ಹೊಂಬಾಳೆ ಧೈರ್ಯಕ್ಕೆ ಹ್ಯಾಟ್ಸಫ್; ಮೂರಲ್ಲ, ಇನ್ನು ಜಾಸ್ತಿ ಸಿನ್ಮಾ ಮಾಡ್ತೀನಿ- ಪ್ರಭಾಸ್
ತೆಲುಗು ನಟ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಹೆಚ್ಚು ಸದ್ದು ಮಾಡ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ 3 ಸಿನಿಮಾ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ತೆಲುಗು ಚಿತ್ರ ನಿರ್ಮಾಪಕರೇ ಪ್ರಭಾಸ್ ಕಾಲ್ಶೀಟ್ ಪಡೆಯೋಕೆ ಕ್ಯೂ ನಿಂತಿದ್ದಾರೆ. ಆದರೆ ಅವರನ್ನೆಲ್ಲಾ ಬಿಟ್ಟು ಹೊಂಬಾಳೆಗೆ ಕಾಲ್ಶೀಟ್ ಕೊಡೋಕೆ ಕಾರಣ ಏನು ಎಂದು ಪ್ರಭಾಸ್ ತಿಳಿಸಿದ್ದಾರೆ.
'KGF' ಸರಣಿ ಬಳಿಕ ಪ್ರಭಾಸ್ ಹೀರೊ ಆಗಿ 'ಸಲಾರ್' ಸಿನಿಮಾ ನಿರ್ಮಿಸಿತ್ತು ಹೊಂಬಾಳೆ ಫಿಲ್ಮ್ಸ್. ಪ್ರಶಾಂತ್ ನೀಲ್ ನಿರ್ದೇಶನದ ಆ ಸಿನಿಮಾ ಕೂಡ ಹಿಟ್ ಆಗಿತ್ತು. ಇದೇ ಕಾಂಬಿನೇಷನ್ನಲ್ಲಿ 'ಸಲಾರ್- 2' ಸಿನಿಮಾ ಬರಬೇಕಿದೆ. ವರ್ಷದ ಕೊನೆಗೆ ಚಿತ್ರೀಕರಣ ಶುರುವಾಗುವ ಸಾಧ್ಯತೆಯಿದೆ. 'ದಿ ಹಾಲಿವುಡ್ ರಿಪೋರ್ಟರ್' ವೆಬ್ಸೈಟ್ಗೆ ನೀಡಿರುವ ಸಂದರ್ಶನದಲ್ಲಿ ಪ್ರಭಾಸ್ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರ್ ಜೊತೆಗಿನ ಒಡನಾಟದ ಬಗ್ಗೆ ಮನದಾಳ ತೆರೆದಿಟ್ಟಿದ್ದಾರೆ.

"ವಿಜಯ್ ಕಿರಗಂದೂರ್ ತಮ್ಮವರ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಅವರು ಸರಳ ವ್ಯಕ್ತಿತ್ವದವರು. ಹಾಗಾಗಿ ಒಂದೇ ಕುಟುಂಬದವರಂತೆ ಇರುತ್ತೇವೆ. ನಾವು ಮತ್ತಷ್ಟು ಸಿನಿಮಾಗಳನ್ನು ಮಾಡಲು ಪ್ಲ್ಯಾನ್ ಮಾಡುತ್ತಿದ್ದೇವೆ" ಎಂದು ಪ್ರಭಾಸ್ ಹೇಳಿದ್ದಾರೆ. "ಸಲಾರ್ ಸಿನಿಮಾ ಮಾಡುವ ಸಮಯದಿಂದಲೂ ವಿಜಯ್ ಕಿರಗಂದೂರ್ ನಮ್ಮ ಕುಟುಂಬ ಸದಸ್ಯರಂತೆ ಭಾವಿಸುತ್ತೇನೆ. ಅವರು ತಮ್ಮ ಬಾಲ್ಯದ ಸ್ನೇಹಿತರ ಜೊತೆ ಹೆಚ್ಚು ಇರ್ತಾರೆ. ನನ್ನಂತೆಯೇ ಹೆಚ್ಚು ಹೊರಗೆ ಹೋಗಲ್ಲ. ಅದೇ ನಮ್ಮಿಬರನ್ನು ಮತ್ತಷ್ಟು ಹತ್ತಿರವಾಗಿಸಿತು" ಎಂದು ವಿವರಿಸಿದ್ದಾರೆ.
ಪ್ರಭಾಸ್ ಮಾತು ಮುಂದುವರೆಸಿ ವಿಜಯ್ ಕಿರಗಂದೂರ್ ಬಗ್ಗೆ ಮತ್ತೊಂದು ವಿಚಾರ ಹಂಚಿಕೊಂಡಿದ್ದಾರೆ."ಒಂದು ಘಟನೆ ನನಗೆ ಸ್ಪಷ್ಟವಾಗಿ ನೆನಪಿದೆ. ಅದು 'ಸಲಾರ್' ಸಿನಿಮಾ ಸೆಟ್ ಬೆಂಕಿಗೆ ಆಹುತಿಯಾಯಿತು. ಬಜೆಟ್ ಅದಾಗಲೇ ಹೆಚ್ಚಾಗಿತ್ತು, ಇಡೀ ತಂಡ ಒತ್ತಡದಲ್ಲಿತ್ತು. ಆ ಸಮಯದಲ್ಲಿ, ವಿಜಯ್ ಸರ್, "ರಿಲ್ಯಾಕ್ಸ್ ಆಗಿ, ಹಣದ ಬಗ್ಗೆ ಚಿಂತಿಸಬೇಡಿ - ಒಳ್ಳೆ ಸಿನಿಮಾ ಮಾಡಿ' ಎಂದು ಹೇಳಿದ್ರು. 'ಕಾಂತಾರ' ಹಾಗೂ ಬೇರೆ ಸಿನಿಮಾಗಳ ವಿಚಾರದಲ್ಲಿ ಕೂಡ ಅವ್ರು ಇದೇ ರೀತಿ ಧೈರ್ಯವಾಗಿ ಇರುವಂತೆ ಹೇಳಿದ್ದರು ಎಂದು ನನಗೆ ಗೊತ್ತು. ಸಿನಿಮಾ ಕ್ವಾಲಿಟಿ ಬಹಳ ಮುಖ್ಯ ಎಂದು ತಂತ್ರಜ್ಞರಿಗೆ ಹೇಳುತ್ತಿರುತ್ತಾರೆ. ಇದೇ ನನಗೆ ಇಷ್ಟ. ಹಾಗಾಗಿ ಅವರೊಟ್ಟಿಗೆ ಹೆಚ್ಚು ಸಿನಿಮಾ ಮಾಡಲು ಬಯಸುತ್ತೇನೆ" ಎಂದು ಪ್ರಭಾಸ್ ವಿವರಿಸಿದ್ದಾರೆ.

'ನಿನ್ನಿಂದಲೇ' ಸಿನಿಮಾ ಮೂಲಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸ್ವತಂತ್ರವಾಗಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿತ್ತು. ಬಳಿಕ ಮಾಸ್ಟರ್ ಪೀಸ್ ಹಾಗೂ ರಾಜಕುಮಾರ ಸಿನಿಮಾ ಮಾಡಿ ಗೆದ್ದಿತ್ತು. ಬಳಿಕ 'KGF' ಸರಣಿ ಬರೆದ ದಾಖಲೆ ಗೊತ್ತೇಯಿದೆ. ಚಾಪ್ಟರ್-1 ಚಿತ್ರಕ್ಕೆ ಸಿಕ್ಕ ಗೆಲುವಿನಿಂದಲೇ ಸಂಸ್ಥೆ 'ಸಲಾರ್' ಚಿತ್ರ ಆರಂಭಿಸಿತ್ತು. ಇನ್ನು ಚಾಪ್ಟರ್-2 ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ.
ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆ ಫಿಲ್ಮ್ಸ್ ಸದ್ದು ಮಾಡ್ತಿದೆ. ಇತ್ತೀಚೆಗೆ ಹೃತಿಕ್ ರೋಷನ್ ಜೊತೆಗೂ ಸಿನಿಮಾ ಘೋಷಿಸಿದೆ. ಇನ್ನು ರಿಷಬ್ ಶೆಟ್ಟಿ ಕಾಂಬಿನೇಷನ್ನಲ್ಲಿ 'ಕಾಂತಾರ' ಚಾಪ್ಟರ್-1 ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅಕ್ಟೋಬರ್ 2ಕ್ಕೆ ಸಿನಿಮಾ ತೆರೆಗೆ ಬರಲಿದೆ. ಮುಂದೆ 'ರಿಚರ್ಡ್ ಆಂಟನಿ', 'KGF- 3' ರೀತಿಯ ದೊಡ್ಡ ದೊಡ್ಡ ಸಿನಿಮಾಗಳು ನಿರ್ಮಾಣವಾಗಬೇಕಿದೆ. ಪರಭಾಷೆಗಳಲ್ಲಿ ಕೂಡ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ. ಈಗಾಗಲೇ ತಮಿಳು, ಮಲಯಾಳಂ ಭಾಷೆಗಳಲ್ಲಿ ಕೂಡ ತಲಾ ಒಂದೊಂದು ಸಿನಿಮಾ ನಿರ್ಮಿಸಿ ಗೆದ್ದಿದೆ.


Click it and Unblock the Notifications











