ಬಾಲಿವುಡ್ ಸ್ಟಾರ್ಗಳಿಂದ ದೇಶಭಕ್ತಿಯನ್ನೆಲ್ಲ ನಿರೀಕ್ಷೆ ಮಾಡಬೇಡಿ ; ಕೆರಳಿ ಕೆಂಡವಾದ ಪವನ್ ಕಲ್ಯಾಣ್..!
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಭಾರತೀಯರ ಪ್ರಾಣವನ್ನು ಬಲಿ ಪಡೆದ ಭಯೋತ್ಫಾದಕರ ವಿರುದ್ಧ, ಭಾರತ ನಡೆಸಿದ ಮಹತ್ವದ ಕಾರ್ಯಾಚರಣೆ ಆಪರೇಷನ್ ಸಿಂಧೂರ್ ಕುರಿತು ಆ ಭಾಷೆ ಈ ಭಾಷೆ ಎನ್ನದೇ ಚಿತ್ರರಂಗದ ಹಲವಾರು ತಾರೆಯರು ಮಾತನಾಡಿದ್ದಾರೆ. ಭಾರತದ ವೀರ ಯೋಧರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ಕ್ರಮಕ್ಕೆ ಹಲವಾರು ಜನ ಮೆಚ್ಚುಗೆ ಸೂಚಿಸಿದ್ದಾರೆ.
ನಮ್ಮ ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ ಅವರನ್ನೊಳಗೊಂಡಂತೆ ಹಲವಾರು ಜನದೇಶದ ಜೊತೆ ನಾವು ಇದ್ದೇವೆ ಎನ್ನುವ ಸ್ಪಷ್ಟವಾದ ಸಂದೇಶವನ್ನು ಕೂಡ ರವಾನೆ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಪತ್ರವನ್ನು ಕೂಡ ಬರೆದಿದ್ದಾರೆ.ವಿಶ್ವಮ್ಯಾಪ್ನಲ್ಲಿಯೇ ಪಾಕಿಸ್ತಾನ ಇರಬಾರದು ಆ ತರಹದ ಪಾಠವನ್ನು ಪಾಕಿಸ್ತಾನಕ್ಕೆ ಭಾರತ ಕಲಿಸಬೇಕೆಂದು ಆಗ್ರಹಿಸಿದ್ದಾರೆ.

ಆದರೆ.. ಇಲ್ಲಿಯವರೆಗೆ ಕಂಗನಾ ರಣಾವತ್ ಮತ್ತು ಕೆಲವರನ್ನು ಹೊರತು ಪಡಿಸಿದರೆ ಈ ವಿಚಾರದ ಕುರಿತು ಹಲವರು ಮೌನ ವಹಿಸಿದ್ದಾರೆ. ಅದರಲ್ಲಿಯೂ ಬಾಲಿವುಡ್ನಲ್ಲಿ ಶೇಕಡಾ 70 % ಜನ ಮೌನಂ ಶರಣಂ ಗಚ್ಛಾಮಿ ಎನ್ನುವ ಮಂತ್ರವನ್ನು ಹೇಳುತ್ತಿದ್ದಾರೆ. ಬಾಲಿವುಡ್ನ ಈ ಮೌನ ಹಲವರನ್ನು ಕೆರಳಿಸಿದೆ. ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇದರ ನಡುವೆ ಇದೀಗ ಪಕ್ಕದ ಮನೆ ಆಂಧ್ರದ ಪವರ್ ಸ್ಟಾರ್ ಮತ್ತು ಉಪಮುಖ್ಯಮಂತ್ರಿ ಕೂಡ ಆಗಿರುವ ಪವನ್ ಕಲ್ಯಾಣ್ ಗುಡುಗಿದ್ದಾರೆ. ಬಾಲಿವುಡ್ನ ಸ್ಟಾರ್ಗಳಿಂದ ದೇಶ ಭಕ್ತಿಯನ್ನೆಲ್ಲ ನಿರೀಕ್ಷೆ ಮಾಡಬೇಡಿ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಪವನ್ ಕಲ್ಯಾಣ್, ಬಾಲಿವುಡ್ನ ಸ್ಟಾರ್ ನಟ ಮತ್ತು ನಟಿಯರು ಆಪರೇಷನ್ ಸಿಂಧೂರ್ ಬಗ್ಗೆ ಒಂದೇ ಒಂದು ಮಾತನ್ನು ಕೂಡ ಮಾತನಾಡಿಲ್ಲ, ಅವರೆಲ್ಲರಿಂದ ನೀವು ದೇಶಭಕ್ತಿ ನಿರೀಕ್ಷೆ ಮಾಡಬೇಡಿ ಎಂದು ಹೇಳಿದ್ದಾರೆ. ಅವರು ಕೇವಲ ಮನರಂಜಿಸುವ ಕಲಾವಿದರಷ್ಟೇ ಅವರಿಂದ ನಮ್ಮ ದೇಶ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಪಾಕಿಸ್ತಾನದ ದಾಳಿಯ ಸಂದರ್ಭದಲ್ಲಿ ಹುತಾತ್ಮರಾದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ್ಲ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿರವರ ಏಕೈಕ ಪುತ್ರ ಯೋಧ ಮುರಳಿ ನಾಯಕ್ ಅವರನ್ನು ನೆನಪು ಮಾಡಿಕೊಂಡಿರುವ ಪವನ್ ಕಲ್ಯಾಣ್, ಮುರಳಿ ನಾಯಕ್ ಅವರಂತಹವರು ನಮ್ಮ ದೇಶದ ನಿಜವಾದ ದೇಶಭಕ್ತರು ಅವರಿಂದ ನಾವು ಪ್ರೇರಣೆಯನ್ನು ಪಡೆಯಬೇಕು ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಕೊಯಮತ್ತೂರ್ ಮತ್ತು ಹೈದರಾಬಾದ್ನಲ್ಲಿ ಈ ಹಿಂದೆ ನಡೆದಿದ್ದ ಬಾಂಬ್ ಬ್ಲಾಸ್ಟ್ ಘಟನೆಗಳನ್ನು ಕೂಡ ನೆನಪು ಮಾಡಿಕೊಂಡಿರುವ ಪವನ್ ಕಲ್ಯಾಣ್ ಹಲವು ವರ್ಷಗಳ ಹಿಂದೆ ನಡೆದ ಈ ಬಾಂಬ್ ಬ್ಲಾಸ್ಟ್ಗಳ ಹಿಂದೆ ಪಾಕಿಸ್ತಾನದ ಕೈವಾಡ ಇತ್ತು, ಅವರಿಗೆ ಆಪರೇಶನ್ ಸಿಂಧೂರ್ ಮೂಲಕ ಭಾರತದ ಸೇನೆ ಸರಿಯಾದ ಪಾಠ ಕಲಿಸಿದೆ ಎಂದು ಹೇಳಿದ್ದಾರೆ. ಭಾರತೀಯರೆಲ್ಲರು ಈ ಸಮಯದಲ್ಲಿ ನಮ್ಮ ಸೈನ್ಯದ ಜೊತೆ ನಿಲ್ಲಬೇಕು ಎಂದು ಹೇಳಿದ್ದಾರೆ.
ಸದ್ಯ ಪವನ್ ಕಲ್ಯಾಣ್ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿವೆ. ಹಲವರು ಪವನ್ ಕಲ್ಯಾಣ್ ಅವರ ಮಾತು ನೂರಕ್ಕೆ ನೂರು ಸತ್ಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ಗಳ ಮೇಲೆ ಕಿಡಿ ಕಾರುತ್ತಿದ್ದಾರೆ. ಅದರಲ್ಲಿಯೂ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ವಿರುದ್ದ ಹಲವಾರು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಮೂವರು ಖಾನ್ಗಳನ್ನು ಬಾಯ್ಕಾಟ್ ಮಾಡಿ ಎಂದು ಕರೆಯನ್ನು ಕೊಡುತ್ತಿದ್ದಾರೆ. ಬಾಲಿವುಡ್ನ ನಾಯಕಿಯರ ವಿರುದ್ದವೂ ಕೂಡ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











