರುವಾಗುತ್ತದೆ. ನಂತರ ಪವನ್ ಕಲ್ಯಾಣ್ ಭಗತ್ ಸಿಂಗ್ ಪಾತಬಸ್ತಿ ಎನ್ನುವ ಡೈಲಾಗ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ.

ಪವರ್ ಸ್ಟಾರ್ ಲುಕ್, ಮ್ಯಾನರಿಸಂ, ಸ್ವ್ಯಾಗ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. 'ಗಬ್ಬರ್ ಸಿಂಗ್' 10 ವರ್ಷ ಪೂರೈಸಿದ ದಿನವೇ 'ಉಸ್ತಾದ್ ಭಗತ್ ಸಿಂಗ್' ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಮೊದಲು ಲುಂಗಿ ಉಟ್ಟು ದರ್ಶನ ಕೊಡುವ ಪವನ್ ನಂತರ ಖಾಕಿ ಖದರ್ ತೋರಿಸಿದ್ದಾರೆ. ಗ್ಲಿಂಪ್ಸ್ಗೂ ಮುನ್ನ ಬಂದ ಫಸ್ಟ್ ಲುಕ್ ಪೋಸ್ಟರ್ ಕೂಡ ಅಭಿಮಾನಿಗಳ ಮನಗೆದ್ದಿದೆ. ಇನ್ನು ಫಸ್ಟ್ ಗ್ಲಿಪ್ಸ್ ಅನೌನ್ಸ್ಮೆಂಟ್ಗೆ ರಿಲೀಸ್ ಮಾಡಿದ್ದ ಪೋಸ್ಟರ್ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಕಾರಣ ನಟಿ ಪೂನಂ ಕೌರ್ ಕಾಮೆಂಟ್.
'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭರತ್ ಸಿಂಗ್ಗೆ ಅವಮಾನ ಮಾಡಿದ್ದಾರೆ ಎಂದು ನಟಿ ಪೂನಂ ಕೌರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಚಾರ ಏನು ಅಂದ್ರೆ, ಇತ್ತೀಚಿಗೆ ಬಿಡುಗಡೆಯಾಗಿದ್ದ ಪೋಸ್ಟರ್ನಲ್ಲಿ ಪವನ್ ಕಲ್ಯಾಣ್ ಪೊಲೀಸ್ ಆಫೀಸರ್ ಲುಕ್ನಲ್ಲಿರುವ ಪೋಸ್ಟರ್ ಬಂದಿತ್ತು. ಅದರಲ್ಲಿ ಸಂಪೂರ್ಣವಾಗಿ ಹೀರೊನ ತೋರಿಸದೇ ಬರೀ ಕಾಲಿಗೆ ಶೂ ಹಾಕಿಕೊಂಡಿರುವ ಪೋಸ್ಟರ್ ಅದು. ಪೋಸ್ಟರ್ನಲ್ಲಿ ಪವನ್ ಕಾಲಿನ ಕೆಳಗೆ ಸಿನಿಮಾ ಟೈಟಲ್ ಇದೆ. ಭಗತ್ ಸಿಂಗ್ ರೀತಿಯ ಮಹಾನ್ ನಾಯಕನ ಹೆಸರನ್ನು ಈ ರೀತಿ ನಟನ ಕಾಲಿನ ಕೆಳಗೆ ಹಾಕಿರುವುದು ಸರಿಯಲ್ಲ ಎಂದು ಆಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ಟ್ವೀಟ್ಗೆ ಕಾಮೆಂಟ್ ಮಾಡಿದ್ದ ಪೂನಂ ಕೌರ್ "ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ ನೀಡದಿದ್ದರೂ ಕೊನೆ ಪಕ್ಷ ಮರ್ಯಾದೆ ಕೊಡಬೇಕು. ಅದು ಬಿಟ್ಟು ಈ ರೀತಿ ಅವಮಾನ ಮಾಡಬಾರದು. ಸಿನಿಮಾ ಪೋಸ್ಟರ್ ಆದರೂ ಕೂಡ ಅವರ ಹೆಸರನ್ನು ಕಾಲಿನ ಕೆಳಗೆ ಇಡುತ್ತೀರಾ? ಇದು ಅಹಂಕಾರನಾ? ಇಲ್ಲ ಅಜ್ಞಾನನಾ?" ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಪವನ್ ಫ್ಯಾನ್ಸ್ ವಿವಾದ ಸೃಷ್ಟಿಸಿ ಗಮನ ಸೆಳೆಯುವ ಪ್ರಯತ್ನ ಮಾಡ್ತಿದ್ದೀಯಾ? ಎಂದು ಕೇಳಿದ್ದರು.

ಇನ್ನು 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೆ ಅಯಾಂಕ ಬೋಸ್ ಛಾಯಾಗ್ರಹಣ, ರಾಮ್ ಲಕ್ಷ್ಮಣ ಆಕ್ಷನ್, ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನವಿದೆ. ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರಾಗಿ ಶ್ರೀಲೀಲಾ ನಟಿಸ್ತಿದ್ದಾರೆ. ಅಶುತೋಷ್ ರಾಣಾ, ನವಾಬ್ ಶಾ, KGF ಅವಿನಾಶ್ ಸೇರಿದಂತೆ ಸಾಕಷ್ಟು ಜನ ಕಲಾವಿದರು ಇದ್ದಾರೆ. 'ಪುಷ್ಪ' ರೀತಿಯ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಂಡವಾಳ ಹೂಡಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಶುರುವಾಗಿದ್ದು ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications











