ಐತಿಹಾಸಿಕ ರಾಮನವಮಿ ಆಚರಣೆಯಲ್ಲಿ ಪ್ರಭಾಸ್ಗೆ ವಿಶೇಷ ಗೌರವ
ಐತಿಹಾಸಿಕ ರಾಮ್ಲೀಲಾ ಹಾಗೂ ರಾವಣ ದಹನವನ್ನು ದೆಹಲಿಯ ಲವ-ಕುಶ ರಾಮ್ಲೀಲಾ ಸಮಿತಿ ದಶಕಗಳಿಂದ ಮಾಡುತ್ತಾ ಬಂದಿದೆ.
ಲವ-ಕುಶ ರಾಮ್ಲೀಲಾ ಸಮಿತಿಯ ದಸರಾ ಆಚರಣೆ ದೆಹಲಿಯ ಪ್ರಮುಖ ದಸರಾ ಆಕರ್ಷಣೆ. ರಾಮಾಯಣ ನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನವರಾತ್ರಿಯ ಒಂಬತ್ತು ದಿನ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ದಸರೆಯ ಕಡೆಯ ದಿನ ರಾವಣ ದಹನ ಸಹ ನಡೆಯುತ್ತದೆ.
ಈ ರಾವಣ ದಹನ ನವರಾತ್ರಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಪ್ರತಿ ವರ್ಷವೂ ವಿಶೇಷ ವ್ಯಕ್ತಿಯಿಂದ ರಾವಣ ದಹನ ಮಾಡಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖರು ಇಲ್ಲಿ ರಾವಣ ದಹನ ಮಾಡಿದ್ದಾರೆ. ಈ ಬಾರಿ ಈ ಅವಕಾಶ ನಟ ಪ್ರಭಾಸ್ಗೆ ನೀಡಲಾಗಿದೆ.
ಇದೇ ಅಕ್ಟೊಬರ್ 05ರಂದು ರಾವಣ ದಹನ ನಡೆಯಲಿದ್ದು, ನಟ ಪ್ರಭಾಸ್ ಈ ಬಾರಿ ರಾವಣ ದಹನ ಮಾಡಲಿದ್ದಾರೆ. ಪ್ರಭಾಸ್ 'ಆದಿಪುರುಷ್' ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ ಹಾಗಾಗಿ ಈ ಬಾರಿ ಪ್ರಭಾಸ್ಗೆ ರಾವಣ ದಹನ ಮಾಡುವ ಅವಕಾಶ ನೀಡಲಾಗಿದೆ.

'ಬಾಹುಬಲಿ' ಸಿನಿಮಾದಲ್ಲಿ ಪ್ರಭಾಸ್ ಆನೆಯ ಮೇಲೆ ಕುಳಿತು ದೊಡ್ಡ ಬಿಲ್ಲು ಬಾಣ ಬಳಸಿ ರಾಕ್ಷಸ ಪ್ರತಿಕೃತಿಗೆ ಬೆಂಕಿ ಹಚ್ಚಿದಂತೆ, ಕೆಂಪು ಕೋಟೆಯ ಬಳಿ ನಡೆಯುವ ರಾವಣ ದಹನದಲ್ಲಿ ಬಿಲ್ಲು-ಬಾಣ ಬಳಸಿ ದೊಡ್ಡ ರಾವಣನ ಪ್ರತಿಕೃತಿಗೆ ಬೆಂಕಿ ಇಡಲಿದ್ದಾರೆ. ಈ ಭಾರಿ ಹಿನ್ನೆಲೆಯಲ್ಲಿ ಬೃಹತ್ ಅಯೋಧ್ಯೆಯ ಸೆಟ್ ಅನ್ನು ಸಹ ವಿಶೇಷವಾಗಿ ನಿರ್ಮಿಸಲಾಗುತ್ತದೆ.
ರಾವಣ ಮಾತ್ರವೇ ಅಲ್ಲದೆ ಕುಂಬಕರ್ಣ, ಮೇಘನಾದರ ಪ್ರತಿಕೃತಿಗಳನ್ನು ಸಹ ನಿರ್ಮಿಸಲಾಗುತ್ತದೆ. ಈ ಬಾರಿಯ ಪ್ರತಿಕೃತಿಗಳು 100 ಅಡಿ ಎತ್ತರ ಇರಲಿವೆ. ಈ ಬಾರಿಯ ದಸರಾ ಆಚರಣೆ ಸೆಪ್ಟೆಂಬರ್ 25 ರಿಂದ ಪ್ರಾರಂಭವಾಗಿ ಅಕ್ಟೋಬರ್ 05 ಕ್ಕೆ ಅಂತ್ಯವಾಗಲಿದೆ.
ಪ್ರಭಾಸ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆಯೇ ಇಲ್ಲವೆ ಎಂಬ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಲವ ಕುಶ ಸಮಿತಿಯವರು ಈ ಬಾರಿ ಪ್ರಭಾಸ್ಗೆ ಆಹ್ವಾನ ನೀಡಿದ್ದಾಗಿದೆ. ಕೆಲ ಮೂಲಗಳ ಪ್ರಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಭಾಸ್ ಒಪ್ಪಿಗೆ ಸೂಚಿಸಿದ್ದಾರಂತೆ.
ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ಪ್ರಭಾಸ್ ಪ್ರಸ್ತುತ ಐದು ಬಿಗ್ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಹಾಗೂ ಮೂರು ಸಿನಿಮಾಗಳ ಚಿತ್ರೀಕರಣ ಚಾಲ್ತಿಯಲ್ಲಿದೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್', ನಾಗ್ ಅಶ್ವಿನ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ ಹಾಗೂ ಓಂ ರಾವತ್ ನಿರ್ದೇಶನದ ರಾಮಾಯಣ ಆಧರಿತ 'ಆದಿಪುರುಷ್' ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಇವುಗಳ ಹೊರತಾಗಿ ಸಂದೀಪ್ ವಂಗ ನಿರ್ದೇಶನದ 'ಸ್ಪಿರಿಟ್' ಸಿನಿಮಾ ಹಾಗೂ ಹಾರರ್ ಸಿನಿಮಾ ಒಂದನ್ನು ಸಹ ಪ್ರಭಾಸ್ ಒಪ್ಪಿಕೊಂಡಿದ್ದಾರೆ.


Click it and Unblock the Notifications











