'ಮದುವೆ ವ್ಯವಸ್ಥೆ ಕುಸಿದು ಬೀಳುತ್ತೆ', ವಿಚ್ಛೇಧನದ ಬಗ್ಗೆ ಪುರಿ ಜಗನ್ನಾಥ್ ಮಾತು
ತೆಲುಗಿನ ಹೆಸರಾಂತ ಸಿನಿಮಾ ನಿರ್ದೇಶಕ ಪುರಿ ಜಗನ್ನಾಥ್ ಮದುವೆ, ಹೆಂಡತಿ, ವಿಚ್ಛೇಧನದ ಕುರಿತಾಗಿ ಮಾತನ್ನಾಡಿದ್ದಾರೆ. ಪುರಿ ಆಡಿರುವ ಮಾತುಗಳು ಸಖತ್ ವೈರಲ್ ಆಗಿವೆ. ಪುರಿ ಜಗನ್ನಾಥ್ ಯೂಟ್ಯೂಬ್ನಲ್ಲಿ 'ಪುರಿ ಮಸ್ಸಿಂಗ್' ಹೆಸರಿನ ಚಾನೆಲ್ ತೆರೆದಿದ್ದು ಚಾನೆಲ್ನಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಾರೆ. ನಿನ್ನೆಯಷ್ಟೆ ಮದುವೆ ಮತ್ತು ವಿಚ್ಚೇಧನದ ಬಗ್ಗೆ ಮಾತನಾಡಿದ್ದಾರೆ.
ಲಾಕ್ಡೌನ್ನಿಂದಾಗಿ ಪತಿ-ಪತ್ನಿ ಗಂಟೆ-ಗಟ್ಟಲೆ ಒಟ್ಟಿಗೆ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಖಂಡಿತ ಒಳ್ಳೆಯದಲ್ಲ. ನಿಮ್ಮ ದಾಂಪತ್ಯವನ್ನು ನೀವು ಕಾಪಾಡಿಕೊಳ್ಳಬೇಕು ಎಂದುಕೊಂಡಿದ್ದರೆ ಹೆಂಡತಿಯೊಂದಿಗೆ ಅರ್ಧ ಗಂಟೆಗಿಂತಲೂ ಹೆಚ್ಚಿನ ಸಮಯ ಕಳೆಯ ಬೇಡಿ ಎಂದಿದ್ದಾರೆ ಪುರಿ. ಈ ವಿಷಯಗಳನ್ನು ಅವರು ತಮಾಷೆಯಾಗಿ ಅಲ್ಲ ಬದಲಾಗಿ ಗಂಭೀರವಾಗಿಯೇ ಹೇಳಿದ್ದಾರೆ.
ಒಂದೇ ಮನೆಯಲ್ಲಿದ್ದರೂ ಸಹ ಹೆಂಡತಿಯೊಂದಿಗೆ ಹೆಚ್ಚಾಗಿ ಕಾಲ ಕಳೆಯಬೇಡಿ. ಹೆಚ್ಚು ಕಾಲ ಕಳೆದರೆ ಸಮಸ್ಯೆಗಳು ಹೆಚ್ಚು ಬರುತ್ತವೆ. ಲಾಕ್ಡೌನ್ ಅವಧಿಯಲ್ಲಿ ಟಿವಿ ನೋಡಿ, ವಾಟ್ಸ್ಆಪ್, ಫೇಸ್ಬುಕ್ ನೋಡಿ. ಪಕ್ಕಕ್ಕೆ ತಿರುಗಿ ಮಲಗುವುದು ಕಲಿತುಕೊಳ್ಳಿ, ನಿಮ್ಮ ದಾಂಪತ್ಯವನ್ನು ಉಳಿಸಿಕೊಳ್ಳಿ ಎಂದಿದ್ದಾರೆ ಪುರಿ ಜಗನ್ನಾಥ್.
ಕೆಲವು ಅಂಕಿ-ಅಂಶಗಳನ್ನು ಕೊಟ್ಟಿರುವ ಪುರಿ ಜಗನ್ನಾಥ್, ಕಳೆದ ವರ್ಷ ಲಾಕ್ಡೌನ್ ಆರಂಭವಾದಾಗಿನಿಂದ ಈಗಿನವರೆಗೆ ಇಡೀಯ ವಿಶ್ವದಲ್ಲಿಯೇ ಈವರೆಗೆ ನಡೆಯದಷ್ಟು ವಿಚ್ಛೇಧನ ಪ್ರಕರಣಗಳು ನಡೆದಿವೆ. ಯುಕೆ, ಚೈನಾ, ಅಮೆರಿಕಗಳಲ್ಲಿ 50%ಗಿಂತಲೂ ಹೆಚ್ಚು ವಿಚ್ಛೇಧನಗಳು ನಡೆದಿವೆ. ಭಾರತದಲ್ಲಿಯೂ ವಿಚ್ಛೇಧನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿವೆ. ಇದಕ್ಕೆ ಕಾರಣ ಗಂಡ-ಹೆಂಡತಿ ಅತಿಯಾಗಿ ಒಟ್ಟಿಗೆ ಕಾಲ ಕಳೆದಿದ್ದು ಎಂದಿದ್ದಾರೆ ಪುರಿ ಜಗನ್ನಾಥ್.

ಹೊಸದೊಂದು ಕಾನೂನು ಬರಬೇಕು: ಪುರಿ ಜಗನ್ನಾಥ್
ಭಾರತದಲ್ಲಿ ಗುಜರಾತ್, ಮಹಾರಾಷ್ಟ್ರಗಳಲ್ಲಿ ವಿಚ್ಛೇಧನ ಸಂಖ್ಯೆ ಹೆಚ್ಚಿದೆ. ಮಹಾರಾಷ್ಟ್ರ ನ್ಯಾಯಾಲಯದಲ್ಲಿ ದಿನಕ್ಕೆ 20 ವಿಚ್ಛೇಧನ ಪ್ರಕರಣಗಳು ದಾಖಲಾಗುತ್ತಿವೆ. ಗೋವಾದಲ್ಲಿಯಂತೂ ಹೊಸ ಕಾನೂನನ್ನೇ ಮಾಡಿ, ಮದುವೆಗೆ ಮುಂಚೆಯೇ ವಧು-ವರರು ಕೌನ್ಸಿಲ್ಗೆ ಒಳಪಟ್ಟು ತಮಗೆ ಮದುವೆ ಏಕೆ ಅವಶ್ಯಕ ಎಂದು ಕಾರಣ ನೀಡಿ ಒಪ್ಪಿಗೆ ಪಡೆದ ನಂತರವೇ ಮದುವೆ ಆಗಬೇಕು. ಈ ಕಾನೂನು ದೇಶದೆಲ್ಲೆಡೆ ಬರಬೇಕು ಎಂದಿದ್ದಾರೆ ಪುರಿ ಜಗನ್ನಾಥ್.

ಮದುವೆಗಾಗಿ ನ್ಯಾಯಾಲಯಗಳ ಸುತ್ತ ಅಲೆವಂತಾಗಬೇಕು: ಪುರಿ
ವಿಚ್ಛೇಧನಕ್ಕಾಗಿ ಜನ ಹೇಗೆ ನ್ಯಾಯಾಲಯದ ಸುತ್ತ ಸುತ್ತಿದ್ದಾರೋ ಹಾಗೆಯೇ ಮದುವೆ ಆಗುವ ಮೊದಲು ನ್ಯಾಯಾಲಯದ ಸುತ್ತ ಅಲೆಯಬೇಕು ಹಾಗೊಂದು ಕಠಿಣ ನಿಯಮ ಮದುವೆ ಆಗಲು ತರಬೇಕು. ಆಗ ಜೊಳ್ಳುಗಳೆಲ್ಲ ಉದುರಿಹೋಗಿ. ನಿಜವಾಗಿಯೂ ಮದುವೆ ಬೇಕಿರುವವರು ಮಾತ್ರವೇ ಮದುವೆ ಆಗುತ್ತಾರೆ. ಆಗ ವಿಚ್ಛೇಧನ ಪ್ರಕರಣಗಳು ಕಡಿಮೆ ಆಗುತ್ತವೆ ಎಂದಿದ್ದಾರೆ ಜಗನ್ನಾಥ್.

2040ಕ್ಕೆ ಮದುವೆ ವ್ಯವಸ್ಥೆ ಕುಸಿದು ಬೀಳುತ್ತದೆ: ಪುರಿ
ಇನ್ನು ಇಪ್ಪತ್ತು ವರ್ಷಗಳಲ್ಲಿ ಈಗ 50 ವರ್ಷದಲ್ಲಿರುವವರು ಸಾವನ್ನಪ್ಪುತ್ತಾರೆ. 2040 ರ ವೇಳೆಗೆ ಭಾರತದಲ್ಲಿ ಮದುವೆ ವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚುತ್ತದೆ. ಶೇ 30% ಜನ ಮಾತ್ರವೇ ಮದುವೆಗಳಾಗುತ್ತಾರೆ. ಮದುವೆ ಒಳ್ಳೆಯದಲ್ಲ ಎಂದು ಬುದ್ಧ, ಜೀಸಸ್ ಅವರುಗಳು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಆದರೆ ನಾವು ಅದನ್ನು ಕೇಳಲಿಲ್ಲ ಎಂದಿದ್ದಾರೆ ಪುರಿ ಜಗನ್ನಾಥ್.

ಗಂಡು-ಹೆಣ್ಣು ಮದುವೆಯಾಗಲು ಸೃಷ್ಟಿಯಾಗಿಲ್ಲ
ಸಾಕಷ್ಟು ಜನ ಒಂಟಿ ತನ ಹೋಗಲಾಡಿಸಿಕೊಳ್ಳಲು ಮದುವೆಯಾಗುತ್ತಾರೆ. ಆದರೆ ಅದು ತಪ್ಪು, ಒಂಟಿತನ ಸಹಿಸಿಕೊಳ್ಳಲಾಗಲಿಲ್ಲ ಎಂದರೆ ಮದುವೆ ಆಗಲೇಬೇಡಿ. ಮದುವೆ ಆದಮೇಲೆ ಎಲ್ಲರನ್ನೂ ಒಂಟಿಯನ್ನಾಗಿ ಮಾಡಿಬಿಡುತ್ತೀರ. ಗಂಡು-ಹೆಣ್ಣುಗಳು ಮದುವೆ ಆಗಲು ಸೃಷ್ಟಿಸಲ್ಪಟ್ಟವರಲ್ಲ. ಹಾಗಾಗಿ ಈ ಲಾಕ್ಡೌನ್ನಲ್ಲಿ ನಿಮ್ಮ ದಾಂಪತ್ಯ ಉಳಿಸಿಕೊಳ್ಳಲು ಹೆಂಡತಿಯೊಂದಿಗೆ ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ಕಳೆಯಬೇಡಿ' ಎಂದಿದ್ದಾರೆ ಪುರಿ ಜಗನ್ನಾಥ್.

ಪುರಿ ಜಗನ್ನಾಥ್ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ
ಪುರಿ ಜಗನ್ನಾಥ್ 1996 ರಲ್ಲಿ ಲಾವಣ್ಯ ಎಂಬುವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕೆಲವು ವರ್ಷಗಳಿಂದ ಇಬ್ಬರ ದಾಂಪತ್ಯ ಸರಿಯಿಲ್ಲ. ಪುರಿ ಜಗನ್ನಾಥ್ಗೆ ನಟಿ ಚಾರ್ಮಿ ಜೊತೆ ಹೆಚ್ಚಿನ ಆತ್ಮೀಯತೆ ಇದೆ. ಚಾರ್ಮಿ ವಿರುದ್ಧ ಪುರಿ ಪತ್ನಿ ಹಲವು ಬಾರಿ ಆರೋಪಗಳನ್ನು ಸಹ ಮಾಡಿದ್ದಾರೆ. ಆದರೆ ಪುರಿ ಜಗನ್ನಾಥ್ ಈವರೆಗೆ ಈ ಬಗ್ಗೆ ಹೊರಗೆ ಮಾತನಾಡಿಲ್ಲ. ಚಾರ್ಮಿ ಸಹ. ಈಗ ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ 'ಲೈಗರ್' ಸಿನಿಮಾವನ್ನು ಚಾರ್ಮಿ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











