ಟಾಕ್ಸಿಕ್ ಫೇಕ್ ನ್ಯೂಸ್ ಪೆಡ್ಲರ್ಗಳಿಗೆ ಬಹುಭಾಷಾ ನಟ ಪ್ರಕಾಶ್ ರಾಜ್ ತಿರುಗೇಟು
ನಟ ಪ್ರಕಾಶ್ ರಾಜ್ ತಮ್ಮ ಅದ್ಭುತ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹೀಗೆ ಎಲ್ಲಾ ಭಾಷೆಗಳಲ್ಲಿ ಬಹುಬೇಡಿಕೆಯ ಪೋಷಕ ಕಲಾವಿದನಾಗಿ ಗುರ್ತಿಸಿಕೊಂಡಿದ್ದಾರೆ. ಕಳೆದ ವರ್ಷ 6 ಸಿನಿಮಾಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ವರ್ಷ ಕೂಡ ನಾಲ್ಕೈದು ಸಿನಿಮಾ ಅವರ ಕೈಯಲ್ಲಿದೆ.
ಅರ್ಜುನ್ ಸರ್ಜಾ ನಿರ್ದೇಶನದ 'ಸೀತಾ ಪಯಣ' ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಕಾಶ್ ರಾಜ್ ಮಿಂಚಿದ್ದಾರೆ. ಈ ವಾರ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ತಮಿಳಿನ 'ಜನ ನಾಯಗನ್', 'ಡಕಾಯಿತ್' ಹೀಗೆ ಅವರು ನಟಿಸಿರುವ ಸಿನಿಮಾಗಳು ಬಿಡುಗಡೆ ಸಜ್ಜಾಗಿವೆ. ಇದೆಲ್ಲದರ ನಡುವೆ ಪ್ರಭಾಸ್ ನಟನೆಯ 'ಸ್ಪಿರಿಟ್', ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾಗಳಲ್ಲಿ ಪ್ರಕಾಶ್ ರಾಜ್ ನಟಿಸುತ್ತಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಪ್ರಭಾಸ್ ಜೊತೆಗೆ ಮುಖ್ಯವಾದ ಪಾತ್ರದಲ್ಲಿ ಪ್ರಕಾಶ್ ರಾಜ್ ನಟಿಸುತ್ತಿದ್ದಾರೆ. ಆದರೆ ಇದ್ದಕ್ಕಿದಂತೆ ಅವರು ಚಿತ್ರತಂಡದಿಂದ ಹೊರಬಂದಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಇದೀಗ ಸ್ವತಃ ಪ್ರಕಾಶ್ ರಾಜ್ ಈ ಬಗ್ಗೆ ಪ್ರತಿಕ್ರಿಯಿಸಿ ತಿರುಗೇಟು ನೀಡಿದ್ದಾರೆ. ಇಂತಹ ಸುಳ್ಳು ಸುದ್ದಿ ಹರಡುವುದು ಬಿಟ್ಟು ನಿಮ್ಮ ಕೆಲಸ ನೋಡ್ಕೊಳಿ ಎಂದು ತಿರುಗೇಟು ಕೊಟ್ಟಿದ್ದಾರೆ.
"ಟಾಕ್ಸಿಕ್ ಫೇಕ್ ನ್ಯೂಸ್ ಪೆಡ್ಲರ್ಗಳಿಗೆ 'ಸ್ಪಿರಿಟ್' ಸಿನಿಮಾ ಬಗ್ಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ನಾನು ನಟಿಸುವ ದೃಶ್ಯಗಳ ಚಿತ್ರೀಕರಣ ಇನ್ನು ಶುರುವಾಗಿಲ್ಲ. ನಿಮ್ಮ ವಾಟ್ಸಪ್ ಫ್ಯಾಕ್ಟರಿಗಳಲ್ಲಿ ಊಹಾಪೋಹದ ಕಥೆಗಳನ್ನು ಸೃಷ್ಟಿಸುತ್ತಿದ್ದೀರಾ. ಚೆನ್ನಾಗಿ ಬುದ್ಧಿ ಕಲಿತು ಉದ್ಧಾರ ಆಗಿ" ಎಂದು ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಸ್ಪಿರಿಟ್' ಚಿತ್ರದ ಆಡಿಯೋ ಟೀಸರ್ ಬಿಡುಗಡೆ ಆಗಿತ್ತು. ಪ್ರಭಾಸ್ ಹಾಗೂ ಪ್ರಕಾಶ್ ರಾಜ್ ಹಿನ್ನೆಲೆ ಧ್ವನಿ ಮಾತ್ರ ಅದರಲ್ಲಿತ್ತು. ಇಬ್ಬರ ನಡುವಿನ ಸಂಭಾಷಣೆಯ ಝಲಕ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಮಾಜಿ ಐಪಿಎಸ್ ಅಧಿಕಾರಿಯ ಪಾತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಅದೇ ರೀತಿ ಜೈಲರ್ ಆಗಿ ಪ್ರಕಾಶ್ ರಾಜ್ ಖಡಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬರೀ ಆಡಿಯೋ ಟೀಸರ್ ಗಮನ ಸೆಳೆದಿತ್ತು.
'ಸ್ಪಿರಿಟ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಬೇಕಿತ್ತು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಆಕೆ ಚಿತ್ರದಿಂದ ಹೊರ ನಡೆದಿದ್ದರು. ತೃಪ್ತಿ ದಿಮ್ರಿ ನಾಯಕಿಯಾಗಿ ಆಯ್ಕೆ ಆಗಿರುವುದಾಗಿ ಚಿತ್ರತಂಡ ಘೋಷಿಸಿತ್ತು. ಕಾಂಚನಾ ಮತ್ತು ವಿವೇಕ್ ಒಬೆರಾಯ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಭದ್ರಕಾಳಿ ಪಿಕ್ಚರ್ಸ್ ಹಾಗೂ ಟಿ-ಸೀರೀಸ್ ಸಂಸ್ಥೆ ಜಂಟಿಯಾಗಿ 'ಸ್ಪಿರಿಟ್' ಸಿನಿಮಾ ನಿರ್ಮಿಸುತ್ತಿವೆ.
ಬಹುಕೋಟಿ ವೆಚ್ಚದಲ್ಲಿ 'ಸ್ಪಿರಿಟ್' ಸಿನಿಮಾ ನಿರ್ಮಾಣವಾಗಲಿದೆ. 'ದಿ ರಾಜಾಸಾಬ್' ಬಳಿಕ ಪ್ರಭಾಸ್ 'ಫೌಜಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಂದೆ 'ಸ್ಪಿರಿಟ್' ಹಾಗೂ 'ಸಲಾರ್- 2' ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರಬೇಕಿದೆ.
'ಅನಿಮಲ್' ರೀತಿಯ ಬ್ಲಾಕ್ಬಸ್ಟರ್ ಹಿಟ್ ಕೊಟ್ಟ ಸಂದೀಪ್ ರೆಡ್ಡಿ ವಂಗಾ 'ಸ್ಪಿರಿಟ್' ಚಿತ್ರದ ಮೂಲಕ ಬಾಕ್ಸಾಫೀಸ್ ಶೇಕ್ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಘಟಾನುಘಟಿ ಕಲಾವಿದರು, ತಂತ್ರಜ್ಞರ ತಂಡವನ್ನು ಕಟ್ಟಿಕೊಂಡು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. 'ಅರ್ಜುನ್ ರೆಡ್ಡಿ', 'ಕಬೀರ್ ಸಿಂಗ್' ಹಾಗೂ 'ಅನಿಮಲ್' ಬಳಿಕ ವಂಗಾ ನಿರ್ದೇಶನದ 4ನೇ ಸಿನಿಮಾ ಇದು. ಚಿತ್ರದಲ್ಲಿ ಪ್ರಕಾಶ್ ರಾಜ್ ಪಾತ್ರ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











