'SSMB29' ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಲುಕ್ ರಿವೀಲ್; ರಾಜಮೌಳಿ ಏನ್ ಗುರು ಇದೆಲ್ಲಾ?
ಮಹೇಶ್ ಬಾಬು ಹಾಗೂ ರಾಜಮೌಳಿ ಕೈಜೋಡಿಸಿರುವ ಬಹುನಿರೀಕ್ಷಿತ ಸಿನಿಮಾ 'SSMB29'. ಬಹಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾಂಕ ಚೋಪ್ರಾ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.
ಇತ್ತೀಚೆಗೆ ಚಿತ್ರದ ವಿಲನ್ 'ಕುಂಭ'ನನ್ನು ಚಿತ್ರತಂಡ ಪರಿಚಯಿಸಿತ್ತು. ವ್ಹೀಲ್ ಚೇರ್ನಲ್ಲಿ ಕೂತ ಕುಂಭನನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದರು. ಪೃಥ್ವಿರಾಜ್ ಸುಕುಮಾರನ್ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪೋಸ್ಟರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಮಂದಾಕಿನಿ ಎಂಬ ಪಾತ್ರದಲ್ಲಿ ಪ್ರಿಯಾಂಚ ಚೋಪ್ರಾ ನಟಿಸುತ್ತಿರುವುದಾಗಿ ಘೋಷಿಸಿದ್ದಾರೆ. ಪೋಸ್ಟರ್ ಸಮೇತ ಆಕೆಯ ಪಾತ್ರ ಪರಿಚಯಿಸಿದ್ದಾರೆ.

ಪ್ರಿಯಾಂಕ ಚೋಪ್ರಾ ಹಳದಿ ಬಣ್ಣದ ಸೀರೆ ಉಟ್ಟು ಗನ್ ಹಿಡಿದು ಗುಂಡು ಹಾರಿಸುತ್ತಿರುವದನ್ನು ಪೋಸ್ಟರ್ನಲ್ಲಿ ನೋಡಬಹುದು. ಇನ್ನು ಕುಂಭ ಹಾಗೂ ಮಂದಾಕಿನಿ ಎಂಬ ಹೆಸರುಗಳು ಬಹಳ ಕುತೂಹಲ ಮೂಡಿಸಿದೆ. ಈ ಚಿತ್ರದ ಕತೆಗೂ ನಮ್ಮ ಪುರಾಣಗಳಿಗೆ ಏನಾದರೂ ಲಿಂಕ್ ಇದ್ಯಾ ಎನ್ನುವ ಚರ್ಚೆ ಹುಟ್ಟಾಕ್ಕಿದೆ. ಈಗಾಗಲೇ ಕೆಲವರು ಚಿತ್ರದ ಕತೆ ಏನಿರಬಹುದು ಎಂದು ಊಹಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸಂಜೆಯಿಂದ ಟ್ವಿಟರ್ನಲ್ಲಿ ಅಭಿಮಾನಿಗಳ ಜೊತೆ ಪ್ರಿಯಾಂಕ ಚೋಪ್ರಾ ಚಿಟ್ಚಾಟ್ ನಡೆಸುತ್ತಿದ್ದರು. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಬಂದಿದ್ದರು. ಬಳಿಕ ದಿಢೀರನೆ ಪೋಸ್ಟರ್ ರಿಲೀಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. "ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಿನಿಮಾವನ್ನು ಪುನರ್ ವ್ಯಾಖ್ಯಾನಿಸಿದ ಮಹಿಳೆ. ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾಗೆ ಮತ್ತೆ ಸ್ವಾಗತ. ಮಂದಾಕಿನಿ ನಿನ್ನ ವಿಭಿನ್ನ ಶೇಡ್ಗಳನ್ನು ಜಗತ್ತು ವೀಕ್ಷಿಸಲು ಕಾಯುತ್ತಿದೆ" ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.
ಮಹೇಶ್ ಬಾಬು ಕೂಡ ಪೋಸ್ಟರ್ ಹಂಚಿಕೊಂಡು ಪ್ರಿಯಾಂಕ ಚೋಪ್ರಾ ಅವರನ್ನು ತಂಡಕ್ಕೆ ಸ್ವಾಗತಿಸಿದ್ದಾರೆ. ಮೊದಲಿನಿಂದಲೂ SSMB29 ಸಿನಿಮಾ ಬಗ್ಗೆ ರಾಜಮೌಳಿ ಕುತೂಹಲ ಮೂಡಿಸುತ್ತಾ ಬರ್ತಿದ್ದಾರೆ. ನವೆಂಬರ್ 15ರಂದು ಅದ್ಧೂರಿ ಈವೆಂಟ್ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಸದ್ಯಕ್ಕೆ ಚಿತ್ರದ ಕಥೆ ಏನು ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ.
ಅಭಿಮಾನಿಗಳು ತಮ್ಮದೇ ಕೋನದಲ್ಲಿ ಕಥೆ ಊಹಿಸಿಕೊಂಡು ಥ್ರಿಲ್ಲಾಗುತ್ತಿದ್ದಾರೆ. ಮಂದಾಕಿನಿ ಅಂದ್ರೆ ಗಂಗೆಯ ಮತ್ತೊಂದು ಹೆಸರು. ಹಾಗಾಗಿ ಶಿವನ ಕಥೆಗೂ ಈ ಚಿತ್ರಕ್ಕೂ ಏನೋ ನಂಟಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮಹೇಶ್ ಬಾಬು ಹುಟ್ಟುಹಬ್ಬದ ದಿನ ಶಿವನ ಲಾಕೆಟ್ ಹಾಕಿಕೊಂಡಿರುವ ಪೋಸ್ಟರ್ ರಿಲೀಸ್ ಆಗಿತ್ತು. ರುದ್ರ, ಮಂದಾಕಿನಿ, ಕುಂಭ ಹೀಗೆ 3 ಪಾತ್ರಗಳ ಸುತ್ತಾ ಕಾಲ್ಪನಿಕ ಕಥೆಯನ್ನು ಹೆಣೆಯುತ್ತಿದ್ದಾರೆ ಎನ್ನುವುದು ಕೆಲವರ ವಾದ. ಇದು ದೇಶ ವಿದೇಶಗಳಲ್ಲಿ ನಡೆಯುವ ಕಥೆ. ಹಾಗಾಗಿ ನಿರೀಕ್ಷೆ ಹೆಚ್ಚಿದೆ.
ಚಿತ್ರದ ಟೈಟಲ್ ಇನ್ನು ರಿವೀಲ್ ಆಗಿಲ್ಲ. ಇದೇ ಭಾನುವಾರ ಅದಕ್ಕೆ ಉತ್ತರ ಸಿಗಲಿದೆ. ಆದರೆ ಗರುಡ, ವಾರಣಾಸಿ, ಸಂಚಾರಿ, ಮಹಾರಾಜ ಹೀಗೆ ಹಲವು ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇನ್ನು ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಹಾಲಿವುಡ್ ಸಂಸ್ಥೆಯ ಜೊತೆ ಸಿನಿಮಾ ಪ್ರಚಾರ ಹಾಗೂ ವಿತರಣೆಗೆ ಒಪ್ಪಂದ ಮಾಡಿಕೊಳ್ಳಲಾಗ್ತಿದೆ. ಆ ಮೂಲಕ ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವ ಲೆಕ್ಕಾಚಾರ ಶುರುವಾಗಿದೆ.
ಭಾನುವಾರ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭಾರೀ ಈವೆಂಟ್ ಪ್ಲ್ಯಾನ್ ಆಗಿದೆ. ಜಿಯೋ ಹಾಟ್ಸ್ಟರ್ನಲ್ಲಿ ಅದು ಲೈವ್ ಸ್ಟ್ರೀಮಿಂಗ್ ಆಗಲಿದೆ. ಇಡೀ ಚಿತ್ರತಂಡ ಅಲ್ಲಿ ಹಾಜರಾಗಲಿದೆ. ಟೀಸರ್ ಕೂಡ ಬಿಡುಗಡೆ ಮಾಡುವ ಪ್ತಯತ್ನ ಶುರುವಾಗಿದೆ. ಅದಕ್ಕಾಗಿ ಭಾರೀ ಎಲ್ಇಡಿ ಸ್ಕ್ರೀನ್ ಹಾಕಿ ಸಿದ್ಧತೆ ನಡೆಸಿದ್ದಾರೆ.


Click it and Unblock the Notifications











