ಪ್ರಭಾಸ್ ನಟನೆ ಬಗ್ಗೆ ಮಂಚು ವಿಷ್ಣು ಎಡವಟ್ಟು; ಫ್ಯಾನ್ಸ್ ಕೆಂಡಾಮಂಡಲ
ಮಂಚು ವಿಷ್ಟು ನಟನೆಯ 'ಕಣ್ಣಪ್ಪ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಕ್ಷಯ್ ಕುಮಾರ್, ಮೋಹನ್ ಲಾಲ್, ಪ್ರಭಾಸ್ ಚಿತ್ರದ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಜೂನ್ 27ಕ್ಕೆ ಸಿನಿಮಾ ತೆರೆಗೆ ಬರಲಿದೆ. ಸದ್ಯ ಪ್ರಭಾಸ್ ಬಗ್ಗೆ ಮಂಚು ವಿಷ್ಣು ಕಾಮೆಂಟ್ಸ್ ವೈರಲ್ ಆಗ್ತಿದೆ.
ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಫ್ಯಾಂಟಸಿ ಚಿತ್ರ 'ಕಣ್ಣಪ್ಪ' ಬಹಳ ನಿರೀಕ್ಷೆ ಮೂಡಿದೆ. ರಾಜ್ಕುಮಾರ್ ನಟಿಸಿದ 'ಬೇಡರ ಕಣ್ಣಪ್ಪ' ಚಿತ್ರದ ಕತೆಯನ್ನು ಈ ಚಿತ್ರದಲ್ಲಿ ಹೇಳಲಾಗ್ತಿದೆ. ಕಣ್ಣಪ್ಪನ ಪಾತ್ರದಲ್ಲಿ ವಿಷ್ಣು ಬಣ್ಣ ಹಚ್ಚಿದ್ದಾರೆ. ಇನ್ನು ರುದ್ರನಾಗಿ ಪ್ರಭಾಸ್, ಕಿರಾಟನಾಗಿ ಮೋಹನ್ ಲಾಲ್, ಶಿವನಾಗಿ ಅಕ್ಷಯ್ ಕುಮಾರ್, ಪಾರ್ವತಿಯಾಗಿ ಕಾಜಲ್ ಅಗರ್ವಾಲ್ ಕಾಣಿಸಿಕೊಂಡಿದ್ದಾರೆ.

ಕಣ್ಣಪ್ಪ ಪಾತ್ರ ಮಾಡಬೇಕು ಎನ್ನುವುದು ಪ್ರಭಾಸ್ ಆಸೆಯಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಅದೇ ಕಾರಣಕ್ಕೆ ವಿಷ್ಣು ನಟನೆಯ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಲು ಒಪ್ಪಿಕೊಂಡಿದ್ದರು. ರುದ್ರನಾಗಿ ಪ್ರಭಾಸ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಸದ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ನನ್ನ ಪ್ರಕಾರ ಪ್ರಭಾಸ್ ಒಬ್ಬ ಸೀದಾಸಾದಾ ನಟ ಅಷ್ಟೇ ಎಂದು ಮಂಚು ವಿಷ್ಟು ಹೇಳಿದ್ದಾರೆ. ಇದು ಪ್ರಭಾಸ್ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ.
'ಕಣ್ಣಪ್ಪ' ಚಿತ್ರದ ಪೋಸ್ಟರ್, ಟೀಸರ್ ನೋಡಿದವರು ಬೇಸರ ವ್ಯಕ್ತಪಡಿಸಿದ್ದಾರೆ. ನಮಗೆ ಸಿನಿಮಾ ಮೇಲೆ ನಿರೀಕ್ಷೆ ಇಲ್ಲ, ಪ್ರಭಾಸ್ ಕಾರಣಕ್ಕೆ ಮಾತ್ರ ಕೊಂಚ ಕುತೂಹಲ ಇದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ವಿಷ್ಣು ಹೇಳಿಕೆ ಕೆಲವರು ಅಸಮಾಧಾನಕ್ಕೆ ಕಾರಣವಾಗಿದೆ. ಕೆಲಸ ಮುಗಿದ ಬಳಿಕ ಹಿಂಗಾ ಮಾತಾಡೋದು ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಮಂಚು ವಿಷ್ಣು ನೇರವಾಗಿ ಪ್ರಭಾಸ್ ನಟನೆ ಬಗ್ಗೆ ಮಾತನಾಡಿಲ್ಲ, ಬದಲಿಗೆ ಮೋಹನ್ ಲಾಲ್ ಜೊತೆ ಹೋಲಿಸಿ ಕಾಮೆಂಟ್ ಮಾಡಿದ್ದಾರೆ. ಪ್ರಭಾಸ್ ಜೊತೆ ತೆರೆಹಂಚಿಕೊಂಡ ಅನುಭವ ಹೇಗಿತ್ತು ಎನ್ನುವ ಪ್ರಶ್ನೆಗೆ ವಿಷ್ಣು ಪ್ರತಿಕ್ರಿಯಿಸಿ "ಪ್ರಭಾಸ್ ಆಕ್ಟಿಂಗ್ ಸೀದಾಸಾದಾ ಅನ್ನಿಸುತ್ತದೆ ನನಗೆ. ಪ್ರಭಾಸ್ ಲೆಜೆಂಡ್ ಆಗಿ ಬೆಳೆಯಲು ಸಮಯ ಬೇಕು ಅಂತ ನನಗೆ ಅನ್ನಿಸುತ್ತೆ. ಆದರೆ ಮೋಹನ್ ಲಾಲ್ ಲೆಜೆಂಡ್. ಯಾಕಂದ್ರೆ ಅವರು ಸಾಗಿಬಂದ ಹಾದಿ. ಮುಂದಿನ ದಿನಗಳಲ್ಲಿ ಪ್ರಭಾಸ್ ಕೂಡ ಲೆಜೆಂಡ್ ಆಗುತ್ತಾರೆ. ನನಗೆ ನಂಬಿಕೆಯಿದೆ" ಎಂದು ಹೇಳಿದ್ದಾರೆ.
ವಿಷ್ಣು ಹೇಳಿಕೆಯನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದೇ ಕೆಲವರು ಮೊದಲ ವಾಕ್ಯವನ್ನು ಮಾತ್ರ ಕೇಳಿ ಕೆಂಡ ಕಾರುತ್ತಿದ್ದಾರೆ. ಮತ್ತೆ ಕೆಲವರು 'ಬಾಹುಬಲಿ' ರೀತಿಯ ಅದ್ಭುತ ಸಿನಿಮಾಗಳಲ್ಲಿ ಪ್ರಭಾಸ್ ನಟಿಸಿದ್ದಾರೆ. ಅದಕ್ಕಿಂತ ಏನು ಬೇಕು. ಪ್ರಭಾಸ್ ನಟನೆ ಸೀದಾಸಾದಾ ಹೇಗಾಗುತ್ತದೆ? ಎಂದು ಕೇಳುತ್ತಿದ್ದಾರೆ. ಈ ವೀಡಿಯೋ ವೈರಲ್ ಮಾಡಿ ಬೇರೆ ನಟರ ಅಭಿಮಾನಿಗಳು ಪ್ರಭಾಸ್ನ ಟ್ರೋಲ್ ಮಾಡುತ್ತಿದ್ದಾರೆ. ಡಾರ್ಲಿಂಗ್ ಫ್ಯಾನ್ಸ್ ಅದಕ್ಕೆ ತಿರುಗೇಟು ಕೊಡುತ್ತಿದ್ದಾರೆ.
ಮಂಚು ವಿಷ್ಣು ತಂದೆ ಮೋಹನ್ ಬಾಬು 'ಕಣ್ಣಪ್ಪ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಕನ್ನಡಕ್ಕೂ ಡಬ್ ಆಗಿ ಪ್ರೇಕ್ಷಕರನ್ನು ರಂಜಿಸಲಿದೆ. ಮಹಾದೇವ ಶಾಸ್ತ್ರಿ ಪಾತ್ರದಲ್ಲಿ ಮೋಹನ್ ಬಾಬು ಕೂಡ ನಟಿಸಿದ್ದಾರೆ.
ಅಂದಾಜು 100 ಕೋಟಿ ರೂ. ಬಜೆಟ್ನಲ್ಲಿ 'ಕಣ್ಣಪ್ಪ' ಸಿನಿಮಾ ನಿರ್ಮಾಣವಾಗಿದೆ. ನ್ಯೂಜಿಲೆಂಡ್ ಕಾಡಿನಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಖರ್ಚು ಆಗಿದೆ. ಏನು ಮಾಡೋಕೆ ಆಗಲ್ಲ. ಸಿನಿಮಾ ನಿರ್ಮಾಣಕ್ಕೆ ಇಳಿದಮೇಲೆ ಎಲ್ಲವನ್ನು ಮೆಟ್ಟಿ ನಡೆಯಬೇಕು ಎಂದು ವಿಷ್ಣು ಹೇಳಿದ್ದಾರೆ.


Click it and Unblock the Notifications











