'ಕಲ್ಕಿ' ಗೆದ್ರು ಹೊಸ ಚಿತ್ರಕ್ಕೆ ಸಂಭಾವನೆ ಇಳಿಸಿದ ಪ್ರಭಾಸ್; ಅದಕ್ಕಿದೆ ಬಲವಾದ ಕಾರಣ
ಸಾಮಾನ್ಯವಾಗಿ ಸ್ಟಾರ್ ನಟರು ಚಿತ್ರದಿಂದ ಚಿತ್ರಕ್ಕೆ ಸಂಭಾವನೆ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾರೆ. ಒಂದು ಸಿನಿಮಾ ಹಿಟ್ ಆಗಿಬಿಟ್ರೆ ದಿಢೀರನೆ ಇನ್ನಷ್ಟು ಡಿಮ್ಯಾಂಡ್ ಮಾಡುತ್ತಾರೆ. ಆದರೆ 'ಕಲ್ಕಿ' ರೀತಿಯ ಬ್ಲಾಕ್ಬಸ್ಟರ್ ಹಿಟ್ ಕೊಟ್ಟ ಮೇಲೂ ಪ್ರಭಾಸ್ ಮುಂದಿನ ಚಿತ್ರಕ್ಕೆ ಸಂಭಾವನೆ ಇಳಿಸಿಕೊಂಡಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಚಿತ್ರವೊಂದಕ್ಕೆ 150 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತಿದೆ. 5 ಭಾಷೆಗಳಲ್ಲಿ ದೊಡ್ಡಮಟ್ಟದಲ್ಲಿ ಡಾರ್ಲಿಂಗ್ ಸಿನಿಮಾಗಳು ಬಿಡುಗಡೆ ಆಗುತ್ತವೆ. ಹಿಂದಿ ಬೆಲ್ಟ್ ಹಾಗೂ ಓವರ್ಸೀಸ್ ಮಾರ್ಕೆಟ್ನಲ್ಲೂ ಯಂಗ್ ರೆಬಲ್ ಸ್ಟಾರ್ ಸಿನಿಮಾಗಳು ಭರ್ಜರಿ ಬ್ಯುಸಿನೆಸ್ ಮಾಡುತ್ತವೆ. ಹಾಗಾಗಿ ತಮ್ಮ ಮಾರ್ಕೆಟ್ಗೆ ತಕ್ಕಂತೆ ಪ್ರಭಾಸ್ ಸಂಭಾವನೆ ಡಿಮ್ಯಾಂಡ್ ಮಾಡುತ್ತಾರೆ.

'ಕಲ್ಕಿ 2989 AD' ಬಳಿಕ ಪ್ರಭಾಸ್ ಮೂರ್ನಾಲ್ಕು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಸಲಾರ್-2' ಹಾಗೂ 'ಕಲ್ಕಿ 2989 AD' ಪಕ್ಕಾ ಆಗಿದೆ. ಮತ್ತೊಂದು ಕಡೆ ಸಂದೀಪ್ ರೆಡ್ಡಿ ವಂಗಾ ಹಾಗೂ ಹನು ರಾಘವಪುಡಿ ನಿರ್ದೇಶನದ ಸಿನಿಮಾಗಳಲ್ಲಿ ನಟಿಸೋಕೆ ಮನಸ್ಸು ಮಾಡಿದ್ದಾರೆ. ಈಗಾಗಲೇ ಮಾರುತಿ ನಿರ್ದೇಶನದ 'ರಾಜಾ ಸಾಬ್' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ 'ರಾಜಾ ಸಾಬ್' ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇದೇ ಚಿತ್ರಕ್ಕೆ ಪ್ರಭಾಸ್ ಸಂಭಾವನೆ ಇಳಿಸಿಕೊಂಡಿದ್ದಾರೆ. ಅದಕ್ಕೆ ಮುಖ್ಯವಾದ ಕಾರಣ ಕೂಡ ಇದೆ. ಅಂದಹಾಗೆ ಅಂದಾಜು 200 ಕೋಟಿ ರೂ. ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಕಾರ್ತಿಕ್ ಪಳನಿ ಛಾಯಾಗ್ರಹಣ, ತಮನ್ ಸಂಗೀತ ಚಿತ್ರಕ್ಕೆ.
ಮೋಷನ್ ಪೋಸ್ಟರ್ ಬಿಟ್ಟರೆ 'ರಾಜಾ ಸಾಬ್' ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನುಳಿದಂತೆ ರಿದ್ದಿ ಕುಮಾರ್, ಯೋಗಿ ಬಾಬು ತಾರಾಗಣದಲ್ಲಿದ್ದಾರೆ. ಇದೊಂದು ಹಾರರ್ ಕಾಮಿಡಿ ಸಿನಿಮಾ ಎನ್ನಲಾಗ್ತಿದೆ. ಚಿತ್ರದಲ್ಲಿ ಲುಂಗಿ ಉಟ್ಟು ಲೋಕಲ್ ಹೈದನ ಪಾತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ.

'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ಭಾರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 300, 400 ಕೋಟಿ ರೂ. ಬಜೆಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅದಕ್ಕೆಲ್ಲಾ ಹೋಲಿಸಿದರೆ 'ರಾಜಾ ಸಾಬ್' ಚಿಕ್ಕ ಸಿನಿಮಾ. ಹೆಚ್ಚು ಗ್ರಾಫಿಕ್ಸ್, ಸೆಟ್ಗಳ ಅವಶ್ಯಕತೆ ಇಲ್ಲ. ಚಿಕ್ಕ ಸಿನಿಮಾ ಎನ್ನುವ ಕಾರಣಕ್ಕೆ ಪ್ರಭಾಸ್ ಸಂಭಾವನೆ ಇಳಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಡಾರ್ಲಿಂಗ್ ಈ ನಿರ್ಧಾರಕ್ಕೆ ಮತ್ತೊಂದು ಕಾರಣ ಕೂಡ ಇದೆ.
ಪ್ರಭಾಸ್ ನಟಿಸಿದ 'ಆದಿಪುರುಷ್' ಸಿನಿಮಾ ಸೋತಿತ್ತು. ಈ ಚಿತ್ರದ ತೆಲುಗು ರೈಟ್ಸ್ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಕೊಂಡುಕೊಂಡು ನಷ್ಟ ಅನುಭವಿಸಿತ್ತು. ಪ್ರಭಾಸ್ ನಂಬಿ ಈ ಸಾಹಸ ಮಾಡಿದ್ದ ವಿತರಕರಿಗೆ ಹಿನ್ನಡೆ ಆಗಿತ್ತು. ಹಾಗಾಗಿ ಪ್ರಭಾಸ್ ಆ ಸಂಸ್ಥೆಗೆ ಒಂದು ಸಿನಿಮಾ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದರು. ಅದರಂತೆ 'ರಾಜಾ ಸಾಬ್' ಶುರುವಾಯಿತು. 'ಆದಿಪುರುಷ್' ಚಿತ್ರದ ನಷ್ಟ ಭರಿಸಲು ತಮ್ಮ ಸಂಭಾವನೆಯನ್ನು ಪ್ರಭಾಸ್ ಇಳಿಸಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಇದು ಹೊಸದೇನು ಅಲ್ಲ. ಡಾ. ರಾಜ್ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವರು ಈ ರೀತಿ ನಿರ್ಮಾಪಕರಿಗೆ ಬೆಂಬಲವಾಗಿ ನಿಂತಿದ್ದಾರೆ. ತಮ್ಮ ಸಿನಿಮಾಗಳಿಂದ ನಿರ್ಮಾಪಕರು, ವಿತರಕರು ನಷ್ಟ ಅನುಭವಿಸಿದರೆ ಅವರಿಗೆ ಮತ್ತೊಂದು ಸಿನಿಮಾ ಮೂಲಕ ಸಹಾಯ ಮಾಡುವ ಪ್ರಯತ್ನ ಮಾಡಿದ್ದಾರೆ. ಪ್ರಭಾಸ್ ಸಹ ಅದೇ ಹಾದಿಯಲ್ಲಿದ್ದಾರೆ. ನೆಚ್ಚಿನ ನಟನ ಈ ನಡೆಗೆ ಅಭಿಮಾನಿಗಳು ಖುಷಿಯಾಗಿದ್ದಾರೆ.


Click it and Unblock the Notifications











