ಹಿಟ್ ಚಿತ್ರಗಳ ನಿರ್ಮಾಪಕ ಆರ್ಆರ್ ವೆಂಕಟ್ ನಿಧನ
ತೆಲುಗಿನ ಖ್ಯಾತ ನಿರ್ಮಾಪಕ, ಆರ್ಆರ್ ಮೂವಿ ಮೇಕರ್ಸ್ ಸಂಸ್ಥೆಯ ಮಾಲೀಕ ಆರ್ ಆರ್ ವೆಂಕಟ್ ಸೋಮವಾರ (ಸೆಪ್ಟೆಂಬರ್ 27) ಬೆಳಗ್ಗೆ ನಿಧನರಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವೆಂಕಟ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
54 ವರ್ಷದ ಆರ್ಆರ್ ವೆಂಕಟ್ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಯಲ್ಲಿದ್ದರು. ಆದರೆ ಅವರ ಆರೋಗ್ಯದ ವ್ಯತ್ಯಾಸ ಉಂಟಾದ ಹಿನ್ನೆಲೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ. ಆರ್ಆರ್ ವೆಂಕಟ್ ಅವರ ಅಕಾಲಿಕ ನಿಧನ ತೆಲುಗು ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ. ನಿರ್ಮಾಪಕನ ಸಾವಿಗೆ ಸಾಮಾಜಿಕ ತಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.
ಆರ್ಆರ್ ವೆಂಕಟ್ ತೆಲುಗಿನಲ್ಲಿ ಹಲವು ಹಿಟ್ ಚಿತ್ರಗಳನ್ನು ನಿರ್ಮಿಸಿದ್ದರು. ಜೂನಿಯರ್ ಎನ್ಟಿಆರ್ ನಟಿಸಿದ್ದ ಆಂಧ್ರವಾಲ (2004), ರವಿತೇಜ ನಟನೆಯ ಕಿಕ್ (2009) ಹಾಗೂ ಡಾನ್ ಸೀನು (2010), ಪ್ರೇಮ ಕಾವಲಿ (2010), ಲವ್ಲಿ (2012), ಢಮರುಕಂ (2012), ನಾಗ ಚೈತನ್ಯ ಅಭಿನಯದ ಆಟೋನಗರ್ ಸೂರ್ಯ (2013) ಮತ್ತು ಪೈಸಾ ಅಂತಹ ಚಿತ್ರಗಳಿಗೆ ಬಂಡವಾಳ ಹಾಕಿದ್ದರು.

ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ 'ಬಿಸಿನೆಸ್ಮ್ಯಾನ್' ಚಿತ್ರ ನಿರ್ಮಾಣ ಮಾಡಿರುವುದು ಸಹ ಇದೇ ಆರ್ಆರ್ ವೆಂಕಟ್. ಆರ್ ಆರ್ ಮೂವಿ ಮೇಕರ್ಸ್ ಸಂಸ್ಥೆಯಲ್ಲಿ ಅತಿ ದೊಡ್ಡ ಸಕ್ಸಸ್ ಕಂಡಿರುವ ಚಿತ್ರ ಇದಾಗಿದೆ.
ವಿಶೇಷ ಅಂದ್ರೆ ಎರಡು ಬಾಲಿವುಡ್ ಚಿತ್ರಗಳನ್ನು ಕೂಡ ಆರ್ಆರ್ ವೆಂಕಟ್ ನಿರ್ಮಿಸಿದ್ದರು. 'ಏಕ್ ಹಸಿನಾ ಥಿ' (2004) ಮತ್ತು 'ಜೇಮ್ಸ್' (2005) ಚಿತ್ರಕ್ಕೆ ಬಂಡವಾಳ ಹಾಕಿದ್ದರು. ನಂತರ ಹಾಲಿವುಡ್ನಲ್ಲಿ ಜೊನಾಥನ್ ಬೆನೆಟ್ ಮತ್ತು ಜೇಮಿ-ಲಿನ್ ಸಿಗ್ಲರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ 'ಡಿವೋರ್ಸ್ ಇನ್ವಿಟೇಶನ್' (2012) ಚಿತ್ರ ನಿರ್ಮಿಸಿದ್ದರು. ಇದು ಎಸ್.ವಿ.ಕೃಷ್ಣ ರೆಡ್ಡಿ ನಿರ್ದೇಶನದ ಶ್ರೀಕಾಂತ್ ಮತ್ತು ರಮ್ಯಾ ಕೃಷ್ಣನ್ ಅಭಿನಯದ 'ಅಹವಾಣಂ' (1997)ನ ಚಿತ್ರದ ಅಧಿಕೃತ ರಿಮೇಕ್ ಆಗಿತ್ತು.
ನಿರ್ಮಾಣದ ಜೊತೆ ಸಾಮಾಜಿಕ ಕಾರ್ಯಗಳಲ್ಲಿಯೂ ಆರ್ಆರ್ ವೆಂಕಟ್ ತೊಡಗಿಕೊಂಡಿದ್ದರು. ಇವರ ಸಾಮಾಜಿಕ ಕೆಲಸವನ್ನು ಗೌರವಿಸಿ 2011ರಲ್ಲಿ ಕೊಲಂಬೊ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ.


Click it and Unblock the Notifications











