ಸಿಎಂ ಬದಲು ಐಪಿಎಲ್ ಮ್ಯಾಚ್ ನೋಡಿದ ನಟಿ ; ಚೆಲುವೆಯ ಕೈ ಸೇರಿದ್ಹೇಗೆ ₹40,000 ಬೆಲೆಯ ವಿಐಪಿ ಪಾಸ್ ?
ಐಪಿಎಲ್ ಅಂದರೆ ಸಾಕು ಸಂಭ್ರಮ ಸಡಗರದ ವಾತಾವರಣ ಅನೇಕ ಕಡೆ ನಿರ್ಮಾಣವಾಗುತ್ತೆ. ಆರು ವರ್ಷದ ಹುಡುಗರಿಂದ ಹಿಡಿದು ಅರವತ್ತು ವರ್ಷದ ವೃದ್ಧರವರೆಗೆ ಐಪಿಎಲ್ ಕಿಕ್ ಕೊಡುತ್ತೆ. ನಮ್ಮ ತಂಡ ನಿಮ್ಮ ತಂಡ ಅಂತಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನದ ಮೆರವಣಿಗೆ ಶುರುವಾಗುತ್ತೆ. ದಿನಗಳು ಉರುಳಿದಂತೆ ಐಪಿಎಲ್ ನ ಕ್ರೇಜ್ ಇನ್ನು ಹೆಚ್ಚಾಗುತ್ತೆ.
ಇನ್ನು ಐಪಿಎಲ್ ನೋಡುವ ಉತ್ಸಾಹ ಕೇವಲ ಜನ ಸಾಮಾನ್ಯರಲ್ಲಿ ಮಾತ್ರ ಇರುವುದಿಲ್ಲ. ಚಿತ್ರರಂಗ ಮತ್ತು ರಾಜಕೀಯ ರಂಗದವರಿಗೆ ಕೂಡ ಐಪಿಎಲ್ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಕಣ್ತುಂಬಿಕೊಳ್ಳುವ ಹುಚ್ಚಿರುತ್ತೆ. ವ್ಯತ್ಯಾಸ ಅಂದರೆ ಜನಸಾಮಾನ್ಯರು ಟಿಕೆಟ್ಗಾಗಿ ಹರಸಾಹಸ ಮಾಡಬೇಕು. ರಣ ಬಿಸಿಲಿನಲ್ಲಿ ಒದ್ದಾಡಬೇಕು. ಆದರೆ..ಸೆಲೆಬ್ರೇಟಿ ಸ್ಟೇಟಸ್ ಹೊಂದಿರುವವರಿಗೆ ರಾಜಕೀಯ ಗಣ್ಯರಿಗೆ ಕುಂತಲ್ಲೇ ಟಿಕೆಟ್ ಬಂದು ಕೈ ಸೇರುತ್ತೆ.

ಒಂದು ವೇಳೆ ಕೈಗೆ ಬಂದು ಸೇರದಿದ್ದರೆ ವಿಧಾನಸಭೆ ಹಾಗೂ ಪರಿಷತ್ ನಲ್ಲಿ ಶಾಸಕರು ಐಪಿಎಲ್ ಉಚಿತ ಟಿಕೆಟ್ಗಾಗಿ ಗೋಗರೆಯುತ್ತಾರೆ. ಸ್ಪೀಕರ್ ಬಳಿ ಮನವಿ ಮಾಡುತ್ತಾರೆ. ಇದಕ್ಕೆ ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಕೇಳಿ ಬಂದ ಫ್ರೀ ಟಿಕೆಟ್ ಕೂಗು ಉದಾಹರಣೆ. ಆದರೆ ಹೀಗೆ ಬಂದು ಕೈ ಸೇರುವ ಟಿಕೆಟ್ಗಳನ್ನು ಈ ರಾಜಕೀಯದವರು ದುರುಪಯೋಗ ಮಾಡಿಕೊಂಡರೆ..? ಆಗ ಅದಕ್ಕೆ ಟಿಕೆಟ್ ಹಗರಣ ಎನ್ನುಬಹುದಾ..? ಎನ್ನುವ ಚರ್ಚೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
ಹೌದು, ಮೊನ್ನೆ ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕುಶಿತಾ ಕಲ್ಲಪು ಹೋಗಿದ್ದರು. 1.1 ಮಿಲಿಯನ್ ಫಾಲೋವರ್ಸ್ ಹೊಂದಿರುವ ಈ ಕುಶಿತಾ ಕಲ್ಲಪು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್. ''ಚಾಂಗುರೇ ಬಂಗಾರು ರಾಜಾ'', ''ನೀತೋನೆ ನಾನು'' ಸೇರಿ ಕೆಲ ವೆಬ್ ಸರಣಿಗಳಲ್ಲಿ ಇವರು ಅಭಿನಯಿಸಿದ್ದಾರೆ.
ಇಂಥಾ ಕುಶಿತಾ ತಮ್ಮ ದುಡ್ಡಿನಲ್ಲಿ ಟಿಕೆಟ್ ಖರೀದಿ ಮಾಡಿ ಪಂದ್ಯ ನೋಡಲು ಹೋಗಿದ್ದರೆ ಯಾರು ಕೇಳುತ್ತಿರಲಿಲ್ಲ. ವಿವಾದವೂ ಆಗುತ್ತಿರಲಿಲ್ಲ. ಆದರೆ.. ಕುಶಿತಾ ಕಲ್ಲಪು ಹೀಗೆ ಮಾಡಿಲ್ಲ. ಅವರು ಇವರು ಕೂಡ ಇವರಿಗೆ ಟಿಕೆಟ್ ಕೊಟ್ಟಿಲ್ಲ. ಬದಲಿಗೆ ಇವರಿಗೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಕಚೇರಿಯಿಂದ ಟಿಕೆಟ್ ಬಂದಿದೆ. ಇದೇ ಈಗ ವಿವಾದಕ್ಕೆ ಕಾರಣವಾಗಿದೆ.
ಇನ್ನು ಈ ಒಂದು ಟಿಕೆಟ್ಗೆ ₹40,000 ಬೆಲೆ. ಕುಶಿತಾ ತಮ್ಮ ಗೆಳತಿಯನ್ನು ಕೂಡ ತಮ್ಮ ಜೊತೆ ಕರೆದೊಯ್ದಿದ್ದಾರೆ. ಅಲ್ಲಿಗೆ 80,000. ಟಿಕೆಟ್ಗಳ ಮೇಲೆ ಸ್ಪಷ್ಟವಾಗಿ "ಗೌರವಾನ್ವಿತ ತೆಲಂಗಾಣ ಮುಖ್ಯಮಂತ್ರಿಗಳಿಗೆ" ಎಂದು ಕೂಡ ಬರೆಯಲಾಗಿದೆ. ಆದರೆ, ಎಲೈಟ್ ಲಾಂಜ್ನಲ್ಲಿ ಮುಖ್ಯಮಂತ್ರಿಗಳ ಬದಲು ಪಂದ್ಯ ನೋಡಿದ್ದು ಮಾತ್ರ ಒಬ್ಬ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್.

ಹೀಗಾಗಿಯೇ ಕೆರಳಿರುವ ಹಲವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದು ಕೇವಲ ವಿಐಪಿ ಟಿಕೆಟ್ ಅಥವಾ ಪಾಸ್ ವಿಷಯ ಅಲ್ಲ. ಬದಲಿಗೆ ಇದು ಸರ್ಕಾರದ ಶಿಷ್ಟಾಚಾರ, ನಿಯಮಾವಳಿಯ ಪ್ರಶ್ನೆ ಎಂದು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳಿಗಾಗಿ ಮೀಸಲಾಗಿದ್ದ ಅಧಿಕೃತ ಪಾಸ್ಗಳು ಒಬ್ಬ ಖಾಸಗಿ ವ್ಯಕ್ತಿಯ ಕೈ ಸೇರಿದ್ದು ಹೇಗೆ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
ಇನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಪಂದ್ಯಕ್ಕೆ ಹೋಗಲು ಸಾಧ್ಯವಾಗದೇ ಇದ್ದರೆ, ಆ ಟಿಕೆಟ್ಗಳನ್ನು ಬೇರೆ ಯಾರಾದರೂ ಗಣ್ಯ ವ್ಯಕ್ತಿಗಳಿಗೆ ನೀಡಬಹುದಿತ್ತು ಅಥವಾ ಟಿಕೆಟ್ ಹಿಂದಿರುಗಿಸಬಹುದಿತ್ತು, ಯಾರಾದರೂ ಉದಯೋನ್ಮುಖ ಕ್ರೀಡಾಪಟುಗಳಿಗೆ ಕೊಡಬಹುದಿತ್ತು, ಆದರೆ.. ನಟಿಗೆ ಕೊಡುವ ಅವಶ್ಯಕತೆ ಏನಿತ್ತು..? ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ.
ಸದ್ಯಕ್ಕೆ ಮುಖ್ಯಮಂತ್ರಿಗಳ ಕಚೇರಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.ಕುಶಿತಾ ಕಲ್ಲಪು ಕೂಡ ಮುಖ್ಯಮಂತ್ರಿಗಳ ಕಚೇರಿಯಿಂದ ಟಿಕೆಟ್ ನೀಡಿದ್ದು ಯಾರು ಎನ್ನುವ ಪ್ರಶ್ನೆಗೆ ಉತ್ತರ ನೀಡುವ ಗೋಜಿಗೆ ಹೋಗಿಲ್ಲ. ಆದರೆ, ಈಗಾಗಲೇ ಈ ವಿಚಾರದಲ್ಲಿ ರಾಜಕೀಯ ಶುರುವಾಗಿದೆ.
ಪ್ರತಿಪಕ್ಷವಾದ ಬಿಆರ್ ಎಸ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ಪ್ರೋಟೋಕಾಲ್ ಬಗ್ಗೆ ಪ್ರಶ್ನೆ ಮಾಡಿದೆ. ಸಿಎಂಗೆ ಸಿಕ್ಕಿದ್ದ ಸೌಲಭ್ಯ ಖಾಸಗಿ ವ್ಯಕ್ತಿಯ ಪಾಲಾಗಿದ್ಹೇಗೆ? ಎಂದು ಕೇಳಿದೆ. ಈ ಟಿಕೆಟ್ ಹಗರಣದಿಂದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿನ ಅಕ್ರಮಗಳ ಬಗ್ಗೆ ಈ ಹಿಂದೆ ಮಾತನಾಡಿದ್ದ ರೇವಂತ್ ರೆಡ್ಡಿ ಅವರಿಗೆ ಈಗ ಈ ಟಿಕೆಟ್ ವಿವಾದ ಮುಜುಗರ ತಂದಿದೆ.


Click it and Unblock the Notifications