ಪವನ್ ಕಲ್ಯಾಣ್ ವಿಷಯದಲ್ಲಿ ಬಣ್ಣಬದಲಾಯಿಸಿದ ಪ್ರಕಾಶ್ ರೈ
'ಮಾ' ಚುನಾವಣೆಯಲ್ಲಿ ಸೋತ ನಂತರ ಪ್ರಕಾಶ್ ರೈ ನಿತ್ಯ ಒಂದಲ್ಲಾ ಒಂದು ಹೇಳಿಕೆಗಳನ್ನು ಕೊಡುತ್ತಲೇ ಬರುತ್ತಿದ್ದಾರೆ. ತನ್ನ ಸೋಲಿಗೆ ಕಾರಣವಾದ ಅಂಶಗಳನ್ನು ಹಿಡಿದು ದುಃಖ ಮತ್ತು ಆಕ್ರೋಶವನ್ನು ಹಿಂದೆ ಹೊರಹಾಕಿದ್ದರು.
'ಅತಿಥಿಯಾಗಿ ಬಂದವನು ಅತಿಥಿಯಾಗಿ ಉಳಿದು ಹೋಗುವೆ' ಅಂತ ಹೇಳಿ 'ಮಾ'ಸದಸ್ಯತ್ವಕ್ಕೂ ರಾಜೀನಾಮೆ ಕೊಟ್ಟರು. ಆನಂತರ ಮತ್ತೊಂದು ಸಂದರ್ಭದಲ್ಲಿ 'ಮಾ' ಚುನಾವಣೆಗೆ ಸಂಬಂಧಿಸಿದಂತೆ ತೆರೆಮರೆಯಲ್ಲಿ ಮೋಹನ್ ಬಾಬು ಮತ್ತು ಚಿರಂಜೀವಿ ನಡುವೆ ನಡೆದಿದ್ದ ಸಂಭಾಷಣೆಗೆ ಸಂಬಂಧಿಸಿದಂತೆ ಕೂಡ ಪರೋಕ್ಷವಾಗಿ ಚಿರಂಜೀವಿಯ ವಿರುದ್ಧ ಕಿಡಿಕಾರಿದ್ದರು. ಕೆಲವು ತಿಂಗಳ ಹಿಂದಿನವರೆಗೂ ಪವನ್ ಕಲ್ಯಾಣ್ ಅವರ ವಿರುದ್ಧ ಕಿಡಿಕಾರುತ್ತಲ್ಲೆ ಬರುತ್ತಿದ್ದ ಪ್ರಕಾಶ್ ರೈ ಈಗ ಅಚ್ಚರಿಯೆಂಬಂತೆ ಪವನ್ ಕಲ್ಯಾಣ್ ಅವರ ಗುಣಗಾನಕ್ಕೆ ಮುಂದಾಗಿದ್ದಾರೆ.
ನಟ ಪ್ರಕಾಶ್ ರೈ ಬಿಜೆಪಿ ಪಕ್ಷದ ನಡುವೆ ಸಂಬಂಧ ಉಪ್ಪು-ಖಾರ ಇದ್ದಂತೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಹೀನಾಯವಾಗಿ ಪ್ರಕಾಶ್ ರೈ ಸೋತಿದ್ದರು. ಕಳೆದ ಕೆಲವು ವರ್ಷಗಳಿಂದ ಬಿಜೆಪಿಯ ಕಟು ಟೀಕಾಕಾರರಾಗಿ ಪ್ರಕಾಶ್ ರೈ ಗುರುತಿಸಿಕೊಂಡವರು. 'ಮಾ' ಚುನಾವಣೆಯಲ್ಲಿ ಬಿಜೆಪಿಯ ಪರೋಕ್ಷ ಸಹಕಾರದಿಂದಲೇ ತನ್ನ ಎದುರಾಳಿ ಮಂಚು ವಿಷ್ಣು ಅವರು ಗೆದ್ದ ವಿಷಯ ಕೂಡ ಪ್ರಕಾಶ್ ರೈ ಈಗಾಗಲೇ ಒಪ್ಪಿಕೊಂಡಿದ್ದಾರೆ. ಬಿಜೆಪಿ ವಿರುದ್ಧ ಸದಾ ಟೀಕೆ ಮಾಡುತ್ತಲೇ ಇರುವ ಪ್ರಕಾಶ್ ರೈ, ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಬಿಜೆಪಿಯ ಜೊತೆಯಲ್ಲಿ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ, ಅದನ್ನು ತೀವ್ರವಾಗಿ ಖಂಡಿಸಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪವನ್ ಕಲ್ಯಾಣ್ ಅವರನ್ನು 'ಉಸರವಳ್ಳಿ' ಎಂದು ಬಣ್ಣಿಸಿದ್ದರು.

ಶತ್ರುವಿನ ಶತ್ರು, ಮಿತ್ರ ಎಂಬಂತೆ ಒಂದಾದ ಪ್ರಕಾಶ್ ರೈ-ಪವನ್ ಕಲ್ಯಾಣ್
ಜನಸೇನಾ ಪಕ್ಷ ಬಿಜೆಪಿಯ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡಾಗ ಸಾರ್ವಜನಿಕವಾಗಿ ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಕಾಶ್ ರೈ ಅವರು ಪವನ್ ಕಲ್ಯಾಣ್ ಅವರನ್ನು ವೈಯಕ್ತಿಕವಾಗಿ ಉಸರವಳ್ಳಿ ಅಂತ ಬಣ್ಣಿಸಿದ್ದು ಅಲ್ಲದೆ,'ಅಭಿಮಾನಿಗಳು, ಕಾರ್ಯಕರ್ತರು ಬಿಜೆಪಿಗೆ ಮತ ಹಾಕಬೇಕು ಎಂದಾದರೆ ಜನಸೇನಾ ಪಕ್ಷ ಯಾಕೆ ಬೇಕಿದೆ ' ಎಂದು ಪವನ್ ಕಲ್ಯಾಣ್ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವ ಹೇಳಿಕೆಗೆ ಪ್ರಕಾಶ್ ರೈ ಖಾರವಾಗಿ ಪ್ರಶ್ನಿಸಿದ್ದರು.ಈಗ ಕಾಲ ಬದಲಾಗಿದೆ ಇಬ್ಬರು ಪರಸ್ಪರ ಹತ್ತಿರವಾಗಿದ್ದಾರೆ. ಪವನ್ ಕಲ್ಯಾಣ್ ಗೆ ಜಗನ್ ಮೋಹನ್ ರೆಡ್ಡಿ, ಪ್ರಕಾಶ್ ರೈ ಅವರಿಗೆ ಬಿಜೆಪಿ ನೇರ ಎದುರಾಳಿಗಳು. ಆಶ್ಚರ್ಯವೆಂದರೆ ಚಿರಂಜೀವಿ ಕುಟುಂಬದ ಬೆಂಬಲದೊಂದಿಗೆ ಚುನಾವಣೆ ಕಣಕ್ಕಿಳಿದಿದ್ದ ಪ್ರಕಾಶ್ ರೈ ಅವರಿಗೆ ಪವನ್ ಕಲ್ಯಾಣ್ ಅವರ ಬೆಂಬಲ ಸಿಕ್ಕಿದರೆ, ಎದುರಾಳಿ ಮಂಚು ವಿಷ್ಣು ಅವರಿಗೆ ಪವನ್ ಎದುರಾಳಿ ಜಗನ್ ಮೋಹನ್ ರೆಡ್ಡಿ ಜೊತೆಗೆ ಪ್ರಕಾಶ್ ರೈ ಅವರ ವಿರೋಧಿ ಬಿಜೆಪಿ ಬೆಂಬಲ ದೊರೆಯಿತು. ತನ್ನ ಸೋಲಿಗೆ ಬಿಜೆಪಿಯ ಜೊತೆಗೆ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಕೂಡ ಕಾರಣ ಅಂತ ಭಾವಿಸಿರುವ ಪ್ರಕಾಶ್ ರೈ ಈಗ ಪವನ್ ಕಲ್ಯಾಣ್ ಅವರಿಗೆ ಹತ್ತಿರವಾಗಿದ್ದಾರೆ.

ಪವನ್ ವ್ಯಕ್ತಿತ್ವ ಕೊಂಡಾಡಿದ ಪ್ರಕಾಶ್ ರೈ
ಈ ಹಿನ್ನಲೆಯಲ್ಲಿ ಪವನ್ ಕಲ್ಯಾಣ್ರನ್ನು ಒಂದು ಕಾಲದಲ್ಲಿ ಊಸುರುವಳ್ಳಿ ಎಂದು ಟೀಕಿಸಿದ್ದ ಪ್ರಕಾಶ್ ರೈ, ಈಗ ಪವನ್ ಕಲ್ಯಾಣ್ ಬದಲಾದ ವ್ಯಕ್ತಿ ಎಂದು ಕೊಂಡಾಡುತ್ತಿದ್ದಾರೆ ಮತ್ತು ಅವರ ಮಾತಿನಲ್ಲಿ ಆ ಬದಲಾವಣೆ ಏನು ಎಂದು ನೋಡೋಣ. "ಪವನ್ ಕಲ್ಯಾಣ್ ತುಂಬಾ ಬದಲಾಗಿದ್ದಾರೆ. ಹಿಂದೆ ನಾನು ಅವರನ್ನು ಟೀಕೆ ಮಾಡಿದ್ದೆ ನಿಜ, ಆದರೆ ವೈಯಕ್ತಿಕವಾಗಿ ನನಗೆ ಪವನ್ ಕಲ್ಯಾಣ್ ಅಂದರೆ ತುಂಬಾ ಇಷ್ಟ. ನಾನು ನಿಜವಾಗಿಯೂ ಪವನ್ ಕಲ್ಯಾಣ್ ಅವರನ್ನು ಜನಮೆಚ್ಚಿದ ನಾಯಕನಾಗಿ ನೋಡಲು ಬಯಸಿದ್ದೆ. ನನಗೆ ಪವನ್ ಕಲ್ಯಾಣ್ ಎಂದರೆ ತುಂಬಾ ಇಷ್ಟ, ಹೀಗಾಗಿಯೇ ಅವರ ನಿರ್ಧಾರಗಳನ್ನು ನಾನು ನೇರವಾಗಿ
ಟೀಕಿಸಿದ್ದೆ, ಯಾವುದೇ ವಿಷಯ ನನಗೆ ಇಷ್ಟವಾಗದಿದ್ದರೆ ನಾನು ನೇರವಾಗಿ ಹೇಳುತ್ತೇನೆ. ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಕಾರಣಗಳಿರಬಹುದು.ಆದರೆ ನಾನು ಇಷ್ಟಪಡುವ ನಾಯಕ ನನಗೆ ಇಷ್ಟವಿಲ್ಲದ ಕೆಲಸ ಮಾಡಿದರೆ ಹೇಳುವ ಹಕ್ಕು ನನಗಿದೆ. ಇಷ್ಟಪಡಲಿಲ್ಲ ಅಂತ ಹೇಳಿದರೆ ದ್ವೇಷಿಸಿದಂತೆ ಅಲ್ಲ. ಅನಿವಾರ್ಯ ಕಾರಣಗಳಿಂದಾಗಿ ಆಗ ನಾನು ಪವನ್ ವಿರುದ್ಧ ಹಾಗೆಲ್ಲ ಮಾತನಾಡಬೇಕಾಗಿ ಬಂತು. ಏಕೆಂದರೆ ಅವರನ್ನು ತುಂಬಾ ಪ್ರೀತಿಸುತ್ತೇನೆ. ಅವರಿಗೆ ತುಂಬಾ ದೊಡ್ಡ ಮನಸ್ಸಿದೆ ಹೀಗಾಗಿ ನಮ್ಮ ಭಿನ್ನಾಭಿಪ್ರಾಯಗಳನ್ನು ಸಹ ಅವರು ಗೌರವಿಸುತ್ತಾರೆ. ನಟನೆಯ ವಿಷಯಕ್ಕೆ ಬಂದರೆ ಪ್ರಕಾಶ್ ರೈ ನನಗಿಂತ ತುಂಬಾ ಒಳ್ಳೆಯ ನಟ. ಅವರಷ್ಟು ಅದ್ಭುತವಾಗಿ ನಾನು ನಟಿಸಲಾರೆ ಅಂತ ಪವನ್ ಕಲ್ಯಾಣ್ ಹೇಳುತ್ತಾರೆ ಅಂದರೆ ಅದು ನಟನಾಗಿ ನನ್ನನ್ನು ಅವರು ಗುರುತಿಸಿ, ಗೌರವಿಸುವ ಅವರ ಅದ್ಭುತವಾದ ವ್ಯಕ್ತಿತ್ವಕ್ಕೆ ಸಾಕ್ಷಿ. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಅರ್ಥ ಮಾಡಿಕೊಂಡು. ಮಾತನಾಡುವ ಹಕ್ಕನ್ನು ಕೊಟ್ಟು ಬದುಕಲು ಬಯಸುತ್ತೇವೆ. ಅಂತಹ ಸಮಾಜಕ್ಕಾಗಿ ನಾವು ಶ್ರಮಿಸಬೇಕು.ನಾನು ಪ್ರಾಮಾಣಿಕ, ಅವರೂ ಪ್ರಾಮಾಣಿಕರು ಹಾಗಾಗಿ ನಮ್ಮ ನಡುವೆ ಯಾವುದೇ ಸಮಸ್ಯೆಗಳಿಲ್ಲ" ಎಂದು ಪ್ರಕಾಶ್ ರೈ ಹೇಳಿಕೊಂಡು ಬಂದಿದ್ದಾರೆ.

''ಕಮಲ್ ಹಾಸನ್- ರಜನಿಕಾಂತ್ ಇಂದ ಬದಲಾವಣೆ ಅಸಾಧ್ಯ''
ಇನ್ನು ಇದೇ ಸಂದರ್ಭದಲ್ಲಿ ತಮಿಳುನಾಡಿನ ರಾಜಕೀಯದ ಬಗ್ಗೆ ಕೂಡ ಮಾತನಾಡಿದ ಪ್ರಕಾಶ್ ರೈ "ಎಂಜಿಆರ್, ಜಯಲಲಿತಾ ಅವರು ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾರೆ. ಇನ್ನು ಅನೇಕರು ನನಗೆ ಕಮಲ್ ಹಾಸನ್ ಅಥವಾ ರಜನಿಕಾಂತ್ ಅವರನ್ನು ನೀವು ಯಾಕೆ ಬೆಂಬಲಿಸುವುದಿಲ್ಲ? ಅಂತ ಪ್ರಶ್ನೆ ಮಾಡುತ್ತಾರೆ. ಕೇವಲ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಕಾರಣಕ್ಕಷ್ಟೇ ಒಬ್ಬರನ್ನು ಬೆಂಬಲಿಸುವ ಅಗತ್ಯ ನನಗಿಲ್ಲ. ನನಗೆ ಸಿದ್ಧಾಂತಗಳು ಮುಖ್ಯ. ಅಸಲಿಗೆ ನನಗೆ ಅವರ ಮೇಲೆ ನಂಬಿಕೆ ಇಲ್ಲ, ಜನರಿಗಾಗಿ ಏನಾದರೂ ಮಾಡಬಹುದು ಅನ್ನುವ ನಂಬಿಕೆ ಕೂಡ ನನಗಿಲ್ಲ. ಈ ವಿಚಾರದಲ್ಲಿ ಪವನ್ ಕಲ್ಯಾಣ್ ಅವರಿಂದ ಅಂತಹ ಬದಲಾವಣೆ ನಿರೀಕ್ಷಿಸಬಹುದು" ಅಂತೇಳಿ ರಜನೀಕಾಂತ್ ಕಮಲಹಾಸನ್ ಅವರ ರಾಜಕೀಯ ನಿಲುವುಗಳನ್ನು ಲೇವಡಿಮಾಡಿದ್ದಾರೆ.

ಬೆಂಗಳೂರು ಸೆಂಟ್ರಲ್ನಲ್ಲಿ ಕೈಕೊಟ್ಟರು ಜನರು
ಇನ್ನು ಮುಂದುವರೆದ ಪ್ರಕಾಶ್ ರೈ ಅವರು ತಮ್ಮ ಬೆಂಗಳೂರು ಸೆಂಟ್ರಲ್ ಚುನಾವಣಾ ವಿಚಾರದ ಬಗ್ಗೆ ಕೂಡ ಮಾತನಾಡಿ " ಜನರಿಗೆ ನಾನು ಏನು ಅಂತ ಗೊತ್ತು,ನನ್ನ ಸಿದ್ಧಾಂತ ಏನು ಅಂತ ಕೂಡ ಗೊತ್ತು ಆದರೂ ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದಾಗ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನಾಲ್ಕು ಲಕ್ಷಕ್ಕಿಂತ ಹೆಚ್ಚು ಮತಗಳನ್ನು ನೀಡಿದ ಜನ, ನನಗೆ ನೀಡಿದ್ದು ಕೆಲವೇ ಕೆಲವು ಸಾವಿರ ಮತಗಳು. ಆದರೂ ಒಂದು ಪ್ರಯತ್ನ ಮಾಡಿದೆ ಸೋಲು-ಗೆಲುವು ಎನ್ನುವುದಕ್ಕಿಂತ ಒಂದು ಸಿದ್ಧಾಂತ ಮತ್ತು ಅಭಿಪ್ರಾಯವನ್ನು ಜನರ ಮುಂದಿಡುವ ಪ್ರಯತ್ನ ಮಾಡಿದೆ" ಅಂತ ಹೇಳಿಕೊಂಡು ಬಂದಿದ್ದಾರೆ.

ನನ್ನದು ಮೋದಿ ವಿರುದ್ಧದ ಹೋರಾಟವಲ್ಲ: ಪ್ರಕಾಶ್ ರೈ
ಇನ್ನು ದೇಶ ರಾಜಕಾರಣದ ಬಗ್ಗೆಯೂ ಕೂಡ ಮಾತನಾಡಿರುವ ಪ್ರಕಾಶ ರೈ ಅವರು " ನನ್ನ ರಾಜಕೀಯ ಯಾವುದೇ ವ್ಯಕ್ತಿಯೊಬ್ಬರ ವಿರುದ್ಧದ ವೈಯಕ್ತಿಕ ಹೋರಾಟವಲ್ಲ, ಅದರಲ್ಲೂ ವಿಶೇಷವಾಗಿ ದೇಶದ ಹಿರಿಯಣ್ಣನ (ಮೋದಿ) ವಿರುದ್ಧ ಅಂತೂ ಅಲ್ಲವೇ ಅಲ್ಲ. ನನ್ನ ಹೋರಾಟ ಬಿಜೆಪಿಯ ಸಿದ್ಧಾಂತದ ವಿರುದ್ಧ. ರಜನಿಕಾಂತ್ ಅವರ ರಾಜಕೀಯ ಪರಿಕಲ್ಪನೆ ಬಿಜೆಪಿಯ ಸಿದ್ಧಾಂತಗಳಿಗೆ ಹತ್ತಿರವಾಗಿರುವುದರಿಂದ ಅದನ್ನು ನಾನು ವಿರೋಧಿಸುವುದು. ಆದರೆ ಒಬ್ಬ ನಟನಾಗಿ ರಜನಿಕಾಂತ್ ಅಥವಾ ಕಮಲಹಾಸನ್ ಚಿತ್ರಗಳಲ್ಲಿ ನಟಿಸಲು ಸಿದ್ಧನಿದ್ದೇನೆ ಮತ್ತು ನಟಿಸುತ್ತೇನೆ. ರಾಜಕೀಯವೇ ಬೇರೆ, ಸಿನಿಮಾ ಬೇರೆ" ಎಂದು ಪ್ರಕಾಶ್ ರೈ ಸ್ಪಷ್ಟೀಕರಣವನ್ನು ಕೂಡ ಇದೇ ಸಂದರ್ಭದಲ್ಲಿ ಕೊಟ್ಟಿದ್ದಾರೆ.


Click it and Unblock the Notifications











