ಅಲ್ಲು ಅರ್ಜುನ್ ಮನೆ ಮೇಲೆ ದಾಳಿ, ಕಲ್ಲು ತೂರಾಟ, ಹೂ ಕುಂಡ ಒಡೆದು ದಾಂದಲೆ..!
ಹಣೆ ಬರಹಕ್ಕೆ ಹೊಣೆ ಯಾರು ? ಬಂದದ್ದನ್ನು ಸ್ವೀಕರಿಸಲೇಬೇಕು. ಅನುಭವಿಸಲೇಬೇಕು. ಎಲ್ಲ ವಿಧಿಲಿಖಿತ ನಾವೇನು ಮಾಡೋಕಾಗುತ್ತೆ ? ಇಂತಹ ಮಾತುಗಳನ್ನು ಸಾಮಾನ್ಯವಾಗಿ ಎಲ್ಲರು ಕೇಳಿರುತ್ತಾರೆ. ಆದರೆ ಪಕ್ಕದ ಮನೆಯ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇದೆಲ್ಲವನ್ನು ಅನುಭವಿಸುತ್ತಿದ್ದಾರೆ.
ಹೌದು, ಸಂಧ್ಯಾ ಚಿತ್ರಮಂದಿರದ ಆವರಣದಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಹಿನ್ನೆಲೆ ಅಲ್ಲು ಅರ್ಜುನ್ ಮತ್ತು ತೆಲಂಗಾಣ ಸರ್ಕಾರದ ನಡುವೆ ವಾಕ್ಸಮರ ಶುರುವಾಗಿದೆ. ಪ್ರಕರಣ ಸಂಪೂರ್ಣವಾಗಿ ರಾಜಕೀಯ ಸ್ವರೂಪವನ್ನು ಪಡೆದಿದೆ. ಇದರ ನಡುವೆ ಈಗ ಅಲ್ಲು ಅರ್ಜುನ್ ಅವರ ಜೂಬಿಲಿ ಹಿಲ್ಸ್ ನಲ್ಲಿರುವ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲಿನ ಜೊತೆ ಟೊಮೊಟೊವನ್ನು ಎಸೆದು ಒಂದು ಗುಂಪು ದಾಂದಲೆಯನ್ನು ಮಾಡಿದೆ.

ತಮ್ಮನ್ನೂ ತಾವು ಉಸ್ಮಾನಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಂದು ಹೇಳಿಕೊಂಡಿರುವ ಈ ಗುಂಪು ಇಂದು ಸಂಜೆ ಅಲ್ಲು ಅರ್ಜುನ್ ಮನೆಯ ಮುಂದೆ ಹೈಡ್ರಾಮಾ ಮಾಡಿದೆ. ಸಂಧ್ಯಾ ಚಿತ್ರಮಂದಿರದ ಆವರಣದಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ಈಗಲೇ 1 ಕೋಟಿ ಹಣವನ್ನು ನೀಡಬೇಕೆಂದು ಒತ್ತಾಯಿಸಿದೆ. ಪ್ರತಿಭಟನೆಯನ್ನು ಮಾಡಿದೆ. ಆ ನಂತರ ಅಲ್ಲು ಅರ್ಜುನ್ ಮನೆಯ ಮೇಲೆ ಕಲ್ಲು ತೂರಾಟವನ್ನು ಕೂಡ ನಡೆಸಿದೆ. ಮನೆಯ ಭದ್ರತಾ ಸಿಬ್ಬಂದಿಯ ಮೇಲೆ ಕೂಡ ಈ ಗುಂಪು ಹಲ್ಲೆ ಮಾಡಲಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿಯನ್ನು ಮಾಡಿವೆ.
ಹಠಾತ್ ಆಗಿ ನಡೆದ ಈ ಬೆಳವಣಿಗೆಯಿಂದ ಅಲ್ಲು ಅರ್ಜುನ್ ನಿವಾಸದ ಸುತ್ತ ಮುತ್ತ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು ಸದ್ಯ ಪ್ರತಿಭಟನಾಕಾರರನ್ನು ಚದುರಿಸಿರುವ ಪೊಲೀಸರು, ಎಂಟು ವಿದ್ಯಾರ್ಥಿಯರನ್ನು ಬಂಧಿಸಿ, ನಂತರ ಅವರನ್ನು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎನ್ನುವ ಸುದ್ದಿ ಕೂಡ ಸದ್ಯಕ್ಕೆ ಕೇಳಿ ಬರುತ್ತಿದೆ.
ಈ ಪ್ರಕರಣದ ಕುರಿತು ಅಲ್ಲು ಅರ್ಜುನ್ ಇನ್ನೂ ಮೌನ ಮುರಿದಿಲ್ಲವಾದರೂ ಕೆಲ ಗಂಟೆಗಳ ಹಿಂದೆ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದರು. ನಿಮ್ಮ ಭಾವನೆಗಳು ಏನೇ ಇರಲಿ ಆ ಭಾವನೆಗಳನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸಬೇಕು ಎಂದು ಅಭಿಮಾನಿಗಳಿಗೆ ಕೇಳಿಕೊಂಡಿದ್ದ ಅಲ್ಲು ಅರ್ಜುನ್, ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಯಾವುದೇ ರೀತಿಯ ನಿಂದನಾತ್ಮಕ ಭಾಷೆ ಅಥವಾ ವರ್ತನೆಯನ್ನೂ ತೋರಿಸಬಾರದು ಎಂದು ಅವರು ಟ್ವೀಟ್ ಮಾಡಿದ್ದರು.ನಕಲಿ ಐಡಿ ಹಾಗೂ ನಕಲಿ ಸೋಷಿಯಲ್ ಮೀಡಿಯಾ ಖಾತೆಗಳನ್ನು ಬಳಸಿ ನನ್ನ ಅಭಿಮಾನಿಗಳು ಎಂದು ಹೇಳುತ್ತಾ ಆಕ್ಷೇಪಾರ್ಹ ಪೋಸ್ಟ್ಗಳನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದರು.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಲ್ಲು ಅರ್ಜುನ್ ಈ ಪೋಸ್ಟ್ ಹಂಚಿಕೊಂಡ ಕೆಲವೇ ಘಂಟೆಗಳಲ್ಲಿ ಈಗ ಅಲ್ಲು ಅರ್ಜುನ್ ಅವರ ಮನೆಯ ಮೇಲೆ ದಾಳಿ ನಡೆದಿದೆ. ಈ ಹಿನ್ನೆಲೆ ತೆಲುಗು ಚಿತ್ರರಂಗದಲ್ಲಿ ಈ ಪ್ರಕರಣದ ಕುರಿತು ವ್ಯಾಪಕವಾದ ಚರ್ಚೆ ಈಗ ಶುರುವಾಗಿದೆ. ಇನ್ನುಳಿದಂತೆ ಅಲ್ಲು ಅರ್ಜುನ್ ಮತ್ತು ತೆಲಂಗಾಣ ಸರ್ಕಾರದ ನಡುವೆ ನೇರಾನೇರವಾಗಿ ವಾಕ್ಸಮರ ಶುರುವಾಗಿದೆ. ಅಲ್ಲು ಅರ್ಜುನ್ ಯಾರ ವಿರುದ್ಧ ಆರೋಪ ಮಾಡದಿದ್ದರೂ ಕೂಡ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರ ಅಲ್ಲು ಅರ್ಜುನ್ ಹೆಸರು ಕೇಳಿದರೆ ಹಲ್ಲಲ್ಲು ಕಡಿಯುತ್ತಿದೆ. ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಅಸ್ತ್ರವನ್ನಾಗಿಸಿಕೊಂಡು ಅಲ್ಲು ಅರ್ಜುನ್ ವಿರುದ್ಧ ಹರಿಹಾಯುತ್ತಿದೆ.


Click it and Unblock the Notifications











