ಪ್ರಭಾಸ್ ಮಕ್ಕಳ ಜೊತೆ ನಟಿಸ್ಬೇಕು ಎಂದಿದ್ದ ಕೃಷ್ಣಂರಾಜು: ಪ್ರಭಾಸ್ ದುಃಖ ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ!
ತೆಲುಗು ನಟ ಕೃಷ್ಣಂರಾಜು ಅಗಲಿಕೆಗೆ ಇಡೀ ಚಿತ್ರರಂಗಕ್ಕೆ ದಿಗ್ಬ್ರಮೆ ಮೂಡಿಸಿದೆ. ಬೆಳಗ್ಗೆಯಿಂದಲೂ ಟಾಲಿವುಡ್, ರಾಜಕೀಯರಂಗವರು ಕೃಷ್ಣಂರಾಜು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನಟ ಪ್ರಭಾಸ್ ಅಂತ ದೊಡ್ಡಪ್ಪನ ಪಾರ್ಥೀವ ಶರೀರದ ಪಕ್ಕದಲ್ಲೇ ನಿಂತು ದುಃಖಿಸುತ್ತಲೇ ಇದ್ದಾರೆ. ನಮ್ಮ ನೆಚ್ಚಿನ ನಟ ಈ ರೀತಿ ಅಳುವುದನ್ನು ನೋಡುತ್ತೇವೆ ಎಂದುಕೊಂಡಿರಲಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರೆಬಲ್ ಸ್ಟಾರ್ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದ ಪ್ರಭಾಸ್, ಯಂಗ್ ರೆಬಲ್ ಸ್ಟಾರ್ ಆಗಿ ಅಬ್ಬರಿಸಿದರು. ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕೃಷ್ಣಂರಾಜು ಇಲ್ಲದೇ ಇದ್ದಿದರೇ ಈ ಪ್ರಭಾಸ್ ಇಲ್ಲ ಎಂದು ಸಾಕಷ್ಟು ಸಂದರ್ಭಗಳಲ್ಲಿ ಪ್ರಭಾಸ್ ಹೇಳಿಕೊಂಡಿದ್ದರು. ತಮ್ಮ ತಂದೆ ಕೊನೆಯುಸಿರೆಳೆದಾಗ ಪ್ರಭಾಸ್, ದೊಡ್ಡಪ್ಪ ಕೃಷ್ಣಂರಾಜು ಅವರನ್ನು ತಬ್ಬಿ ಚಿಕ್ಕ ಮಗುವಿನಂತೆ ಅತ್ತಿದ್ದರು. ಆಗ ನಾನಿದ್ದೀನಿ ಎಂದು ಧೈರ್ಯ ತುಂಬಿದವರು ಕೃಷ್ಣಂರಾಜು. ಅಂತಹ ದೊಡ್ಡಪ್ಪನೇ ಈಗ ಬಾರದ ಲೋಕಕ್ಕೆ ಹೊರಟು ಹೋಗಿರುವುದು ಪ್ರಭಾಸ್ಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.

ಕುಟುಂಬದ ಆಧಾರಸ್ತಂಭವೇ ಕಳಚಿದೆ. ಇನ್ನು ಮುಂದೆ ದೊಡ್ಡಪ್ಪ ಜೊತೆಗೆ ಇರುವುದಿಲ್ಲ ಎನ್ನುವುದು ಗೊತ್ತಾಗಿ ಪ್ರಭಾಸ್ ಕಣ್ಣೀರಾಗಿದ್ದಾರೆ. ಅವರ ಅಳುವನ್ನು ತಡೆಯಲೂ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಬಂದವರೆಲ್ಲಾ ಎಷ್ಟೇ ಸಮಾಧಾನ ಮಾಡಿದರೂ ದುಃಖ ತಡೆಯಲು ಆಗುತ್ತಿಲ್ಲ. ಆ ದೃಶ್ಯಗಳನ್ನು ನೋಡಿದ ಪ್ರತಿಯೊಬ್ಬರ ಮನಸ್ಸು ಭಾರವಾಗುತ್ತಿದೆ. ಅದರಲ್ಲೂ ಪ್ರಭಾಸ್ ಅಭಿಮಾನಿಗಳು ಆ ದೃಶ್ಯಗಳನ್ನು ನೋಡಿ ಭಾವುಕರಾಗಿದ್ದಾರೆ. ನಿಮ್ಮ ಜೊತೆ ನಾವಿದ್ದೀವಿ, ನಿಮ್ಮನ್ನು ಹೀಗೆ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಪ್ರಭಾಸ್ ಮದುವೆ ನೋಡಬೇಕು ಎನ್ನುವುದು ಕೃಷ್ಣಂರಾಜು ಆಸೆಯಾಗಿತ್ತು. ಬಹಳ ವರ್ಷಗಳಿಂದ ಯಂಗ್ ರೆಬಲ್ ಸ್ಟಾರ್ ಮದುವೆ ಬಗ್ಗೆ ಚರ್ಚೆ ನಡೆದಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕೃಷ್ಣಂರಾಜು "ಪ್ರಭಾಸ್ಗಾಗಿ ಒಳ್ಳೆ ಹುಡುಗಿಯನ್ನು ಹುಡುಕುತ್ತಿದ್ದೇವೆ. ಅವನು ಮದುವೆ ಆದರೆ ಎಲ್ಲರಿಗಿಂತ ಹೆಚ್ಚು ಸಂತೋಷಪಡುವವನು ನಾನೇ. ಈಗ ಅವನ ಜೊತೆ ನಟಿಸಿದ್ದೇನೆ. ಮುಂದೆ ಅವರ ಮಕ್ಕಳ ಜೊತೆಗೂ ನಟಿಸುವ ಆಸೆ ಇದೆ" ಎಂದು ಹೇಳಿದ್ದರು. ಆದರೆ ಆ ಆಸೆ ಈಡೇರಲೇ ಇಲ್ಲ.
ಪ್ರಭಾಸ್ ನಟನೆಯ 'ಬಿಲ್ಲಾ', 'ರೆಬೆಲ್', 'ರಾಧೆಶ್ಯಾಮ್' ಸಿನಿಮಾಗಳಲ್ಲಿ ಕೃಷ್ಣಂರಾಜು ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. 180ಕ್ಕೂ ಅಧಿಕ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ಟಾಲಿವುಡ್ ರೆಬೆಲ್ ಸ್ಟಾರ್ ನಟಿಸಿ ಗೆದ್ದಿದ್ದರು. ಸೂಪರ್ ಸ್ಟಾರ್ ಕೃಷ್ಣ, ಚಿರಂಜೀವಿ, ಪವನ್ ಕಲ್ಯಾಣ್, ಜ್ಯೂ. ಎನ್ಟಿಆರ್, ಮಹೇಶ್ ಬಾಬು, ವೆಂಕಟೇಶ್ ಸೇರಿದಂತೆ ತೆಲುಗು ಚಿತ್ರರಂಗದ ಗಣ್ಯರು ಕೃಷ್ಣಂರಾಜುಗೆ ಅಂತಿಮ ನಮನ ಸಲ್ಲಿಸಿದ್ದು, ನಾಳೆ(ಸೆಪ್ಟೆಂಬರ್ 12) ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.


Click it and Unblock the Notifications











