Don't Miss!
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Finance ಬೆಂಗಳೂರಿಗೆ ಪ್ರತ್ಯೇಕ ನ್ಯಾವಿಗೇಟಿಂಗ್ ಅಪ್ಲಿಕೇಶನ್, ಟೆಕ್ ಕಂಪೆನಿಯೊಂದಿಗೆ ಒಪ್ಪಂದ
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚುನಾವಣೆ ಅಕ್ರಮ: ಎದುರಾಳಿಗಳ ವಿರುದ್ಧ ದೂರು ನೀಡಿದ ಪ್ರಕಾಶ್ ರೈ
ತೆಲುಗು ಚಿತ್ರರಂಗದ ಪ್ರತಿಷ್ಠಿತ 'ಮಾ' (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಅಧ್ಯಕ್ಷ ಸ್ಥಾನಕ್ಕೆ ನಟ ಪ್ರಕಾಶ್ ರೈ ಸ್ಪರ್ಧಿಸಿದ್ದು, ಚುನಾವಣಾ ಕಣ ರಂಗೇರಿದೆ.
ಸಿಂಡಿಕೇಟ್ ಮಾದರಿಯಲ್ಲಿ ಈ ಚುನಾವಣೆ ನಡೆಯಲಿದ್ದು ಪ್ರಕಾಶ್ ರೈ ಬಣದ ಎದುರು ನಟ ಮಂಚು ವಿಷ್ಣು ಬಣ ಸ್ಪರ್ಧಿಸುತ್ತಿದೆ. ಎರಡೂ ಬಣಗಳ ನಡುವೆ ಬಹಳ ಜಿದ್ದಾ-ಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ.
ಎರಡೂ ಬಣಗಳವರು ಪರಸ್ಪರರ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಲವರಂತೂ ತೀರ ವೈಯಕ್ತಿಕ ಮಟ್ಟದ ಹೇಳಿಕೆಗಳನ್ನು ಸಹ ಎದುರಾಳಿಗಳ ಬಗ್ಗೆ ನೀಡುತ್ತಿದ್ದಾರೆ. ವೃತ್ತಿ, ಖಾಸಗಿ ಜೀವನ, ಅಭ್ಯರ್ಥಿಗಳ ಪ್ರಾದೇಶಿಕತೆ, ಜಾತಿ, ಧರ್ಮದ ವಿಷಯಗಳೆಲ್ಲ ಇವರುಗಳ ಆರೋಪ-ಪ್ರತ್ಯಾರೋಪಗಳಲ್ಲಿ ಬಂದು ಹೋಗಿದೆ.
ನಟ ಪ್ರಕಾಶ್ ಇತ್ತೀಚೆಗಷ್ಟೆ ಸುದ್ದಿಗೋಷ್ಠಿಯೊಂದನ್ನು ನಡೆಸಿ, ಎದುರಾಳಿ ಮಂಚು ವಿಷ್ಣು ಬಣ ಚುನಾವಣಾ ಅಕ್ರಮ ಎಸಗುತ್ತಿದೆ. ಈ ಚುನಾವಣಾ ಅಕ್ರಮಕ್ಕೆ ಮಂಚು ವಿಷ್ಣು ಅವರದ್ದೇ ನೇತೃತ್ವ ಎಂದು ಆರೋಪಿಸಿದ್ದಾರೆ. ಈ ಕುರಿತಾಗಿ 'ಮಾ' ಚುನಾವಣಾ ಅಧಿಕಾರಿಗೆ ದೂರು ಸಹ ನೀಡಿದ್ದಾರೆ ಪ್ರಕಾಶ್ ರೈ.
''ಮಂಚು ವಿಷ್ಣು 'ಮಾ' ಚುನಾವಣೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕೆಲವು 'ಮಾ' ಸದಸ್ಯರ ಸದಸ್ಯತ್ವ ಮೊತ್ತವನ್ನು ಭರಿಸಿದ್ದಾರೆ. ಹಾಗೂ ವಯಸ್ಸಾದ ಕಲಾವಿದರ ಪತ್ರಗಳಿಗೆ ಬಲವಂತದ ಸಹಿ ಮಾಡಿಸಿಕೊಂಡಿದ್ದಾರೆ'' ಎಂದು ಪ್ರಕಾಶ್ ರೈ ಆರೋಪಿಸಿದ್ದಾರೆ.
ವಯಸ್ಸಾದ ಕಲಾವಿದರು ಚುನಾವಣಾ ಅಧಿಕಾರಿಗೆ ಮನವಿ ಮಾಡಿಕೊಂಡು ಪೋಸ್ಟ್ ಮೂಲಕ ಮತ ಚಲಾಯಿಸಬಹುದಾಗಿದೆ. ಇದರ ಲಾಭ ಪಡೆಯಲು ಯತ್ನಿಸಿರುವ ಮಂಚು ವಿಷ್ಣು ಕೆಲವು ಕಲಾವಿದರಿಂದ ಪತ್ರಕ್ಕೆ ಸಹಿ ಪಡೆದು ಚುನಾವಣಾ ಅಧಿಕಾರಿಯಿಂದ ಬ್ಯಾಲೆಟ್ ಪೇಪರ್ಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಕಾಶ್ ರೈ ಆರೋಪಿಸಿದ್ದಾರೆ.
ಮಂಚು ವಿಷ್ಣು ಆಪ್ತ ಶುಲ್ಕ ಕಟ್ಟಿದ್ದಾನೆ: ಪ್ರಕಾಶ್ ರೈ
ಕೆಲವರನ್ನು ಚುನಾವಣಾ ಉದ್ದೇಶಕ್ಕೆಂದೇ ಸಂಘದ ಸದಸ್ಯರನ್ನಾಗಿ ಮಾಡಿದ್ದು, ಮಂಚು ವಿಷ್ಣು ಆಪ್ತನೊಬ್ಬ 28,000 ಶುಲ್ಕವನ್ನು ಒಟ್ಟಿಗೆ ಭರಿಸಿದ್ದಾನೆ. ಕೃಷ್ಣಂರಾಜು, ಪರಚೂರಿ ಬ್ರದರ್ಸ್, ಸೂಪರ್ ಸ್ಟಾರ್ ಕೃಷ್ಣ, ಶಾರದಾ, ಶರತ್ ಬಾಬು ಇನ್ನೂ ಕೆಲವರ ಸದಸ್ಯತ್ವ ಶುಲ್ಕವನ್ನು ಸಹ ಮಂಚು ವಿಷ್ಣು ಆಪ್ತನೊಬ್ಬ ಪಾವತಿ ಮಾಡಿದ್ದಾನೆ. ಚುನಾವಣೆ ಉದ್ದೇಶದಿಂದಲೇ ಕೊನೆಯ ಕ್ಷಣದಲ್ಲಿ ಹೀಗೆ ಒಟ್ಟಿಗೆ ಶುಲ್ಕ ಪಾವತಿ ಮಾಡಲಾಗಿದೆ ಎಂದಿದ್ದಾರೆ ಪ್ರಕಾಶ್ ರೈ.
ಇಷ್ಟು ಕೆಳ ಮಟ್ಟಕ್ಕೆ ಇಳಿದಿರೇಕೆ: ಪ್ರಕಾಶ್ ರೈ ಪ್ರಶ್ನೆ
60 ವರ್ಷ ಮೇಲ್ಪಟ್ಟ ಕಲಾವಿದರು ಅಂಚೆ ಮೂಲಕ ಮತದಾನಕ್ಕೆ ಅರ್ಜಿ ಹಾಕಬಹುದು. ಆದರೆ ಮಂಚು ವಿಷ್ಣು ಬಳಗವು 60 ವರ್ಷದ ಒಳಗಿನ ಕಲಾವಿದರಿಂದಲೂ ಬೇಕೆಂದೇ ಪೋಸ್ಟಲ್ ಮತದಾನಕ್ಕೆ ಅರ್ಜಿ ಹಾಕಿಸಲಾಗಿದೆ ಎಂದು ಆರೋಪಿಸಿರುವ ಪ್ರಕಾಶ್ ರೈ, ''ಏಕೆ ಕೊನೆ ಕ್ಷಣದಲ್ಲಿ ಈ ರೀತಿಯ ಗಿಮಿಕ್ ಮಾಡುತ್ತಿದ್ದೀರಿ? ನಿಮಗೆ ನ್ಯಾಯಯುತವಾಗಿ ಚುನಾವಣೆ ಎದುರಿಸಲು ಬರುವುದಿಲ್ಲವೇ? ಏಕೆ ಇಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಿದ್ದೀರಿ? ನಿಮ್ಮ ಘೋಷಣೆಗಳು, ಆಶ್ವಾಸನೆಗಳ ಮೂಲಕ ಚುನಾವಣೆ ಗೆಲ್ಲಲು ಬರುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
''ಪವನ್ ಚಿತ್ರದ ಮಾರ್ನಿಂಗ್ ಕಲೆಕ್ಷನ್ ನಿನ್ನ ಸಿನಿಮಾದ ಬಜೆಟ್''
ಕೆಲವು ದಿನಗಳ ಹಿಂದಷ್ಟೆ ಬೇರೊಂದು ಸಂದರ್ಭದಲ್ಲಿ ಮಾತನಾಡಿದ್ದ ಪ್ರಕಾಶ್ ರೈ, ''ಪವನ್ ಕಲ್ಯಾಣ್ ಸಿನಿಮಾ ಇಂಡಸ್ಟ್ರಿಯ ಭಾಗ, ಅವರ ಚಿತ್ರದ ಮಾರ್ನಿಂಗ್ ಕಲೆಕ್ಷನ್ ನಿನ್ನ ಸಿನಿಮಾದ ಬಜೆಟ್'' ಎಂದು ಮಂಚು ವಿಷ್ಣುಗೆ ಕುಟುಕಿದ್ದರು. ''ಪವನ್ ಕಲ್ಯಾಣ್ ಹೇಳಿಕೆಗೆ ಇಂಡಸ್ಟ್ರಿಗೆ ಸಂಬಂಧವಿಲ್ಲ ಅಂತ ಫಿಲಂ ಚೇಂಬರ್ ಸ್ಪಷ್ಟವಾಗಿ ಹೇಳಿದೆ. ನಾನು ಸಿನಿಮಾರಂಗದ ಪರವಾಗಿದ್ದೇನೆ, ಪ್ರಕಾಶ್ ರಾಜ್ ಯಾರ ಪರವಾಗಿ ಇದ್ದಾರೆ, ಇಂಡಸ್ಟ್ರಿ ಪರ ಅಥವಾ ಪವನ್ ಕಲ್ಯಾಣ್ ಪರವಾಗಿನಾ ಎಂದು ಹೇಳಲಿ '' ಎಂಬ ಮಂಚು ವಿಷ್ಣು ಮಾತಿಗೆ ಮೇಲಿನಂತೆ ಪ್ರತಿಕ್ರಿಯಿಸಿದ್ದರು ಪ್ರಕಾಶ್ ರೈ.
ಪ್ರಕಾಶ್ ರೈ ವಿರುದ್ಧವೂ ಆರೋಪ
ಪ್ರಕಾಶ್ ರೈ ವಿರುದ್ಧವೂ ಹಲವು ಆರೋಪಗಳನ್ನು, ವಾಗ್ದಾಳಿಯನ್ನು ಮಂಚು ವಿಷ್ಣು ಬಳಗದ ಸದಸ್ಯರು ಮಾಡಿದ್ದಾರೆ, ''ಪ್ರಕಾಶ್ ರೈ ಈ ನೆಲದವರಲ್ಲ. ಪ್ರಕಾಶ್ ರೈ ಕರ್ನಾಟಕದವರು, ತೆಲುಗು ಚಿತ್ರರಂಗದವರಿಗೆ ಮಾತ್ರವೇ ಅವಕಾಶ ಕೊಡಿ ಹೊರಗಿನವರಿಗಲ್ಲ'' ಎಂದು ಮಂಚು ವಿಷ್ಣು ಬಳಗ ಮನವಿ ಮಾಡಿತ್ತು. ಇದಕ್ಕೆ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಹಲವು ತೆಲುಗು ಚಿತ್ರರಂಗದ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರಕಾಶ್ ರೈ ಬಣದಲ್ಲಿ ಇರುವವರು ಯಾರು?
'ಮಾ' ಚುನಾವಣೆಯು ಅಕ್ಟೋಬರ್ 10 ರಂದು ನಡೆಯಲಿದೆ. ಪ್ರಕಾಶ್ ರೈ ಸಿಂಡಿಕೇಟ್ನಲ್ಲಿ ಹಲವು ಪರಿಚಿತ ನಟ-ನಟಿಯರು ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನಕ್ಕೆ ಮೇಕಾ ಶ್ರೀಕಾಂತ್, ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾ ಮತ್ತು ಬ್ಯಾನರ್ಜಿ, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಜೀವಿತಾ ರಾಜಶೇಖರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಉತ್ತೇಜ್, ಅನಿತಾ ಚೌಧರಿ, ಖಜಾಂಚಿ ಸ್ಥಾನಕ್ಕೆ ನಾಗಿನೇಡು ಸ್ಪರ್ಧಿಸುತ್ತಿದ್ದಾರೆ. ಸಮಿತಿ ಸದಸ್ಯರ ಸ್ಥಾನಕ್ಕೆ, ಅನುಸೂಯಾ, ಅಜಯ್, ಭೂಪಾಲ್, ಬ್ರಹ್ಮಾಜಿ, ಈಟಿವಿ ಪ್ರಭಾಕರ್, ಗೋವಿಂದ ರಾವ್, ಖಾಯುಮ್, ಕೌಶಿಕ್, ಪ್ರಗತಿ, ರಮಣ ರೆಡ್ಡಿ, ಶ್ರೀಧರ್ ರಾವ್, ಶಿವಾ ರೆಡ್ಡಿ, ಸುಡಿಗಾಲಿ ಸುಧೀರ್, ಡಿ ಸುಬ್ಬರಾಜು, ಸುರೇಶ್ ಕೊಂಡೇಟಿ, ತನಿಶ್ ಮತ್ತು ತರ್ಜಾನ್ ಅವರುಗಳು ಸ್ಪರ್ಧಿಸುತ್ತಿದ್ದಾರೆ.
ಮಂಚು ವಿಷ್ಣು ಬಣದಲ್ಲಿ ಯಾರ್ಯಾರಿದ್ದಾರೆ?
ಇನ್ನು ಎದುರಾಳಿ ಮಂಚು ವಿಷ್ಣು ಬಣದಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಮಂಚು ವಿಷ್ಣು, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಪೋಷಕರ, ಹಾಸ್ಯ ನಟ ರಘು ಬಾಬು, ಕಾರ್ಯನಿರ್ವಹಾಕ ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಬಾಬು ಮೋಹನ್, ಉಪಾಧ್ಯಕ್ಷ ಸ್ಥಾನಕ್ಕೆ ಪೃಥ್ವಿರಾಜ ಬಾಲಿ ರೆಡ್ಡಿ ಮತ್ತು ಮದ್ದಾಲ ರವಿ, ಖಜಾಂಚಿ ಸ್ಥಾನಕ್ಕೆ ನಾಯಕ ನಟ, ಪೋಷಕ ನಟ ಶಿವ ಬಾಲಾಜಿ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಟಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಕರಾಟೆ ಕಲ್ಯಾಣಿ ಮತ್ತು ನಟ ಗೌತಮ್ ರಾಜು ಸ್ಪರ್ಧಿಸುತ್ತಿದ್ದಾರೆ. ಕಾರ್ಯನಿರ್ವಾಹಕ ಸದಸ್ಯರ ಸ್ಥಾನಕ್ಕೆ ಕನ್ನಡದ 'ಆ ದಿನಗಳು', 'ಮೈತ್ರಿ' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಅರ್ಚನಾ. ಸಟೈರಿಕಲ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಅಭಿಮಾನಿಗಳನ್ನು ಸಂಪಾದಿಸಿರುವ ಸಂಪೂರ್ಣೇಶ್ ಬಾಬು, ನಟರಾದ ಅಶೋಕ್ ಕುಮಾರ್, ಗೀತಾ ಸಿಂಗ್, ಹರಿನಾತ್ ಬಾಬು, ಜಯವಾಣಿ, ಮಲಕ್ಪೇಟ ಶೈಲಜಾ, ಮಾಣಿಕ್, ಪೂಜಿತಾ, ರಾಜೇಶ್ವರಿ ರೆಡ್ಡಿ, ರೇಖಾ, ಶಶಾಂಕ್, ಶಿವನಾರಾಯಣ, ಶ್ರೀಲಕ್ಷ್ಮಿ, ಶ್ರೀನಿವಾಸುಲು, ಸ್ವಪ್ನ ಮಧುರಿ, ವಿಷ್ಣು ಭೋಪಣ್ಣ, ಎಂಆರ್ಸಿ ವಡ್ಲಪಟ್ಲ ಸ್ಪರ್ಧೆ ಮಾಡುತ್ತಿದ್ದಾರೆ.