ನಟರಿಗೆ ಕೋಟ್ಯಂತರ ಹಣ ವಂಚಿಸಿದ್ದ ಚಾಲಾಕಿ ನಿರ್ಮಾಪಕಿ ಬಂಧನ
ನಟರು, ಉದ್ಯಮಿಗಳು ಇತರೆ ಹಣವಂತರನ್ನು ವಂಚಿಸುತ್ತಿದ್ದ ನಿರ್ಮಾಪಕಿ ಒಬ್ಬರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ತೆಲುಗು ಚಿತ್ರರಂಗದ ಕೆಲವು ನಟರು, ಉದ್ಯಮಿಗಳಿಗೆ ನೂರಾರು ಕೋಟಿ ರೂಪಾಯಿ ಹಣವನ್ನು ಶಿಲ್ಪಾ ಹಾಗೂ ಆಕೆಯ ಪತಿ ವಂಚಿಸಿದ್ದಾರೆ ಎಂದು ನರ್ಸಿಂಗಾ ಪೊಲೀಸರು ಆರೋಪಿಸಿದ್ದಾರೆ.
ಹೆಚ್ಚು ಮೊತ್ತದ ಬಡ್ಡಿ ಹಣ ನೀಡುವುದಾಗಿ ಹೇಳಿ ಹಲವರಿಂದ ಕೋಟ್ಯಂತರ ಮೊತ್ತದ ಹಣ ಪಡೆದಿರುವ ಶಿಲ್ಪಾ ಹಣ ವಾಪಸ್ ಮಾಡಿಲ್ಲ. ದಿವ್ಯಾ ರೆಡ್ಡಿ ಎಂಬುವರಿಂದ ಒಂದೂವರೆ ಕೋಟಿ ರುಪಾಯಿ ಹಣ ಪಡೆದಿದ್ದ ಶಿಲ್ಪಾ ಆ ನಂತರ ಹಣ ವಾಪಸ್ಸು ಕೇಳಿದಾಗ ಬೌನ್ಸರ್ಗಳನ್ನು ಬಿಟ್ಟು ಬೆದರಿಸಿದ್ದಾರೆ. ಇದರಿಂದಾಗಿ ದಿವ್ಯಾ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದು ಶಿಲ್ಪಾ ಬಂಧನವಾಗಿದೆ.

ಶಿಲ್ಪಾ ಬಂಧನದ ಬಳಿಕ ಆಕೆ ತೆಲುಗು ಚಿತ್ರರಂಗದ ನಟರಿಗೂ ಮೋಸ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಒಬ್ಬ ಜನಪ್ರಿಯ ನಟ ಹಾಗೂ ಆತನ ಪತ್ನಿ ಸಹ ಶಿಲ್ಪಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಟರಿಂದ ಬಡ್ಡಿಗೆ ಹಾಗೂ ಉದ್ಯಮದಲ್ಲಿ ತೊಡಗಿಸಲು ಹಣ ಪಡೆದು ಶಿಲ್ಪಾ ವಂಚನೆ ಮಾಡಿದ್ದಾರೆ.
ಹಲವರಿಗೆ ಕೋಟ್ಯಂತರ ಹಣ ವಂಚನೆ ಮಾಡಿದ್ದ ಶಿಲ್ಪಾ ಭಾರಿ ಐಶಾರಾಮಿ ಜೀವನ ನಡೆಸುತ್ತಿದ್ದಳು. ಗಂಡಿಪೇಟ ಪ್ರದೇಶದಲ್ಲಿ ಸಿಗ್ನೇಚರ್ ವಿಲ್ಲಾದಲ್ಲಿ ದೊಡ್ಡ ಮನೆಯಲ್ಲಿ ವಾಸವಿದ್ದ ಶಿಲ್ಪಾ ಹಾಗೂ ಆಕೆಯ ಪತಿ ಶ್ರೀನಿವಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಲು ತೆರಳಿದಾಗ ಶಿಲ್ಪಾ ಪೊಲೀಸರಿಗೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.
ಶಿಲ್ಪಾ ಬಂಧನದ ಬಳಿಕ ಆಕೆಯಿಂದ ಹಣ ಪಡೆದಿರುವ ಹಲವರು ನರ್ಸಿಂಗಾ ಪೊಲೀಸರನ್ನು ಸಂಪರ್ಕ ಮಾಡಿದ್ದಾರೆ. ಅದರಲ್ಲಿ ಒಬ್ಬ ದೊಡ್ಡ ನಟ ಹಾಗೂ ಆತನ ಪತ್ನಿಯೂ ಸೇರಿದ್ದಾರೆ. ಅವರೂ ಸಹ ಶಿಲ್ಪಾ ವಿರುದ್ಧ ದೂರು ನೀಡಿದ್ದಾರೆ. ಕೇವಲ ಒಬ್ಬ ನಟ ಮಾತ್ರವಲ್ಲ ತೆಲುಗು ಚಿತ್ರರಂಗದಲ್ಲಿ ಐದಕ್ಕೂ ಹೆಚ್ಚು ನಟರಿಂದ ಹಣ ಪಡೆದು ಶಿಲ್ಪಾ ಮೋಸ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.


Click it and Unblock the Notifications











