ಪ್ರಭಾಸ್ ಅಭಿಮಾನಿಯಿಂದ ಆತ್ಮಹತ್ಯೆ ಪತ್ರ: "ರಾಧೆ ಶ್ಯಾಮ್' ತಂಡಕ್ಕೆ ಶಾಕ್!
ನಟ ಪ್ರಭಾಸ್ಗೆ ಸಹಸ್ರಾರು ಅಭಿಮಾನಿಗಳಿದ್ದಾರೆ. ಪ್ರಭಾಸ್ ಅವರನ್ನು ಇಷ್ಟಪಟ್ಟು ಫಾಲೋ ಮಾಡುವಂತಹ ದೊಡ್ಡ ಅಭಿಮಾನಿ ಬಳಗವೇ ಇದೆ. ಪ್ರಭಾಸ್ಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾ ರಿಲೀಸ್ಗಾಗಿ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅವರ ಸಿನಿಮಾ ಸೆಟ್ಟೇರಿದರೆ ಸಾಕು ಅಭಿಮಾನಿಗಳೂ ತಮ್ಮ ನೆಚ್ಚಿನ ನಟನನ್ನು ಯಾವಾಗ ಕಣ್ತುಂಬಿಕೊಳ್ಳುತ್ತೇವೆ ಎನ್ನುವ ಲೆಕ್ಕಾಚಾರಕ್ಕೆ ಇಳಿದು ಬಿಡುತ್ತಾರೆ. ಈಗ ಪ್ರಭಾಸ್ ಅಭಿಮಾನಿಯೊಬ್ಬ ರಾಧೆ ಶ್ಯಾಮ್ ಚಿತ್ರತಂಡಕ್ಕೆ ಶಾಕ್ ಕೊಟ್ಟಿದ್ದಾನೆ.
ಸೂಡೈಡ್ ಪತ್ರ ಬರೆದ ಪ್ರಭಾಸ್ ಅಭಿಮಾನಿ!
ಆಂಧ್ರ ಮೂಲದ ಪ್ರಭಾಸ್ ಅಭಿಮಾನಿ ಒಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅಷ್ಟಕ್ಕೂ ಈತನಿಗೆ ಆಗಿರೋದಾದರು ಏನು ಅಂತ ನೋಡಿದರೆ ಅಚ್ಚರಿ ಖಂಡಿತಾ ಆಗುತ್ತದೆ. ಈತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವುದು ರಾಧೆ ಶ್ಯಾಮ್ ಚಿತ್ರದಿಂದ. ಈ ಚಿತ್ರಕ್ಕೂ ಈತನ ಆತ್ಮಹತ್ಯೆ ನಿರ್ಧಾರಕ್ಕೂ ಸಂಬಂಧ ಇದೆ. ರಾಧೆ ಶ್ಯಾಮ್ ಚಿತ್ರದ ಯಾವುದೇ ಅಪ್ಡೇಟ್ ಬಂದಿಲ್ಲ ಎನ್ನುವ ಕಾರಣಕ್ಕೆ ಈ ವ್ಯಕ್ತಿ ಸೂಸೈಡ್ ಮಾಡಿಕೊಳ್ಳುವುದಾಗಿ ಪತ್ರ ಬರೆದಿದ್ದಾನೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಷ್ಟಕ್ಕೂ ರಾಧೆ ಶ್ಯಾಮ್ ಚಿತ್ರದ ರಿಲೀಸ್ ದಿನಾಂಕ ಪ್ರಕಟ ಮಾಡಿದೆ ಚಿತ್ರತಂಡ. 2022 ಜನವರಿ 14ಕ್ಕೆ ರಾಧೆ ಶ್ಯಾಮ್ ಚಿತ್ರದ ರಿಲೀಸ್ ದಿನಾಂಕ ನಿಗದಿಯಾಗಿದೆ. ಆದರೆ ಪ್ರಭಾಸ್ ಅಭಿಮಾನಿಗಳು ಚಿತ್ರದಿಂದ ಹೊಸ ಹೊಸ ಕಂಟೆಂಟ್ ನಿರೀಕ್ಷೆ ಮಾಡುತ್ತಿದ್ದಾರೆ. ಪ್ರಭಾಸ್ ಹುಟ್ಟುಹಬ್ಬದ ನಂತರ ರಾಧೆ ಶ್ಯಾಮ್ ಸಿನಿಮಾದ ಯಾವ ಅಪ್ಡೇಟ್ ಕೂಡ ಹೊರ ಬಂದಿಲ್ಲ. ಜೊತೆಗೆ ಸಿನಿಮಾ ರಿಲೀಸ್ ಹತ್ತಿರ ಆಗುತ್ತಿದ್ದರೂ ಚಿತ್ರತಂಡ ಯಾವುದೇ ಅಪ್ಡೇಟ್ ನೀಡದೆ ಸುಮ್ಮನೆ ಇದೆ. ಚಿತ್ರತಂಡದ ಈ ನಡೆಯೇ ಪ್ರಭಾಸ್ ಅಭಿಮಾನಿಗಳಲ್ಲಿ ಬೇಸರ ತಂದಿದೆ. ಹಾಗಾಗಿ ಪ್ರಭಾಸ್ ಅವರ ಈ ಹುಚ್ಚು ಅಭಿಮಾನಿ ಆತ್ಮಹತ್ಯೆ ಪತ್ರವನ್ನು ಬರೆದಿದ್ದಾರೆ.

ಆತ್ಮಹತ್ಯೆಗೆ ನಿರ್ಮಾಪಕ, ನಿರ್ದೇಶಕರೇ ಹೊಣೆ: ಪ್ರಭಾಸ್ ಅಭಿಮಾನಿ!
ಇನ್ನು ಪತ್ರದಲ್ಲಿ ನಿರ್ಮಾಣ ಸಂಸ್ಥೆ "ಯುವಿ ಕ್ರಿಯೇಷನ್ಸ್' ಮತ್ತು ನಿರ್ದೇಶಕ "ರಾಧಾಕೃಷ್ಣ' ಅವರ ಹೆಸರುಗಳನ್ನು ನಮೂದಿಸಲಾಗಿದೆ. ಜೊತೆಗೆ ತನ್ನ ಸಾವಿಗೆ ಇವರೇ ಕಾರಣ, ಜವಾಬ್ದಾರಿ ಆಗಿರುತ್ತಾರೆ ಎನ್ನುವುದನ್ನು ಪತ್ರದಲ್ಲಿ ಅಭಿಮಾನಿ ಬರೆದು ಕೊಂಡಿದ್ದಾರೆ. ಪತ್ರದಲ್ಲಿ ಮತ್ತೊಂದು ಅಂಶವನ್ನು ಈತ ನಮೂದಿಸಿದ್ದಾನೆ. "ಇಲ್ಲಿಯತನಕ ನಾನು ಯಾವ ಪತ್ರವನ್ನೂ ಬರೆದಿರಲಿಲ್ಲ. ಆದರೆ ಒಂದು ಸಿನಿಮಾಗಾಗಿ ಸೂಸೈಡ್ ನೋಟ್ ಬರೆಯುವಂತೆ ಆಗಿದೆ' ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾನೆ.

ಅಭಿಮಾನಿಯ ಅಭಿಮಾನದ ಅತಿರೇಕ!
ಇದನ್ನು ಅಭಿಮಾನದ ಅತಿರೇಕ ಎಂದೇ ಹೇಳಬಹುದು. ಸಿನಿಮಾದ ಅಪ್ಡೇಟ್ಗಾಗಿ ಆತ್ಮಹತ್ಯೆ ಪತ್ರ ಬರೆಯುವುದು ಹುಚ್ಚುತನವೇ ಸರಿ. ಚಿತ್ರತಂಡ ಸಿನಿಮಾ ರಿಲೀಸ್ ಆಗುವ ದಿನಾಂಕವನ್ನು ಈಗಾಗಲೇ ಪ್ರಕಟಮಾಡಿದೆ. ಜೊತೆಗೆ ಪ್ರಭಾಸ್ ಹುಟ್ಟು ಹಬ್ಬಕ್ಕೆ ಟೀಸರ್ ಸಹ ರಿಲೀಸ್ ಆಗಿದೆ. ಆದರೂ ಪ್ರಭಾಸ್ ಅಭಿಮಾನಿ ಪತ್ರ ಬರೆದಿದ್ದಾನೆ. ಸಿನಿಮಾದ ಅಪ್ಡೇಟ್ಸ್ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗುವುದು ಅಥವಾ ಈ ರೀತಿಯಾಗಿ ಪತ್ರ ಬರೆಯುವುದು ಎಷ್ಟು ಸರಿ ಎನ್ನುವಂತಹ ಚರ್ಚೆಗಳು ಕೂಡ ಶುರುವಾಗಿದೆ. ಚಿತ್ರ ತಂಡಕ್ಕೆ ಎಚ್ಚರಿಕೆಯ ನೀಡಲು ಅಥವಾ ಚಿತ್ರ ತಂಡದಿಂದ ಅಪ್ಡೇಟ್ ಬೇಗ ಹೊರತರಲು ಈ ರೀತಿಯಾಗಿ ಪ್ರಭಾಸ್ ಅಭಿಮಾನಿ ಪತ್ರ ಬರೆದಿದ್ದಾನೆ ಎನ್ನಲಾಗುತ್ತಿದೆ. ಅಭಿಮಾನಿಯ ಸೂಸೈಡ್ ನೋಟ್ ಗೆ ಚಿತ್ರತಂಡ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಇಂತಹ ಘಟನೆಗಳನ್ನು ಪ್ರೇರೇಪಿಸಿದರೆ ಮತ್ತಷ್ಟು ಜನ ಇದೇ ದಾರಿ ಹಿಡಿಯುವ ಸಾಧ್ಯತೆ ಇದೆ. ಬಹುಶಃ ಹಾಗಾಗಿ ಈ ವಿಚಾರದಲ್ಲಿ ಚಿತ್ರತಂಡ ಮೌನ ವಹಿಸಿದೆ.


Click it and Unblock the Notifications











