ಅಲ್ಲು ಅರ್ಜುನ್ ಫ್ಯಾನ್ಸ್ಗೆ ಪೊಲೀಸರು ಶಾಕ್; ದರ್ಶನ್ ಫ್ಯಾನ್ಸ್ಗೂ ಶುರು ನಡುಕ..!
ತೆಲುಗು ನಟ ಅಲ್ಲು ಅರ್ಜುನ್ ಬಂಧನ ವಿಚಾರ ಕಳೆದೊಂದು ವಾರದಿಂದ ಭಾರೀ ಸದ್ದು ಮಾಡ್ತಿದೆ. ಹೈದರಾಬಾದ್ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದ ಸಂಬಂಧ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಮಧ್ಯಂತರ ಜಾಮೀನು ಪಡೆದು ಹೊರ ಬಂದರು. ಇದೀಗ ನಟನ ಫ್ಯಾನ್ಸ್ ವಿರುದ್ಧ ತೆಲಂಗಾಣ ಪೊಲೀಸರು ದೂರು ದಾಖಲಿಸಿದ್ದಾರೆ ಎನ್ನಲಾಗ್ತಿದೆ.
'ಪುಷ್ಪ'- 2 ಸಿನಿಮಾ ಪ್ರೀಮಿಯರ್ ಶೋ ವೇಳೆ ಚಿತ್ರಮಂದಿರದಲ್ಲಿ ದುರಂತ ಸಂಭವಿಸಿತ್ತು. ಕಾಲ್ತುಳಿದ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಆಕೆಯ ಪುತ್ರ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ನಟ ಅಲ್ಲು ಅರ್ಜುನ್, ಆತನ ಭದ್ರತಾ ಸಿಬ್ಬಂದಿ ಹಾಗೂ ಚಿತ್ರಮಂದಿರದ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಇನ್ನು ಅಲ್ಲು ಅರ್ಜುನ್ ಬಂಧನ ಬೆನ್ನಲ್ಲೇ ತೆಲಂಗಾಣ ಸಿಎಂ ವಿರುದ್ಧ ಅವಹೇಳಕಾರಿ ಪೋಸ್ಟ್ ಮಾಡಿದವರಿಗೆ ಪೊಲೀಸರು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಅಲ್ಲು ಅರ್ಜುನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಬಗ್ಗೆ ತೆಲಂಗಾಣ ಸೈಬರ್ ಪೊಲೀಸರು ನಿಗಾ ವಹಿಸಿದ್ದಾರೆ. ನೆಚ್ಚಿನ ನಟನ ಬಂಧನಕ್ಕೆ ತೆಲಂಗಾಣ ಸಿಎಂ ಕಾರಣ ಎಂದು ಆರೋಪಿಸಿ ಕೆಟ್ಟದಾಗಿ ಪೋಸ್ಟ್ ಮಾಡಿದ ನಾಲ್ಕೈದು ಜನರ ವಿರುದ್ಧ ದೂರು ದಾಖಲಿಸಿರುವುದಾಗಿ ವರದಿಯಾಗಿದೆ. ಅವರಿಗೆ ಈಗಾಗಲೇ ನೋಟಿಸ್ ನೀಡಿದ್ದ ಶಾಕ್ ಆಗಿದ್ದಾರೆ. ಕೆಲವರು ತಮ್ಮ ಪೋಸ್ಟ್ಗಳನ್ನು ಡಿಲೀಟ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
ಕಳೆದ ಶುಕ್ರವಾರ(ಡಿಸೆಂಬರ್ 13) ಹೈದರಾಬಾದ್ ಜೂಬ್ಲಿ ಹಿಲ್ಸ್ನಲ್ಲಿರುವ ಅಲ್ಲು ಅರ್ಜುನ್ ನಿವಾಸಕ್ಕೆ ಪೊಲೀಸರು ಹೋಗಿದ್ದರು. ಕಾಲ್ತುಳಿತ ಪ್ರಕರಣ ಸಂಬಂಧ 'ಪುಷ್ಪ'-2 ಚಿತ್ರನಟನ್ನು ಚಿಕ್ಕಡಪಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ನಂತರ ವೈದ್ಯಕೀಯ ತಪಾಸಣೆ ನಡೆಸಿ ನಾಂಪಲ್ಲಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಅಲ್ಲು ಅರ್ಜುನ್ಗೆ 14 ದಿನಗಳ ನ್ಯಾಯಾಂಗ ವಿಧಿಸಿತ್ತು. ಆದರೆ ವಕೀಲರ ಮೂಲಕ ನಟ ಮಧ್ಯಂತರ ಜಾಮೀನು ಪಡೆದರು. ಆದರೂ ಬಿಡುಗಡೆ ಪ್ರಕ್ರಿಯೆ ತಡವಾಗಿ ಒಂದು ರಾತ್ರಿ ಅಲ್ಲು ಅರ್ಜುನ್ ಜೈಲಿನಲ್ಲಿ ಕಳೆಯುವಂತಾಯಿತು. ಬಳಿಕ ಶನಿವಾರ ಬೆಳ್ಳಂ ಬೆಳಗ್ಗೆ ಜೈಲಿನಿಂದ ಹೊರ ಬಂದರು. ಆದರೆ ಅಲ್ಲು ಅರ್ಜುನ್ ಬಂಧನ ವಿಚಾರ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆ ಮುಂದೆ ಅಭಿಮಾನಿಗಳ ಜಮಾಯಿಸಿದ್ದರು.
ಅಲ್ಲು ಅರ್ಜುನ್ ಆಪ್ತರ ಜೊತೆಗೆ ಅಭಿಮಾನಿಗಳು ಬೆಂಬಲಕ್ಕೆ ನಿಂತರು. ವೈಯಕ್ತಿಕ ದ್ವೇಷದಿಂದ ತೆಲಂಗಾಣ ಸರ್ಕಾರ ಅಲ್ಲು ಅರ್ಜನ್ ಅವರನ್ನು ಬಂಧಿಸಿದ್ದಾರೆ ಎಂದು ಆರೋಪಿದರು. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿರುದ್ಧ ಅವಹೇಳಕಾರಿ ಪೋಸ್ಟ್ ಮಾಡಿದ್ದರು ಎನ್ನಲಾಗ್ತಿದೆ. ಅಂತಹ ಪೋಸ್ಟ್ಗಳ ಬಗ್ಗೆ ಗಮನ ಹರಿಸಿ ಇದೀಗ ಸೈಬರ್ ಕ್ರೈಂ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಸೋಷಿಯಲ್ ಮೀಡಿಯಾ ಜಮಾನದಲ್ಲಿ ಕಿಡಿಗೇಡಿಗಳ ಉಪಟಳ ಹೆಚ್ಚಾಗಿದೆ. ಸ್ಟಾರ್ ನಟರ ಅಭಿಮಾನಿಗಳ ಹೆಸರಿನಲ್ಲಿ ಕೆಟ್ಟ ಕೆಟ್ಟದಾಗಿ ಪೋಸ್ಟ್ ಮಾಡುವುದು, ಟ್ರೋಲ್ ಮಾಡುವುದು ಚೆನ್ನಾಗುತ್ತಿದೆ. ಕೆಲ ದಿನಗಳ ಹಿಂದೆ ಕರ್ನಾಟಕದಲ್ಲಿ ಕೆಲ ಕಿಡಿಗೇಡಿಗಳು ಇದೇ ರೀತಿ ಅವಹೇಳಕಾರಿ ಪೋಸ್ಟ್ ಮಾಡಿದ್ದು ಭಾರೀ ವೈರಲ್ ಆಗಿತ್ತು.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಕಿಡಿಗೇಡಿಯೊಬ್ಬನ ಅವಹೇಳಕಾರಿ ಪೋಸ್ಟ್ ಭಾರೀ ಸಂಚಲನ ಸೃಷ್ಟಿಸಿತ್ತು. ಸಿಎಂ ಸಿದ್ಧರಾಮಯ್ಯ ಕೂಡ ಈ ಬಗ್ಗೆ ಸ್ಪಂದಿಸಿದ್ದರು. ಬಳಿಕ ಕೆಲವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಆ ವಿಚಾರ ತಣ್ಣಗಾಯಿತು. ನಟ ದರ್ಶನ್ ಬಂಧನ ಬೆನ್ನಲ್ಲೇ ಕೆಲವರು ಮಾಧ್ಯಮಗಳ ಮುಂದೆ ಮನಬಂದಂತೆ ಮಾತನಾಡಿದ್ದರು.
ಬಿಗ್ಬಾಸ್ ಖ್ಯಾತಿಯ ಪ್ರಥಮ್ ತಮಗೆ ಬೆದರಿಕೆ ಹಾಕಿದವರ ವಿರುದ್ಧ ದೂರು ನೀಡಿದ್ದರು. ಅದರಲ್ಲಿ ಕೆಲವರಿಗೆ ಪೊಲೀಸರು ಬುದ್ಧಿ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮುನ್ನ ಪ್ರತಿಯೊಬ್ಬರು ಯೋಚಿಸಬೇಕು. ಇಲ್ಲದಿದ್ದರೆ ಅದರಿಂದ ಸಂಕಷ್ಟ ಎದುರಾಗಬಹುದು.


Click it and Unblock the Notifications











