'ಪಂಜಾಬಿ ಹುಡುಗಿಯನ್ನು ಗರ್ಭಿಣಿ ಮಾಡಿ ವಂಚಿಸಿದ್ರು': ನ್ಯಾಯ ಕೊಡಿಸೋಕೆ ಆಗುತ್ತಾ?
ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಪವನ್ ಕಲ್ಯಾಣ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿಗಷ್ಟೆ ಸಾಯಿ ಧರಮ್ ತೇಜ ನಟನೆಯ 'ರಿಪಬ್ಲಿಕ್' ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪವನ್ ಕಲ್ಯಾಣ್ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು. ಪವರ್ ಸ್ಟಾರ್ ಹೇಳಿಕೆಗಳ ವಿರುದ್ಧ ವೈಎಸ್ಆರ್ ಪಕ್ಷದ ಸಚಿವರು, ಶಾಸಕರು ಹಾಗೂ ಮುಖಂಡರು ಸಿಡಿದೆದ್ದಿದ್ದಾರೆ.
ಸಿನಿಮಾ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಮಾಡಿದ ಭಾಷಣಕ್ಕೆ ಪೋಷಕ ನಟ ಪೊಸನಿ ಕೃಷ್ಣ ಮುರಳಿ ಸಹ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಪವನ್ ಕಲ್ಯಾಣ್ ಮೇಲೆ ಆಕ್ರೋಶ ಹೊರಹಾಕಿದರು.
''ಸಾಯಿ ಧರಮ್ ತೇಜ ತುಂಬಾ ಒಳ್ಳೆಯ ವ್ಯಕ್ತಿ. ಆತ ಸ್ವಂತ ಶ್ರಮದಿಂದ ಬೆಳೆದು ಬಂದಿದ್ದಾನೆ. ಯಾರ ನೆರಳಿನಲ್ಲೂ ಏಳಿಗೆ ಕಂಡವನಲ್ಲ. ಅವರ ತಾಯಿಯಿಂದ ಆತ ಇಂಡಸ್ಟ್ರಿಯಲ್ಲಿ ಯಶಸ್ಸು ಕಂಡಿದ್ದಾನೆ. ನಾನು ಸಹ ಆತನ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ತಂದೆ ಪಾತ್ರ ಮಾಡಿದ್ದೆ, ನನ್ನನ್ನು ತಂದೆ ಸಮಾನರಂತೆ ಸಾಯಿ ಧರಮ್ ತೇಜ ಕಂಡಿದ್ದಾರೆ. ಅಪಘಾತದಿಂದ ಚಿಕಿತ್ಸೆಯಲ್ಲಿರುವ ಸಾಯಿ ಬೇಗ ಗುಣಮುಖರಾಗಬೇಕು'' ಎಂದು ಪೊಸನಿ ಕೃಷ್ಣ ಮುರಳಿ ಆಶಿಸಿದರು.
''ಆದರೆ ರಿಪಬ್ಲಿಕ್ ಚಿತ್ರದ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಮಾತನಾಡುವ ಭರದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಕೆಲವು ಸಚಿವರನ್ನು ಏಕವಚನದಲ್ಲಿ ಟೀಕಿಸಿದ್ದು ನನಗೆ ಸರಿ ಕಾಣಲಿಲ್ಲ'' ಎಂದು ಕೃಷ್ಣ ಮುರಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪಂಜಾಬಿ ಮೂಲದ ನಟಿಯೊಬ್ಬರಿಗೆ ತೆಲುಗು ಇಂಡಸ್ಟ್ರಿಯಲ್ಲಿ ಆದ ಅನ್ಯಾಯದ ಬಗ್ಗೆ ಉಲ್ಲೇಖಿಸಿ ಇದಕ್ಕೆ ನ್ಯಾಯ ಕೊಡಿಸಲು ನಿಮಗೆ ಸಾಧ್ಯವೇ ಎಂದು ಪ್ರಶ್ನಿಸಿದರು. ಮುಂದೆ ಓದಿ...

ಪಂಜಾಬಿ ಹುಡುಗಿಗೆ ಮೋಸ ಮಾಡಿದ್ದು ಯಾರು?
''ಪಂಜಾಬಿ ಮೂಲದ ಹುಡುಗಿ ತೆಲುಗು ಚಿತ್ರರಂಗಕ್ಕೆ ಬಂದಿದ್ದರು. ತೆಲುಗು ಜನರು ತುಂಬಾ ಒಳ್ಳೆಯ ಜನರು ಎಂದು ಹೇಳುವುದರೊಂದಿಗೆ ಆಕೆ ಹಲವು ಕನಸುಗಳನ್ನು ಕಟ್ಟಿಕೊಂಡು ಚಿತ್ರರಂಗ ಪ್ರವೇಶಿಸಿದರು. ಆದರೆ ಓರ್ವ ಪ್ರಮುಖ ಸೆಲೆಬ್ರಿಟಿ ಆ ಹುಡುಗಿಗೆ ಮೋಸ ಮಾಡಿದ. ನಂಬಿಸಿ ಆ ಹುಡುಗಿಯನ್ನು ಗರ್ಭಿಣಿ ಮಾಡಿದ. ಆ ನಂತರ ನ್ಯಾಯ ಕೇಳಿದರೆ ಬೆದರಿಕೆ ಹಾಕಿದ. ಮಾಧ್ಯಮಗಳಿಗೆ ತಿಳಿಸಿದರೆ ಕೊಲ್ಲುವುದಾಗಿ ಭಯ ಹುಟ್ಟಿಸಿದ. ಕೊನೆಗೆ ಐದು ಕೋಟಿ ರೂಪಾಯಿ ನೀಡಿ ಆಕೆಗೆ ಗರ್ಭಪಾತ ಮಾಡಿಸಿದರು. ಆಕೆಗೆ ನ್ಯಾಯ ಕೊಡಿಸಲು ಸಾಧ್ಯವಾ ಪವನ್ ಕಲ್ಯಾಣ್'' ಎಂದು ಪೊಸನಿ ಪ್ರಶ್ನಿಸಿದರು.

ಮಹಿಳೆಯರಿಗೆ ಅನ್ಯಾಯವಾದ್ರೆ ಖಂಡಿಸುವ ಪವನ್
ಈ ಹಿಂದೆಯೊಮ್ಮೆ ಪವನ್ ಕಲ್ಯಾಣ್ ಮಾತನಾಡುವ ವೇಳೆ ''ಮಹಿಳೆಯರ ಮೇಲೆ ಯಾರಾದರೂ ಕಣ್ಣು ಹಾಕಿದ್ರೆ ಕಣ್ಣು ಕೀಳ್ತೇನೆ, ಮಹಿಳೆಯರಿಗೆ ಅನ್ಯಾಯವಾದರೆ ನಾನು ಸಹಿಸಲ್ಲ ಎಂದಿದ್ದರು. ಈಗ ಪಂಜಾಬಿ ಹುಡುಗಿಗೆ ಆದ ಅನ್ಯಾಯದ ಬಗ್ಗೆ ನಾನು ಹೇಳ್ತೇನೆ. ಅನ್ಯಾಯವನ್ನು ಪ್ರಶ್ನಿಸುವ ಗುಣಯಿರುವ ಪವನ್ ಕಲ್ಯಾಣ್ ಈ ಹುಡುಗಿಗೆ ನ್ಯಾಯ ಕೊಡಿಸಬೇಕು. ಮಾಧ್ಯಮಗಳ ಮೂಲಕ ಆಕೆಗೆ ಆದ ಅನ್ಯಾಯಕ್ಕೆ ಸ್ಪಂದಿಸಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪವನ್ ಕಲ್ಯಾಣ್ ಅವರು ಆಗ್ರಹಿಸಬೇಕು'' ಎಂದು ತೆಲುಗು ಪೋಷಕ ನಟ ತಿರುಗೇಟು ನೀಡಿದರು.

ರಾಮನ ಪಕ್ಕದ ಪವನ್ ಗುಡಿ ಕಟ್ಟುತ್ತೇನೆ
''ಒಂದು ವೇಳೆ ಪವನ್ ಕಲ್ಯಾಣ್ ಹೀಗೆ ಮಾಡಿದ್ರೆ ಶ್ರೀರಾಮನ ಮಂದಿರದ ಪಕ್ಕದಲ್ಲಿ ಪವನ್ ಕಲ್ಯಾಣ್ ಗುಡಿ ಕಟ್ಟಿಸುತ್ತೇನೆ, ಮಹಾತ್ಮ ಗಾಂಧಿಗಿಂತ ಉತ್ತಮ ಎನ್ನುತ್ತೇನೆ, ದಯವಿಟ್ಟು ಪವನ್ ಕಲ್ಯಾಣ್ ಅವರೇ ಈ ಒಂದು ಕೆಲಸ ಮಾಡಿ, ನಿಮ್ಮಿಂದ ಇದು ಸಾಧ್ಯನಾ? ನೀವು ಮಾಡಿದ್ರೆ ಜಗನ್ ಅವರಿಗಿಂತ, ಮೌಂಟ್ ಎವರಸ್ಟ್ಗಿಂತ ದೊಡ್ಡವರು ಎಂದು ಹೆಮ್ಮೆಯಿಂದ ಹೇಳ್ತೇನೆ'' ಎಂದು ಕೃಷ್ಣ ಮುರಳಿ ಪ್ರಶ್ನಿಸಿದರು. ಆ ಹುಡುಗಿಗೆ ನ್ಯಾಯ ಕೊಡಿಸಿದರೆ ಪವನ್ ಕಲ್ಯಾಣ್ ಬದುಕಿರುವಾಗಲೇ ಅವರಿಗೆ ಗುಡಿ ಕಟ್ಟಿಸಿ ಪೂಜೆ ಮಾಡಲು ಪ್ರಯತ್ನಿಸುತ್ತೇನೆ. ಇಂತಹ ಕೆಲಸ ಮಾಡಿ ಆ ನಟನಿಗೆ ಗೌರವ ಸಿಕ್ಕರೆ ನಾನು ಸಹ ಅದನ್ನು ಬಹಳ ಗೌರವದಿಂದ ಕಾಣ್ತೇನೆ. ಒಂದು ವೇಳೆ ಆ ಹುಡುಗಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಅಂದ್ರೆ ಜಗನ್, ಸಚಿವರು ಹಾಗೂ ಶಾಸಕರನ್ನು ಪ್ರಶ್ನಿಸುವ ಅಧಿಕಾರ ಪವನ್ ಕಲ್ಯಾಣ್ ಅವರಿಗೆ ಇಲ್ಲ ಎಂದಿದ್ದಾರೆ.

ಸಿಎಂ ಜಗನ್ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ
ಅಂದ್ಹಾಗೆ, ಥಿಯೇಟರ್ಗಳಲ್ಲಿ ಟಿಕೆಟ್ ಗಳನ್ನು ನೇರವಾಗಿ ಸರ್ಕಾರ ಆನ್ ಲೈನ್ ಮೂಲಕ ಮಾರಾಟ ಮಾಡುವ ಬಗ್ಗೆ ಜಗನ್ ನೇತೃತ್ವದ ಸರ್ಕಾರ ನಿರ್ಧರಿಸಿತ್ತು. ಇದನ್ನು ಖಂಡಿಸಿದ್ದ ಪವನ್ ಕಲ್ಯಾಣ್ ರಿಪಬ್ಲಿಕ್ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ''ನಾವು ಶ್ರಮ ಹಾಕಿ ಸಿನಿಮಾ ತೆಗೆದರೆ ಅದರ ಮಾರಾಟ ನೀನು ಮಾಡುತ್ತೀಯಾ? ಸರ್ಕಾರ ಸಾಲಗಳಲ್ಲಿ ಮುಳುಗಿದೆ, ಹಾಗಾಗಿ ನಮ್ಮ ಸಿನಿಮಾಗಳನ್ನು ನೀವು ಮಾರಿಕೊಂಡು ಸರ್ಕಾರದ ಬೊಕ್ಕಸಕ್ಕೆ ಹಣ ತುಂಬಿಕೊಳ್ಳಲು ಯತ್ನಿಸುತ್ತಿದ್ದೀಯ. ನಮ್ಮ ಸಿನಿಮಾಗಳನ್ನು ಮಾರಾಟ ಮಾಡಲು ನೀನು ಯಾರು? ಸಿನಿಮಾದವರು ವ್ಯವಹಾರ ಮಾಡಬಾರದಾ? ಎಂದು ಪವನ್ ಕಲ್ಯಾಣ್ ಖಾರವಾಗಿ ಪ್ರಶ್ನಿಸಿದ್ದರು.


Click it and Unblock the Notifications











