ತೆಲುಗು ಸಿನಿಮಾಗಳ ಸೋಲಿಗೆ ರಾಜಮೌಳಿ ಕಾರಣ ಎಂದಿದ್ದೇಕೆ ಆರ್ಜಿವಿ!
ಪಾನ್ ಇಂಡಿಯಾ ಸಿನಿಮಾಗಳು ಬರಲು ಶುರುವಾದ ಬಳಿಕ ಭಾರತೀಯ ಚಿತ್ರರಂಗದಲ್ಲಿ ಸಿನಿಮಾರಂಗದಲ್ಲಿ ಹಲವು ರೀತಿಯಲ್ಲಿ ಬದಲಾವಣೆಯಾಗುತ್ತದೆ. ಜೊತೆಗೆ ಹಲವು ಪ್ರಯೋಗಗಳು ಕೂಡ ನಡೆಯುತ್ತಿವೆ. ಪ್ಯಾನ್ ಇಂಡಿಯಾ ಎನ್ನುವ ಕಾನ್ಸೆಪ್ಟ್ ಒಂದು ಕಡೆ ಚಿತ್ರರಂಗಕ್ಕೆ ಪ್ಲಸ್ ಪಾಯಿಂಟ್ ಆದರೆ. ಮತ್ತೊಂದು ಕಡೆ ಅದೇ ಮುಳುವಾಗುತ್ತಿದೆ ಎನ್ನುವ ಕೂಗು ಕೇಳಿ ಬರ್ತಿದೆ.
ಇತ್ತೀಚಿಗೆ ತೆಲುಗು ಸಿನಿಮಾ ರಂಗದಲ್ಲಿ ಸಾಕಷ್ಟು ಸಿನಿಮಾಗಳು ನೆಲ ಕಚ್ಚುತ್ತಿವೆ. ನಿರೀಕ್ಷೆಯೊಂದಿಗೆ ಬಂದ ಸ್ಟಾರ್ ನಟರ ದೊಡ್ಡ, ದೊಡ್ಡ ಸಿನಿಮಾಗಳು ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಗುತ್ತಿವೆ. ಇನ್ನು ಬಾಕ್ಸಾಫೀಸ್ ಗಳಿಕೆಯಲ್ಲೂ ಕೂಡ ಹೆಚ್ಚು ಸದ್ದು ಮಾಡದೆ. ನಷ್ಟವನ್ನು ಅನುಭವಿಸುತ್ತಿವೆ.
ಇದೇ ಕಾರಣಕ್ಕೆ ತೆಲುಗು ಚಿತ್ರರಂಗದ ನಿರ್ಮಾಪಕರು ಪ್ರತಿಭಟನೆಗೂ ಇಳಿದಿದ್ದಾರೆ. ಆದರೆ ಈ ರೀತಿಯ ಸಿನಿಮಾಗಳ ಸೋಲಿಗೆ ಕಾರಣ ನಿರ್ದೇಶಕ ರಾಜಮೌಳಿ ಎಂದು ಹೇಳುವ ಮೂಲಕ ರಾಮ್ ಗೋಪಾಲ್ ವರ್ಮಾ ಚರ್ಚೆಗೆ ಗ್ರಾಸವಾಗಿದ್ದಾರೆ.

ಟಾಲಿವುಡ್ನಲ್ಲಿ ಸರಣಿ ಸೋಲು!
ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಟಾಲಿವುಡ್ ಸಿನಿಮಾ ಎಂದರೆ ಅದು ರಾಜಮೌಳಿ ನಿರ್ದೇಶನದ RRR. ಈ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿ ದೊಡ್ಡಮಟ್ಟದಲ್ಲಿ ಗಳಿಕೆ ಕಂಡಿದೆ. ಯಶಸ್ಸನ್ನು ಮುಡಿಗೇರಿಸಿಕೊಂಡಿದೆ. RRR ಚಿತ್ರದ ಬಳಿಕ ಬಂದ ಸಿನಿಮಾಗಳು ಅಷ್ಟೇನೂ ಸದ್ದು ಮಾಡಿಲ್ಲ. ಬದಲಾಗಿ ಹಲವು ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸೋತು ಹೋಗಿದೆ. ಇದು ಚಿತ್ರರಂಗದ ಅಸಮಾಧಾನಕ್ಕೆ ಕಾರಣ ಆಗಿದೆ.

ರಾಜಮೌಳಿ ಬಗ್ಗೆ RGV ಹೇಳಿಕೆ!
ಸದ್ಯ ಸಿನಿಮಾರಂಗದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ರಾಮ್ ಗೋಪಾಲ್ ವರ್ಮಾ "ಈಗ ಏನೆಲ್ಲ ಸಂಕಷ್ಟ ಎದುರಾಗುತ್ತಿದೆ ಅದಕ್ಕೆಲ್ಲ ಒಬ್ಬರೇ ಕಾರಣ. ಆತನ ಹೆಸರು ರಾಜಮೌಳಿ. ರಾಜಮೌಳಿ ಎರಡು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಒಂದು ಸಿನಿಮಾ ಮಾಡಿದರೆ 2 ಸಾವಿರ ಕೋಟಿ ರೂ. ದುಡ್ಡು ಗಳಿಸಬಹುದು ಎನ್ನುವುದು. ಮತ್ತೊಂದು ಸಿನಿಮಾವನ್ನು ಅತ್ಯದ್ಭುತ ಕ್ವಾಲಿಟಿ ಕೊಟ್ಟು ಪ್ರೇಕ್ಷಕರಿಗೆ ಅಭ್ಯಾಸ ಮಾಡಿಕೊಟ್ಟಿದ್ದಾರೆ.

ಪ್ರೇಕ್ಷಕರನ್ನು ಬದಲಾಯಿಸಿದ ರಾಜಮೌಳಿ!
ಸಿನಿಮಾ ಮಂದಿರಕ್ಕೆ ಪ್ರೇಕ್ಷಕರು ಬಾರದೆ ಇರಲು, ಅಭಿರುಚಿ ಬದಲಾಗಿರುವುದೇ ಕಾರಣ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಇತ್ತೀಚಿಗೆ ಒಟಿಟಿ ಹಾವಳಿ ಹೆಚ್ಚಾಗಿರುವುದರಿಂದ ಸಿನಿಮಾ ಮಂದಿರಕ್ಕೆ ಪ್ರೇಕ್ಷಕರು ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ನಿಟ್ಟಿನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲು, ತೆಲುಗು ನಿರ್ಮಾಪಕರು ಮುಷ್ಕರಕ್ಕೆ ಮುಂದಾಗಿದ್ದಾರೆ. ಆದರೆ ಸಿನಿಮಾ ನೋಡುವ ಪ್ರೇಕ್ಷಕರ ಅಭಿರುಚಿ ಬದಲಾಯಿಸಿರುವುದು, ರಾಜಮೌಳಿ ಎಂದು ಆರ್ಜಿವಿ ಕಿಡಿಕಾರಿದ್ದಾರೆ. ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ ರಾಜಮೌಳಿಯ ವಿರುದ್ಧ ಹರಿಹಾಯ್ದಿದ್ದಾರೆ.

ಟಾಲಿವುಡ್ನಲ್ಲಿ ಸಾಲು-ಸಾಲು ಸೋಲು!
ತೆಲುಗು ಸಿನಿಮಾ ರಂಗದಲ್ಲಿ ಬಹುತೇಕ ಸಿನಿಮಾಗಳು ಹಳ್ಳ ಹಿಡಿದಿವೆ. ಅದರಲ್ಲಿ ನಟ ಚಿರಂಜೀವಿ ಅಭಿನಯದ ಆಚಾರ್ಯ, ದಿ ವಾರಿಯರ್, ಥ್ಯಾಂಕ್ಯು, ರಾಮರಾವ್ ಆನ್ ಡ್ಯೂಟಿ, ಸೇರಿದಂತೆ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್ ಸೋಲುಂಡಿವೆ. ಇನ್ನು ಕೆಲವು ಸಿನಿಮಾಗಳು ಅಂದು ಕೊಂಡ ಮಟ್ಟಿಗೆ ಗಳಿಕೆ ಕಾಣುವಲ್ಲಿ ವಿಫಲವಾಗಿದೆ. ಜೊತೆಗೆ ಪ್ರೇಕ್ಷಕರನ್ನ ಮುಟ್ಟುವಲ್ಲಿ ಕೂಡ ಸೋತಿದೆ.


Click it and Unblock the Notifications










