ಸೂಪರ್ ಸ್ಟಾರ್ಗೆ ಕಥೆ ಹೇಳಿದ ಬುಚ್ಚಿಬಾಬು; 'ಪೆದ್ದಿ' ನಿರ್ದೇಶಕನ ಮುಂದಿನ ಸಿನಿಮಾ ಹೀರೊ ಯಾರು?
ರಾಮ್ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. 3 ದಿನಕ್ಕೆ ಸಿನಿಮಾ 236 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ. ಚಿತ್ರಕ್ಕೆ ಸಿಕ್ಕ ಮಿಶ್ರಪ್ರತಿಕ್ರಿಯೆ ಬಾಕ್ಸಾಫೀಸ್ ಗಳಿಕೆ ಮೇಲೆ ಅದು ಯಾವುದೇ ಪರಿಣಾಮ ಬೀರುತ್ತಿಲ್ಲ. ಫಸ್ಟ್ ವೀಕೆಂಡ್ ಸಿನಿಮಾ ಭಾರೀ ಕಲೆಕ್ಷನ್ ಮಾಡಿದೆ. ಇಂದಿನಿಂದ(ಜೂನ್ 8) 'ಪೆದ್ದಿ' ದರ್ಬಾರ್ ಹೇಗಿರುತ್ತೋ ಗೊತ್ತಿಲ್ಲ.
ಚಿತ್ರಕ್ಕಾಗಿ ತನು ಮನ ಅರ್ಪಿಸಿ ರಾಮ್ಚರಣ್ ನಟಿಸಿದ್ದಾರೆ. ಈ ಹಿಂದೆ 'ಉಪ್ಪೆನ' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದ ಬುಚ್ಚಿಬಾಬು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸ್ಟಾರ್ ನಟನನ್ನು ನಿರ್ದೇಶನ ಮಾಡಿ ಭಾಗಶಃ ಸಕ್ಸಸ್ ಕಂಡಿದ್ದಾರೆ. ಈಗಾಗಲೇ ನೋಡಿರುವ ಕಥೆಯನ್ನೇ ಕೊಂಚ ವಿಭಿನ್ನವಾಗಿ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಸುಕುಮಾರ್ ಗರಡಿಯಲ್ಲಿ ಪಳಗಿನ ಬುಚ್ಚಿಬಾಬು ಸದ್ಯ 'ಪೆದ್ದಿ' ಸಕ್ಸಸ್ ಸಂಭ್ರಮದಲ್ಲಿದ್ದಾರೆ.

ಜಾನ್ವಿ ಕಪೂರ್ ಪಾತ್ರದ ಬಗೆಗಿನ ವಿವಾದಕ್ಕೆ ಬುಚ್ಚಿಬಾಬು ಕ್ಷಮೆ ಕೇಳಿದ್ದಾರೆ. ಮುಂದೆ ಇಂತಹ ತಪ್ಪು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಇದೆಲ್ಲದರ ನಡುವೆ ಬುಚ್ಚಿಬಾಬು ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಆರಂಭವಾಗಿದೆ. ಹಿಟ್ ಕೊಟ್ಟ ಹೀರೊ ಅಥವಾ ನಿರ್ದೇಶಕನ ಮುಂದಿನ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡುತ್ತದೆ. 'ಪೆದ್ದಿ' ಬಳಿಕ ಬುಚ್ಚಿಬಾಬು ಯಾರ ಜೊತೆ ಕೈಜೋಡಿಸುತ್ತಾರೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
ಈಗಾಗಲೇ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಬುಚ್ಚಿಬಾಬು ಕಥೆ ಹೇಳಿದ್ದಾರಂತೆ. ಈ ವಿಚಾರದ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಹೌದು.. ಮುಂದಿನ ದಿನಗಳಲ್ಲಿ ಆ ಬಗ್ಗೆ ಹೇಳ್ತೀನಿ. ಸದ್ಯ 'ಪೆದ್ದಿ' ಸಿನಿಮಾ ಬಗ್ಗೆ ಮಾತನಾಡೋಣ ಎಂದಿದ್ದಾರೆ. 'ಉಪ್ಪೆನ' ಹಾಗೂ 'ಪೆದ್ದಿ' ಚಿತ್ರಗಳಿಗಿಂತ ಭಿನ್ನವಾದ ಸಿನಿಮಾ ಇದು ಎಂದು ಬುಚ್ಚಿಬಾಬು ಹೇಳಿದ್ದಾರೆ.
ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದಲ್ಲಿ ಸದ್ಯ ಮಹೇಶ್ ಬಾಬು ನಟಿಸುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 7ರಂದು ಆ ಸಿನಿಮಾ ತೆರೆಗೆ ಬರಲಿದೆ. ಆ ಬಳಿಕ ಟಾಲಿವುಡ್ ಸೂಪರ್ ಸ್ಟಾರ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಕೂತೂಹಲ ಮೂಡಿದೆ. ಸುಕುಮಾರ್ ನಿರ್ದೇಶನದ '1 ನೆನೊಕ್ಕಡಿನೆ' ಚಿತ್ರದಲ್ಲಿ ಮಹೇಶ್ ಬಾಬು ನಟಿಸಿದ್ದರು. ಆ ಚಿತ್ರಕ್ಕೆ ಬುಚ್ಚಿಬಾಬು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹಾಗಾಗಿ ಇಬ್ಬರ ಪರಿಚಯ ಒಡನಾಟ ಇದೆ.
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ವಾರಣಾಸಿ' ಸಿನಿಮಾ ನಿರ್ಮಾಣವಾಗ್ತಿದೆ. ಆ ಸಿನಿಮಾ ಬಳಿಕ ಮಹೇಶ್ ಬಾಬು ರೇಂಜ್ ಯಾವ ರೀತಿ ಇರುತ್ತದೆ. ಯಾರೊಟ್ಟಿಗೆ ಕೆಲಸ ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಬುಚ್ಚಿಬಾಬು ಕಥೆಗೆ ಸೈ ಎನ್ನುತ್ತಾರಾ ಕಾದು ನೋಡಬೇಕಿದೆ.
'RRR' ಬಳಿಕ ರಾಮ್ಚರಣ್ ನಟಿಸಿದ ಯಾವುದೇ ಸಿನಿಮಾ ಗೆಲ್ಲಲಿಲ್ಲ. 'ಪೆದ್ದಿ' ಸಿನಿಮಾ ಗೆಲುವಿನ ಖುಷಿ ತಂದಿದೆ. ಇದೇ ಕಾರಣಕ್ಕೆ ರಾಮ್ಚರಣ್ ಫ್ಯಾನ್ಸ್ ಕೂಡ ಬುಚ್ಚಿಬಾಬು ಅವರನ್ನು ಕೊಂಡಾಡುತ್ತಿದ್ದಾರೆ. ಕ್ಲಾಸ್, ಮಾಸ್ ಆಡಿಯನ್ಸ್ ಮನಗೆದ್ದು ಸಿನಿಮಾ ಮುನ್ನುಗ್ಗುತ್ತಿದೆ. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಗಳ ಕಡೆ ಮುಖ ಮಾಡಿದ್ದಾರೆ. 4 ದಿನಕ್ಕೆ ಬಾಕ್ಸಾಫೀಸ್ನಲ್ಲಿ 'ಪೆದ್ದಿ' ಕುಸ್ತಿ ಮುಗಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
'ಪುಷ್ಪ' ಸರಣಿ ಸಿನಿಮಾಗಳಿಗೆ ಕೂಡ ಬುಚ್ಚಿಬಾಬು ತಮ್ಮ ಗುರು ಸುಕುಮಾರ್ ಬೆನ್ನಿಗೆ ನಿಂತಿದ್ದರು. ಅಲ್ಲು ಅರ್ಜುನ್ ನಟನೆಯ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ಈ ಹಿಂದೆ ಜ್ಯೂ. ಎನ್ಟಿಆರ್ ಜೊತೆ ಬುಚ್ಚಿಬಾಬು ಸಿನಿಮಾ ಮಾಡ್ತಾರೆ ಎಂದು ಸುದ್ದಿ ಆಗಿತ್ತು. ಆದರೆ ಕೊನೆಗೆ ರಾಮ್ಚರಣ್ ಜೊತೆ 'ಪೆದ್ದಿ' ಸಿನಿಮಾ ಆರಂಭಿಸಿದ್ದರು. ಈಗ 'ಪೆದ್ದಿ' ಕಥೆ ಮುಗೀತು. ಮುಂದೇನು? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.


Click it and Unblock the Notifications