"ಬೆಡ್ರೂಂಗೆ ಬಂದಿದ್ದು ಟೂಮಚ್" ಪೊಲೀಸರ ನಡೆಗೆ ಅಲ್ಲು ಅರ್ಜುನ್ ಆಕ್ಷೇಪ
'ಪುಷ್ಪ'-2 ಸಿನಿಮಾ ಸಕ್ಸಸ್ ಬೆನ್ನಲ್ಲೇ ತೆಲುಗು ನಟ ಅಲ್ಲು ಅರ್ಜುನ್ಗೆ ಸಂಕಷ್ಟ ಎದುರಾಗಿದೆ. ಕಾಲ್ತುಳಿತ ಪ್ರಕರಣದಲ್ಲಿ ನಟನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಿಢೀರನೆ ಹೈದರಾಬಾದ್ ಚಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಮನೆಗೆ ತೆರಳಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಹೀಗೆ ಬಂದು ವಿಚಾರಣೆಗೆ ಕರೆದಿದ್ದಕ್ಕೆ ಅಲ್ಲು ಅರ್ಜುನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದೆ. ಬೆಡ್ರೂಂಗೆ ಬಂದು ಕರೆದುಕೊಂಡು ಹೋಗುತ್ತಿರುವುದು ಟೂಮಚ್, ಬಟ್ಟೆ ಬದಲಾಯಿಸಲು ಬಿಡಿ. ನೀವು ಮಾಡುತ್ತಿರುವುದು ಸರಿಯಲ್ಲ. ನೀವು ನನ್ನನ್ನು ಕರೆದುಕೊಂಡು ಹೋಗುತ್ತಿರುವುದು ತಪ್ಪಲ್ಲ, ನಿಮ್ಮ ನಡೆ ಸರಿಯಿಲ್ಲ" ಎಂದು ಕಾಫಿ ಕುಡಿಯುತ್ತಾ ಅಲ್ಲು ಅರ್ಜುನ್ ಪೊಲೀಸರ ಬಳಿ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ.

ಮಧ್ಯಾಹ್ನ 12.10 ಸುಮಾರಿಗೆ ಪೊಲೀಸರು ಅಲ್ಲು ಅರ್ಜುನ್ ಮನೆಗೆ ದೌಡಾಯಿಸಿದ್ದರು. ಈ ವೇಳೆ ನೇರವಾಗಿ ಬೆಡ್ರೂಂ ಹೋಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಲ್ಲು ಅರ್ಜುನ್ ಬೇಸರ ಹೊರ ಹಾಕಿದ್ದಾರೆ. ಇನ್ನು ಪ್ರಕರಣದಲ್ಲಿ (ಬಿಎನ್ಎಸ್) ಸೆಕ್ಷನ್ 105 ಮತ್ತು 118 (1) ಅಡಿಯಲ್ಲಿ ದೂರು ದಾಖಲಾಗಿದೆ, ಈಗಾಗಲೇ ಸಂಧ್ಯಾ ಚಿತ್ರಮಂದಿರದ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 4ರಂದು ರಾತ್ರಿ ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದರು. ಆಕೆಯ ಪುತ್ರ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲು ಅರ್ಜುನ್ನನ್ನು ನೋಡಲು ಅಭಿಮಾನಿಗಳು ಒಮ್ಮೆಲೆ ಮುಗಿಬಿದ್ದ ಕಾರಣ ಕಾಲ್ತುಳಿತ ಸಂಭವಿಸಿತ್ತು. ಬಳಿಕ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಅಲ್ಲು ಅರ್ಜುನ್ ರೇವತಿ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿದ್ದರು.
ಮೃತ ಮಹಿಳೆ ರೇವತಿ ಪತಿ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಚಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನಟ ಅಲ್ಲು ಅರ್ಜುನ್ ಮೇಲಿನ ಆರೋಪ ಸಾಬೀತಾದರೆ 5ರಿಂದ 10 ವರ್ಷ ಶಿಕ್ಷೆ ಆಗುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಪೊಲೀಸರು ಮನೆಗೆ ಬರುತ್ತಿದ್ದಂತೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಆಘಾತಗೊಂಡಿದ್ದರು.
ಪೊಲೀಸರ ಜೊತೆ ಪೊಲೀಸ್ ಠಾಣೆಗೆ ತೆರಳುವ ಮುನ್ನ ಪತ್ನಿಗೆ ಅಲ್ಲು ಅರ್ಜುನ್ ಧೈರ್ಯ ತುಂಬಿದ್ದರು. ಈ ವೇಳೆ ಪತ್ನಿ ಕೆನ್ನೆಗೆ ಮುತ್ತಿಟ್ಟು ಅಲ್ಲು ಅರ್ಜುನ್ ಹೊರಟಿದ್ದಾರೆ. ಆಗ ಸ್ನೇಹಾ ಕಣ್ಣೀರು ಹಾಕಿದ್ದಾರೆ. ಇನ್ನು ಪ್ರಕರಣದಲ್ಲಿ ಅಲ್ಲು ಅರ್ಜುನ್ಗೆ ಬೇಲ್ ಸಿಗಬಹುದು ಎನ್ನುವ ಲೆಕ್ಕಾಚಾರವೂ ನಡೀತಿದೆ. ವಿಚಾರಣೆ ಬಳಿಕ ಅವರನ್ನು ಕೋರ್ಟ್ನಲ್ಲಿ ಹಾಜರುಪಡಿಸಲು ಪೊಲೀಸರು ಮುಂದಾಗಿದ್ದಾರೆ.
ಶುಕ್ರವಾರ ಬೇಲ್ ಸಿಗದೇ ಇದ್ದರೆ ಸೋಮವಾರದವರೆಗೆ ಅಲ್ಲು ಅರ್ಜುನ್ ಪೊಲೀಸ್ ಠಾಣೆಯಲ್ಲೇ ಇರಬೇಕಾಗಬಹುದು ಎನ್ನುವ ಚರ್ಚೆ ಕೂಡ ಶುರುವಾಗಿದೆ. ಸದ್ಯ ನಟನ್ನು ಪೊಲೀಸರು ಮೆಡಿಕಲ್ ಟೆಸ್ಟ್ಗೆ ಕರೆದೊಯ್ಯುತ್ತಿದ್ದಾರೆ. ಹೈದರಾಬಾದ್ ಗಾಂಧಿ ಆಸ್ಪತ್ರೆಯಲ್ಲಿ ಟೆಸ್ಟ್ ನಡೆಯಲಿದೆ.


Click it and Unblock the Notifications











