'ಟಾಕ್ಸಿಕ್' ಎದುರು 'ಪೆದ್ದಿ' ಅಂದವ್ರು ಎಲ್ಲೋದ್ರಪ್ಪಾ? ರಾಮ್ಚರಣ್ ಚಿತ್ರಕ್ಕೆ ಹೊಸ ರಿಲೀಸ್ ಡೇಟ್ ಫಿಕ್ಸ್!
ಬುಚ್ಚಿಬಾಬು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ಪೆದ್ದಿ' ಸಖತ್ ಸದ್ದು ಮಾಡ್ತಿದೆ. ಮೆಗಾ ಪವರ್ ಸ್ಟಾರ್ ರಾಮ್ಚರಣ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಮುಂದಿನ ವಾರ(ಏಪ್ರಿಲ್ 30) ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಚಿತ್ರೀಕರಣ ತಡವಾಗಿ ಎರಡು ತಿಂಗಳು ತಡವಾಗುತ್ತಿದೆ.
ಇತ್ತೀಚೆಗೆ 'ಪೆದ್ದಿ' ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಮತ್ತಷ್ಟು ಸೊಗಸಾಗಿ ಸಿನಿಮಾ ತೆರೆಗೆ ತರಲು ಇನ್ನು ಕೊಂಚ ಸಮಯ ಬೇಕು ಎಂದು ಹೇಳಿದ್ದರು. ಜೂನ್ ತಿಂಗಳಲ್ಲಿ ಸಿನಿಮಾ ರಿಲೀಸ್ ಎಂದಿದ್ದರು. ಆದರೆ ಡೇಟ್ ಮಾತ್ರ ಕನ್ಫರ್ಮ್ ಮಾಡಿರಲಿಲ್ಲ. ಜೂನ್ 4ರಂದು 'ಟಾಕ್ಸಿಕ್' ಎದುರು 'ಪೆದ್ದಿ' ಬರ್ತಾನೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. 'ಪೆದ್ದಿ' ಕಾರಣಕ್ಕೆ 'ಟಾಕ್ಸಿಕ್' ರಿಲೀಸ್ ಡೇಟ್ ಮತ್ತೆ ಮುಂದೂಡಬಹುದು ಎಂದು ಸುಳ್ಳು ಪ್ರಚಾರ ಮಾಡುವ ಪ್ರಯತ್ನ ಮಾಡಿದ್ದರು. ಅದಕ್ಕೆಲ್ಲಾ ಯಶ್ ಫ್ಯಾನ್ಸ್ ತಿರುಗೇಟು ಕೊಟ್ಟಿದ್ದರು.

'ಟಾಕ್ಸಿಕ್' ಎದುರು ಬರುವ ಧೈರ್ಯ 'ಪೆದ್ದಿ' ಮಾಡಲ್ಲ ಎನ್ನುವುದು ಗೊತ್ತೇಯಿದೆ. ಅಂದಹಾಗೆ ಜೂನ್ 25ರಂದು ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎಂದು ಫಿಲ್ಮ್ ನಗರ್ನಲ್ಲಿ ಚರ್ಚೆ ಆಗ್ತಿದೆ. ಜೂನ್ ಕೊನೆ ವಾರ ಸಿನಿಮಾ ಬಿಡುಗಡೆ ಆಗುವುದು ಬಹುತೇಕ ಖಚಿತ ಎನ್ನಲಾಗ್ತಿದ್ದು ಶೀಘ್ರದಲ್ಲೇ ಅಧಿಕೃತವಾಗಿ ಮಾಹಿತಿ ಸಿಗಲಿದೆ ಎಂದು ವರದಿಯಾಗಿದೆ. ಚಿತ್ರದಲ್ಲಿ ನಾಯಕ 'ಪೆದ್ದಿ' ಹಳ್ಳಿಯ ಕ್ರಿಕೆಟರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಸ್ಯಾಂಪಲ್ಗಳಲ್ಲಿ ಕೂಡ ಅದನ್ನು ಹೈಲೆಟ್ ಮಾಡಲಾಗಿದೆ.
ಸದ್ಯ ಐಪಿಎಲ್ ಫೀವರ್ ಜೋರಾಗಿದೆ. ಈ ನಡುವೆ ಸಿನಿಮಾ ಬಿಡುಗಡೆ ಮಾಡಿ ಕ್ರೇಜ್ ಹೆಚ್ಚಿಸಬೇಕು ಎಂದು ಚಿತ್ರತಂಡ ಮೊದಲಿಗೆ ತೀರ್ಮಾನಿಸಿತ್ತು. ಅದೇ ಕಾರಣಕ್ಕೆ ಏಪ್ರಿಲ್ 30ಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಐಪಿಎಲ್ ಮುಗಿದು 'ಟಾಕ್ಸಿಕ್' ಆರ್ಭಟ ತಗ್ಗಿದ ಬಳಿಕ 'ಪೆದ್ದಿ' ಚಿತ್ರಮಂದರಿಗಳಿಗೆ ಬರಲು ಮನಸ್ಸು ಮಾಡಿದ್ದಾನೆ. ಕನ್ನಡ ನಟ ಶಿವರಾಜ್ಕುಮಾರ್ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'KGF' ಸರಣಿ ಸಿನಿಮಾಗಳು ಆಂಧ್ರ, ತೆಲಂಗಾಣದಲ್ಲಿ ಸಖತ್ ಸದ್ದು ಮಾಡಿದ್ದವು. ರಾಕಿಭಾಯ್ ಹವಾ ಅಲ್ಲಿ ಜೋರಾಗಿದೆ. 120 ಕೋಟಿ ರೂ.ಗೆ ತೆಲುಗು ರಾಜ್ಯಗಳ 'ಟಾಕ್ಸಿಕ್' ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟವಾಗಿದೆ. ರೈಟ್ಸ್ ಸ್ವಂತ ಮಾಡಿಕೊಂಡಿರುವ ದಿಲ್ ರಾಜು ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡುತ್ತಿದ್ದಾರೆ. 'ಪೆದ್ದಿ' ಇದು ಮುಳುವಾಗಬಹುದು ಎನ್ನುವ ಕಾರಣಕ್ಕೆ ಕೆಲವರು 'ಟಾಕ್ಸಿಕ್' ಸಿನಿಮಾ ಟಾರ್ಗೆಟ್ ಮಾಡಿ ಟ್ರೋಲ್ ಮಾಡಿದ್ದರು. ಆದರೆ ಅದು ಸಫಲವಾಗಲಿಲ್ಲ.
ಅಂದಹಾಗೆ 'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು, ದಿವ್ಯೆಂದು, ಬೊಮನ್ ಇರಾನಿ, ಪೊಸಾನಿ ಕೃಷ್ಣಮುರಳಿ ಚಿತ್ರದ ತಾರಾಗಣದಲ್ಲಿದ್ದಾರೆ. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದ್ದು ಈಗಾಗಲೇ 2 ಸಾಂಗ್ ಹಿಟ್ ಆಗಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. 80-90ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ.
ಕ್ರಿಕೆಟರ್ ಪಾತ್ರವಲ್ಲ ಕುಸ್ತಿ ಪೈಲ್ವಾನ್ ಆಗಿ ಕೂಡ ರಾಮ್ಚರಣ್ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಈಗಾಗಲೇ ಟೀಸರ್ಗಳಲ್ಲಿ 'ಪೆದ್ದಿ' ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ರಿಲೀಸ್ ಡೇಟ್ ಬಗ್ಗೆ ಶೀಘ್ರದಲ್ಲೇ ಮಾಹಿತಿ ಲಭ್ಯವಾಗಲಿದೆ.


Click it and Unblock the Notifications