ಜೂ ಎನ್ಟಿಆರ್ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರು
ನಟ ಜೂ ಎನ್ಟಿಆರ್ ಅಭಿಮಾನಿಗಳ ಮೇಲೆ ಹೈದರಾಬಾದ್ನಲ್ಲಿ ನಿನ್ನೆ ಲಾಠಿ ಚಾರ್ಜ್ ಮಾಡಲಾಗಿದೆ. ಅದೂ ಜೂ ಎನ್ಟಿಆರ್ ಮನೆಯ ಮುಂದೆಯೇ.
ತೆಲುಗು ರಾಜ್ಯಗಳಲ್ಲಿ ಜೂ ಎನ್ಟಿಆರ್ಗೆ ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಜೂ ಎನ್ಟಿಆರ್ ನಟಿಸಿದ್ದ 'ಆಂಧ್ರಾವಾಲ' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಸುಮಾರು 10 ಲಕ್ಷ ಜನ ಸೇರಿದ್ದರು, ಇದು ತೆಲುಗು ರಾಜ್ಯಗಳಲ್ಲಿ ದಾಖಲೆಯಾಗಿ ಉಳಿದಿದೆ.
ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಜೂ ಎನ್ಟಿಆರ್ ನಿನ್ನೆ (ಮೇ 20) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ.

ಜೂ ಎನ್ಟಿಆರ್ಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಮೇ 19ರ ರಾತ್ರಿಯೇ ಹೈದರಾಬಾದ್ನ ಜೂಬ್ಲಿ ಹಿಲ್ಸ್ನ ಜೂ ಎನ್ಟಿಆರ್ ನಿವಾಸದ ಮುಂದೆ ಅಭಿಮಾನಿಗಳು ನೆರೆದಿದ್ದರು. ಮಧ್ಯರಾತ್ರಿ ಜೂ ಎನ್ಟಿಆರ್ ಮನೆಯಿಂದ ಹೊರಗೆ ಬಂದು ತಮ್ಮ ಶುಭಾಶಯ ಸ್ವೀಕರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದರು. ಆದರೆ ಆ ಸಮಯದಲ್ಲಿ ಜೂ ಎನ್ಟಿಆರ್ ಮನೆಯಲ್ಲಿರಲಿಲ್ಲ.
ಆದರೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಜೂ ಎನ್ಟಿಆರ್ ನಿವಾಸದ ಮುಂದೆ ತಾವು ತಂದಿದ್ದ ಕೇಕ್ ಕತ್ತರಿಸಿ, ಜೂ ಎನ್ಟಿಆರ್ಗೆ ಜಯಕಾರಗಳನ್ನು ಹಾಕಿದ್ದಾರೆ. ಅಲ್ಲದೆ ರಸ್ತೆ ಬ್ಲಾಕ್ ಮಾಡಿ ಹಾಡುಗಳನ್ನು ಹಾಕಿಕೊಂಡು ನೃತ್ಯ ಮಾಡಿದ್ದಾರೆ. ಇದರಿಂದ ಜೂ ಎನ್ಟಿಆರ್ ನಿವಾಸದ ಅಕ್ಕ-ಪಕ್ಕದ ನಿವಾಸದವರಿಗೆ ಸಮಸ್ಯೆಯಾಗಿದೆ.
ಕೊನೆಗೆ ಪೊಲೀಸರು ಆಗಮಿಸಿ ಜೂ ಎನ್ಟಿಆರ್ ಅಭಿಮಾನಿಗಳ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಕೆಲವು ಅಭಿಮಾನಿಗಳು ಪೊಲೀಸರೊಟ್ಟಿಗೆ ವಾಗ್ವಾದ ನಡೆಸಿದ ಕಾರಣ ಪೊಲೀಸರು ಅಭಿಮಾನಿಗಳ ವಿರುದ್ಧ ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಿದ್ದಾರೆ.
ನಿನ್ನೆ ಜೂ ಎನ್ಟಿಆರ್ ತಮ್ಮ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಜೂ ಎನ್ಟಿಆರ್, ಪ್ರಸ್ತುತ ತೆಲುಗಿನ ಟಾಪ್ ನಾಯಕ ನಟರಲ್ಲಿ ಒಬ್ಬರು. ಜೂ ಎನ್ಟಿಆರ್ ನಟಿಸಿರುವ 'RRR' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ.


Click it and Unblock the Notifications











