ಸೋತ ಬಳಿಕ ಪ್ರಕಾಶ್ ರೈ ಕಳಿಸಿದ ಸಂದೇಶ ಹಂಚಿಕೊಂಡ ಮಂಚು ವಿಷ್ಣು
ತೆಲುಗು ಚಿತ್ರರಂಗದ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ) ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಕಾಶ್ ರೈ ಹೀನಾಯ ಸೋಲು ಕಂಡಿದ್ದಾರೆ.
ಮೂವಿ ಆರ್ಟಿಸ್ಟ್ ಅಸೋಸಿಯೇಷನ್ನ ಅಧ್ಯಕ್ಷ ಸ್ಥಾನಕ್ಕೆ ನಟ ಮಂಚು ವಿಷ್ಣು ಎದುರಾಳಿಯಾಗಿ ಪ್ರಕಾಶ್ ರೈ ಸ್ಪರ್ಧಿಸಿದ್ದು, ನಿನ್ನೆ ಮತದಾನ ನಡೆದು ಫಲಿತಾಂಶವೂ ಪ್ರಕಟವಾಗಿದ್ದು, ತಮ್ಮ ಸಿಂಡಿಕೇಟ್ನಲ್ಲಿಯೇ ಅತಿ ಕಡಿಮೆ ಮತಗಳನ್ನು ಪ್ರಕಾಶ್ ರೈ ಪಡೆದಿದ್ದಾರೆ.
ಮತದಾನಕ್ಕೆ ಮುನ್ನ ಮಂಚು ವಿಷ್ಣು ಹಾಗೂ ಪ್ರಕಾಶ್ ರೈ ಬಣದ ನಡುವೆ ತೀವ್ರ ಜಟಾಪಟಿ ನಡೆದಿತ್ತು, ಎರಡೂ ಬಣಗಳು ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದರು, ಹಲವು ಜಗಳಗಳು, ವಾಗ್ವಾದಗಳು, ಮೂದಲಿಕೆಗಳು, ವೈಯಕ್ತಿಕ ದಾಳಿಗಳೆಲ್ಲವೂ ಆಗಿದ್ದವು. ಆದರೆ ಅಂತಿಮವಾಗಿ ಮಂಚು ವಿಷ್ಣು ಹಾಗೂ ಅವರ ಸಿಂಡಿಕೇಟ್ನ ಹಲವರಿಗೆ ಜಯ ಲಭಿಸಿದೆ. ಚುನಾವಣೆಯಲ್ಲಿ ಸೋತ ಪ್ರಕಾಶ್ ರೈ ಗೆದ್ದ ಮಂಚು ವಿಷ್ಣುಗೆ ವೈಯಕ್ತಿಕ ಸಂದೇಶವೊಂದನ್ನು ಕಳಿಸಿದ್ದು, ಆ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಮಂಚು ವಿಷ್ಣು ಹಂಚಿಕೊಂಡಿದ್ದಾರೆ.

ಮಂಚು ವಿಷ್ಣುಗೆ ಪ್ರಕಾಶ್ ರೈ ವಾಟ್ಸ್ಅಪ್ ಸಂದೇಶ
ಸೋತ ಕೂಡಲೇ ಮಂಚು ವಿಷ್ಣುಗೆ ವಾಟ್ಸ್ ಆಪ್ ಸಂದೇಶ ಕಳಿಸಿರುವ ಪ್ರಕಾಶ್ ರೈ, ''ನಿಮ್ಮ ಅದ್ಭುತ ಗೆಲುವಿಗೆ ಅಭಿನಂದನೆಗಳು. ಮಾ ಸಂಘವನ್ನು ಎತ್ತರಕ್ಕೆ ಕೊಂಡೊಯ್ಯುವ ಎಲ್ಲ ಶಕ್ತಿಗಳು ನಿಮಗೆ ಲಭಿಸಲಿ. ನಿಮಗೆ ಶುಭಾಶಯ. ಮಾ ಸಂಘಕ್ಕೆ ರಾಜೀನಾಮೆ ನೀಡಲು ನಾನು ನಿಶ್ಚಯಿಸಿದ್ದೇನೆ. ನನ್ನ ನಿರ್ಣಯವನ್ನು ನೀವು ಸ್ವೀಕರಿಸಿ. ಸದಸ್ಯನಾಗಿರದಿದ್ದರೂ ನಿಮಗೆ ನಾನು ಬೆಂಬಲ ನೀಡುತ್ತಿರುತ್ತೇನೆ. ಧನ್ಯವಾದಗಳು'' ಎಂದು ಸಂದೇಶ ಕಳಿಸಿದ್ದಾರೆ ಪ್ರಕಾಶ್ ರೈ.

ಪ್ರಕಾಶ್ ರೈ ಸಂದೇಶಕ್ಕೆ ಮಂಚು ಪ್ರತಿಕ್ರಿಯೆ
ಪ್ರಕಾಶ್ ರೈ ಸಂದೇಶಕ್ಕೆ ವಾಟ್ಸ್ಆಪ್ನಲ್ಲಿಯೇ ಪ್ರತಿಕ್ರಿಯಿಸಿರುವ ಮಂಚು ವಿಷ್ಣು, ''ಪ್ರೀತಿಯ ಅಂಕಲ್, ನಿಮ್ಮ ನಿರ್ಣಯದಿಂದ ನನಗೆ ಸಂತೋಶವಾಗಿಲ್ಲ. ನೀವು ನನಗಿಂತಲೂ ಬಹಳ ದೊಡ್ಡವರು, ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳೆಂಬುದು ಒಂದೇ ನಾಣ್ಯದ ಎರಡು ಮುಖಗಳು ಎಂಬುದು ನಿಮಗೆ ಗೊತ್ತಿಲ್ಲದ್ದೇನಲ್ಲ. ನೀವು ಭಾವುಕಗೊಂಡು ನಿರ್ಣಯಗಳನ್ನು ತೆಗೆದುಕೊಳ್ಳಬಾರದು ಎಂದು ನಾನು ಮನವಿ ಮಾಡುತ್ತೇನೆ. ನೀವು ನಮ್ಮ ಕುಟುಂಬದ ಮುಖ್ಯ ವ್ಯಕ್ತಿ. ನಮಗೆ ನಿಮ್ಮ ಐಡಿಯಾಗಳ ಅಗತ್ಯವಿದೆ. ನಾವು ಒಟ್ಟಿಗೆ ಕೆಲಸ ಮಾಡಬೇಕಿದೆ. ನನಗೆ ಈಗಲೇ ಪ್ರತಿಕ್ರಿಯೆ ನೀಡಬೇಕು ಎಂದೇನೂ ಇಲ್ಲ. ನಾನು ನಿಮ್ಮನ್ನು ಖಾಸಗಿಯಾಗಿ ಭೇಟಿಯಾಗುತ್ತೇನೆ. ಆಗ ನಾವು ಚರ್ಚಿಸೋಣ. ನಾನು ನಿಮ್ಮನ್ನು ಸದಾ ಪ್ರೀಸುತ್ತೇನೆ ಅಂಕಲ್. ದಯವಿಟ್ಟು ಆತುರದಲ್ಲಿ ಯಾವ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ'' ಎಂದಿದ್ದಾರೆ ಮಂಚು ವಿಷ್ಣು.

ಸೋತ ಬಳಿಕ ಪ್ರಕಾಶ್ ರೈ ಮಾತುಗಳು
ಸೋತ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಪ್ರಕಾಶ್ ರೈ, ''ಈ ಹಿಂದೆ ಎಂದೂ ನಡೆಯದ ರೀತಿಯಲ್ಲಿ ಮಾ ಚುನಾವಣೆ ನಡೆದಿದೆ. 650ಕ್ಕೂ ಹೆಚ್ಚು ಮಂದಿ ಮತ ಚಲಾವಣೆ ಮಾಡಿದ್ದಾರೆ. ಒಬ್ಬ ತೆಲುಗು ಮಗನನ್ನು ಮತದಾರರು ಆರಿಸಿದ್ದಾರೆ. ಮತದಾರರ ತೀರ್ಪನ್ನು ನಾನು ಗೌರವಿಸುತ್ತೇನೆ. ಮಂಚು ವಿಷ್ಣುಗೆ ಎಲ್ಲ ಒಳ್ಳೆಯದಾಗಲಿ'' ಎಂದು ಪ್ರಕಾಶ್ ರಾಜ್ ಹೇಳಿದರು. ಈ ಸಂದರ್ಭದಲ್ಲಿ ಅಲ್ಲಿಯೇ ಪಕ್ಕದಲ್ಲಿದ್ದ ಮಂಚು ವಿಷ್ಣು ಭಾವೋದ್ವೇಗಕ್ಕೆ ಒಳಗಾದರು. ಅವರನ್ನು ಆಲಂಗಿಸಿಕೊಂಡ ಪ್ರಕಾಶ್ ರೈ ಬೆನ್ನುತಟ್ಟಿ ಸಮಾಧಾನ ಮಾಡಿದರು. ಇವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮತದಾನ ನಡೆಯುವ ವೇಳೆಯೇ ಪ್ರಕಾಶ್ ರೈ ಹಾಗೂ ಮಂಚು ವಿಷ್ಣು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಾವು ಚೆನ್ನಾಗಿಯೇ ಇದ್ದೇವೆ ಎಂಬ ಸಂದೇಶ ನೀಡಿದ್ದರು.

ರಾಜೀನಾಮೆ ನೀಡುತ್ತಾರಾ ಪ್ರಕಾಶ್ ರೈ?
ಪ್ರಕಾಶ್ ರೈ ನಂಬರ್ ಅನ್ನು 'ಪ್ರಕಾಶ್ ರಾಜ್ ಅಂಕಲ್' ಎಂದು ಮಂಚು ವಿಷ್ಣು ಸೇವ್ ಮಾಡಿಕೊಂಡಿದ್ದಾರೆ. ಸೋತ ಬಳಿಕ ಚುನಾವಣಾ ದ್ವೇಷ ಮರೆತು ಶುಭ ಹಾರೈಸಿದ, ಧನ್ಯವಾದ ಹೇಳಿದ ಪ್ರಕಾಶ್ ರೈ ವ್ಯಕ್ತಿತ್ವಕ್ಕೆ ನೆಟ್ಟಿಗರು ಮಾರು ಹೋಗಿದ್ದಾರೆ. ಪ್ರಕಾಶ್ ರೈ ಸಂದೇಶಕ್ಕೆ ಮಂಚು ವಿಷ್ಣು ನೀಡಿರುವ ಪ್ರತಿಕ್ರಿಯೆಯೂ ನೆಟ್ಟಿಗರ ಹೃದಯ ಗೆದ್ದಿದೆ. ಸಂದೇಶದಲ್ಲಿ ಹೇಳಿರುವಂತೆ ಪ್ರಕಾಶ್ ರೈ ರಾಜೀನಾಮೆ ನೀಡುತ್ತಾರಾ ಅಥವಾ ಮಂಚು ವಿಷ್ಣು, ಪ್ರಕಾಶ್ ರೈ ಅವರ ಮನವೊಲಿಸಲು ಸಫಲರಾಗುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











