ವಿರೋಧಿಗಳನ್ನು ಸೆಳೆದುಕೊಂಡ ಪ್ರಕಾಶ್ ರೈ: 'ಮಾ' ಚುನಾವಣೆ ಗೆಲ್ಲಲು ಸಖತ್ ಪ್ಲ್ಯಾನ್
ನಟ ಪ್ರಕಾಶ್ ರೈ, ತೆಲುಗು ಸಿನಿಮಾರಂಗದ ಪ್ರತಿಷ್ಠಿತ 'ಮಾ' (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ಪ್ರಕಾಶ್ ರೈ ಸ್ಪರ್ಧಿಸುತ್ತಿದ್ದು, ಪ್ರಬಲ ಪ್ರತಿರೋಧವನ್ನೇ ಇತರ ಆಕಾಂಕ್ಷಿಗಳಿಂದ ಎದುರಿಸುತ್ತಿದ್ದಾರೆ.
ಹಿರಿಯ ನಟ ಮೋಹನ್ಬಾಬು ಪುತ್ರ ಮಂಚು ವಿಷ್ಣು ಸಹ 'ಮಾ' ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಇದರ ಜೊತೆಗೆ ನಟಿ ಹೇಮಾ ಹಾಗೂ ನಟ ರಾಜಶೇಖರ್ ಪತ್ನಿ ಜೀವಿತಾ ರಾಜಶೇಖರ್ ಸಹ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
ಆದರೆ ಚಾಣಾಕ್ಷ ನಡೆ ನಡೆದಿರುವ ನಟ ಪ್ರಕಾಶ್ ರೈ, ತಮ್ಮ ಎದುರು ಸ್ಪರ್ಧಿಸಲು ತಯಾರಾಗಿದ್ದ ನಟಿ ಹೇಮಾ ಹಾಗೂ ಜೀವಿತಾರನ್ನು ತಮ್ಮದೇ ಗುಂಪಿಗೆ ಸೇರಿಸಿಕೊಂಡು ಬಿಟ್ಟಿದ್ದಾರೆ. ಇದರಿಂದ ಪ್ರಕಾಶ್ ರೈ ಹಾದಿ ಇನ್ನಷ್ಟು ಸುಗಮವಾಗಿದೆ.
ಸಿಂಡಿಕೇಟ್ ಮಾದರಿಯ ಚುನಾವಣೆ ಇದಾಗಿರಲಿದ್ದು, ನಟಿ ಹೇಮಾ, ಉಪಾಧ್ಯಕ್ಷೆ ಸ್ಥಾನಕ್ಕೆ, ಜೀವಿತಾ ರಾಜಶೇಖರ್ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಪ್ರಕಾಶ್ ರೈ ಸಿಂಡಿಕೇಟ್ನಿಂದಲೇ ಸ್ಪರ್ಧೆ ಮಾಡಲಿದ್ದಾರೆ. ನಟ ಪ್ರಕಾಶ್ ರೈ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ.

ನಟಿ ಹೇಮಾ ಬುದ್ಧಿವಂತೆ ಮತ್ತು ಧೈರ್ಯವಂತೆ: ಪ್ರಕಾಶ್ ರೈ
''ಹೇಮಾ ಬಹಳ ಬುದ್ಧಿವಂತ ಮತ್ತು ಧೈರ್ಯವಂತ ಮಹಿಳೆ. 'ಮಾ'ನಲ್ಲಿ ಈ ಹಿಂದೆ ಕೆಲಸ ಮಾಡಿರುವ ಅನುಭವ ಹೇಮಾಗೆ ಇದೆ. ಹಾಗಾಗಿ ಅವರು ನಮ್ಮ ಸಿಂಡೇಕಟ್ನಲ್ಲಿದ್ದರು ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಹೇಮಾರನ್ನು ನಾವು ಸಂಪರ್ಕ ಮಾಡಿದೆವು. ಅವರೂ ಸಹ ಶೀಘ್ರವಾಗಿ ನಮ್ಮ ಆಫರ್ ಅನ್ನು ಒಪ್ಪಿಕೊಂಡು ನಮ್ಮ ಸಿಂಡಿಕೇಟ್ಗೆ ಸೇರಿಸಿಕೊಂಡರು'' ಎಂದಿದ್ದಾರೆ ಪ್ರಕಾಶ್ ರೈ.

ಎರಡು ಗಂಟೆ ಚರ್ಚೆ ನಡೆಸಿ ಒಪ್ಪಿಸಿದೆವು: ಪ್ರಕಾಶ್ ರೈ
''ಜೀವಿತಾ ರಾಜಶೇಖರ್ ಅವರಿಗೆ ನಮ್ಮ ಗುರಿ, ಯೋಜನೆಗಳು, ಮಾ ಚುನಾವಣೆಗೆ ನಿಂತಿರುವ ಉದ್ದೇಶ. ಗೆದ್ದರೆ ಮಾಡಬೇಕೆಂದಿರುವ ಕೆಲಸಗಳು ಇನ್ನೂ ಹಲವು ವಿಷಯಗಳ ಬಗ್ಗೆ ಮನದಟ್ಟು ಮಾಡಿಸಿ ಸುಮಾರು ಎರಡು ಗಂಟೆ ಕಾಲ ಅವರೊಂದಿಗೆ ಚರ್ಚೆ ಮಾಡಿದ ಬಳಿಕ ಜೀವಿತಾ ನಮ್ಮ ಸಿಂಡಿಕೇಟ್ ಸೇರಿಕೊಳ್ಳಲು ಒಪ್ಪಿಕೊಂಡರು'' ಎಂದಿದ್ದಾರೆ ಪ್ರಕಾಶ್ ರೈ.

ಪ್ರಕಾಶ್ ರೈ ಗುಂಪಿನಲ್ಲಿ ಯಾರ್ಯಾರಿದ್ದಾರೆ?
''ನಮ್ಮ ಸಿಂಡಿಕೇಟ್ನಲ್ಲಿ ಇಲ್ಲದ ಕೆಲವರು ಸಹ ನಮ್ಮ ಸಿಂಡಿಕೇಟ್ಗೆ ಸೇರಿದವರು ಎಂದು ಹೇಳಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಹಾಗಾಗಿ ನಾವು ಶೀಘ್ರವಾಗಿ ಸಿಂಡಿಕೇಟ್ ಘೊಷಿಸುತ್ತಿದ್ದೇವೆ'' ಎಂದು ಸಿಂಡಿಕೇಟ್ ಸದಸ್ಯರ ಹೆಸರನ್ನು ಘೊಷಿಸಿದ್ದಾರೆ. ಪ್ರಕಾಶ್ ರೈ ಸಿಂಡಿಕೇಟ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನಕ್ಕೆ ಮೇಕಾ ಶ್ರೀಕಾಂತ್, ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾ ಮತ್ತು ಬ್ಯಾನರ್ಜಿ, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಜೀವಿತಾ ರಾಜಶೇಖರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಉತ್ತೇಜ್, ಅನಿತಾ ಚೌಧರಿ, ಖಜಾಂಚಿ ಸ್ಥಾನಕ್ಕೆ ನಾಗಿನೇಡು ಸ್ಪರ್ಧಿಸುತ್ತಿದ್ದಾರೆ. ಸಮಿತಿ ಸದಸ್ಯರ ಸ್ಥಾನಕ್ಕೆ, ಅನುಸೂಯಾ, ಅಜಯ್, ಭೂಪಾಲ್, ಬ್ರಹ್ಮಾಜಿ, ಈಟಿವಿ ಪ್ರಭಾಕರ್, ಗೋವಿಂದ ರಾವ್, ಖಾಯುಮ್, ಕೌಶಿಕ್, ಪ್ರಗತಿ, ರಮಣ ರೆಡ್ಡಿ, ಶ್ರೀಧರ್ ರಾವ್, ಶಿವಾ ರೆಡ್ಡಿ, ಸುಡಿಗಾಲಿ ಸುಧೀರ್, ಡಿ ಸುಬ್ಬರಾಜು, ಸುರೇಶ್ ಕೊಂಡೇಟಿ, ತನಿಶ್ ಮತ್ತು ತರ್ಜಾನ್ ಅವರುಗಳು ಪ್ರಕಾಶ್ ಸಿಂಡಿಕೇಟ್ನಿಂದ ಸ್ಪರ್ಧಿಸುತ್ತಿದ್ದಾರೆ.

ಎನ್ಟಿಆರ್ ಕುಟುಂಬದ ಬೆಂಬಲಕ್ಕಾಗಿ ವಿಷ್ಣು ಯತ್ನ
ಪ್ರಕಾಶ್ ರೈ ಸಿಂಡಿಕೇಟ್ಗೆ, ಮಂಚು ವಿಷ್ಣು ಸಿಂಡಿಕೇಟ್ ಪ್ರಬಲ ಎದುರಾಳಿಯಾಗಿದ್ದು ಇಬ್ಬರ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಪ್ರಕಾಶ್ ರೈಗೆ ನಟ ಚಿರಂಜೀವಿ ಹಾಗೂ ಕುಟುಂಬದವರ ಬೆಂಬಲ ದೊರೆತಿದೆ. ಮಂಚು ವಿಷ್ಣು ಎನ್ಟಿಆರ್ ಕುಟುಂಬದ ಬೆಂಬಲಕ್ಕಾಗಿ ಯತ್ನಿಸುತ್ತಿದ್ದಾರೆ. ಈ ಇಬ್ಬರ ನಡುವೆ ಬಹಳ ಬಿರುಸಿನ ಚುನಾವಣೆ ಈ ಬಾರಿ ನಡೆಯುವುದು ಖಾಯಂ ಆಗಿದೆ. ಪ್ರಕಾಶ್ ರೈ ಅನ್ನು ಹೊರಗಿನವರು ಎಂದು ಕೆಲವರು ಅಪಪ್ರಚಾರ ಮಾಡಿದ್ದರು. ಆದರೆ ಇದಕ್ಕೆ ತೆಲುಗು ಚಿತ್ರರಂಗದ ಹಿರಿಯರೆ ಅಸಮಾಧಾನ ವ್ಯಕ್ತಪಡಿಸಿ ಪ್ರಕಾಶ್ ರೈಗೆ ಬೆಂಬಲ ನೀಡಿದ್ದಾರೆ.

ಚುನಾವಣೆ ದಿನಾಂಕ ಘೋಷಿಸಿದ ಕಿಶೋರ್
'ಮಾ'ನ ಹಾಲಿ ಅಧ್ಯಕ್ಷ ನರೇಶ್ ಕೆಲವು ದಿನಗಳ ಹಿಂದಷ್ಟೆ ವಿಡಿಯೋ ಮಾಡಿ ಚುನಾವಣೆ ದಿನಾಂಕವನ್ನು ಪ್ರಕಟಿಸಿದ್ದರು. ''ಎರಡು ಜನರಲ್ ಬಾಡಿ ಮೀಟಿಂಗ್ ನಡೆಸಿ ಆಡಳಿತ ಮಂಡಳಿ ಸದಸ್ಯರುಗಳು, ಶಿಸ್ತು ಸಮಿತಿ ಸದಸ್ಯರುಗಳು ಸೇರಿ ಚರ್ಚಿಸಿ ದಿನಾಂಕವನ್ನು ಆಯ್ಕೆ ಮಾಡಿದ್ದೇವೆ. ತೆಲುಗು ಚಿತ್ರರಂಗಕ್ಕೆ ತಿಂಗಳ ರಜೆಯ ದಿನವಾದ ಎರಡನೇಯ ಭಾನುವಾರದಂದೇ ಚುನಾವಣೆ ನಡೆಯಬೇಕು ಎಂಬ ಗುರಿಯೊಂದಿಗೆ ದಿನಾಂಕ ಆಯ್ಕೆ ಮಾಡಿದ್ದೇವೆ. ಸೆಪ್ಟೆಂಬರ್ ತಿಂಗಳಿನಲ್ಲಿಯೇ ಚುನಾವಣೆ ನಡೆಸಬೇಕು ಎಂದು ಹಲವರು ಕೇಳಿಕೊಂಡರು. ನಮಗೂ ಚುನಾವಣೆಯನ್ನು ಬೇಗ ಮುಗಿಸಬೇಕೆಂಬ ಇರಾದೆ ಇತ್ತು. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಕೋವಿಡ್ ನಿಯಮಗಳು ಜಾರಿಯಲ್ಲಿರುವ ಸಾಧ್ಯತೆ ಇರುವ ಕಾರಣ ಹಾಗೂ ಗಣೇಶ ಹಬ್ಬ ಸಹ ಇರುವ ಕಾರಣ ಸೆಪ್ಟೆಂಬರ್ ತಿಂಗಳ ಎರಡನೇ ಭಾನುವಾರ ಚುನಾವಣೆಗೆ ಸೂಕ್ತವಾಗುವುದಿಲ್ಲವೆಂದು ನಿಶ್ಚಯಿಸಿ, ಅಕ್ಟೋಬರ್ ತಿಂಗಳ ಎರಡನೇ ಭಾನುವಾರದಂದು ಚುನಾವಣೆ ನಡೆಸಲು ಉದ್ದೇಶಿಸಿದ್ದೇವೆ'' ಎಂದಿದ್ದರು ನರೇಶ್.


Click it and Unblock the Notifications











