ಶ್ರೀಲೀಲಾ ಅದೃಷ್ಟವೋ ಅದೃಷ್ಟ: ಮೀನಿಗೆ ಗಾಳ ಹಾಕಿದ್ರೆ ತಿಮಿಂಗಿಲ ಸಿಕ್ಕಿಬಿಡ್ತು!
'ಗುಂಟೂರು ಖಾರಂ' ಸಿನಿಮಾ ಸೆಟ್ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಪದೇ ಪದೇ ಪ್ರೂವ್ ಆಗುತ್ತಿದೆ. ಮಹೇಶ್ ಬಾಬು- ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ಚಿತ್ರದಲ್ಲಿ ಹೀಗಾಗುತ್ತಿರುವುದು ವಿಪರ್ಯಾಸ. ಸಿನಿಮಾ ರಿಲೀಸ್ ಡೇಟ್ ಪದೇ ಪದೇ ಬದಲಾಗುತ್ತಿದೆ. ಇದೀಗ ನಟಿ ಪೂಜಾ ಹೆಗ್ಡೆ ಚಿತ್ರದಿಂದ ಹೊರ ನಡೆದಿರುವುದಾಗಿ ಹೇಳಲಾಗುತ್ತಿದೆ. ಹೊಸ ಶೆಡ್ಯೂಲ್ ಶೂಟಿಂಗ್ ಕೂಡ ತಡವಾಗುತ್ತಿದೆ.
'ಅತಡು' ಹಾಗೂ 'ಖಲೇಜಾ' ಸಿನಿಮಾಗಳ ನಂತರ ಮಹೇಶ್- ತ್ರಿವಿಕ್ರಮ್ 3ನೇ ಬಾರಿಗೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಆದರೆ ಈ ವರ್ಷ ಏಪ್ರಿಲ್ 29ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೂ ಬರೋದು ಡೌಟು ಎನ್ನಲಾಗುತ್ತಿದೆ. ಸ್ಟ್ರಿಪ್ಟ್ ಬದಲಾಗುತ್ತಿದೆ, ಮಹೇಶ್ ಬಾಬು -ತ್ರಿವಿಕ್ರಮ್ ನಡುವೆ ಮನಸ್ತಾಪ ಮೂಡಿದೆ, ಒಂದಷ್ಟು ಸನ್ನಿವೇಶಗಳನ್ನು ರೀ ಶೂಟ್ ಮಾಡುತ್ತಿದ್ದಾರೆ. ಹೀಗೆ ಸಿನಿಮಾ ಹತ್ತು ಹಲವು ವದಂತಿ ಹರಿದಾಡ್ತಿದೆ.

ಕಳೆದೊಂದು ವಾರದಿಂದ ಸಂಗೀತ ನಿರ್ದೇಶಕ ಎಸ್. ತಮನ್ ಚಿತ್ರದಿಂದ ಹೊರಬಂದಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಆದರೆ ಇದೀಗ ನಟಿ ಪೂಜಾ ಹೆಗ್ಡೆ ಕೂಡ ಹೊರ ನಡೆದಿರುವ ಬಗ್ಗೆ ಊಹಾಪೋಹ ಶುರುವಾಗಿದೆ. ಇದೇ ವಿಚಾರ ದೊಡ್ಡದಾಗಿ ಸದ್ದು ಮಾಡ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡದಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ. ಪೂಜಾ ಹೆಗ್ಡೆ ಪಿಆರ್ ಮೂಲಗಳು ಇದು ನಿಜ ಎಂದು ಹೇಳುತ್ತಿವೆ. ಶೀಘ್ರದಲ್ಲೇ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ.

ಡೇಟ್ಸ್ ಕಾರಣ ಕೊಟ್ಟು ಪೂಜಾ ಹೊರಕ್ಕೆ
ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗು ಮಾತ್ರವಲ್ಲದೇ ಬಾಲಿವುಡ್ನಲ್ಲೂ ಭಾರೀ ಬೇಡಿಕೆ ಇದೆ. ಸಾಲದ್ದಕ್ಕೆ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸುತ್ತಿದ್ಧಾರೆ. 'ಗುಂಟೂರು ಖಾರಂ' ಚಿತ್ರಕ್ಕೆ ಕಳೆದ ವರ್ಷ ಡೇಟ್ಸ್ ಕೊಟ್ಟಿದ್ದರು. ನಂತರ ಸಿನಿಮಾ ತಡವಾಗಿದ್ದಕ್ಕೆ ಈ ವರ್ಷ ಕೂಡ ಕಾಲ್ಶೀಟ್ ನೀಡಿದ್ದರು. ಅಷ್ಟಾದರೂ ಸಿನಿಮಾ ಶೂಟಿಂಗ್ ಮಾತ್ರ ಸರಿಯಾಗಿ ನಡೀತಿಲ್ಲ. ಬೇರೆ ಸಿನಿಮಾಗಳಿಗೆ ಸಮಸ್ಯೆ ಆಗುವುದು ಬೇಡ ಎಂದು 'ಗುಂಟೂರು ಖಾರಂ' ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗ್ತಿದೆ.
ಶ್ರೀಲೀಲಾ ಲೀಡ್ ಹೀರೊಯಿನ್
'ಗುಂಟೂರು ಖಾರಂ' ಚಿತ್ರಕ್ಕೆ 2ನೇ ನಾಯಕಿಯಾಗಿ ಶ್ರೀಲೀಲಾ ಆಯ್ಕೆ ಆಗಿದ್ದರು. ಆದರೆ ಈಗ ಪೂಜಾ ಹೆಗ್ಡೆ ಹೊರ ಬಂದಿರುವುದರಿಂದ 'ಕಿಸ್' ಬೆಡಗಿಯೇ ಲೀಡ್ ರೋಲ್ನಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಅದೇ ಸಮಯದಲ್ಲಿ ಶ್ರೀಲೀಲಾ ಮಾಡಬೇಕಿದ್ದ ಪಾತ್ರವನ್ನು ಸಂಯುಕ್ತಾ ಮೆನನ್ ಮಾಡ್ತಾರೆ ಎನ್ನಲಾಗುತ್ತಿದೆ. ಎಲ್ಲದಕ್ಕೂ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಬೇಕಿದೆ. ಒಟ್ನಲ್ಲಿ 2ನೇ ಹೀರೊಯಿನ್ ಆಗಿದ್ದ ಶ್ರೀ ಈಗ ಮೊದಲನೇ ಹೀರೊಯಿನ್ ಆಗಿ ಬಡ್ತಿ ಪಡೆಯುತ್ತಿದ್ದಾರೆ.
ಎಸ್. ತಮನ್ ಸಹ ಔಟ್
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಗುಂಟೂರು ಖಾರಂ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಆದರೆ ಸೆಟ್ಟೇರಿದ ದಿನದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸಿನಿಮಾ ಸುದ್ದಿಯಲ್ಲಿದೆ. ಇನ್ನು ಸಂಗೀತ ನಿರ್ದೇಶಕ ಎಸ್. ತಮನ್ ಕೂಡ ಚಿತ್ರದಲ್ಲಿ ಹೊರ ಬಂದಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಟ್ಯೂನ್ ಹಾಕುತ್ತಾರೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. ಆದರೆ ಇದಕ್ಕೆ ಪರೋಕ್ಷವಾಗಿ ಎಸ್. ತಮನ್ ತಿರುಗೇಟು ನೀಡಿದ್ದಾರೆ.
ಸಾಲು ಸಾಲು ಚಿತ್ರಗಳಲ್ಲಿ ಶ್ರೀಲೀಲಾ
ಶ್ರೀಲೀಲಾ ಅದ್ಯಾವ ಗಳಿಗೆಯಲ್ಲಿ ಟಾಲಿವುಡ್ಗೆ ಎಂಟ್ರಿ ಕೊಟ್ಟರೋ ಗೊತ್ತಿಲ್ಲ. ಸಿಕ್ಕಾಪಟ್ಟೆ ಕ್ರೇಜ್ ಧಕ್ಕಿಸಿಕೊಂಡಿದ್ದಾರೆ. ಸ್ಟಾರ್ ನಟರೆಲ್ಲಾ ಶ್ರೀಲೀಲಾ ಜೊತೆ ತೆರೆಮೇಲೆ ರೊಮ್ಯಾನ್ಸ್ ಮಾಡೋಕೆ ಮುಗಿಬಿದ್ದಿದ್ದಾರೆ. ಪವನ್ ಕಲ್ಯಾಣ್, ರಾಮ್ ಪೋತಿನೇನಿ, ನಿತಿನ್ ಸೇರಿದಂತೆ ಹಲವರ ಸಿನಿಮಾಗಳಿಗೆ ನಾಯಕಿಯಾಗಿ ಶ್ರೀ ಆಯ್ಕೆ ಆಗಿದ್ದಾರೆ. ಬಾಲಕೃಷ್ಣ ನಟನೆಯ 'ಭಗವಂತ್ ಕೇಸರಿ' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











