ಸಾವಿನ ಮನೆಯಲ್ಲಿ ಪೀಡಿಸಿದವನ ಮೇಲೆ ರಾಜಮೌಳಿ ಕೆಂಡಾಮಂಡಲ, ವೀಡಿಯೋ
ಕೆಲವರಿಗೆ ಎಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದು ಗೊತ್ತಾಗಲ್ಲ ಅನ್ಸತ್ತೆ. ಸಮಯ, ಸಂದರ್ಭ ನೋಡದೇ ತಮ್ಮದೇ ಲೆಕ್ಕಾಚಾರದಲ್ಲಿ ಇರ್ತಾರೆ. ಸೂತಕದ ಮನೆಯಲ್ಲಿ ನಿರ್ದೇಶಕ ರಾಜಮೌಳಿಯನ್ನು ಕಂಡು ಅಭಿಮಾನಿಯೊಬ್ಬ ಅಧಿಕ ಪ್ರಸಂಗಿತನ ತೋರಿದ್ದಾನೆ. ಒಂದು ಕ್ಷಣ ಜಕ್ಕಣ್ಣ ತಾಳ್ಮೆ ಕಳೆದುಕೊಳ್ಳುವಂತಾಗಿದೆ.
ತೆಲುಗಿನ ಖ್ಯಾತ ನಟ ಕೋಟ ಶ್ರೀನಿವಾಸ್ ರಾವ್ ನಿನ್ನೆ(ಜುಲೈ 13) ನಿಧನರಾಗಿದ್ದರು. 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟನ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ಆಘಾತ ತಂದಿದೆ. ತೆಲುಗು ಚಿತ್ರರಂಗದ ಗಣ್ಯರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಕೋಟ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಚಿರಂಜೀವಿ, ಜ್ಯೂ. ಎನ್ಟಿಆರ್, ಬ್ರಹ್ಮಾನಂದಂ ಸೇರಿದಂತೆ ಖ್ಯಾತ ನಾಮರು ಕೋಟ ಶ್ರೀನಿವಾಸ್ ರಾವ್ ನಿವಾಸಕ್ಕೆ ಭೇಟಿ ನೀಡಿದ್ದರು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ನಿರ್ದೇಶಕ ರಾಜಮೌಳಿ ಕೂಡ ಆಗಮಿಸಿದ್ದರು. ಅವರು ಬಂದು ವಾಪಸ್ ತೆರಳುವಾಗ ಕೆಲವರು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.
ಸೂತಕದ ಮನೆಯಲ್ಲಿ ಕೂಡ ಅಭಿಮಾನಿಗಳ ಸೆಲ್ಫಿ ಮೋಹಕ್ಕೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಒಬ್ಬಾತ ಮೌಳಿ ಅವರನ್ನು ಹಿಂಬಾಲಿಸಿ ಕಾರಿನವರೆಗೆ ಸೆಲ್ಫಿ ಕೇಳಿ ಪೀಡಿಸಿದ್ದಾನೆ. ಇದಕ್ಕೆ ಬೇಸರಗೊಂಡ ಮೌಳಿ ಒಂದು ಕ್ಷಣ ಆಕ್ರೋಶದಿಂದ ಕೂಗಾಡಿ ಕಾರು ಏರಿ ಹೊರಟುಬಿಟ್ಟಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಯ ಸೆಲ್ಫಿ ಹುಚ್ಚಿಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಾವಿನ ಮನೆಯಲ್ಲಿ ಕೂಡ ಯಾಕೆ ಹೀಗೆ ನಡೆದುಕೊಳ್ಳುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಕೂಡ ಕೋಟ ಶ್ರೀನಿವಾಸ್ ರಾವ್ ನಟಿಸಿದ್ದರು. ಕನ್ನಡದಲ್ಲಿ 'ಲೇಡಿ ಕಮೀಷನರ್', 'ರಕ್ತ ಕಣ್ಣೀರು', 'ಲವ್', 'ನಮ್ಮ ಬಸವ', 'ನಮ್ಮಣ್ಣ', 'ಮಸ್ತಿ' ಹಾಗೂ 'ಶ್ರೀಮತಿ' ಎಂಬ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಆರ್. ಚಂದ್ರು ನಿರ್ದೇಶನದ 'ಕಬ್ಜ' ಕನ್ನಡದಲ್ಲಿ ಅವರ ಕೊನೆಯ ಸಿನಿಮಾ.
ಸೆಲೆಬ್ರೆಟಿಗಳಿಗೆ ಸಾಕಷ್ಟು ಸಂದರ್ಭಗಳಲ್ಲಿ ಇಂತಹ ಕಹಿ ಅನುಭವ ಆಗುತ್ತದೆ. ಇಂತಹ ಅಭಿಮಾನಕ್ಕೆ ಏನು ಹೇಳುವುದೋ ಗೊತ್ತಾಗುವುದಿಲ್ಲ. ಸಾಮಾನ್ಯವಾಗಿ ರಾಜಮೌಳಿ ಹೋದಲ್ಲಿ ಬಂದಲ್ಲಿ ಜನ ಮುತ್ತಿಕೊಳ್ಳುತ್ತಾರೆ. ಬೌನ್ಸರ್ಸ್ ಅವರ ರಕ್ಷಣೆಗೆ ಇರುತ್ತಾರೆ. ಹಾಗಾಗಿ ಅಷ್ಟು ಸುಲಭವಾಗಿ ಅಭಿಮಾನಿಗಳು ಅವರ ಹತ್ತಿರಕ್ಕೆ ಹೋಗಲು ಫೋಟೊ ಕ್ಲಿಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸೂತಕದ ಮನೆಯಲ್ಲಿ ಅವರನ್ನು ಒಬ್ಬೊಂಟಿಯಾಗಿ ಕಂಡು ಅಭಿಮಾನಿ ಹೀಗೆ ಸೆಲ್ಫಿಗಾಗಿ ಕಾಡಿದ್ದಾನೆ.
ಸಿನಿಮಾಗಳ ವಿಚಾರಕ್ಕೆ ಬಂದರೆ 'ಆರ್ಆರ್ಆರ್' ಬಳಿಕ ರಾಜಮೌಳಿ ಅಧಿಕೃತವಾಗಿ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಮಹೇಶ್ ಬಾಬು ನಿರ್ದೇಶನದ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಿಯಾಂಕ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಕೂಡ ತಾರಾಗಣದಲ್ಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಜಕ್ಕಣ್ಣ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ದೇಶ ವಿದೇಶದ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಒರಿಸ್ಸಾ ಹಾಗೂ ಹೈದರಾಬಾದ್ನಲ್ಲಿ ಎರಡು ಶೆಡ್ಯೂಲ್ ಚಿತ್ರೀಕರಣ ಮುಗಿಸಿದ್ದಾರೆ. ಇತ್ತೀಚೆಗೆ ಚಿತ್ರೀಕರಣಕ್ಕಾಗಿ ಕೀನ್ಯಾಗೆ ಹೋಗಲು ಜಕ್ಕಣ್ಣ ಪ್ಲ್ಯಾನ್ ಮಾಡಿದ್ದರು. ಕಾರಣಾಂತರಗಳಿಂದ ಹೋಗಲಿಲ್ಲ ಎನ್ನಲಾಗ್ತಿದೆ.


Click it and Unblock the Notifications











