ಅಂದುಕೊಂಡಂತೆ ನಡೆಯಲಿಲ್ಲ 'ಆದಿಪುರುಷ್' ಆಟ; ಪ್ರಶಾಂತ್ ನೀಲ್ 'ಸಲಾರ್' ಮೇಲೆ ಭಾರ ಹಾಕಿದ ಪ್ರಭಾಸ್ ಫ್ಯಾನ್ಸ್!
ಕಳೆದ ಶುಕ್ರವಾರ ( ಜೂನ್ 16 ) ಬಾಲಿವುಡ್ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಂಡಿತು. ಚಿತ್ರ ರಿಲೀಸ್ ಆಗುವುದಕ್ಕೂ ಮುನ್ನ ಬಿಡುಗಡೆಯಾಗಿದ್ದ ಟೀಸರ್ನಲ್ಲಿದ್ದ ಕಳಪೆ ವಿಎಫ್ಎಕ್ಸ್ನಿಂದಾಗಿ ಹೀನಾಯವಾಗಿ ಟ್ರೋಲ್ ಆಗಿದ್ದ ಆದಿಪುರುಷ್ ಬಿಡುಗಡೆಯ ನಂತರವೂ ಸಹ ಅದೇ ರೀತಿಯ ಕೆಟ್ಟ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
ಚಿತ್ರ ಬಿಡುಗಡೆ ದಿನದ ಮೊದಲ ಪ್ರದರ್ಶನ ಮುಕ್ತಾಯಗೊಳ್ಳಿಸುತ್ತಿದ್ದಂತೆ ಚಿತ್ರದಲ್ಲಿನ ನೆಗೆಟಿವ್ ಅಂಶಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸಿನಿ ರಸಿಕರು ಮಾಧ್ಯಮಗಳ ಮುಂದೆ ಟ್ರೋಲ್ ಮಾಡಿದ್ರು. ರಾಮಾಯಣ ಆಧಾರಿತ ಸಿನಿಮಾ ಎಂದು ಹೇಳಿಕೊಂಡಿದ್ದ ಈ ಚಿತ್ರದಲ್ಲಿ ರಾಮಾಯಣವನ್ನೇ ಸರಿಯಾಗಿ ತೋರಿಸಿಲ್ಲ, ತಪ್ಪು ತಪ್ಪಾಗಿ ಚಿತ್ರಕಥೆಯನ್ನು ಹೆಣೆಯಲಾಗಿದೆ ಎಂದು ಪ್ರೇಕ್ಷಕರು ಅಸಾಮಾಧಾನ ವ್ಯಕ್ತಪಡಿಸಿದರು.

ಹೀಗೆ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡ ಆದಿಪುರುಷ್ ನಿರೀಕ್ಷಿಸಿದ ಗೆಲುವನ್ನು ಕಾಣುವಲ್ಲಿ ವಿಫಲವಾಗಿದ್ದು, ಬಾಹುಬಲಿ ಚಿತ್ರ ಸರಣಿಯ ಅಮೋಘ ಗೆಲುವಿನ ಬಳಿಕ ಪ್ರಭಾಸ್ ಮತ್ತೊಮ್ಮೆ ಗೆಲುವು ಸಿಗದೇ ಹಿನ್ನಡೆ ಅನುಭವಿಸಿದ್ದಾರೆ. ಹೌದು, ಸಾಹೋ ಹಾಗೂ ರಾಧೆ ಶ್ಯಾಮ್ ಬಳಿಕ ಇದೀಗ ಆದಿಪುರುಷ್ ಸಹ ಅಷ್ಟಕ್ಕಷ್ಟೆ ಎಂಬ ಫಲಿತಾಂಶವನ್ನು ಪಡೆದುಕೊಂಡಿದೆ.
ಹೀಗೆ ಆದಿಪುರುಷ್ ನಿರೀಕ್ಷಿಸಿದ ಗೆಲುವನ್ನು ತಂದುಕೊಡದ ಕಾರಣ ಇದೀಗ ಪ್ರಭಾಸ್ ಅಭಿಮಾನಿಗಳ ಚಿತ್ತವೆಲ್ಲಾ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಲಾರ್ ಚಿತ್ರದ ಮೇಲಿದೆ. ಹೌದು, ತಮ್ಮ ನೆಚ್ಚಿನ ನಟನ ನಟನೆಯ ಮೂರು ಚಿತ್ರಗಳು ಸಾಲಾಗಿ ವಿಫಲ ಹೊಂದಿದ್ದನ್ನು ಕಂಡ ಪ್ರಭಾಸ್ ಫ್ಯಾನ್ಸ್ ಈಗ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಲಿರುವ ಸಲಾರ್ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಇನ್ನು ಸಲಾರ್ ಸೆಪ್ಟೆಂಬರ್ 28ರಂದು ತೆರೆಗೆ ಬರಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಈ ಹಿಂದೆಯೇ ತಿಳಿಸಿದ್ದು, ಇಂದಿಗೆ ( ಜೂನ್ 20 ) ಸರಿಯಾಗಿ 100 ದಿನಗಳಲ್ಲಿ ಸಲಾರ್ ತೆರೆಗೆ ಬರಲಿದೆ. ಹೀಗೆ ಚಿತ್ರ ಬಿಡುಗಡೆಗೆ ಇನ್ನು 100 ದಿನಗಳು ಬಾಕಿ ಇರುವ ವಿಷಯವನ್ನು ಹೊಂಬಾಳೆ ಫಿಲ್ಮ್ಸ್ ವಿಶೇಷ್ ಕೌಂಟ್ಡೌನ್ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ತಿಳಿಸಿದೆ.
ಹೀಗೆ ಆದಿಪುರುಷ್ ಬಿಡುಗಡೆಯಾಗಿ ಕೇವಲ ನಾಲ್ಕು ದಿನಗಳು ಕಳೆದು ಚಿತ್ರ ಅಂದುಕೊಂಡಂತೆ ಅಬ್ಬರಿಸಲಿಲ್ಲ ಎಂದು ಬೇಸರದಲ್ಲಿದ್ದ ಸಂದರ್ಭಕ್ಕೆ ಸರಿಯಾಗಿ ಹೊಂಬಾಳೆ ಫಿಲ್ಮ್ಸ್ ಈ ಪೋಸ್ಟ್ ಹಂಚಿಕೊಂಡಿರುವುದು ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ರಸಿಕರಲ್ಲಿ ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ.
ಒಂದೆಡೆ ಪ್ರಭಾಸ್ ನಟನೆಯ ಸಾಲು ಸಾಲು ಚಿತ್ರಗಳು ಸೋತಿರುವ ಕಾರಣ ಸಲಾರ್ ಮೇಲೆ ಸಿನಿ ರಸಿಕರಿಗೆ ಹಾಗೂ ಪ್ರಭಾಸ್ ಫ್ಯಾನ್ಸ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದ್ದರೆ, ಮತ್ತೊಂದೆಡೆ ಇದೇ ನಿರೀಕ್ಷೆ ಪ್ರಶಾಂತ್ ನೀಲ್ ಮೇಲೆ ಒತ್ತಡ ಹೆಚ್ಚಾಗಿದೆ. ಚಿತ್ರವನ್ನು ಖಡಾಖಂಡಿತವಾಗಿ ಚೆನ್ನಾಗಿ ಮಾಡಿ ಪ್ರಭಾಸ್ ಫ್ಯಾನ್ಸ್ ಹಾಗೂ ಸಿನಿ ರಸಿಕರನ್ನು ಮೆಚ್ಚಿಸಲೇಬೇಕಾದ ಒತ್ತಡ ಪ್ರಶಾಂತ್ ನೀಲ್ ಹೆಗಲೇರಿದೆ. ಆದರೆ ಉಗ್ರಂ, ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ರೀತಿಯ ಮಾಸ್ಟರ್ ಪೀಸ್ಗಳನ್ನು ನಿರ್ದೇಶಿಸಿರುವ ಪ್ರಶಾಂತ್ ನೀಲ್ ಸಲಾರ್ ಚಿತ್ರದ ಮೂಲಕ ಸಹ ಬೃಹತ್ ಹಿಟ್ ಬಾರಿಸುವುದು ಖಚಿತ ಎಂದು ವಿಶ್ವಾಸ ಇಟ್ಟುಕೊಳ್ಳಬಹುದಾಗಿದೆ.


Click it and Unblock the Notifications











