'ಅತಿಥಿಯಾಗಿ ಬಂದೆ, ಅತಿಥಿಯಾಗಿಯೇ ಇರುವೆ' ಭಾವುಕ ಪ್ರಕಾಶ್ ರೈ 'ಮಾ'ಗೆ ರಾಜೀನಾಮೆ
ತೆಲುಗು ಕಲಾವಿದರ ಸಂಘ ಮಾಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಕಾಶ್ ರೈ ಸೋತಿದ್ದು, ಇಂದು ಸುದ್ದಿಗೋಷ್ಠಿ ನಡೆಸಿ 'ಮಾ' ಅಸೋಸಿಯೇಷನ್ಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಮಾತನಾಡಿದ ಪ್ರಕಾಶ್ ರೈ, ''ಇಲ್ಲಿಗೆ ಅತಿಥಿಯಾಗಿ ಬಂದೆ ಅತಿಥಿಯಾಗಿಯೇ ಇರುವೆ' ಎಂದಿದ್ದಾರೆ.
ಪ್ರಕಾಶ್ ರೈ 'ಮಾ' ಚುನಾವಣೆಗೆ ಸ್ಪರ್ಧಿಸಿದಾಗ, 'ಪ್ರಕಾಶ್ ರೈ ತೆಲುಗು ರಾಜ್ಯದವರಲ್ಲ, ಅವರನ್ನು ಗೆಲ್ಲಿಸಬೇಡಿ' ಎಂದು ಎದುರಾಳಿಗಳು ಪ್ರಚಾರ ಮಾಡಿದರು. ಹಿರಿಯ ನಟರಾದ ಕೋಟ ಶ್ರೀನಿವಾಸ ಮೂರ್ತಿ, ಮೋಹನ್ ಬಾಬು ಇನ್ನು ಕೆಲವು ಹಿರಿಯರು ಸಹ ಇದನ್ನೇ ಹೇಳಿದರು. ಕೊನೆಗೆ ಚುನಾವಣೆಯಲ್ಲಿಯೂ ಇದೇ ವಿಷಯದ ಮೇಲೆ ಕಲಾವಿದರು ಮತ ಹಾಕಿದ್ದು ದೊಡ್ಡ ಅಂತರದಲ್ಲಿ ಪ್ರಕಾಶ್ ರೈ ಎದುರಾಳಿ ಗೆದ್ದಿದ್ದಾರೆ.

''ಅತಿಥಿಯಾಗಿ ಬಂದಿದ್ದೆ, ಅತಿಥಿಯಾಗಿಯೇ ಇರ್ತೀನಿ''
ತಮ್ಮನ್ನು ಸ್ಥಳೀಯರಲ್ಲ ಎಂದು ಕಲಾವಿದರು ನಿರ್ಣಯಿಸಿದ್ದಕ್ಕೆ ಸಹಜವಾಗಿಯೇ ಬೇಸರಗೊಂಡಿರುವ ಪ್ರಕಾಶ್ ರಾಜ್, 'ಅತಿಥಿಯಾಗಿ ಬಂದಿದ್ದೀನಿ, ಅತಿಥಿಯಾಗಿಯೇ ಇರುತ್ತೀನಿ. ಮಾ ಜೊತೆಗೆ 21 ವರ್ಷದ ಬಂಧ ನನಗೆ ಇತ್ತು, ಅದನ್ನು ಮುರಿದುಕೊಳ್ಳುತ್ತಿದ್ದೇನೆ. ಮಾ ಅಸೋಸಿಯೇಷನ್ಗೆ ರಾಜೀನಾಮೆ ನೀಡುತ್ತಿದ್ದೇನೆ. ಪ್ರೇಕ್ಷಕರಿಗೂ ನನಗೂ ಬಂಧ ಇರುವಷ್ಟು ದಿನ, ನಿರ್ದೇಶಕರಿಗೂ ನನಗೂ ಬಂಧ ಇರುವಷ್ಟು ದಿನ, ನಿರ್ಮಾಪಕರಿಗೂ ನನಗೂ ಬಂಧ ಇರುವಷ್ಟು ದಿನ ನಾನು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುತ್ತೇನೆ' ಎಂದಿದ್ದಾರೆ.

''ನನ್ನ ತಂದೆ-ತಾಯಿ ತೆಲುಗು ರಾಜ್ಯದಲ್ಲಿ ಹುಟ್ಟಲಿಲ್ಲ ಅದು ನನ್ನ ತಪ್ಪಲ್ಲ''
''ಜಾತೀಯತೆ, ಪ್ರಾಂಥೀಯ ವಾದ, ನಾನು ತೆಲುಗು ರಾಜ್ಯಕ್ಕೆ ಸೇರಿದವನಲ್ಲ ಎಂಬುದೆಲ್ಲವೂ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ನಡೆದಿದೆ. ಮಾ ಅಸೋಸಿಯೇಷನ್ನ ಬೈಲಾ ಬದಲಾಯಿಸಬೇಕು. ತೆಲುಗು ಮೂಲದವರು ಮತ ಹಾಕಬಹುದು ಆದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕೂಗು ಪ್ರಾರಂಭಿಸಿದ್ದೀರಿ. ನಾವು ಅಧಿಕಾರಕ್ಕೆ ಬೈಲಾ ಬದಲಾಯಿಸುತ್ತೇವೆ ಎಂದೂ ಸಹ ಹೇಳಿದ್ದಿರಿ. ನಾನೇನು ಮಾಡಲಿ ನನ್ನ ತಂದೆ-ತಾಯಿ ತೆಲುಗು ರಾಜ್ಯದಲ್ಲಿ ಹುಟ್ಟಲಿಲ್ಲ ಅದು ನನ್ನ ತಪ್ಪಲ್ಲ. ಅವರ ತಪ್ಪೂ ಅಲ್ಲ'' ಎಂದು ನಗುತ್ತಾ ಹೇಳಿದ್ದಾರೆ ಪ್ರಕಾಶ್ ರೈ.

ಹಿರಿಯ ನಟರು ಬಹಿರಂಗವಾಗಿ ಹೇಳಿದ್ದಾರೆ: ಪ್ರಕಾಶ್ ರೈ
''ಅಸೋಸಿಯೇಷನ್ಗೆ ನಾಯಕತ್ವವಹಿಸಿರುವ ನೀವು ತೆಲುಗು ಮೂಲದವರು ಮಾತ್ರವೇ ಇರಬೇಕು ಎಂದಿರಿ ಅದನ್ನು ಸದಸ್ಯರೂ ಅನುಮೋದಿಸಿದ್ದಾರೆ. ಒಬ್ಬ ತೆಲುಗು ಮಗನನ್ನೇ ಅವರು ಆರಿಸಿಕೊಂಡಿದ್ದಾರೆ. ಅದನ್ನು ನಾನು ಒಪ್ಪಿಕೊಂಡಿದ್ದೇನೆ. ಆದರೆ ಕಲಾವಿದನಾಗಿ ನನಗೆ ಆತ್ಮಗೌರವವಿದೆ. ಹಾಗಾಗಿ ನಾನು ಮಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಮತದಾನದ ಮೂಲಕ ಅದನ್ನೇ ಮಾ ಸದಸ್ಯರು ಹೇಳಿದ್ದಾರೆ. ಅಲ್ಲದೆ ನಾನು ಗೌರವಿಸುವ ಹಿರಿಯ ನಟರಾದ ಮೋಹನ್ ಬಾಬು, ಕೋಟ ಶ್ರೀನಿವಾಸ್ ರಾವ್, ರವಿಕುಮಾರ್ ಇವರೆಲ್ಲ ಬಹಿರಂಗವಾಗಿ ಹೇಳಿದ್ದಾರೆ ಅತಿಥಿಯಾಗಿ ಬಂದವರಾಗಿ ಅತಿಥಿಯಾಗಿ ಇರಬೇಕೆಂದು ಹಾಗಾಗಿ ಅತಿಥಿಯಾಗಿಯೇ ಇರುತ್ತೇನೆ. ಜಾತೀಯವಾದವೂ ಚುನಾವಣೆಯಲ್ಲಿ ಕೆಲಸ ಮಾಡಿದೆ. ಬಿಜೆಪಿ ನಾಯಕ ಬಂಡಿ ಸಂಜಯ್ ಅಂಥಹವರು ಟ್ವೀಟ್ ಮಾಡಿ ಜಾತೀಯವಾದವನ್ನು ಗೆಲ್ಲಿಸಿದ್ದಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ'' ಎಂದಿದ್ದಾರೆ ಪ್ರಕಾಶ್ ರೈ.

''ಮಾ' ನಲ್ಲಿ ಎಲ್ಲರೂ ಒಂದೇ ಅಲ್ಲ: ಪ್ರಕಾಶ್ ರೈ
ಮಾ ನಲ್ಲಿ ಎಲ್ಲರೂ ಒಂದು ಅಲ್ಲವೇ? ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ''ನಾನು ಸುಳ್ಳುಗಳನ್ನು ನಂಬುವುದಿಲ್ಲ ನೀವು ನಂಬುತ್ತೀರ?'' ಎಂದರು. ಆ ಮೂಲಕ ಮಾ ನಲ್ಲಿ ಎಲ್ಲರೂ ಒಂದಲ್ಲ ಹೊರಗಿನಿಂದ ಬಂದವರು ಎಷ್ಟೇ ವರ್ಷ ಕೆಲಸ ಮಾಡಿದ್ದರೂ ಅವರು ಹೊರಗಿನವರೇ ಎಂಬುದನ್ನು ಪರೋಕ್ಷವಾಗಿ ಹೇಳಿದರು ಪ್ರಕಾಶ್ ರೈ. ತೆಲುಗುನವರು ಮಾತ್ರವೇ ಇರಬೇಕು ಎಂದುಕೊಳ್ಳುವ ಅಜೆಂಡ ಇರುವ ಅಸೋಸಿಯೇಷನ್ನಲ್ಲಿ ನಾನು ಇರಲಾರೆ ಎಂದು ಪ್ರಕಾಶ್ ರೈ ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.


Click it and Unblock the Notifications











