Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ 100 ಕೋಟಿ, 200 ಕೋಟಿ ಗಳಿಸಿದೆ ಎಂದು ಸುಳ್ಳು ಹೇಳುತ್ತೇವೆ: ನಿರ್ಮಾಪಕ ತಪ್ಪೊಪ್ಪಿಗೆ
ಮುಂಚೆ ಸಿನಿಮಾಗಳು ಬಿಡುಗಡೆ ಆದ ಎಷ್ಟೋ ದಿನಗಳ ಬಳಿಕ ಯಶಸ್ವಿ 50 ದಿನ, ಯಶಸ್ವಿ 100 ದಿನ ಎಂಬ ಪೋಸ್ಟರ್ಗಳು ಗೋಡೆಗಳ ಮೇಲೆ ಕಾಣುತ್ತಿದ್ದವು. ಅವು ನಂತರ ಯಶಸ್ವಿ ಒಂದು ವಾರ, ಯಶಸ್ವಿ ಎರಡು ವಾರ ಎಂದು ಬದಲಾದವು, ಈಗ ಹಾಗಿಲ್ಲ ಸಿನಿಮಾ ಎಷ್ಟು ದಿನ ಓಡಿದೆ ಎಂಬ ಲೆಕ್ಕ ಬಿಟ್ಟು, ಎಷ್ಟು ಗಳಿಸಿದೆ ಎಂಬ ಲೆಕ್ಕಗಳನ್ನು ಪೋಸ್ಟರ್ಗಳ ಮೇಲೆ ಹಾಕಲಾಗುತ್ತದೆ.
ಸಿನಿಮಾ ಒಂದು ಬಿಡುಗಡೆ ಆಗಿ ಮಾರನೇಯ ದಿನವೇ ಕಲೆಕ್ಷನ್ಗಳ ಬಗ್ಗೆ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗುತ್ತದೆ. ಮೊದಲ ದಿನವೇ 10 ಕೋಟಿ ಕಲೆಕ್ಷನ್, ಮೊದಲ ದಿನವೇ 50 ಕೋಟಿ ಕಲೆಕ್ಷನ್ ಹೀಗೆ ಕಲೆಕ್ಷನ್ ಲೆಕ್ಕಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡುತ್ತವೆ.
ಹೆಚ್ಚೇನು ಅಭಿಮಾನಿಗಳನ್ನು ಹೊಂದಿರದ ಸಾಮಾನ್ಯ ನಟನ ಸಿನಿಮಾಗಳೂ ಸಹ ನಮ್ಮ ಸಿನಿಮಾ ಇಷ್ಟು ಕೋಟಿ ಕಲೆಕ್ಷನ್ ಮಾಡಿ, ಅಷ್ಟು ಕೋಟಿ ಕಲೆಕ್ಷನ್ ಮಾಡಿದೆ ಎಂದು ಮಾಧ್ಯಮಗಳ ಮುಂದೆಯೇ ಬಂದು ಹೇಳಿಕೊಳ್ಳುವುದು ಇತ್ತೀಚೆಗೆ ಕಾಣುತ್ತಿದೆ. ಹಾಗಾದರೆ ಬಿಡುಗಡೆ ಆದ ಸಿನಿಮಾಗಳೆಲ್ಲ ಯಶಸ್ವಿಯಾಗುತ್ತಿವೆ? ಅಥವಾ ಇವರು ಹೇಳುತ್ತಿರುವ ನೂರು ಕೋಟಿ, ಇನ್ನೂರು ಕೋಟಿ ಕಲೆಕ್ಷನ್ಗಳೆಲ್ಲ ನಿಜವೇ? ಖಂಡಿತ ಇಲ್ಲ. ಈ ಬಗ್ಗೆ ನಿರ್ಮಾಪಕರೊಬ್ಬರು ಅಪರೂಪಕ್ಕೆ ಸತ್ಯ ನುಡಿದಿದ್ದಾರೆ.
ಆಂಧ್ರಪ್ರದೇಶದಲ್ಲಿ ಈಗ ಚಿತ್ರಮಂದಿರಗಳ ಟಿಕೆಟ್ ವಿಚಾರವಾಗಿ ದೊಡ್ಡ ಚರ್ಚೆ ಏರ್ಪಟ್ಟಿದೆ. ಚಿತ್ರಮಂದಿರಗಳ ಟಿಕೆಟ್ ದರ ಹೆಚ್ಚಿಸಬೇಕು ಎಂಬುದು ಚಿತ್ರರಂಗದವರ ಒತ್ತಾಯ, ಆದರೆ ಸರ್ಕಾರ ಇದಕ್ಕೆ ಒಪ್ಪುತ್ತಿಲ್ಲ. ನಿಜವಾಗಿಯೂ ನಿರ್ಮಾಪಕರಿಗೆ ನಷ್ಟವಾಗುತ್ತಿದೆ ಎಂದು ಗೊತ್ತಾದರಷ್ಟೆ ಚಿತ್ರಮಂದಿರಗಳ ಟಿಕೆಟ್ ದರ ಹೆಚ್ಚಿಸುತ್ತೇವೆ ಎನ್ನುತ್ತಿದೆ. ಅದಕ್ಕಾಗಿ ಪೋರ್ಟಲ್ ಒಂದನ್ನು ಬಿಡುಗಡೆ ಮಾಡಲು ಸಿದ್ಧತೆ ಆರಂಭವಾಗಿದೆ. ಅದರ ಭಾಗವಾಗಿಯೇ ನಿರ್ಮಾಪಕರುಗಳ ಸಭೆಯೊಂದನ್ನು ಇತ್ತೀಚೆಗೆ ನಡೆಸಿತ್ತು.
ಜನರನ್ನು ಸೆಳೆಯಲು ನಾವು ಸುಳ್ಳು ಹೇಳುತ್ತೇವೆ: ನಿರ್ಮಾಪಕ
ಸಭೆಯಲ್ಲಿ ಭಾಗವಹಿಸಿದ್ದ ನಿರ್ಮಾಪಕ ಸಿ.ಕಲ್ಯಾಣ್ ಎಂಬುವರು, ಮಂತ್ರಿಗಳ ಎದುರು ಮಾತನಾಡುತ್ತಾ, ''ನಮ್ಮ ಸಿನಿಮಾ 200 ಕೋಟಿ ಗಳಿಸಿದೆ, 1000 ಕೋಟಿ ಗಳಿಸಿದೆ ಎಂದು ಹೇಳುತ್ತೇವೆ ಅದಕ್ಕೆ ಕಾರಣ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವುದೇ ಆಗಿರುತ್ತದೆಯೇ ಹೊರತು ಅದು ನಿಜವಾಗಿರುವುದಿಲ್ಲ. ಚಿತ್ರಮಂದಿರದಲ್ಲಿ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ ಅದನ್ನು ಮಿಸ್ ಮಾಡಿಕೊಳ್ಳಬಾರದು ಎಂಬ ಭಾವ ಪ್ರೇಕ್ಷಕರಲ್ಲಿ ಮೂಡಿಸಲು ನಾವು ನಮ್ಮ ಸಿನಿಮಾ ನೂರಾರು ಕೋಟಿ ಗಳಿಸಿದೆ ಎಂದು ಸುಳ್ಳು ಹೇಳುತ್ತೇವೆ'' ಎಂದಿದ್ದಾರೆ.
ವಿಡಿಯೋ ಸಖತ್ ವೈರಲ್ ಆಗಿದೆ
ಸಿ.ಕಲ್ಯಾಣ್ ಹೇಳುತ್ತಿರುವುದನ್ನು ಯಾರೊ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕಲ್ಯಾಣ್ ಮಾತನಾಡಿರುವ ವಿಡಿಯೋ ಬಹಳ ವೈರಲ್ ಆಗಿದ್ದು, ನೆಟ್ಟಿಗರು ಚಿತ್ರರಂಗದ ಸಾಚಾತನವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಪ್ರೇಕ್ಷಕರಿಗೆ ಸುಳ್ಳು ಹೇಳುವುದ್ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಸ್ಟಾರ್ ನಟರ ಸಿನಿಮಾಗಳ ಗಳಿಕೆಯ ರೆಕಾರ್ಡ್ಗಳೆಲ್ಲ ಬೋಗಸ್ ಎನ್ನುತ್ತಿದ್ದಾರೆ.
ನಮ್ಮಲ್ಲೂ ಕಲೆಕ್ಷನ್ ಬಗ್ಗೆ ಸುಳ್ಳು ಹೇಳಲಾಗುತ್ತದೆ
ಕನ್ನಡದಲ್ಲಿಯೂ, ನಮ್ಮ ಸಿನಿಮಾ ಕೆಲವೇ ದಿನಕ್ಕೆ ಇಷ್ಟು ಕೋಟಿ ಗಳಿಸಿತು ಎಂದು ಹೇಳಿಕೊಳ್ಳುವ ನಿರ್ಮಾಪಕರು ಹಲವರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೇ ಕೆಲವು ಬಾರಿ ಆಕ್ಷೇಪಗಳು, ಚರ್ಚೆಗಳು ಎದ್ದಿವೆ. ನಮ್ಮ ಸಿನಿಮಾ ಕೋಟ್ಯಂತರ ಗಳಿಸಿತು ಎಂದು ಹೇಳುವ ನಿರ್ಮಾಪಕರೇ ಕೊನೆಗೆ ಯಾವುದೋ ಸಂದರ್ಶನದಲ್ಲಿ ಚಿತ್ರರಂಗ ಲಾಭದಾಯಕವಲ್ಲ, ನಿರ್ಮಾಪಕರು ಬಡವರಾಗುತ್ತಿದ್ದಾರೆ, ಸರ್ಕಾರಗಳು ಸಬ್ಸಿಡಿ ಹೆಚ್ಚು ಮಾಡಬೇಕು, ನಟರು ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು ಎಂದು ಅವಲತ್ತುಕೊಂಡಿರುವ ಉದಾಹರಣೆಗಳೂ ಇವೆ.
ಸಿಎಂ ಜಗನ್ ಭರ್ಜರಿ ಪ್ಲ್ಯಾನ್
ಪ್ರಸ್ತುತ ಆಂಧ್ರ ಪ್ರದೇಶದಲ್ಲಿ ಟಿಕೆಟ್ ಬೆಲೆ ಕುರಿತು ದೊಡ್ಡ ಮಟ್ಟದ ಚರ್ಚೆಯೇ ಏರ್ಪಟ್ಟಿದೆ. ನಟ ಚಿರಂಜೀವಿ ನಿಯೋಗವೊಂದನ್ನು ಕರೆದುಕೊಂಡು ಹೋಗಿ ಸಿಎಂ ಜಗನ್ ಅನ್ನು ಭೇಟಿಯಾಗಿ ಟಿಕೆಟ್ ದರಗಳನ್ನು ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದರು. ನಿರ್ಮಾಪಕರಿಗೆ ನಿಜವಾಗಿಯೂ ನಷ್ಟವಾಗುತ್ತಿದೆಯೇ ಇಲ್ಲವೆ ಎಂದು ಪರಿಶೀಲಿಸಲು ಸರ್ಕಾರವೇ ಪೋರ್ಟಲ್ ಒಂದನ್ನು ಬಿಡುಗಡೆ ಮಾಡುತ್ತಿದ್ದು, ರಾಜ್ಯದ ಎಲ್ಲ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್ಗಳು ಆ ಪೋರ್ಟಲ್ ಮೂಲಕವೇ ಸಿನಿಮಾ ಟಿಕೆಟ್ ನೀಡಬೇಕಾಗುತ್ತದೆ. ಆ ಮೂಲಕ ರಾಜ್ಯದಾದ್ಯಂತ ಎಷ್ಟು ಟಿಕೆಟ್ ಸೇಲ್ ಆಗುತ್ತವೆ ಎಂಬ ಮಾಹಿತಿ ಸರ್ಕಾರಕ್ಕೆ ಧಕ್ಕಲಿದ್ದು, ಆ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರಮಂದಿರಗಳ ಟಿಕೆಟ್ ಬೆಲೆಯನ್ನು ಹೆಚ್ಚು ಮಾಡಬೇಕೆ? ಬೇಡವೇ? ಎಂಬ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಲಿದೆ.