ಅಭಿಮಾನಿಗಳಿಗೆ ಭರ್ಜರಿ ಭೋಜನ ಹಾಕಿಸಿದ ಪ್ರಭಾಸ್: ಮೆನುವಿನಲ್ಲೇನಿತ್ತು?
ದೊಡ್ಡಪ್ಪ ಕೃಷ್ಣಂರಾಜು ಅವರನ್ನು ಕಳೆದುಕೊಂಡು ದುಃಖದಲ್ಲಿದ್ದ ಪ್ರಭಾಸ್, ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದು, ತಮ್ಮ ಅಭಿಮಾನಿಗಳಿಗೆ ಭರ್ಜರಿ ಭೋಜನವನ್ನೂ ಹಾಕಿಸಿದ್ದಾರೆ.
ಕೃಷ್ಣಂರಾಜು ಅವರ ಸ್ವಂತ ಊರು, ಪ್ರಭಾಸ್ಗೂ ತವರೂರಾಗಿರುವ ಮೊಗಲ್ತೂರಿಗೆ 11 ವರ್ಷಗಳ ಬಳಿಕ ಇಂದು ಪ್ರಭಾಸ್ ಭೇಟಿ ನೀಡಿದ್ದರು. ಕೃಷ್ಣಂರಾಜು ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮೊಗಲ್ತೂರಿನಲ್ಲಿ ಇಂದು ಆಯೋಜಿಸಲಾಗಿತ್ತು.
ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು, ಸಾವಿರಾರು ಮಂದಿ ಅಭಿಮಾನಿಗಳು ಪ್ರಭಾಸ್ ಅವರನ್ನು ಕಾಣಲು ಆಗಮಿಸಿದ್ದರು. ಪ್ರಭಾಸ್ ನಿವಾಸದ ಬಳಿ ನೆರೆದಿದ್ದರು. ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ವೇದಿಕೆಗೆ ಆಗಮಿಸಿದ ಪ್ರಭಾಸ್, ಅಭಿಮಾನಿಗಳನ್ನುದ್ದೇಶಿಸಿ, ''ಹೇಗಿದ್ದೀರ ಎಲ್ಲರೂ, ಲವ್ ಯೂ ಡಾರ್ಲಿಂಗ್ಸ್, ಈ ಕಷ್ಟದ ಸಮಯದಲ್ಲಿ ನಮ್ಮ ಜೊತೆ ನಿಂತಿದ್ದಕ್ಕೆ ಧನ್ಯವಾದ'' ಎಂದರು. ಕೃಷ್ಣಂರಾಜು ಅವರ ಪತ್ನಿಯೂ ಸಹ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ನಂತರ ಪ್ರಭಾಸ್, ''ಊಟ ರೆಡಿ ಇದೆ ಎಲ್ಲರೂ ಊಟ ಮಾಡಿ ಡಾರ್ಲಿಂಗ್ಸ್'' ಎಂದರು.

ಭಾರಿ ಭೋಜನ ವ್ಯವಸ್ಥೆ
ಅಭಿಮಾನಿಗಳಿಗಾಗಿ ಭಾರಿ ಪ್ರಮಾಣದಲ್ಲಿ ಭೂರಿ ಭೋಜನ ರೆಡಿ ಮಾಡಿಸಿದ್ದರು ಪ್ರಭಾಸ್. ಅಭಿಮಾನಿಗಳಿಗಾಗಿ ಸುಮಾರು 20 ವಿವಿಧ ರೀತಿಯ ಆಹಾರ ವ್ಯವಸ್ಥೆ ಮಾಡಲಾಗಿತ್ತು. ಅಭಿಮಾನಿಗಳಿಗೆ ಅಡುಗೆ ಮಾಡಲು ಸುಮಾರು 9 ಟನ್ ಮಟನ್, ಆರು ಟನ್ ಚಿಕನ್, ಆರು ಟನ್ ಸಿಗಡಿ ಮತ್ತು ನಾಲ್ಕು ಟನ್ ಮೀನು ಬಳಸಲಾಗಿದೆ. ಒಂದು ಪಾಯಸದ ಜೊತೆಗೆ ಭರ್ಜರಿ ಬಾಡೂಟವನ್ನು ಪ್ರಭಾಸ್ ತಮ್ಮ ಅಭಿಮಾನಿಗಳಿಗೆ ಹಾಕಿಸಿದ್ದಾರೆ. ಸ್ವತಃ ಪ್ರಭಾಸ್ ಕೆಲವು ಅಭಿಮಾನಿಗಳಿಗೆ ಕೈಯ್ಯಾರೆ ಊಟ ಸಹ ಬಡಿಸಿದ್ದಾರೆ.

ಚಿರಂಜೀವಿಯದ್ದೂ ಮೊಗಲ್ತೂರೆ!
ಪ್ರಭಾಸ್ ನಿವಾಸದ ಮುಂದೆ ಭಾರಿ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಅಲ್ಲದೆ ಕೆಲವು ಸಿನಿಮಾ ತಾರೆಯರು ಸಹ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಾಗಾಗಿ ಪೊಲೀಸರು ಮುಂಜಾಗೃತಾ ಕ್ರಮವಾಗಿ ಬ್ಯಾರೆಕೇಡ್ಗಳನ್ನು ಹಾಕಿದ್ದರು. ತಾತ್ಕಾಲಿಕವಾಗಿ ಕಂಬಿ ಬೇಲಿಯನ್ನು ಮನೆಯ ಸುತ್ತ ನಿರ್ಮಿಸಿದ್ದರು. ಹಾಗಿದ್ದರೂ ಸಹ ಪ್ರಭಾಸ್ ಮನೆಯ ಮುಂದೆ ನೂಕಾಟ ತಳ್ಳಾಟಗಳು ನಡೆದಿವೆ. ಪ್ರಭಾಸ್ ಸಹ ಹನ್ನೊಂದು ವರ್ಷದ ಬಳಿಕ ತಮ್ಮ ಹುಟ್ಟೂರು ಮೊಗಲ್ತೂರಿಗೆ ಬಂದಿದ್ದಾರೆ. ಅಂದಹಾಗೆ ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಅವರ ಹುಟ್ಟೂರು ಸಹ ಮೊಗಲ್ತೂರೆ. ಇಲ್ಲಿ ಅವರು ವಾಸವಿದ್ದ ಸಣ್ಣ ಮನೆ ಈಗಲೂ ಹಾಗೆಯೇ ಇದೆ.

ಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು
ಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು ಇದೇ ತಿಂಗಳ 11 ನೇ ತಾರೀಖಿನಂದು ನಿಧನ ಹೊಂದಿದರು. ಪ್ರಭಾಸ್ ನಾಯಕ ನಟನಾಗಿ ಯಶಸ್ಸು ಗಳಿಸುವಲ್ಲಿ ಕೃಷ್ಣಂರಾಜು ಪಾತ್ರ ದೊಡ್ಡದಿದೆ. ಸ್ವತಃ ಪ್ರಭಾಸ್ ಅವರೊಟ್ಟಿಗೆ ಹಲವು ಸಿನಿಮಾಗಳಲ್ಲಿ ಕೃಷ್ಣಂರಾಜು ನಟಿಸಿದ್ದಾರೆ. ಕೃಷ್ಣಂರಾಜು ಅವರನ್ನು ತಂದೆಯಂತೆಯೇ ಪ್ರಭಾಸ್ ಕಾಣುತ್ತಿದ್ದರು. ಕೃಷ್ಣಂರಾಜು ಸಹ ಪ್ರಭಾಸ್ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದರು. ಕೃಷ್ಣಂರಾಜುಗೆ ಮೂವರು ಹೆಣ್ಣುಮಕ್ಕಳು ಹಾಗಾಗಿ ಪ್ರಭಾಸ್ ಅನ್ನು ಮಗನಂತೆ ಕೃಷ್ಣಂರಾಜು ಸಾಕಿದ್ದರು.

ಹಲವು ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ
ಕೃಷ್ಣಂರಾಜು ನಿಧನದಿಂದಾಗಿ ಚಿತ್ರೀಕರಣದಿಂದ ಪ್ರಭಾಸ್ ಬ್ರೇಕ್ ತೆಗೆದುಕೊಂಡಿದ್ದು, ಶೀಘ್ರದಲ್ಲಿಯೇ 'ಸಲಾರ್' ಸೆಟ್ಗೆ ಮರಳಲಿದ್ದಾರೆ. ಜೊತೆಗೆ 'ಆದಿಪುರುಷ್' ಸಿನಿಮಾದ ಪ್ರಚಾರ ಕಾರ್ಯವನ್ನು ಸಹ ಪ್ರಾರಂಭ ಮಾಡಲಿದ್ದಾರೆ. 'ಆದಿಪುರುಷ್' ಸಿನಿಮಾದ ಟೀಸರ್ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದೆ. ಇದರ ನಡುವೆ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದ ಚಿತ್ರೀಕರಣ ಸಹ ಚಾಲ್ತಿಯಲ್ಲಿದೆ. ಅದರ ಜೊತೆಗೆ ದೀಪಿಕಾ ಪಡುಕೋಣೆ ನಾಯಕಿಯಾಗಿರುವ ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದಲ್ಲಿಯೂ ಪ್ರಭಾಸ್ ನಟಿಸುತ್ತಿದ್ದಾರೆ. ಅದರ ಬಳಿಕ 'ಅರ್ಜುನ್ ರೆಡ್ಡಿ' ನಿರ್ದೇಶಕ ಸಂದೀಪ್ ವಂಗ ನಿರ್ದೇಶನದ 'ಸ್ಪಿರಿಟ್' ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ.


Click it and Unblock the Notifications











