ತಂದೆಯ ಜೊತೆ ರಾಜಮೌಳಿ ಕೆಲಸ ಮಾಡುವುದು ಹೇಗೆ? ತಂದೆ ಮಾತು ಕೇಳ್ತಾರಾ ರಾಜಮೌಳಿ
'ಬಾಹುಬಲಿ' ಬಳಿಕ ದೇಶದ ಅತ್ಯುತ್ತಮ ನಿರ್ದೇಶಕ ಎನಿಸಿಕೊಂಡಿದ್ದ ರಾಜಮೌಳಿ, 'RRR' ಬಳಿಕ ವಿಶ್ವದ ಸಿನಿಮಾ ಜಗತ್ತಿನ ಗಮನ ಸೆಳೆದಿದ್ದಾರೆ.
ನೆಟ್ಫ್ಲಿಕ್ಸ್ ಕೃಪೆಯಿಂದ 'RRR' ಸಿನಿಮಾವನ್ನು ವಿಶ್ವದ ಹಲವು ದೇಶಗಳಲ್ಲಿ ಸಿನಿಮಾ ಪ್ರೇಮಿಗಳು, ಸಿನಿಮಾ ಆಸಕ್ತರು, ಸಿನಿಮಾ ಕರ್ಮಿಗಳು ನೋಡಿ ಭಲೆ ಎಂದಿದ್ದಾರೆ. 'RRR' ಆಸ್ಕರ್ಗೆ ನಾಮಿನೇಟ್ ಆಗುವುದು ಪಕ್ಕಾ ಎಂದು ಕೆಲವು ಹೆಸರಾಂತ ಸಿನಿಮಾ ಕರ್ಮಿಗಳು ಭವಿಷ್ಯ ನುಡಿದಿದ್ದಾರೆ.
'RRR' ಸಿನಿಮಾದ ಯಶಸ್ಸಿನ ಬಹುಭಾಗ ರಾಜಮೌಳಿಗೆ ದೊರೆಯುತ್ತಿದೆ. ಆದರೆ ಅವರ ಕುಟುಂಬದ ಬಹುತೇಕ ಮಂದಿ ಆ ಸಿನಿಮಾಕ್ಕಾಗಿ ಪ್ರಮುಖ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಅದರಲ್ಲಿಯೂ ಪ್ರಮುಖವಾಗಿ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ 'RRR' ಸಿನಿಮಾಕ್ಕೆ ಚಿತ್ರಕತೆ ಒದಗಿಸಿದ್ದಾರೆ. ಈ ಸಿನಿಮಾಕ್ಕೆ ಮಾತ್ರವಲ್ಲ ರಾಜಮೌಳಿಯ ಈ ಹಿಂದಿನ ಸಿನಿಮಾಗಳಿಗೂ ವಿಜಯೇಂದ್ರ ಪ್ರಸಾದ್ ಅವರೇ ಕತೆ ಒದಗಿಸಿದ್ದರು. ಹಾಗಿದ್ದರೆ ಈ ಅಪ್ಪ-ಮಗ ಒಟ್ಟಿಗೆ ಕೆಲಸ ಮಾಡುವುದು ಹೇಗೆ? ಒಟ್ಟಿಗೆ ಕೆಲಸ ಮಾಡಲು ಕಂಡುಕೊಂಡಿರುವ ಸೂತ್ರವೇನು? ರಾಜಮೌಳಿಯೇ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ರಾಜಮೌಳಿಗೆ ಸಿನಿಮಾದ ಐಡಿಯಾ ಹೇಗೆ ಬರುತ್ತದೆ
ಲಾಸ್ ಏಂಜಲಿಸ್ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, ''ನನಗೆ ಸಿನಿಮಾ ಐಡಿಯಾ ಮೊದಲು ಹೊಳೆಯುತ್ತದೆ. ಆ ನಂತರ ಆ ಐಡಿಯಾದ ಸುತ್ತ ಕೆಲವು ದೃಶ್ಯಗಳಷ್ಟೆ ಹೊಳೆಯುತ್ತವೆ. ಅದನ್ನು ನಾನು ತಂದೆಯವರೊಟ್ಟಿಗೆ ಹಂಚಿಕೊಳ್ಳುತ್ತೇನೆ. ಇಬ್ಬರೂ ಒಟ್ಟಿಗೆ ಕೂತು ಚರ್ಚಿಸಿ ಐಡಿಯಾ ಸರಿ ಇದೆಯೇ, ಈಗ ಯೋಚಿಸಿರುವ ಮುಖ್ಯ ದೃಶ್ಯಗಳು ಅಥವಾ ಐಕಾನಿಕ್ ದೃಶ್ಯಗಳು ಸರಿ ಇದೆಯೇ ಯೋಚಿಸಿ ಆ ನಂತರ ಮುಂದುವರೆಯುತ್ತೇವೆ'' ಎಂದಿದ್ದಾರೆ ರಾಜಮೌಳಿ.

''ಮುತ್ತುಗಳನ್ನು ಸೇರಿಸಿ ಹಾರ ಮಾಡುತ್ತಾರೆ ನನ್ನ ತಂದೆ''
''ಅವರು (ವಿಜಯೇಂದ್ರ ಪ್ರಸಾದ್) ತೆಲುಗು ಚಿತ್ರರಂಗದ ಹಿರಿಯ ಚಿತ್ರಕತೆಗಾರರು. ನನ್ನ ಐಡಿಯಾಕ್ಕೆ ಅಥವಾ ಒನ್ಲೈನರ್ ಹಾಗೂ ನಾನು ಈಗಾಗಲೇ ಯೋಚಿಸಿರುವ ಐಕಾನಿಕ್ ಸೀನ್ಗಳಿಗೆ ಸರಿಯಾದ ಕತೆಯನ್ನು ಹುಡುಕಿ ದೃಶ್ಯಗಳನ್ನು ಜೋಡಿಸುತ್ತಾರೆ. ಅದನ್ನು ಅವರು ಅದ್ಭುತವಾಗಿ ಮಾಡುತ್ತಾರೆ. ನನ್ನ ಬಳಿ ಮುತ್ತುಗಳು ಅಥವಾ ರತ್ನಗಳಿರುತ್ತವೆ ಅದನ್ನು ಒಂದು ದಾರದಲ್ಲಿ ಸೇರಿಸಿ ಹಾರವನ್ನು ಮಾಡುವ ಕಾರ್ಯವನ್ನು ನನ್ನ ತಂದೆಯವರು ಮಾಡುತ್ತಾರೆ'' ಎಂದು ಇಬ್ಬರು ಒಟ್ಟಿಗೆ ಕೆಲಸ ಮಾಡುವ ರೀತಿಯ ಬಗ್ಗೆ ಹೇಳಿದ್ದಾರೆ ರಾಜಮೌಳಿ.

ನಾನು ಹೇಳಿದಂತೆ ತಂದೆ ಕೇಳುತ್ತಾರೆ: ರಾಜಮೌಳಿ
ಮೊದಲೆಲ್ಲ ನಾನು ತಂದೆಯವರು ಹೇಳಿದಂತೆ ಕೇಳುತ್ತಿದ್ದೆ. ಆದರೆ ಈಗ ಹಾಗಲ್ಲ. ನಾನು ಹೇಳಿದಂತೆ ಅವರು ಕೇಳುವಂತೆ ಮಾಡಿದ್ದೇನೆ. ನಿರ್ದೇಶಕ ಎಂದ ಮೇಲೆ ನಾನು ಸಿನಿಮಾದ ಡ್ರೈವರ್ ಹಾಗಾಗಿ ನಾನು ಹೇಳಿದಂತೆ ಅವರು ಕೇಳುತ್ತಾರೆ. ಹಲವು ದೃಶ್ಯಗಳು ಇರುತ್ತವೆ, ಅದರಲ್ಲಿ ಯಾವುದು ಸಿನಿಮಾದ ಫೈನಲ್ ಕಟ್ಗೆ ಹೋಗಬೇಕು ಎಂಬುದನ್ನು ನಾನೇ ನಿರ್ಣಯಿಸುತ್ತೇನೆ. ಚಿತ್ರಕತೆಯ ಹೊರತಾಗಿ ಅವರು ಸಿನಿಮಾದ ವಿಷಯದಲ್ಲಿ ಮೂಗು ತೂರಿಸುವುದಿಲ್ಲ ಎಂದಿದ್ದಾರೆ ರಾಜಮೌಳಿ.

ಕುಟುಂಬದ ಸದಸ್ಯರೆಲ್ಲ ಒಂದೇ ಸಿನಿಮಾಕ್ಕೆ ಕೆಲಸ
ರಾಜಮೌಳಿಯ ಕುಟುಂಬದ ಬಹುತೇಕ ಸದಸ್ಯರು ರಾಜಮೌಳಿ ನಿರ್ದೇಶಿಸುವ ಸಿನಿಮಾದಲ್ಲಿ ತೊಡಗಿಕೊಳ್ಳುತ್ತಾರೆ. ಅವರ ತಂದೆ ವಿಜಯೇಂದ್ರ ಪ್ರಸಾದ್ ಕತೆ ಬರೆದರೆ, ಅವರ ಪತ್ನಿ ಲತಾ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಾರೆ. ಸಹೋದರ ಸಂಬಂಧಿ ಕೀರವಾಣಿ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುತ್ತಾರೆ. ಕೀರವಾಣಿಯ ಪತ್ನಿ ಶ್ರೀವಲ್ಲಿ ಎಕ್ಸಿಕ್ಯೂಟಿವ್, ಲೈನ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಾರೆ. ರಾಜಮೌಳಿಯ ಪುತ್ರ ಕಾರ್ತಿಕೇಯ ಸಿನಿಮಾದ ಪ್ರಚಾರ, ಶೂಟಿಂಗ್ ಎಕ್ಸಿಕ್ಯೂಶನ್, ನಟರ ಡೇಟ್ಸ್ ಇತರೆ ವಿಚಾರಗಳನ್ನು ನೋಡಿಕೊಳ್ಳುತ್ತಾರೆ. ಕೀರವಾಣಿಯ ಪುತ್ರ ಸಿನಿಮಾಕ್ಕೆ ಹಾಡು ಹಾಡುತ್ತಾರೆ. ಇವರೆಲ್ಲರೂ ಒಟ್ಟಿಗೆ ಒಂದೇ ಸಿನಿಮಾಕ್ಕೆ ಕೆಲಸ ಮಾಡುತ್ತಾರೆ.


Click it and Unblock the Notifications











