ರೈತ ಪ್ರತಿಭಟನೆ ಬಗ್ಗೆ ಪ್ರಕಾಶ್ ರೈ ಟ್ವೀಟ್, ನಟಿಯ ಬೆಂಬಲ
ನಟ ಪ್ರಕಾಶ್ ರೈ ಮೊದಲಿನಿಂದಲೂ ತಮ್ಮ ರಾಜಕೀಯ ಅಭಿಪ್ರಾಯವನ್ನು, ನಿಲವುಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಗೊಳಿಸುತ್ತಾ ಬಂದಿದ್ದಾರೆ. ಇದರಿಂದಾಗಿಯೇ ಹಲವರ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ ಪ್ರಕಾಶ್ ರೈ.
ತಮ್ಮ ಬಿಜೆಪಿ ವಿರೋಧಿ ಅಥವಾ ಕೇಂದ್ರ ಸರ್ಕಾರ ವಿರೋಧಿ ಅಭಿಪ್ರಾಯಗಳನ್ನು ಅವರು ಟ್ವಿಟ್ಟರ್ನಲ್ಲಿ ಪ್ರಕಟಿಸುತ್ತಿರುತ್ತಾರೆ. ಜಸ್ಟ್ ಆಸ್ಕಿಂಗ್ ಹೆಸರಲ್ಲಿ ಕೇಂದ್ರ ಸರ್ಕಾರವನ್ನು ಆಗಾಗ್ಗೆ ಟೀಕಿಸುತ್ತಿರುತ್ತಾರೆ.
ಇದೀಗ ದೇಶದ ಗಮನ ಸೆಳೆದಿರುವ ರೈತ ಪ್ರತಿಭಟನೆ ಕುರಿತಂತೆ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. 'ಪಕ್ಷಾತೀತವಾಗಿ ನಾವೆಲ್ಲರೂ ರೈತರ ಪರ ನಿಲ್ಲಬೇಕಿದೆ. ಅವರ ನೋವಿಗೆ ನಾವು ದನಿಯಾಗಲೇ ಬೇಕು. ಅವರ ಸಮಸ್ಯೆ ನಿವಾರಣೆಯೇ ನಮ್ಮ ಮೊದಲ ಆದ್ಯತೆ ಆಗಬೇಕು' ಎಂದಿದ್ದಾರೆ.

ಪ್ರಕಾಶ್ ರೈ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ನಟಿ ಪೂನಂ ಕೌರ್, 'ಪ್ರಕಾಶ್ ರೈ, ಯಾವುದಾದರೂ ನಟ/ನಟಿಯ ಬಗ್ಗೆ ಅಥವಾ ರಾಜಕಾರಣಿ ಬಗ್ಗೆ ಮಾತನಾಡಿದರೆ ದೊಡ್ಡ ಸುದ್ದಿಯಾಗುತ್ತದೆ. ಆದರೆ ರೈತರ ಬಗ್ಗೆ ಮಾತನಾಡಿದಾಗ ಯಾವ ಮಾಧ್ಯಮಗಳೂ ಸಹ ಅದನ್ನು ಗಮನಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ನವರಾಗಿರುವ ಪೂನಂ ಕೌರ್, 2006 ರಿಂದಲೂ ನಟನೆಯಲ್ಲಿ ತೊಡಗಿದ್ದಾರೆ. ತೆಲುಗಿನಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಪೂನಂ ಕೌರ್, ಪ್ರಕಾಶ್ ರೈ ಅವರೊಟ್ಟಿಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ರೈತ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಹಲವಾರು ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಪಂಜಾಬ್ ಮೂಲದ ನಟ-ನಟಿಯರು ಈ ಪ್ರತಿಭಟನೆಗೆ ಭಾರಿ ಬೆಂಬಲ ವ್ಯಕ್ತಪಡಿಸಿದ್ದದಾರೆ. ದಿಲ್ಜೀತ್ ದುಸ್ಸಾಂಜ್, ಮಿಕ್ಕಾ ಸಿಂಗ್, ಪೂನಂ ಕೌರ್ ಇನ್ನೂ ಹಲವರು ರೈತ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.


Click it and Unblock the Notifications











