ಕೋವಿಡ್ ಬೆನ್ನಲ್ಲೇ ಮಯೋಸೈಟಿಸ್!; ಸಮಂತಾಗಿರುವ ಕಾಯಿಲೆ ಗುಣ ಆಗೋದೇ ಇಲ್ವಾ?
ಟಾಲಿವುಡ್ ಬ್ಯೂಟಿ ಸಮಂತಾಗೆ ಹೊರ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ. ತಮ್ಮ ವಿಭಿನ್ನ ಪಾತ್ರಗಳಿಂದ ಸ್ಯಾಮ್ ಸಿನಿರಸಿಕರ ಮನಗೆದ್ದಿದ್ದಾರೆ. ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರಗಳಿಂದ ಚೆನ್ನೈ ಬ್ಯೂಟಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಮಯೋಸೈಟಿಸ್ ವಿರುದ್ಧ ಹೋರಾಡುತ್ತಲೇ ಹೊಸ ಹೊಸ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ತೆಲುಗು ನಟ ನಾಗಚೈತನ್ಯಾ ಕೈಹಿಡಿದಿದ್ದ ಸ್ಯಾಮ್ 2 ವರ್ಷಗಳ ಹಿಂದೆ ಡಿವೋರ್ಸ್ ಪಡೆದಿದ್ದರು. ಅದರ ಬೆನ್ನಲ್ಲೇ ಆಕೆ ವಿಚಿತ್ರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆ ನಡೀತು. ಕೊನೆಗೂ ಖುದ್ದು ಆಕೆಯೇ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ತಾನು ಮೈಯೋಸೈಟಿಸ್ ಎನ್ನುವ ಆಟೋ ಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು.

ವೈದ್ಯಕೀಯ ಚಿಕಿತ್ಸೆ ಜೊತೆಗೆ ದೇಹವನ್ನು ದಂಡಿಸುವ ಮೂಲಕ ಸ್ಯಾಮ್ ತಮ್ಮ ಆರೋಗ್ಯ ಸಮಸ್ಯೆಯಿಂದ ಹೊರ ಬರಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಇತ್ತೀಚೆಗೆ ಸರಣಿ ಸಿನಿಮಾ ಸೋಲಿನಿಂದ ಕಂಗೆಟ್ಟಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅಭಿಮಾನಿಗಳು ಆಕೆಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಸ್ಯಾಮ್ ಆಪ್ತ ಸ್ನೇಹಿತ ರಾಹುಲ್ ರವಿಂದ್ರನ್ ಈ ಬಗ್ಗೆ ಮಾತನಾಡಿದ್ದಾರೆ.
ನಟಿ ಸಮಂತಾಗಿರುವ ಕೆಲವೇ ಆಪ್ತ ಸ್ನೇಹಿತರಲ್ಲಿ ನಟ, ನಿರ್ದೇಶಕ ರಾಹುಲ್ ರವಿಂದ್ರನ್ ಕೂಡ ಒಬ್ಬರು. ಸಮಂತಾ ಆರೋಗ್ಯದ ಬಗ್ಗೆ ರವೀಂದ್ರ ಮಾತನಾಡುತ್ತಾ "ಆಟೊ ಇಮ್ಯೂನ್ ಒಮ್ಮೆ ಬಂದ್ರೆ ಅದು ವಾಸಿ ಆಗುವುದಿಲ್ಲ. ಮೊದಲು ಕಂಟ್ರೋಲ್ಗೆ ತಗೊಂಡು ಬರಬೇಕು, ಬಳಿಕ ಕಂಟ್ರೋಲ್ನಲ್ಲಿ ಉಳಿಸಿಕೊಳ್ಳಬೇಕು ಅಷ್ಟೆ. ಆ ಸಮಸ್ಯೆ ಯಾಕೆ ಬರುತ್ತದೆ ಎನ್ನುವುದಕ್ಕೆ ಸರಿಯಾದ ಕಾರಣ ಗೊತ್ತಿಲ್ಲ. ಕೋವಿಡ್ ಬಳಿಕ ಸಾಕಷ್ಟು ಜನರಿಗೆ ಅದು ಕೋವಿಡ್ ಸೈಡ್ ಎಫೆಕ್ಟ್ ಎಂದು ಕೆಲವರು ಹೇಳುತ್ತಾರೆ"
"ಕೋವಿಡ್ ಒಂದು ಪ್ಯಾಂಡಮಿಕ್ ಅಂದ್ರೆ ಆ ಬಳಿಕ ಬಂದ ಮತ್ತೊಂದು ಸೈಲೆಂಟ್ ಪ್ಯಾಂಡಮಿಕ್ ಆಟೊ ಇನ್ಯೂಮ್. ನಮ್ಮ ಸ್ನೇಹಿತರ ಬಳಗದಲ್ಲೇ ಒಂದಿಬ್ಬರಿಗೆ ಬೇರೆ ಬೇರೆ ರೀತಿಯ ಆಟೋ ಇಮ್ಯೂನ್ ಕಂಡೀಷನ್ ಬಂತು. ಒಬ್ಬ ಸ್ನೇಹಿತ ಇದ್ದಾನೆ. ಆತನಿಗೆ ಇದೇ ತರಹದ ಸಮಸ್ಯೆಯಿಂದ ತೆಲ ಕೂದಲು ಉದುರಿತ್ತು. ಕೋವಿಡ್ ಇಂದ ಆ ರೀತಿ ಆಗಲಿಲ್ಲ. ಆದರೆ ಕೋವಿಡ್ ಬಳಿಕ ಆಟೊ ಇಮ್ಯೂನ್ ಕಾರಣಕ್ಕೆ ಆ ರೀತಿ ಆಗಿತ್ತು"

"ಸಮಂತಾಗಿರುವ ಆಟೋ ಇಮ್ಯೂನ್ ಬಹಳ ಗಂಭೀರವಾದುದ್ದು. ಆದರೆ ಈಗ ಆಕೆ ಆರಾಮಾಗಿ ಇದ್ದಾಳೆ. ಆಕೆ ಸಿಕ್ಕಾಪಟ್ಟೆ ಸ್ಟ್ರಾಂಗ್. ಟ್ರೀಟ್ಮೆಂಟ್, ವರ್ಕೌಟ್ ಮಾಡುತ್ತಾ ಬರುತ್ತಿದ್ದಾಳೆ. ಆಕೆಗಿರುವ ಶಿಸ್ತು ನನಗೂ ಇಲ್ಲ. ಸಾಕಷ್ಟು ಚಿಕಿತ್ಸೆ ಥೆರಪಿಗಳನ್ನು ಪಡೆಯುತ್ತಾ ಬರುತ್ತಿದ್ದಾಳೆ. ಕಂಡಿತ ಸಮಸ್ಯೆ ಮೀರಿ ಹೊರಬರುತ್ತಾಳೆ" ಎಂದು ರಾಹುಲ್ ಹೇಳಿದ್ದಾರೆ.
ಸಮಂತಾ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಾಗಲೂ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು. ಇದೆಲ್ಲ ನಾಟಕ ಎಂದಿದ್ದರು. ಈ ಬಗ್ಗೆ ಮಾತನಾಡಿರುವ ರಾಹುಲ್ "ಸಮಂತಾ ಆರೇಳು ತಿಂಗಳು ಏನು ಪೋಸ್ಟ್ ಮಾಡದೇ ಸೈಲೆಂಟ್ ಆಗಿಬಿಟ್ಟಿದ್ದಳು. ಎಲ್ಲೂ ಹೊರಗೂ ಕಾಣಿಸಿಕೊಳ್ಳಲಿಲ್ಲ. ಆದರೆ ಕೊನೆಗೆ 'ಶಾಕುಂತಲಂ' ಸಿನಿಮಾ ಪ್ರಚಾರದ ಸಮಯದಲ್ಲಿ ಹೊರ ಬರಲೇಬೇಕಿತ್ತು. ನಿರ್ಮಾಪಕರು ತನ್ನನ್ನು ನಂಬಿ ಹಣ ಹಾಕಿದ್ದಾರೆ. ಅವರಿಗಾಗಿ ಹೊರಬರಬೇಕು ಎಂದು ಬಂದಳು"
"ಟ್ರೋಲ್ ಎಲ್ಲರಿಗೂ ಇದ್ದಿದ್ದೆ. ಆದರೆ ಸ್ಟಾರ್ ನಟಿ ಎನ್ನುವ ಕಾರಣಕ್ಕೆ ಆಕೆಯ ಬಗ್ಗೆ ಬಹಳ ಮಾತನಾಡುತ್ತಾರೆ. ಆದರೆ ವೈಯಕ್ತಿಕವಾಗಿ ಟಾರ್ಗೆಟ್ ಮಾಡುವುದು ಸರಿಯಲ್ಲ. ಇದನ್ನು ಸಹಿಸಿಕೊಳ್ಳುವುದು ಎಂತಹವರಿಗೂ ಕಷ್ಟ" ಎಂದು ಹೇಳಿದ್ದಾರೆ.


Click it and Unblock the Notifications










