'ಆರ್ಆರ್ಆರ್' ವಿರುದ್ಧ ಮತ್ತೊಂದು ದೂರು: ಇತಿಹಾಸ ತಿರುಚಿದ ಆರೋಪ
ಭಾರತದ ಬಹುನಿರೀಕ್ಷಿತದ ಸಿನಿಮಾ 'ಆರ್ಆರ್ಆರ್' ಬಿಡುಗಡೆ ಮುಂದೂಡಲಾಗಿದೆ. ಚಿತ್ರೀಕರಣ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ 'ಆರ್ಆರ್ಆರ್' ಇದೀಗ ಬಿಡುಗಡೆ ಸಮಯದಲ್ಲಿಯೂ ಸಂಕಷ್ಟಗಳನ್ನು ಎದುರಿಸುತ್ತಿದೆ.
Recommended Video
'ಆರ್ಆರ್ಆರ್' ಸಿನಿಮಾಕ್ಕಾಗಿ ಕೋಟ್ಯಂತರ ಮಂದಿ ಕಾಯುತ್ತಿದ್ದಾರೆ ಅದರ ಜೊತೆಗೆ ಸಿನಿಮಾ ಬಗ್ಗೆ ಅಸಮಾಧಾನ ಉಳ್ಳವರು ಕೆಲವರು ಇದ್ದಾರೆ. ಈಗಾಗಲೇ ಸಿನಿಮಾ ವಿರುದ್ಧ ಕೆಲವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಈ ಪಟ್ಟಿಗೆ ಈಗ ಹೊಸ ಪ್ರಕರಣವೊಂದು ಸೇರಿಕೊಂಡಿದೆ.
'ಆರ್ಆರ್ಆರ್' ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂಬ ಆರೋಪ ಸಿನಿಮಾದ ಟೀಸರ್ ಬಿಡುಗಡೆ ಆದಾಗಲೇ ಕೇಳಿ ಬಂದಿತ್ತು. ಇದೀಗ ಇದೇ ಆರೋಪವನ್ನಿಟ್ಟುಕೊಂಡು ಸಂಘವೊಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದೆ.
'ಆರ್ಆರ್ಆರ್' ಸಿನಿಮಾವು ತೆಲುಗು ರಾಜ್ಯಗಳ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಕುರಿತ ಕತೆಯನ್ನು ಒಳಗೊಂಡಿದ್ದು, ಅಲ್ಲೂರಿ ಸೀತಾರಾಮ ರಾಜು ಆಗಿ ರಾಮ್ ಚರಣ್ ತೇಜ, ಕೋಮರಂ ಭೀಮ್ ಆಗಿ ಜೂ ಎನ್ಟಿಆರ್ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಅಲ್ಲೂರಿ ಸೀತಾರಾಮ ರಾಜು ಬ್ರಿಟೀಷರ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬಂತೆ ಚಿತ್ರಿಸಲಾಗಿದೆ. ಇದಕ್ಕೆ ಸಂಘವೊಂದು ಆಕ್ಷೇಪ ವ್ಯಕ್ತಪಡಿಸಿದೆ.

ತೆಲಂಗಾಣ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಅಲ್ಲೂರಿ ಸೀತಾರಾಮ ರಾಜು ಯುವಜನ ಸಂಘವು 'ಆರ್ಆರ್ಆರ್' ಸಿನಿಮಾ ವಿರುದ್ಧ ತೆಲಂಗಾಣ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು, 'ಆರ್ಆರ್ಆರ್' ಸಿನಿಮಾ ಬಿಡುಗಡೆ ಆಗದಂತೆ ತಡೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿರುವ ಸಂಘದ ಅಧ್ಯಕ್ಷ, ವೀರಭದ್ರ ರಾವ್, ''ಅಲ್ಲೂರಿ ಸೀತಾರಾಮ ರಾಜು ಸ್ವಾತಂತ್ರ್ಯ ಹೋರಾಟಗಾರರು, ಅವರೆಂದೂ ಬ್ರಿಟೀಷರ ಪರವಾಗಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿಲ್ಲ. ಬದಲಿಗೆ ಅವರು ಬುಡಕಟ್ಟು ಜನರ ಸೇನೆ ಕಟ್ಟಿಕೊಂಡು ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿದ್ದರು. ಆದರೆ ನಿರ್ದೇಶಕ ರಾಜಮೌಳಿ 'ಆರ್ಆರ್ಆರ್' ನಲ್ಲಿ ಇತಿಹಾಸವನ್ನು ತಿರುಚಿದ್ದಾರೆ'' ಎಂದಿದ್ದಾರೆ.

''ಬ್ರಿಟೀಷರ ಮುಂದೆ ಕುಣಿಯುವಂತೆ ಚಿತ್ರಿಸಿರುವುದು ಅಪಮಾನಕರ''
''ಅಲ್ಲೂರಿ ಸೀತಾರಾಮ ರಾಜು, ಕೋಮರಂ ಭೀಮ್ ಅಂಥಹಾ ಹೋರಾಟಗಾರರು ಬ್ರಿಟೀಷ್ ಹೆಣ್ಣು ಮಗಳ ಮುಂದೆ ಕುಣಿಯುವಂತೆ ಸಿನಿಮಾದಲ್ಲಿ ನಿರ್ದೇಶಕ ರಾಜಮೌಳಿ ಚಿತ್ರಿಸಿದ್ದಾರೆ ಇದು ಹೋರಾಟಗಾರರಿಗೆ ಮಾಡಿದ ಅಪಮಾನ. ಅಲ್ಲದೆ ಇತಿಹಾಸದ ಪ್ರಕಾರ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಭೇಟಿ ಆಗಿರಲೇ ಇಲ್ಲ. ಕೋಮರಂ ಭೀಮ್ ನಿಜಾಮರ ವಿರುದ್ಧ ಹೋರಾಟ ಮಾಡಿದರೆ ಅಲ್ಲೂರಿ ಸೀತಾರಾಮ ರಾಜು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದಾರೆ'' ಎಂದಿದ್ದಾರೆ ವೀರಭದ್ರ ರಾವ್.

ಕತೆ ಕಾಲ್ಪನಿಕ ಆದರೆ ಪಾತ್ರಗಳು ನಿಜ!
''ತಮ್ಮ ಸಿನಿಮಾದ ಪಾತ್ರಗಳು ಕಾಲ್ಪನಿಕ ಎಂದು ನಿರ್ದೇಶಕ ರಾಜಮೌಳಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ ಸಿನಿಮಾದ ಮುಖ್ಯ ಪಾತ್ರಗಳು ನಿಜ ವ್ಯಕ್ತಿಗಳ ಪಾತ್ರಗಳು. ಇಬ್ಬರೂ ತೆಲುಗು ರಾಜ್ಯಗಳ ಹೆಮ್ಮೆಯ ಹೋರಾಟಗಾರರು. ಅಲ್ಲದೆ, ನಿರ್ದೇಶಕರು ಹೇಳಿದ್ದಾರೆ, 'ಒಂದೊಮ್ಮೆ ಅಲ್ಲೂರಿ ಹಾಗೂ ಭೀಮ್ ಸೇರಿ ಹೋರಾಟ ಮಾಡಿರುತ್ತಿದ್ದರೆ ಹೇಗಿರುತ್ತಿತ್ತು ಎಂಬುದನ್ನು ತೋರಿಸಿದ್ದೇನೆ ' ಎಂದು, ಈ ಪ್ರಯತ್ನದಲ್ಲಿ ನಿರ್ದೇಶಕರು ಹಲವು ಸತ್ಯಗಳನ್ನು ತಿರುಚಿದ್ದಾರೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ವೀರಭದ್ರ ರಾವ್.

ಅಲ್ಲೂರಿ ಸೌಮ್ಯಾ ಅವರಿಂದ ದೂರು
ಅಲ್ಲೂರಿ ಸೀತಾರಾಮ ರಾಜು ಕುಟುಂಬದವರು ಎಂದು ಹೇಳಿಕೊಂಡಿರುವ ಅಲ್ಲೂರಿ ಸೌಮ್ಯಾ ಎಂಬ ಮಹಿಳೆ ಕಳೆದ ತಿಂಗಳಷ್ಟೆ ಇದೇ ವಿಚಾರವಾಗಿ ತೆಲಂಗಾಣ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ತಿರುಚಲಾಗಿದೆ ಎನ್ನಲಾಗಿದೆ. ಅಲ್ಲುರಿ ಸೀತಾರಾಮ ರಾಜು ಹಾಗೂ ಕೊಮರಂ ಭೀಮ್ ಇಬ್ಬರೂ ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರು. ಇವರ ಬೆಂಬಲಿಗರಿಗೆ RRR ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ. ಹೀಗಾಗಿ ರಾಜಮೌಳಿ ನಿರ್ದೇಶಿಸಿದ ಪ್ಯಾನ್ ಇಂಡಿಯಾ ಸಿನಿಮಾ RRR ಗೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಬಾರದು ಎಂದು ಅಲ್ಲೂರಿ ಸೌಮ್ಯ ಆಗ್ರಹಿಸಿದ್ದರು.

ಕೋರಂ ಭೀಮ್ ಪಾತ್ರದ ಬಗ್ಗೆಯೂ ಅಸಮಾಧಾನ
ಸಿನಿಮಾದಲ್ಲಿನ ಮತ್ತೊಂದು ಪಾತ್ರ ಕೋಮರಂ ಭೀಮ್ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿತ್ತು. ಹಿಂದು ಧರ್ಮೀಯನಾದ ಕೋಮರಂ ಭೀಮ್ ಅನ್ನು ಮುಸ್ಲಿಂ ವ್ಯಕ್ತಿ ಎಂಬಂತೆ ಸಿನಿಮಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ಕೋಮರಂ ಭೀಮ್ರ ಗೋಂಡ ಬುಡಕಟ್ಟು ಜನರು ಆಕ್ಷೇಪಣೆ ಎತ್ತಿದ್ದರು. ಈ ಬಗ್ಗೆ ಸಹ ದೂರುಗಳು ದಾಖಲಾಗಿದ್ದವು. ಆದರೆ ಸಿನಿಮಾ ನೋಡುವ ಮುನ್ನವೇ ತೀರ್ಮಾನ ಮಾಡಬೇಡಿ ಎಂದು ಆಗ ರಾಜಮೌಳಿ ಮನವಿ ಮಾಡಿಕೊಂಡಿದ್ದರು.


Click it and Unblock the Notifications











