ಯಾವ ಬಟ್ಟೆ ತೊಡಬೇಕು ಎನ್ನುವುದು ಮಹಿಳೆಯ ಇಷ್ಟ, ಏನ್ ನಿಮ್ ಪ್ರಾಬ್ಲಂ?- ರಾಶಿ ಖನ್ನಾ
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರ ವಸ್ತ್ರಧಾರಣೆ ಬಗ್ಗೆ ತೆಲುಗು ನಟ ಶಿವಾಜಿ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಗೊತ್ತೇಯಿದೆ. ಈ ಬಗ್ಗೆ ಕೆಲ ನಟಿಯರು ಪ್ರತಿಕ್ರಿಯಿಸಿ ಆಕ್ರೋಶ ಹೊರ ಹಾಕಿದ್ದರು. ನಟಿ ಅನಸೂಯ ಭಾರಧ್ವಜ್ ಹಾಗೂ ಗಾಯಕಿ ಚಿನ್ಮಯಿ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಶಿವಾಜಿ ಬಳಸಿದ್ದ ಕೆಲ ಪದಗಳ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿತ್ತು. ಬಳಿಕ ಅವರು ಕ್ಷಮೆ ಕೇಳಿದ್ದರು.
ಕೆಲ ನಟಿಮಣಿಯರು ಶಿವಾಜಿ ವಾದವನ್ನು ಒಪ್ಪಿಕೊಂಡಿದ್ದರು. ಮತ್ತೆ ಕೆಲವರು ಮಹಿಳೆಯರು ಯಾವ ರೀತಿಯ ಬಟ್ಟೆ ಧರಿಸಬೇಕು ಎನ್ನುವುದು ಅವರಿಷ್ಟ. ಈ ಬಗ್ಗೆ ಯಾರ್ಯಾರೊ ಮಾತನಾಡುವುದು ಬೇಡ ಎಂದಿದ್ದರು. ಇದೇ ವಿಚಾರದ ಬಗ್ಗೆ ನಟಿ ರಾಶಿ ಖನ್ನಾ ಪ್ರತಿಕ್ರಿಯಿಸಿದ್ದಾರೆ. ಪವನ್ ಕಲ್ಯಾಣ್ ಜೊತೆ ರಾಶಿ ನಟಿಸಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ.

ದೆಹಲಿ ಬೆಡಗಿ ರಾಶಿ ಖನ್ನಾ ಸೌತ್ ಸಿನಿಮಾಗಳಲ್ಲಿ ಒಳ್ಳೆ ಅವಕಾಶಗಳನ್ನು ಗಿಟ್ಟಿಸಿಕೊಂಡವರು. ಆದರೆ ದೊಡ್ಡಮಟ್ಟದಲ್ಲಿ ಬ್ರೇಕ್ ಸಿಗಲೇ ಇಲ್ಲ. ಸ್ಟಾರ್ ನಟರ ಜೊತೆಗೆ ಮಿಂಚಿದರೂ ಪ್ರಯೋಜನವಾಗಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಅವಕಾಶಗಳು ಸಿಗಲಿಲ್ಲ. 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಮತ್ತೊಬ್ಬ ನಾಯಕಿಯಾಗಿ ರಾಶಿ ಮಿಂಚಿದ್ದಾರೆ.
ಸಿನಿಮಾ ಪ್ರಚಾರದ ಭಾಗವಾಗಿ ಕೆಲ ಸಂದರ್ಶನಗಳಲ್ಲಿ ನಟಿ ರಾಶಿ ಖನ್ನಾ ಭಾಗಿ ಆಗುತ್ತಿದ್ದಾರೆ. ಅದೇ ರೀತಿ ಸಂದರ್ಶನವೊಂದರಲ್ಲಿ "ಇತ್ತೀಚೆಗೆ, ನಾಯಕಿಯರ ಉಡುಗೆ ತೊಡುಗೆಯ ಬಗ್ಗೆ ವಿವಾದ ಉಂಟಾಗಿದೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?" ಎಂಬ ಪ್ರಶ್ನೆ ಎದುರಾಗಿದೆ. ಯಾವ ರೀತಿಯ ಬಟ್ಟೆ ಧರಿಸಬೇಕು ಎನ್ನುವುದು ಮಹಿಳೆಯರ ಇಷ್ಟ, ಬಟ್ಟೆಯ ವಿಚಾರದಲ್ಲಿ ನಿಮಗೇನು ಸಮಸ್ಯೆ ಎಂದು ಮರುಪ್ರಶ್ನೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದೆ.
"ಡ್ರೆಸ್ಸಿಂಗ್ ವಿಚಾರದಲ್ಲಿ ಧರಿಸುವ ಮಹಿಳೆಗೆ ಕಂಫರ್ಟ್ ಆಗಿ ಇದ್ರೆ ಸಾಕು. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆ ಮಹಿಳೆ ಕಂಫರ್ಟ್ ಆಗಿ ಇದ್ದಾಳೆ ತಾನೆ. ನಿಮಗೆ ಸಮಸ್ಯೆ ಏನು? ನಿಮಗೆ ಕಷ್ಟ ಯಾಕೋ ಗೊತ್ತಿಲ್ಲ. ಇಂಡಿಯನ್ ಆಗಿರಲಿ, ವೆಸ್ಟರ್ನ್ ಆಗಿರಲಿ. ಯಾವ ರೀತಿಯ ಬಟ್ಟೆ ಧರಿಸಬೇಕು ಎನ್ನುವುದು ಮಹಿಳೆ ಇಷ್ಟ" ಎಂದು ರಾಶಿ ಖನ್ನಾ ಹೇಳಿರುವುದು ವೈರಲ್ ಆಗ್ತಿದೆ.
ಇದೇ ವಿಚಾರವಾಗಿ ಇತ್ತೀಚೆಗೆ ತಮಿಳು ನಟಿ, ನಿರ್ದೇಶಕಿ ವರಲಕ್ಷ್ಮಿ ಶರತ್ಕುಮಾರ್ ಸಹ ಮಾತನಾಡಿದ್ದರು. "ಡ್ರೆಸ್ಸಿಂಗ್ ಎನ್ನುವುದು ವೈಯಕ್ತಿಕ ಸ್ವೇಚ್ಛೆ, ಪುರುಷರ ವಿಚಾರದಲ್ಲಿ ಒಂದು ತರ, ಮಹಿಳೆಯರ ವಿಚಾರದಲ್ಲಿ ಒಂದು ತರ ಆಲೋಚಿಸುವುದು ಸರಿಯಲ್ಲ. ಮನೆಯಲ್ಲಿ ಸಹೋದರಿ ಶಾರ್ಟ್ಸ್ ಹಾಕಿಕೊಂಡಿದ್ದರೆ ಅತ್ಯಾ*ಚಾರ ಮಾಡಬೇಕು ಅನ್ನಿಸುತ್ತಾ? ಪುರುಷರ ಚಡ್ಡಿ ಹೊರಗಡೆ ಕಾಣಿಸಬಹುದು. ಮಹಿಳೆಯರ ಬ್ರಾ* ಸ್ಟ್ರಾಪ್ ಹೊರಗೆ ಕಂಡರೆ ಏನೋ ಆಗಿಬಿಡ್ತು ಎನ್ನುವಂತೆ ರಾದ್ಧಾಂತ ಮಾಡಿಬಿಡ್ತಾರೆ. ಎಂತಹ ಬಟ್ಟೆ ಧರಿಸಬೇಕು ಎನ್ನುವುದು ಅವರವರ ಆಯ್ಕೆ. ಅದನ್ನು ಜಡ್ಜ್ ಮಾಡಬಾರದು" ಎಂದಿದ್ದರು.
2013ರಲ್ಲಿ 'ಮದ್ರಾಸ್ ಕೆಫೆ' ಸಿನಿಮಾ ಮೂಲಕ ರಾಶಿ ಖನ್ನಾ ಸಿನಿಜರ್ನಿ ಆರಂಭವಾಗಿತ್ತು. 'ಮನಂ' ಚಿತ್ರದ ಮೂಲಕ ದಕ್ಷಿಣಕ್ಕೆ ಬಂದಿದ್ದರು. ಬಳಿಕ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದು ಬಿಟ್ಟರೆ ಅದ್ಭುತ ಪಾತ್ರಗಳು ದೆಹಲಿ ಚೆಲುವೆಗೆ ಸಿಗಲಿಲ್ಲ. ಸದ್ಯ 3 ಹಿಂದಿ ಹಾಗೂ 1 ತಮಿಳು ಸಿನಿಮಾ ಆಕೆಯ ಕೈಯಲ್ಲಿದೆ. 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಿಡುಗಡೆಗಾಗಿ ಬಹಳ ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











