ಪ್ರಭಾಸ್ ದೊಡ್ಡಪ್ಪ, ಖ್ಯಾತ ತೆಲುಗು ನಟ ಕೃಷ್ಣಂರಾಜು ನಿಧನ
ತೆಲುಗಿನ ಖ್ಯಾತ ನಟ, ಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು(83)ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಂರಾಜು ಚಿಕಿತ್ಸೆ ಫಲಕಾರಿಯಾಗದೇ ಬೆಳ್ಳಂಬೆಳಗ್ಗೆ 3.25ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ವಿಭಿನ್ನ ಶೈಲಿಯ ನಟನೆಯಿಂದ ಟಾಲಿವುಡ್ ರೆಬಲ್ ಸ್ಟಾರ್ ಎಂದೇ ಖ್ಯಾತರಾಗಿದ್ದರು. 1966ರಲ್ಲಿ 'ಚಿಲಕಾ ಗೋರಿಂಕಾ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಕೃಷ್ಣಂರಾಜು ತರಹೇವಾರಿ ಪಾತ್ರಗಳಿಂದ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ನಂತರ ಪೋಷಕ ಪಾತ್ರಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದರು.
ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರಿನಲ್ಲಿ ಜನವರಿ 20, 1940 ರಂದು ಕೃಷ್ಣಂರಾಜು ಜನಿಸಿದ್ದರು. ಪ್ರಭಾಸ್ ನಟನೆಯ 'ರಾಧೆಶ್ಯಾಮ್' ಕೊನೆಯದಾಗಿ ಬಣ್ಣ ಹಚ್ಚಿದ್ದರು. 1999 ಉಪಚುನಾವಣೆಯಲ್ಲಿ ನರಸಾಪುರದಿಂದ ಸ್ಪರ್ಧಿಸಿ ಗೆದ್ದಿದ್ದಲ್ಲದೆ, ವಾಜಪೇಯಿ ಅವರ ಆಡಳಿತದಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 2004ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋತ ನಂತರ 2009ರಲ್ಲಿ ಚಿರಂಜೀವಿ ಪ್ರಜಾರಾಜ್ಯಂ ಪಕ್ಷಕ್ಕೆ ಸೇರ್ಪಡೆಯಾದರು. ಕೃಷ್ಣಂ ರಾಜು ಅವರಿಗೆ ಪತ್ನಿ ಮತ್ತು ಮೂವರು ಪುತ್ರಿಯರಿದ್ದಾರೆ. ಅವರ ಸಹೋದರನ ಮಗ ಪ್ರಭಾಸ್ ದೊಡ್ಡಪ್ಪನ ಹಾದಿಯಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.

ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಂತರ ಖಳನಾಯಕನಾಗಿ ರಂಜಿಸಿ ಮತ್ತೆ ಹೀರೊ ಚಿತ್ರರಂಗದಲ್ಲಿ ಕೃಷ್ಣಂರಾಜು ಯಶಸ್ವಿ ಆಗಿದ್ದರು. 'ಚಿಲಕಾ ಗೋರಿಂಕಾ' ಸಿನಿಮಾ ನಂತರ 'ನೇನಂಟೆ ನೇನೆ', 'ಭಲೇ ಅಬ್ಬಾಯಿಲು', 'ಬಂಗಾರು ತಲ್ಲಿ', 'ಮನುಷ್ಯುಲು ಮಾರಾಲಿ', 'ಮಳ್ಳಿ ಪೆಳ್ಳಿ' ಸಿನಿಮಾಗಳಲ್ಲಿ ಖಳನಾಯಕರಾಗಿ ಬಣ್ಣ ಹಚ್ಚಿದ್ದರು. 'ಜೀವನ ತರಂಗಾಲು' ಸಿನಿಮಾದಿಂದ ಹೀರೊ ಆಗಿ ದೊಡ್ಡ ಬ್ರೇಕ್ ಸಿಕ್ಕಿತ್ತು. 1977ರಲ್ಲಿ ತೆರೆಕಂಡ 'ಅಮರದೀಪಂ' ಸಿನಿಮಾ ಬ್ಲಾಕ್ಬಸ್ಟರ್ ಸಿನಿಮಾ ಆಗಿತ್ತು. ಅನಾರೋಗ್ಯದಿಂದ ಗಚ್ಚಿಬೌಲಿಯ AIG ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣಂರಾಜು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ನಾಳೆ ಬೆಳಗ್ಗೆ ಹೈದರಾಬಾದ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೃಷ್ಣಂರಾಜು ಅಗಲಿಕೆಗೆ ತೆಲುಗು ಚಿತ್ರರಂಗ, ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.


Click it and Unblock the Notifications











