ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ; ನಾನು ಬ್ಯುಸಿ, ಸ್ವಲ್ಪ ತಾಳ್ಮೆಯಿಂದಿರಿ ಎಂದ ಪ್ರಕಾಶ್ ರಾಜ್
ಬಹುಭಾಷಾ ನಟ ಪ್ರಕಾಶ್ ರಾಜ್ ವಿವಾದಗಳಿಂದಲೂ ಪದೇ ಪದೆ ಸುದ್ದಿ ಆಗುತ್ತಾರೆ. ಇತ್ತೀಚೆಗೆ ಶ್ರೀರಾಮ, ಲಕ್ಷ್ಮಣರ ಬಗ್ಗೆ ನೀಡಿದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಕೂಡ ದಾಖಲಾಗಿದೆ. ಈ ಬಗ್ಗೆ ವೀಡಿಯೋ ಮಾಡಿ ಅವರು ಪ್ರತಿಕ್ರಿಯಿಸಿದ್ದಾರೆ. ಈಗ ನಾನು ಬ್ಯುಸಿ ಸ್ವಲ್ಪ ತಾಳ್ಮೆಯಿಂದ ಇರಿ ಎಂದಿದ್ದಾರೆ.
ಕೇರಳದ ಸಾಹಿತ್ಯ ಉತ್ಸವದಲ್ಲಿ ರಾಮಾಯಣದ ಕುರಿತು ನಟ ಪ್ರಕಾಶ್ ರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ರಾಮ ಉತ್ತರ ಭಾರತದವನು. ರಾವಣನು ದಕ್ಷಿಣ ಭಾರತದ ಬುಡಕಟ್ಟು ಜನಾಂಗದವನು ಎಂದು ಪ್ರಕಾಶ್ ರಾಜ್ ಮಾತು ಆರಂಭಿಸಿದ್ದರು. ಅವರಿಬ್ಬರ ನಡುವಿನ ಸಂಘರ್ಷವು ಸೀತೆಯ ಅಪಹರಣ ಅಥವಾ ಧರ್ಮ ಸ್ಥಾಪನೆಗಿಂತ ಹೆಚ್ಚಾಗಿ ರಾಮನು ಹಣ್ಣುಗಳನ್ನು ಕದ್ದ ಕಾರಣದಿಂದಲೇ ಪ್ರಾರಂಭವಾಯಿತು ಎನ್ನುವ ಅರ್ಥದಲ್ಲಿ ಹೇಳಿದ್ದರು. ಈ ಹೇಳಿಕೆ ಹಿಂದೂ ಸಮುದಾಯ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀರಾಮನ ಬಗ್ಗೆ ಪ್ರಕಾಶ್ ರಾಜ್ ಅವಹೇಳನದ ವಿರುದ್ಧ ಭಕ್ತರು ಕೆಂಡಾಮಂಡಲವಾಗಿದ್ದಾರೆ. ಇದೇ ಕಾರಣಕ್ಕೆ ಪ್ರಕಾಸ್ ರಾಜ್ ವಿರುದ್ಧ ದೂರು ದಾಖಲಿಸಿರುವುದಾಗಿ ವರದಿಯಾಗಿದೆ.

ವಿವಾದ ದೊಡ್ಡದಾಗುತ್ತಿದ್ದಂತೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ. "ಸಮಾವೇಶವೊಂದರಲ್ಲಿ ನಾನು ನೀಡಿದ ಹೇಳಿಕೆಯಲ್ಲಿ ಒಂದು ಹೇಳಿಕೆಯನ್ನು ಬಳಸಿ ಅದನ್ನು ತಿರುಚಲಾಗಿದೆ. ನಾನು ಅವತಾರಪುರುಷ ಶ್ರೀರಾಮನ ಬಗ್ಗೆ ವ್ಯಂಗ್ಯ ಮಾಡಿದ್ದೀನಿ, ಹಿಂದೂ ಧರ್ಮವನ್ನು ನೋಯಿಸುವಂತಹ ಹೇಳಿಕೆ ನೀಡಿದ್ದೀನಿ ಎಂದು ಕೆಲವರು ಹೇಳುತ್ತಿದ್ದಾರೆ. ಎಲ್ಲಾ ಧರ್ಮವನ್ನು ಎಲ್ಲರನ್ನು ಪ್ರೀತಿಸುವ ನನಗೆ ಆ ಅವಶ್ಯಕತೆ ಇಲ್ಲ" ಎಂದಿದ್ದಾರೆ.
ಧರ್ಮ, ಧರ್ಮ ಉನ್ಮಾದವನ್ನು ಮುಂದಿಟ್ಟುಕೊಂಡು ಅಸಹ್ಯವಾದ ರಾಜಕೀಯ ಮಾಡುವವರನ್ನು ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಹಿಂದೂ ವಿರೋಧಿ ಎಂದು ಬಿಂಬಿಸಲು ಕೆಲವರು ಬಯಸುತ್ತಿದ್ದಾರೆ. ಅವರ ನೋವು ನನಗೆ ಅರ್ಥವಾಗುತ್ತದೆ ಎಂದು ಪ್ರಕಾಶ್ ರಾಜ್ ಕುಟುಕಿದ್ದಾರೆ. "ತಮಿಳುನಾಡು ಚುನಾವಣೆ ಪ್ರಚಾರ ಮುಗಿಸಿ ನಾನು ತೋಟದ ಕೆಲಸದಲ್ಲಿದ್ದೀನಿ. ಮಳೆ ಇಲ್ಲದೇ ಬಿಸಿಲಿನಲ್ಲಿ ಗಿಡ ಮರಗಳು ಒಣಗುತ್ತಿವೆ. ಅದನ್ನು ನೋಡಬೇಕು. ಆದಷ್ಟು ಬೇಗ ವಾಪಸ್ ಬರ್ತೀನಿ. ಅಲ್ಲಿಯವರೆಗೆ ನೀವು ನಿಮ್ಮ ಕೆಲಸ ನೋಡ್ಕೊತ್ತೀರಾ, ಇಲ್ಲ ಹೀಗೆ ಕಿರುಚಾಡುತ್ತೀರಾ? ಅದು ನಿಮ್ಮಿಷ್ಟ" ಎಂದು ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ.
ನಾನು ನಾಸ್ತಿಕ ಎಂದು ಹೇಳಿಕೊಳ್ಳುವ ಪ್ರಕಾಶ್ ರಾಜ್ ಇತ್ತೀಚೆಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಗಲಿದ ತಾಯಿಯ ಅಂತ್ಯಕ್ರಿಯೆ ಮಾಡಿದ್ದರು. ಈ ಬಗ್ಗೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಅದಕ್ಕೆ ಪ್ರಕಾಶ್ ರಾಜ್ ಕೂಡ ಪ್ರತಿಕ್ರಿಯೆ ನೀಡಿದ್ದರು. "ಹೌದು.. ನಾನು ದೇವರನ್ನು ನಂಬುವುದಿಲ್ಲ .. ಆದರೆ ನನ್ನ ತಾಯಿ ತನ್ನ ದೇವರನ್ನು ನಂಬಿದ್ದಳು. ಅವಳ ನಂಬಿಕೆಯ ಪ್ರಕಾರ ಸಮಾಧಿ ಮಾಡುವ ಹಕ್ಕನ್ನು ನಿರಾಕರಿಸಲು ನಾನು ಯಾರು? ಇದು ನಾವು ಒಬ್ಬರಿಗೊಬ್ಬರು ನೀಡುವ ಮೂಲಭೂತ ಗೌರವ.. ದ್ವೇಷಿಸುವವರು ಇದನ್ನು ಅರ್ಥಮಾಡಿಕೊಳ್ಳುತ್ತೀರಾ?" ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದರು. ಇದೇ ಮಾತನ್ನು ಕೆಲವರು ಪ್ರಕಾಶ್ ರಾಜ್ ಅವರಿಗೆ ತಿರುಗಿಸಿ ಕೇಳಿದ್ದರು. ಅವರವರ ಧರ್ಮ ಅವರ ನಂಬಿಕೆ. ನಿಮಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದಿದ್ದರೆ ಬಿಟ್ಟುಬಿಡಿ ಎಂದಿದ್ದರು.
ಕನ್ನಡದ 'ಫಾದರ್' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ ಪ್ರಕಾಶ್ ರಾಜ್. ತಮಿಳಿನಲ್ಲಿ ವಿಜಯ್ ನಟನೆಯ 'ಜನ ನಾಯಗನ್' ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಮುಂದೆ ಪ್ರಭಾಸ್ ನಟನೆಯ 'ಸ್ಪಿರಿಟ್', ಮಹೇಶ್ ಬಾಬು ನಟನೆಯ 'ವಾರಣಾಸಿ' ಸೇರಿ ಒಂದಷ್ಟು ಸಿನಿಮಾಗಳು ಅವರ ಕೈಯಲ್ಲಿವೆ. ತಮಿಳುನಾಡು ಚುನಾವಣೆ ಪ್ರಚಾರದಲ್ಲಿ ಕೂಡ ಅವರು ಭಾಗಿ ಆಗಿದ್ದರು. ಡಿಎಂಕೆ ಅಭ್ಯರ್ಥಿಗಳ ಪರ ಮತಯಾಚಿಸಿದ್ದರು.


Click it and Unblock the Notifications