Chiranjeevi: ಛೇ.. ಚಿರು ಆ ಹಿಟ್ ಪ್ರಾಜೆಕ್ಟ್ ಬಿಟ್ಟು ತಪ್ಪು ಮಾಡಿದ್ರಾ? ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ ಫ್ಯಾನ್ಸ್
ಮೆಗಾಸ್ಟಾರ್ ಚಿರಂಜೀವಿ ನಟನೆಯ ಸಿನಿಮಾಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. 'ಆಚಾರ್ಯ', 'ಗಾಡ್ ಫಾದರ್', ಭೋಳಾ ಶಂಕರ್ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲುಂಡಿವೆ. ನಡುವೆ ಬಂದ 'ವಾಲ್ತೇರು ವೀರಯ್ಯ' ಸಕ್ಸಸ್ಗೆ ರವಿತೇಜಾ ಕಾರಣ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಚಿರು ಆ ಹಿಟ್ ಪ್ರಾಜೆಕ್ಟ್ ಒಪ್ಪಿಕೊಳ್ಳದೇ ತಪ್ಪು ಮಾಡಿದ್ರು ಎನ್ನಲಾಗ್ತಿದೆ.
ಭಾರತದಲ್ಲಿ ಬ್ಲಾಕ್ಬಸ್ಟರ್ ಹಿಟ್ ಆದ ವೆಬ್ ಸೀರಿಸ್ ಅಂದರೆ ಅದು 'ಫ್ಯಾಮಿಲಿ ಮ್ಯಾನ್'. 2 ಭಾಗಗಳಾಗಿ ಈ ಸೀರಿಸ್ ರಿಲೀಸ್ ಆಗಿ ದಾಖಲೆ ಬರೆದಿತ್ತು. ತೆಲುಗಿನ ನಿರ್ದೇಶಕರಾದ ರಾಜ್ ಮತ್ತು ಡಿಕೆ ಈ ಕಥೆಯನ್ನು ಕಟ್ಟಿಕೊಟ್ಟಿದ್ದರು. ಮೊದಲ ಭಾಗ ಹಿಟ್ ಆಗುತ್ತಿದ್ದಂತೆ 2ನೇ ಭಾಗವನ್ನು ಮತ್ತಷ್ಟು ಅದ್ಧೂರಿಯಾಗಿ ವೀಕ್ಷಕರ ಮುಂದೆ ತರಲಾಯಿತು. ಮನೋಜ್ ಬಾಜ್ಪೇಯಿ ಹಾಗೂ ಸಮಂತಾ ನಟಿಸಿ ಮೋಡಿ ಮಾಡಿದ್ದರು.

ಬ್ಲಾಕ್ಬಸ್ಟರ್ ಹಿಟ್ ಆದ ಈ ವೆಬ್ ಸೀರಿಸ್ನ ಮೊದಲಿಗೆ ಸಿನಿಮಾ ಮಾಡಲು ಉದ್ದೇಶಿಸಲಾಗಿತ್ತಂತೆ. ಚಿತ್ರದಲ್ಲಿ ಚಿರಂಜೀವಿ ನಟಿಸಬೇಕಿತ್ತು ಎಂದು ನಿರ್ಮಾಪಕ ಅಶ್ವಿನಿ ದತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. "ಫ್ಯಾಮಿಲಿಮ್ಯಾನ್ ಕಥೆ ನನಗೆ ಇಷ್ಟವಾಗಿ ಚಿರಂಜೀವಿಗೆ ಕಥೆ ಕೇಳಲು ಹೇಳಿದ್ದೆ. ಅವರು ಕೂಡ ಕೇಳಿ ಇಷ್ಟಪಟ್ಟಿದ್ದರು. ಆಗಷ್ಟೇ 'ಖೈದಿ ನಂಬರ್ 150' ನಟಿಸಿ ಗೆದ್ದಿದ್ದ ಚಿರು ಆ ಕಥೆ ಓಕೆ ಮಾಡಲು ಹಿಂದೇಟು ಹಾಕಿದರಂತೆ. 2 ಮಕ್ಕಳ ತಂದೆಯಾಗಿ ನನ್ನನ್ನು ಪ್ರೇಕ್ಷಕರು ಒಪ್ಪುವುದಿಲ್ಲ. ಕಥೆಯನ್ನು ಬದಲಿಸಿ ಎಂದರೆಂತೆ. ಅದರಂತೆ ನಿರ್ದೇಶಕರು ಕಥೆ ಬದಲಿಸಿದರೂ ಕೊನೆಗೆ ಕಾರಣಾಂತರಗಳಿಂದ ಆ ಸಿನಿಮಾ ಸಾಧ್ಯವಾಗಲಿಲ್ಲ. ಚಿರಂಜೀವಿ ಮಾಡಿದ್ದರೆ ಇನ್ನು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿತ್ತು" ಎಂದು ನಿರ್ಮಾಪಕರು ಹೇಳಿದ್ದಾರೆ.
ಮನೋಜ್ ಬಾಜ್ಪೇಯ್ ಕೂಡ 'ಫ್ಯಾಮಿಲಿಮ್ಯಾನ್' ಸೀರಿಸ್ನಲ್ಲಿ ನಟಿಸಲು ಹಿಂದು ಮುಂದು ನೋಡಿದ್ದರಂತೆ. 'ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ' ವೇದಿಕೆಯಲ್ಲಿ ಈ ಬಗ್ಗೆ ಮಾತನಾಡಿದ್ದರು. "ವಿವಿಧ ಡಿಜಿಟಲ್ ಫ್ಲಾಟ್ಫಾರ್ಮ್ಗಳಿಂದ ವೆಬ್ ಸೀರಿಸ್ ಅವಕಾಶಗಳು ಬರುತ್ತಿದ್ದ ಸಮಯದಲ್ಲೇ ಈ ಕಥೆ ಕಥೆ ಕೂಡ ನನ್ನ ಬಳಿ ಬಂದಿತ್ತು. ಇದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು, ಯಾವುದು ವೆಬ್ ಸೀರಿಸ್ ಆಗಿ ಕ್ಲಿಕ್ ಆಗುತ್ತದೆ ಎನ್ನುವ ಕ್ಲಾರಿಟಿ ಇರಲಿಲ್ಲ. ಹಾಗಾಗಿ ಯಾವುದರಲ್ಲಿ ನಟಿಸಬೇಕು ಎನ್ನುವುದು ಗೊತ್ತಿರಲಿಲ್ಲ. ಹಾಗಾಗಿ 'ಫ್ಯಾಮಿಲಿ ಮ್ಯಾನ್' ಬೇಡ ಎನ್ನಲು ನಿರ್ಧರಿಸಿದ್ದೆ. ಅದೇ ಸಮಯದಲ್ಲಿ ಕೆಲ ವೆಬ್ ಸೀರಿಸ್ ವೀಕ್ಷಕರಲ್ಲಿ ಆಸಕ್ತಿ ಕೆರಳಿವುದು ಗಮನಿಸಿದೆ. ಅದಕ್ಕೆ ಕಾರಣ ಥ್ರಿಲ್ಲಿಂಗ್ ಅಂಶಗಳು ಅಂತ ಗೊತ್ತಾಯಿತು. ಪ್ರೇಕ್ಷಕರು ಯಾವುದು ಬಯಸುತ್ತಾರೋ ಅದು ಕೊಡಬೇಕು ಎಂದುಕೊಂಡು ಕೊನೆಗೆ ಇದನ್ನು ಓಕೆ ಮಾಡಿದೆ" ಎಂದಿದ್ದರು.

ಒಟ್ಟಿನಲ್ಲಿ 'ಫ್ಯಾಮಿಲಿಮ್ಯಾನ್' ವೆಬ್ ಸೀರಿಸ್ನಲ್ಲಿ ಮನೋಜ್ ಬಾಜಪೇಯಿ ನಟಿಸಿ ಗೆದ್ದರು. ಒಂದು ವೇಳೆ ಚಿರಂಜೀವಿ 'ಫ್ಯಾಮಿಲಿಮ್ಯಾನ್' ಚಿತ್ರದಲ್ಲಿ ನಟಿಸಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಒಂದೊಳ್ಳೆ ಅವಕಾಶವನ್ನು ಮೆಗಾಸ್ಟಾರ್ ಮಿಸ್ ಮಾಡಿಕೊಂಡಿದ್ದಾರೆ. 'ಆಚಾರ್ಯ', 'ಭೋಳಾ' ರೀತಿಯ ಫ್ಲಾಪ್ ಸಿನಿಮಾ ಕೊಡುವ ಬದಲು ಈ ಸಿನಿಮಾ ಮಾಡಬಹುದಿತ್ತು ಎನ್ನುತ್ತಿದ್ದಾರೆ.
ಇತ್ತೀಚೆಗೆ ರಿಲೀಸ್ ಆಗಿದ್ದ ಚಿರಂಜೀವಿ ನಟನೆಯ 'ಭೋಳಾ ಶಂಕರ್' ಸಿನಿಮಾ ಮಕಾಡೆ ಮಲಗಿತ್ತು. ನಿರ್ಮಾಪಕರಿಗೆ ಭಾರೀ ನಷ್ಟ ತಂದೊಡ್ಡಿತ್ತು. ತಮಿಳಿನ 'ವೇದಾಳಂ' ರೀಮೆಕ್ ಆಗಿದ್ದ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋಲುಂಡಿತ್ತು. ಇದಕ್ಕಿಂತ 'ಫ್ಯಾಮಿಲಿ ಮ್ಯಾನ್' ಕತೆ ಒಪ್ಪಿಕೊಳ್ಳಬಹುದಿತ್ತು ಎಂದು ಮೆಗಾ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಿದ್ದಾರೆ. ಅಂದಹಾಗೆ ಈ ವರ್ಷ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿರು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.


Click it and Unblock the Notifications











