ಪಾಪ್ಕಾರ್ನ್ ದರದ ಬಗ್ಗೆ ರಾಮ್ಚರಣ್ ಕಾಮೆಂಟ್ಸ್; ಎದುರಾಯ್ತು ಭಾರೀ ಟೀಕೆ
ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರಾಗುತ್ತಿದ್ದಾರೆ. ಮನರಂಜನೆಗಾಗಿ ಓಟಿಟಿ, ಟಿವಿ ಮೊರೆ ಹೋಗುತ್ತಿದ್ದಾರೆ. ಅತಿಯಾದ ಸಿನಿಮಾ ಟಿಕೆಟ್ ದರ, ಪಾಕ್ಕಾರ್ನ್, ಸ್ನ್ಯಾಕ್ಸ್, ಪಾರ್ಕಿಂಗ್ ಶುಲ್ಕ ಅಂತೆಲ್ಲಾ ಜೇಬಿಗೆ ಕತ್ತರಿ ಬೀಳುತ್ತಿದೆ. ಇದೇ ಕಾರಣಕ್ಕೆ ಜನ ಸಿನಿಮಾ ನೋಡಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿನಿಮಾ ಹಾಲ್ಗಳಲ್ಲಿ ಪಾಪ್ಕಾರ್ನ್ ದರ ಕಮ್ಮಿ ಆಗಬೇಕು ಎಂದು ನಟ ರಾಮ್ಚರಣ್ ಆಗ್ರಹಿಸಿದ್ದಾರೆ.
ಮಧ್ಯಮ ವರ್ಗದವರು, ಬಡವರು ಸಿನಿಮಾ ನೋಡುವುದು ಬಹಳ ದುಬಾರಿ ಎನ್ನುವಂತಾಗಿದೆ. ಟಿಕೆಟ್ ದರ 200 ರೂ, 300 ರೂ,ಗೂ ಅಧಿಕವಾಗಿದೆ. ದೊಡ್ಡ ಸಿನಿಮಾಗಳು ಬಂದಾಗ ಮೊದಲ ವಾರ ಟಿಕೆಟ್ ದರ ಹೆಚ್ಚಿಸಲಾಗುತ್ತದೆ. ಇನ್ನು ಮಲ್ಟಿಪ್ಲೆಕ್ಸ್ ಮಾತ್ರವಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕೂಡ ಪಾಕ್ಕಾರ್ನ್, ಸ್ನ್ಯಾಕ್ಸ್ ದರ ಹೆಚ್ಚಾಗಿದೆ. 4 ಜನರ ಕುಟುಂಬ ಒಂದು ಸಿನಿಮಾ ನೋಡಲು ಹೋದರೆ 1000 - 1500 ರೂ, ವ್ಯಯಿಸುವಂತಾಗಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಜನ ಅಷ್ಟು ಸುಲಭವಾಗಿ ಚಿತ್ರಮಂದಿರಗಳಿಗೆ ಬರ್ತಿಲ್ಲ.

ದೊಡ್ಡ ಸಿನಿಮಾ, ಒಳ್ಳೆ ರಿವ್ಯೂ ಸಿಗುವ ಸಿನಿಮಾಗಳನ್ನು ಮಾತ್ರ ನೋಡಲು ಬಯಸುತ್ತಾರೆ. ಇದರಿಂದ ಸಣ್ಣ ಸಿನಿಮಾಗಳು ಸೋಲುವಂತಾಗಿದೆ. ಆದರೆ ಇವತ್ತಿಗೂ ಭಾರತದಲ್ಲಿ ಸಿನಿಮಾ ಬಹಳ ಕಡಿಮೆ ದರಕ್ಕೆ ಸಿಗುವ ಮನರಂಜನೆ. ಪಾಪ್ಕಾರ್ನ್ ದರ ಕಮ್ಮಿ ಮಾಡಿದರೆ ಅದು ಮತ್ತಷ್ಟು ಚೆನ್ನಾಗಿ ಇರುತ್ತದೆ ಎಂದು ನಟ ರಾಮ್ಚರಣ್ ಹೇಳಿದ್ದಾರೆ. ಸಾಕಷ್ಟು ಜನ ಅವರ ಮಾತನ್ನು ಸ್ವಾಗತಿಸಿದ್ದಾರೆ. ಮತ್ತೆ ಕೆಲವರು ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ನಡೆದ Republic Summit ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಟ ರಾಮ್ಚರಣ್ ಭಾಗಿ ಆಗಿದ್ದರು. 'ಪೆದ್ದಿ' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಚರಣ್ ತೇಲುತ್ತಿದ್ದಾರೆ. ಬುಚ್ಚಿಬಾಬು ನಿರ್ದೇಶನದ ಸ್ಪೋರ್ಟ್ ಡ್ರಾಮಾ ಸಿನಿಮಾ 400 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. 3ನೇ ವಾರವೂ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಕಾರ್ಯಕ್ರಮದಲ್ಲಿ 'ಪೆದ್ದಿ' ಗೆಲುವು, ಆರ್ಆರ್ಆರ್ ಸಿನಿಮಾ ಆಸ್ಕರ್ ವೇದಿಕೆಯಲ್ಲಿ ಸದ್ದು ಮಾಡಿದ್ದು ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಚರಣ್ ಮಾತನಾಡಿದ್ದಾರೆ. ಇದೇ ವೇಳೆ ಪಾಪ್ಕಾರ್ನ್ ದರ ಕಮ್ಮಿ ಮಾಡಬೇಕು ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ.
"ಕೆಜಿಎಫ್, ಆರ್ಆರ್ಆರ್, ಕಾಂತಾರ, ಪುಷ್ಪ-2 ಹಾಗೂ ಧುರಂಧರ್ ಸಿನಿಮಾ ಬಿಡುಗಡೆಯಾಗಿ ಕೋವಿಡ್ ಬಳಿಕ ಕೂಡ ಜನ ಚಿತ್ರಮಂದಿರಗಳಿಗೆ ಬರುವಂತಾಗಿದೆ. ಇವತ್ತಿಗೂ ಭಾರತದಲ್ಲಿ ಸಿನಿಮಾ ಬಹಳ ಕಮ್ಮಿ ಬೆಲೆಯ ಎಂಟರ್ಟೈನ್ಮೆಂಟ್. ಪಾಪ್ಕಾರ್ನ್ ದರ ಕಮ್ಮಿ ಮಾಡಿದ್ರೆ ಇನ್ನು ಚೆನ್ನಾಗಿರುತ್ತದೆ" ಎಂದು ರಾಮ್ಚರಣ್ ಹೇಳಿದ್ದಾರೆ. 'ಪೆದ್ದಿ' ಸಿನಿಮಾ ಬಿಡುಗಡೆಗೂ ಮುನ್ನ ಆಂಧ್ರ, ತೆಲಂಗಾಣ ಸರ್ಕಾರಗಳ ಅನುಮತಿ ಪಡೆದು ಟಿಕೆಟ್ ದರ ಹೆಚ್ಚಿಸಿಕೊಂಡಿದ್ರಿ. ಈಗ ನೋಡಿದ್ರೆ, ಪಾಪ್ಕಾರ್ನ್ ದರದ ಬಗ್ಗೆ ಮಾತನಾಡ್ತೀರಾ ಎಂದು ಕೆಲವರು ಟಾಂಗ್ ಕೊಡುತ್ತಿದ್ದಾರೆ.
ಅಂದಹಾಗೆ ರಾಮ್ಚರಣ್ಗೆ ಪಾಪ್ಕಾರ್ನ್ ಅಂದ್ರೆ ಬಹಳ ಇಷ್ಟ. ಸಿನಿಮಾ ನೋಡುವಾಗ ಪಾಪ್ಕಾರ್ನ್ ಇರಲೇಬೇಕು. ಇತ್ತೀಚೆಗೆ 'ಪೆದ್ದಿ' ಸಿನಿಮಾ ನೋಡಲು ರಾಮ್ಚರಣ್ ತೆರಳಿದ್ದರು. ಈ ವೇಳೆ ಸಿನಿಮಾ ಹಾಲ್ ಒಳಗೆ ಹೋಗುವ ಮುನ್ನ "ಪಾಪ್ಕಾರ್ನ್ ಎಲ್ಲಿ, ಬೇಕು ನನಗೆ" ಎಂದು ಕೇಳಿ ತೆಗೆದುಕೊಂಡು ಹೋಗಿದ್ದರು. ಪಾಪ್ಕಾರ್ನ್ ತಿನ್ನುತ್ತಾ ಸಿನಿಮಾ ವೀಕ್ಷಿಸಿದ್ದ ವೀಡಿಯೋಗಳು ವೈರಲ್ ಆಗಿದ್ದವು.
ಇತ್ತೀಚೆಗೆ ಒಂದಷ್ಟು ಹೊಸ ದೃಶ್ಯಗಳನ್ನು 'ಪೆದ್ದಿ' ಚಿತ್ರಕ್ಕೆ ಸೇರಿಸಲಾಗಿದೆ. ಹಾಗಾಗಿ ಅಭಿಮಾನಿಗಳು ಮತ್ತೆ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಜುಲೈ 2ರಂದು ಸಿನಿಮಾ ಓಟಿಟಿಗೆ ಬರುತ್ತದೆ ಎನ್ನಲಾಗ್ತಿದೆ. ನೆಟ್ಫ್ಲಿಕ್ಸ್ ರೈಟ್ಸ್ ಕೊಂಡುಕೊಂಡಿದೆ. ಡಿಜಿಟಲ್ ಸ್ಟ್ರೀಮಿಂಗ್ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.


Click it and Unblock the Notifications