'ಏಜೆಂಟ್' ಸಿನಿಮಾ ಸೋಲು ಒಪ್ಪಿಕೊಂಡು ಪ್ರೇಕ್ಷಕರ ಕ್ಷಮೆ ಕೇಳಿದ ನಿರ್ಮಾಪಕ: ನೆಟ್ಟಿಗರ ಮೆಚ್ಚುಗೆ
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಕಲಾವಿದರ ಸಂಭಾವನೆ, ಸಿನಿಮಾ ಕಲೆಕ್ಷನ್ ಬಗ್ಗೆ ಖಚಿತ ಮಾಹಿತಿ ಸಿಗಲ್ಲ. ಎಲ್ಲಾ ಬರೀ ಅಂತೆಕಂತೆ ಸುದ್ದಿನೇ ಹೆಚ್ಚು ಸದ್ದು ಮಾಡುತ್ತದೆ. ಒಂದೊಮ್ಮೆ ಸಿನಿಮಾ ಗೆದ್ರೆ ರಾಜಾರೋಷವಾಗಿ ಹೇಳಿಕೊಳ್ಳುತ್ತಾರೆ. ಸೋತರೆ ಮಾತ್ರ ಸೈಲೆಂಟ್ ಆಗಿಬಿಡುತ್ತಾರೆ. ಸಿನಿಮಾ ಸೋತಿದ್ದರೂ ಸೂಪರ್ ಹಿಟ್ ಎಂದು ಬಡಾಯಿ ಕೊಚ್ಚಿಕೊಳ್ಳುವವರೇ ಇಲ್ಲಿ ಹೆಚ್ಚು. ಆದರೆ ಇತ್ತೀಚೆಗೆ ಕೆಲವರು ಸೋಲನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಅಖಿಲ್ ಅಕ್ಕಿನೇನಿ ಅಭಿನಯದ ತೆಲುಗಿನ 'ಏಜೆಂಟ್' ಸಿನಿಮಾ ಕಳೆದ ವಾರ ರಿಲೀಸ್ ಆಗಿತ್ತು. ಮೊದಲ ಪ್ರದರ್ಶನದಿಂದಲೇ ಸಿನಿಮಾ ಬಗ್ಗೆ ನೆಗೆಟಿವ್ ಟಾಕ್ ಶುರುವಾಯಿತು. ಅದ್ಯಾವಮಟ್ಟಿಗೆ ಅಂದ್ರೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಚಿತ್ರವನ್ನು ಟ್ರೋಲ್ ಮಾಡುತ್ತಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಸುರೇಂದರ್ ರೆಡ್ಡಿ ಈ ಬಾರಿ ಮುಗ್ಗರಿಸಿದ್ಧಾರೆ. ಭಾರೀ ವೆಚ್ಚದಲ್ಲಿ ನಿರ್ಮಾಣವಾಗಿದ್ದ 'ಏಜೆಂಟ್' ಸಿನಿಮಾ ಹೇಳ ಹೆಸರಿಲ್ಲದಂತೆ ನೆಲಕಚ್ಚಿದೆ. ಒಂದು ವಾರ ಪೂರೈಸುವುದಕ್ಕು ಮೊದ್ಲೆ ಚಿತ್ರವನ್ನು ಥಿಯೇಟರ್ಗಳಿಂದ ತೆಗೆಯುವಂತಾಗಿದೆ.

ಸ್ಪೈ ಆಕ್ಷನ್ ಥ್ರಿಲ್ಲರ್ 'ಏಜೆಂಟ್' ಚಿತ್ರವನ್ನು ರಾಮ್ಬ್ರಹ್ಮಂ ಸುಂಕರ, ಅನಿಲ್ ಸುಂಕರ ಹಾಗೂ ಪತಿ ದೀಪಾ ರೆಡ್ಡಿ ಜಂಟಿಯಾಗಿ ನಿರ್ಮಾಣ ಮಾಡಿದ್ದರು. 50ರಿಂದ 60 ಕೋಟಿ ರೂ. ವೆಚ್ಚದಲ್ಲಿ ಚಿತ್ರವನ್ನು ತೆರೆಗೆ ತರಲಾಗಿತ್ತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಅಖಿಲ್ 'ಏಜೆಂಟ್' ಆಗಿ ಎದ್ದು ಬರ್ತಾರೆ ಅಂತ್ಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಗಿದೆ. ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದೆ. 'ಏಜೆಂಟ್' ಸಿನಿಮಾ ಸೋಲನ್ನು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅನಿಲ್ ಸುಂಕರ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಪ್ರೇಕ್ಷಕರ ಬಳಿ ಕ್ಷಮೆಯನ್ನು ಕೇಳಿದ್ದಾರೆ.
ಅನಿಲ್ ಸುಂಕರ ಟ್ವೀಟ್ ಮಾಡಿ "ಏಜೆಂಟ್ ಸಿನಿಮಾ ಸೋನಿನ ಹೊಣೆಯನ್ನು ನಾವೇ ಹೊತ್ತುಕೊಳ್ಳುತ್ತೇವೆ. ಇದು ದೊಡ್ಡ ದೊಡ್ಡ ಟಾಸ್ಕ್ ಅಂತ ಗೊತ್ತಿದ್ದರೂ ಸಾಧಿಸುವ ಛಲದಿಂದ ಸಿನಿಮಾ ಮಾಡಲು ಮುಂದಾಗಿದ್ದೆವು. ಆದರೆ ಅದು ಫೇಲ್ ಆಗಿದೆ. ಸ್ಕ್ರಿಪ್ಟ್ ಸಂಪೂರ್ಣವಾಗಿ ಸಿದ್ಧವಾಗುವ ಮುನ್ನ ಶೂಟಿಂಗ್ ಆರಂಭಿಸಿ ತಪ್ಪು ಮಾಡಿದ್ದೆವು. ಇದರ ಜೊತೆ ಶೂಟಿಂಗ್ ಸಮಯದಲ್ಲಿ ಕೊರೊನಾ ಹಾವಳಿ ಶುರುವಾಯಿತು. ಇದರೊಟ್ಟಿಗೆ ಮತ್ತಷ್ಟು ಸಮಸ್ಯೆ ಎದುರಾಯಿತು. ಆದರೆ ಸಿನಿಮಾ ಫಲಿತಾಂಶದ ವಿಚಾರದಲ್ಲಿ ನಾವು ಕುಂಟು ನೆಪ ಹೇಳಲ್ಲ"
"ಈ ದುಬಾರಿ ತಪ್ಪಿನಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆವು. ಭವಿಷ್ಯದಲ್ಲಿ ಇಂತಹ ತಪ್ಪು ಮತ್ತೆ ಆಗದಂತೆ ನೋಡಿಕೊಳ್ಳುತ್ತೇವೆ. ಮತ್ತೆ ಹೇಗೆ ವಾಪಸ್ ಬರ್ತೀವಿ ನೋಡ್ತಿರಿ. ಪ್ರೇಕ್ಷಕರು ನಮ್ಮ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿದ್ದರು. ಅವರಿಗೆ ನಿರಾಸೆ ಮಾಡಿದ್ದಕ್ಕೆ ಕ್ಷಮಿಸಿ. ಮುಂದೆ ಒಳ್ಳೆಯ ಸಿದ್ಧತೆ ಜೊತೆಗೆ ಒಳ್ಳೆ ರೀತಿಯಲ್ಲಿ ಸಿನಿಮಾ ಮಾಡಿ ತಪ್ಪು ಸರಿಪಡಿಸಿಕೊಳ್ಳುತ್ತೇವೆ" ಎಂದು ನಿರ್ಮಾಪಕರು ಭರವಸೆ ನೀಡಿದ್ಧಾರೆ. ಸದ್ಯ ಅನಿಲ್ ಸುಂಕರ ಟ್ವೀಟ್ ವೈರಲ್ ಆಗಿದ್ದು ಸತ್ಯ ಒಪ್ಪಿಕೊಂಡ ನಿರ್ಮಾಪಕ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

'ಏಜೆಂಟ್' ಚಿತ್ರದಲ್ಲಿ ರಾಮಕೃಷ್ಣ ಅಲಿಯಾಸ್ ರಾಕಿ ಪಾತ್ರದಲ್ಲಿ ಅಖಿಲ್ ನಟಿಸಿದ್ದಾರೆ. ಸಿಕ್ಸ್ಪ್ಯಾಕ್ ಮಾಡಿ ಖಡಕ್ ಲುಕ್ನಲ್ಲಿ ದರ್ಶನ ಕೊಟ್ಟಿದ್ದಾರೆ. ಮಲಯಾಳಂ ನಟ ಮೊಮ್ಮಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರಲಕ್ಷ್ಮಿ ಶರತ್ಕುಮಾರ್, ದೀನೂ ಮೌರಿಯಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಊವರ್ಶಿ ರೌಟೇಲಾ ಐಟಂ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ರಸೂಲ್ ಎಲ್ಲೋರ್ ರೆಡ್ಡಿ ಛಾಯಾಗ್ರಹಣ, ಹಿಪ್ಹಾಪ್ ತಮಿಳ ಸಂಗೀತ ಚಿತ್ರಕ್ಕಿದೆ.
ಸಿನಿಮಾ ಕಥೆ ಏನು ಅನ್ನುವುದನ್ನು ನೋಡುವುದಾದರೆ ದೇಶದ ಭದ್ರತೆಗಾಗಿ ನಿಯಮಿತಗೊಂಡ ರೀಸರ್ಚ್ ಅನಾಲಿಸಿಸ್ ವಿಂಗ್(ರಾ)ದಲ್ಲಿ ಏಜೆಂಟ್ ಆಗಬೇಕು ಎನ್ನುವುದು ನಾಯಕ ರಾಮಕೃಷ್ಣ(ಅಖಿಲ್) ಕನಸು. ರಾ ಚೀಫ್ ಮಹಾದೇವ್(ಮೊಮ್ಮಟ್ಟಿ)ನ ತನ್ನ ಗುರು ಎಂದು ಆತ ಭಾವಿಸಿರುತ್ತಾನೆ. ತನ್ನ ಚಂಚಲ ಮನಸ್ಸು ಹಾಗೂ ದುಸ್ಸಾಹಸಗಳ ಕಾರಣಕ್ಕೆ ಹಲವು ಬಾರಿ ರಾ ಸಂಸ್ಥೆಯ ಕೆಲಸಕ್ಕೆ ರಿಜೆಕ್ಟ್ ಆಗುತ್ತಿರುತ್ತಾನೆ. ಮತ್ತೊಂದು ಕಡೆ ದೇಶವನ್ನು ಸರ್ವನಾಶ ಮಾಡಬೇಕು ಅಂದುಕೊಂಡಿರುವ ಗಾಡ್(ದೀನೂ ಮೋರಿಯಾ) ದುಷ್ಟ ಪ್ರಯತ್ನಗಳನ್ನು ತಡೆಯಲು ಮಹಾದೇವ್ ಪ್ರಯತ್ನಿಸುತ್ತಿರುತ್ತಾನೆ. ಇಂತಹ ಸಮಯದಲ್ಲಿ ಎಥಿಕಲ್ ಹ್ಯಾಕರ್ ಎಂದು ಹೇಳಿಕೊಂಡು ರಾ ಸಂಸ್ಥೆ ಸೇರುವ ರಾಮಕೃಷ್ಣ ಏನೆಲ್ಲಾ ಸಾಹಸ ಮಾಡ್ತಾನೆ ಎನ್ನುವುದು ಸಿನಿಮಾ ಕಥೆ.


Click it and Unblock the Notifications











