SSMB29: ಮಹೇಶ್ ಬಾಬು ಹಾಗೂ ರಾಜಮೌಳಿ ಅಭಿಮಾನಿಗಳಿಗೆ ಕಹಿಸುದ್ದಿ
ನಿರ್ದೇಶಕ ರಾಜಮೌಳಿ ಮತ್ತೆ ತಡ ಮಾಡುತ್ತಿದ್ದಾರೆ. 'RRR' ಸಿನಿಮಾ ಬಂದೋಗಿ ಎರಡೂವರೆ ವರ್ಷ ಕಳೆದರೂ ಹೊಸ ಸಿನಿಮಾ ಘೋಷಣೆ ಆಗಲಿಲ್ಲ. ಮಹೇಶ್ ಬಾಬು ಜೊತೆ ಸಿನಿಮಾ ಮಾಡುವುದು ಕನ್ಫರ್ಮ್ ಆಗಿದೆ. ಆದರೆ ಯಾವಾಗ ಶುರು? ಟೈಟಲ್ ಏನು? ಯಾವಾಗ ರಿಲೀಸ್? ಎನ್ನುವುದು ಮಾತ್ರ ಗೊತ್ತಿಲ್ಲ.
ಅಭಿಮಾನಿಗಳು ಕೂಡ ಕಾದು ಕಾದು ಸುಸ್ತಾಗಿದ್ದಾರೆ. ಇತ್ತ ರಾಜಮೌಳಿ ಸಿನಿಮಾ ಮುಗಿಯವರೆಗೂ ಮಹೇಶ್ ಬಾಬು ಬೇರೆ ಸಿನಿಮಾ ಒಪ್ಪಿಕೊಳ್ಳುವಂತಿಲ್ಲ. ಜಕ್ಕಣ್ಣನ ಸಿನಿಮಾ ಸದ್ಯಕ್ಕೆ ಶುರುವಾಗುವಂತಿಲ್ಲ. ಯಾವಾಗ ಶುರುವಾಗಿ ಯಾವಾಗ ಮುಗಿಯುತ್ತೆ? ಎನ್ನುವುದು ಗೊತ್ತಿಲ್ಲದೇ ತಲೆ ಕೆಡಿಸಿಕೊಂಡಿದ್ದಾರೆ. ಚಿತ್ರಕ್ಕೆ ಉದ್ದನೆಯ ಕೂದಲು, ಗಡ್ಡದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಮಹೇಶ್ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿ ಆಗಸ್ಟ್ನಲ್ಲೇ ಸಿನಿಮಾ ಶುರುವಾಗುತ್ತದೆ ಎಂದು ಕೆಲವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ನಿರ್ದೇಶಕ ರಾಜಮೌಳಿ ಬಹಳ ಕರಾರುವಕ್ಕಾಗಿ ಸಿನಿಮಾಗಳನ್ನು ಕಟ್ಟಿಕೊಡುತ್ತಾರೆ. ಯಾವುದೇ ಆತುರವಿಲ್ಲದೇ ತಮಗೆ ಬೇಕು ಅನ್ನಿಸಿದ್ದು ತೆರೆಮೇಲೆ ಬರುವವರೆಗೂ ಬಿಡುವ ಆಸಾಮಿಯೇ ಅಲ್ಲ. ಅದೇ ಕಾರಣಕ್ಕೆ ಅವರ ಎಲ್ಲಾ ಸಿನಿಮಾಗಳ ರಿಲೀಸ್ ತಡವಾಗುತ್ತದೆ. ಆದರೆ ಎಲ್ಲವೂ ಹಿಟ್ ಲಿಸ್ಟ್ ಸೇರಿದೆ.
SSMB29 ಚಿತ್ರಕ್ಕೆ ಕೂಡ ಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ನಡೀತಿದೆ. ಸಿನಿಮಾ ಯಾವಾಗ ಶುರು ಎನ್ನುವ ಬಗ್ಗೆ ವಿಜಯೇಂದ್ರ ಪ್ರಸಾದ್ ಮಾತನಾಡಿದ್ದಾರೆ. ಸಾಮಾನ್ಯವಾಗಿ ನಾವು ಯಾವುದೇ ಸಿನಿಮಾ ಮಾಡಲು ಒಂದು ತಿಂಗಳಲ್ಲಿ ಕಥೆ ಸಿದ್ಧ ಪಡಿಸುತ್ತೇವೆ. ಆದರೆ ಮಹೇಶ್ ಬಾಬು ಚಿತ್ರಕ್ಕೆ ಕಥೆ ಮಾಡಲು ಎರಡು ವರ್ಷ ವ್ಯಯಿಸಿದ್ದೇವೆ. ಅಷ್ಟರಮಟ್ಟಿಗೆ ಇದು ದೊಡ್ಡ ಸಿನಿಮಾ. ದೊಡ್ಡ ಲೆಕ್ಕಾಚಾರ ನಡೀತಿದೆ ಎಂದಿದ್ದಾರೆ.

ಜನವರಿಯಲ್ಲಿ SSMB29 ಸಿನಿಮಾ ಶುರುವಾಗುತ್ತದೆ ಎಂದು ವಿಜಯೇಂದ್ರ ಪ್ರಸಾದ್ ಖಚಿತಪಡಿಸಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಬಾರಿ ಬೇಗ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ತರಲು ಜಕ್ಕಣ್ಣ ಮನಸ್ಸು ಮಾಡಿದ್ದಾರಂತೆ. 2026ರ ಮಧ್ಯದಲ್ಲಿ ಸಿನಿಮಾ ಬಿಡುಗಡೆ ಆಗಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ. ಆದರೆ ಅದು ಸಾಧ್ಯಾನಾ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
ಈ ಬಾರಿ ಹಾಲಿವುಡ್ ಪ್ರೇಕ್ಷಕರರನ್ನು ಟಾರ್ಗೆಟ್ ಮಾಡಿ ರಾಜಮೌಳಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ SSMB29 ಕೆಲಸ ಮಾಡಲಿದ್ದಾರೆ. ಚಿತ್ರದ ಕಥೆ ಕೂಡ ದೇಶ ವಿದೇಶಗಳಲ್ಲಿ ಸಾಗಲಿದೆ. ಕೆ. ಎಲ್ ನಾರಾಯಣ್ ಎಂಬುವವರು ಚಿತ್ರಕ್ಕೆ ಹಣ ಹೂಡಲಿದ್ದಾರೆ. ಹಾಲಿವುಡ್ ಸ್ಟುಡಿಯೋ ಜೊತೆಗೂ ಜಕ್ಕಣ್ಣ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನದಲ್ಲಿದ್ದಾರೆ.
ಡಿಸೆಂಬರ್ 17ಕ್ಕೆ ಸ್ಪೆಷಲ್ ವೀಡಿಯೋ ಮಾಡಿ ಸಿನಿಮಾ ಅನೌನ್ಸ್ ಮಾಡಿ ಬಳಿಕ ಜನವರಿಯಲ್ಲಿ ಚಿತ್ರೀಕರಣ ಆರಂಭಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಅಂತೂ ಇಂತೂ ಜನವರಿಯಲ್ಲಿ ಸಿನಿಮಾ ಶುರುವಾಗುತ್ತಲ್ಲ ಎಂದು ಅಭಿಮಾನಿಗಳು ನಿಟ್ಟುಸಿರು ಬಿಡುತ್ತಿದ್ದಾರೆ. ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡಿ ಎಂದು ಕೇಳುತ್ತಿದ್ದಾರೆ. ಕೊನೆಯದಾಗಿ 'ಗುಂಟೂರು ಖಾರಂ' ಚಿತ್ರದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಬಣ್ಣ ಹಚ್ಚಿದ್ದರು.
2022ರಲ್ಲಿ ಬಂದ 'RRR' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಹುಬ್ಬೇರಿಸಿತ್ತು. ಜ್ಯೂ. ಎನ್ಟಿಆರ್ ಹಾಗೂ ರಾಮ್ಚರಣ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿ ಕಮಾಲ್ ಮಾಡಿದ್ದರು. ಚಿತ್ರ ಓಟಿಟಿಗೆ ಬಂದು ಹಾಲಿವುಡ್ ಪ್ರೇಕ್ಷಕರ ಮನ ಗೆದ್ದಿತ್ತು ಜೇಮ್ಸ್ ಕ್ಯಾಮರೂನ್ ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಅದೇ ಕಾರಣಕ್ಕೆ ಈ ಬಾರಿ ಜಕ್ಕಣ್ಣ ದೊಡ್ಡದಾಗಿ ಪ್ಲ್ಯಾನ್ ಮಾಡುತ್ತಿದ್ದಾರೆ.


Click it and Unblock the Notifications











