Salaar: ಸಲಾರ್ ಬಿಡುಗಡೆ ಮುಂದಕ್ಕೆ, ಚಿಕಿತ್ಸೆಗಾಗಿ ಯುರೋಪ್ ತೆರಳಿದ ನಟ ಪ್ರಭಾಸ್
ಬಾಹುಬಲಿ ಚಿತ್ರಗಳಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆದ ನಟ ಪ್ರಭಾಸ್, ಕಳೆದ ದಶಕದ ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟಿಂಗ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಲಾಕ್ಬಸ್ಟರ್ ಚಿತ್ರ ಬಾಹುಬಲಿ ಬಿಡುಗಡೆಯಾದ ನಂತರ ಅವರ ಕೆರಿಯರ್ ಸಕತ್ ಕೈ ಹಿಡಿದಿದ್ದು, ಒಂದಾದ ಮೇಲೆ ಒಂದು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಎಸ್ಎಸ್ ರಾಜಮೌಳಿ ಅವರ ಬಾಹುಬಲಿ ಎರಡು ಭಾಗಗಳ ಬಳಿಕ ಸಾಹೋ, ರಾಧೆ ಶ್ಯಾಮ್, ಆದಿಪುರುಷ್, ಸಲಾರ್ ಮತ್ತು ಪ್ರಾಜೆಕ್ಟ್ ಕೆಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದರು. ಸದ್ಯ ಅವರ ಸಲಾರ್ ಸಿನಿಮಾ ಬಹು ನಿರೀಕ್ಷೆ ಮೂಡಿಸಿದ್ದು, ಯಾವಾಗ ಬಿಡುಗಡೆಯಾಗುವುದೋ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ, ಸಲಾರ್ ಮೊದಲ ಭಾಗ ಬಿಡುಗಡೆ ದಿನಾಂಕ ಪದೇ ಪದೇ ಮುಂದಕ್ಕೆ ಹೋಗುತ್ತಿದೆ.

ಇನ್ನು, ಪ್ರಭಾಸ್ ನಟಿಸುತ್ತಿರುವ ಎಲ್ಲಾ ಸಿನಿಮಾಗಳು ಕೂಡ ದೊಡ್ಡ ಬಜೆಟ್, ಪ್ಯಾನ್ ಇಂಡಿಯಾ ಚಲನಚಿತ್ರಗಳಾಗಿವೆ. ಎಲ್ಲ ಸಿನಿಮಾಗಳಿಗೂ ಸಾಕಷ್ಟು ಸಮಯ ಕೂಡ ಬೇಕು. ಹೀಗೆ ಸುದೀರ್ಘ ಸಮಯ ಶೂಟಿಂಗ್ನಲ್ಲಿ ಬ್ಯುಸಿ ಆಗಿರುವ ಪ್ರಭಾಸ್, ಸಲಾರ್ ಬಿಡುಗಡೆ ಮುಂದಕ್ಕೆ ಹೋದ ಕಾರಣ ವಿದೇಶಕ್ಕೆ ಹಾರಿದ್ದಾರೆ.
ಯುರೋಪ್ಗೆ ಹಾರಿದ ಪ್ರಭಾಸ್
ಬಹುನಿರೀಕ್ಷಿತ ಸಲಾರ್ ಈ ಹಿಂದೆ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಬೇಕಿತ್ತು. ಈಗ ಚಿತ್ರವು ನವೆಂಬರ್ನಲ್ಲಿ ಬಿಡುಗಡೆಯಾಗಲಿದೆ. ಇನ್ನು, ಪ್ರಭಾಸ್ ತುಂಬಾ ದಿನಗಳಿಂದ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಸಿನಿಮಾ ಬಿಡುಗಡೆ ಮುಂದಕ್ಕೆ ಹೋದ ಕಾರಣ ಪ್ರಭಾಸ್ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಪ್ರಭಾಸ್ ದೀರ್ಘಕಾಲದ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ. ಅವರ ನಿರಂತರ ಕೆಲಸದಿಂದಾಗಿ ನೋವು ಉಲ್ಬಣಗೊಂಡಿದೆ. ಹೀಗಾಗಿ ಸಿನಿಮಾ ಬಿಡುಗಡೆ ಅಪ್ಡೇಡ್ ಸಿಕ್ಕ ತಕ್ಷಣ ಪ್ರಭಾಸ್ ತಕ್ಷಣ ಚಿಕಿತ್ಸೆ ಪಡೆಯಲು ಯುರೋಪ್ಗೆ ಹಾರಿದ್ದಾರೆ. ಅವರು ಮುಂದಿನ 15 ದಿನಗಳ ಕಾಲ ಯುರೋಪ್ನಲ್ಲಿಯೇ ಇರುತ್ತಾರೆ. ಸರಿಯಾದ ಚಿಕಿತ್ಸೆಯ ನಂತರ ಮ್ತೆ ಶೂಟಿಂಗ್ನಲ್ಲಿ ತೊಡೆಗಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಪ್ರಭಾಸ್ ಅವರ ಆರೋಗ್ಯ ಸಮಸ್ಯೆಗಳು ಕೆಲವು ದಿನಗಳಿಂದ ಸುದ್ದಿಯಾಗುತ್ತಿವೆ. ಬಾಹುಬಲಿ ಚಿತ್ರೀಕರಣದ ವೇಳೆಯೂ ಅವರು ಗಾಯಗೊಂಡಿದ್ದರು ಎಂದು ವರದಿಯಾಗಿದೆ. ನಿರಂತರ ಕೆಲಸದ ಕಾರಣ ಅವರಿಗೆ ಸಂಪೂರ್ಣ ವಿಶ್ರಾಂತಿ ಸಿಕ್ಕಿರಲಿಲ್ಲ. ಇದಕ್ಕೂ ಮುನ್ನ ಮೊಣಕಾಲಿನ ಚಿಕಿತ್ಸೆಗಾಗಿ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದರು. ಬ್ಯಾಕ್ ಟು ಬ್ಯಾಕ್ ಶೂಟಿಂಗ್ಗಳು ಅವರ ಆರೋಗ್ಯವನ್ನು ಹದಗೆಡಿಸಿವೆ. ಈಗ ಮತ್ತೆ ಮೊಣಕಾಲಿನ ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆ ತೆಗೆದುಕೊಳ್ಳಲು ತೆರಳಿದ್ದಾರೆ.
ಪ್ರಭಾಸ್ ವೈದ್ಯಕೀಯ ತಜ್ಞರಿಂದ ನಿರಂತರವಾಗಿ ತಮ್ಮ ಆರೋಗ್ಯದ ಬಗ್ಗೆ ಸಲಹೆ ಪಡೆಯುತ್ತಿದ್ದರು ಎಂದು ಮೂಲಗಳು ಹೇಳಿವೆ. ನೋವು ಶಮನವಾಗಲು ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ತಜ್ಞರು ಶಿಫಾರಸು ಮಾಡಿದ್ದಾರೆ ಎಂದು ಮಾಹಿತಿಯಿದೆ.
ಸಲಾರ್
ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ, ಹೊಂಬಾಳೆ ಫಿಲಂನ 'ಸಲಾರ್' ಚಿತ್ರದ ನಿಖರವಾದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಬಿಡುಗಡೆ ವಿಳಂಬಕ್ಕೆ "ಅನಿರೀಕ್ಷಿತ ಸಂದರ್ಭಗಳು" ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ. ಸಲಾರ್ನ ಟೀಸರ್ ಈ ವರ್ಷದ ಜುಲೈನಲ್ಲಿ ಬಿಡುಗಡೆ ಮಾಡಲಾಗಿತ್ತು. ಸಿನಿಮಾವು ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











