'ಆದಿಪುರುಷ್' ಚಿತ್ರತಂಡದಿಂದ ಪ್ರಭಾಸ್ ಅಭಿಮಾನಿಗಳಿಗೆ ಭಾರಿ ನಿರಾಸೆ
ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾತಂಡದಿಂದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ರಾಮ ನವಮಿ ದಿನ ಪ್ರಭಾಸ್ ಕಡೆಯಿಂದ ಭರ್ಜರಿ ಉಡುಗೊರೆ ಸಿಗಲಿದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಬೇಸರವಾಗಿದೆ.
ಶ್ರೀರಾಮ ನವಮಿಗೆ ಆದಿಪುರುಷ್ ಸಿನಿಮಾತಂಡ ಸಖತ್ ಗಿಫ್ಟ್ ನೀಡಲಿದೆ ಎನ್ನುವ ಸುದ್ದಿ ನಿನ್ನೆ (ಏಪ್ರಿಲ್ 20) ವೈರಲ್ ಆಗಿತ್ತು. ಆದಿಪುರುಷ್ ಅನ್ ಅಫಿಶಿಯಲ್ ಟ್ವಿಟ್ಟರ್ ಖಾತೆಯಿಂದ ಶ್ರೀರಾಮ ನವಮಿಗೆ ಅಪ್ ಡೇಟ್ ನೀಡುವುದಾಗಿ ಪೋಸ್ಟ್ ಹಾಕಲಾಗಿತ್ತು.
ಈ ಸುದ್ದಿ ನಿಜವೆಂದು ನಂಬಿ ಇಂದು ಸಖತ್ ಅಪ್ ಡೇಟ್ ಸಿಗಲಿದೆ ಎಂದು ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ಇಂದು ಬೆಳಗ್ಗೆಯೇ ಅಪ್ ಡೇಟ್ ನೀಡುವುದಾಗಿ ಹೇಳಿದ್ದ ಚಿತ್ರತಂಡ ಇದುವರೆಗೂ ಯಾವುದೇ ವಿಚಾರ ಬಹಿರಂಗ ಪಡಿಸದೆ ಇರುವುದನ್ನು ನೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕುತ್ತಿದ್ದಾರೆ.

ಸಿನಿಮಾದ ಬಗ್ಗೆ ಅಪ್ ಡೇಟ್ ನೀಡುವಂತೆ ಚಿತ್ರತಂಡವನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಇದುವರೆಗೂ ಆದಿಪುರುಷ್ ಟೀಂಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರೀಕರಣ ಸ್ಥಗಿತ ಮಾಡಲಾಗಿದೆ.
ಆದಿಪುರುಷ್ ರಾಮಾಯಣ ಆಧರಿಸಿದ ಸಿನಿಮಾ. ರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಕೃತಿ ಸನೂನ್ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ರಾವಣನಾಗಿ ಬಣ್ಣಹಚ್ಚುತ್ತಿದ್ದಾರೆ. ದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ.
ಬಹುಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ನಡುವೆ ಪ್ರಭಾಸ್ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ರಾಧೆ ಶ್ಯಾಮ್ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.


Click it and Unblock the Notifications











