SSMB29: ಗ್ಲೋಬ್ಟ್ರೋಟರ್ ಈವೆಂಟ್ ಬಗ್ಗೆ ಮೌಳಿ ಮಾತು; ಷರತ್ತುಗಳು ಏನು?
ಬಹುನಿರೀಕ್ಷಿತ ಗ್ಲೋಬ್ಟ್ರೋಟರ್ ಸಿನಿಮಾ ಟೈಟಲ್ ಹಾಗೂ ಟೀಸರ್ ಲಾಂಚ್ ಈವೆಂಟ್ಗೆ ವೇದಿಕೆ ಸಿದ್ಧವಾಗ್ತಿದೆ. ಶನಿವಾರ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದ್ದು ಜಿಯೋ ಹಾಟ್ಸ್ಟರ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾ ಮೇಕಿಂಗ್ ಹಂತದಲ್ಲೇ ಹೈಪ್ ಕ್ರಿಯೇಟ್ ಮಾಡ್ತಿದೆ.
ಈ ಬಾರಿ ಹಾಲಿವುಡ್ ರೇಂಜ್ನಲ್ಲಿ ರಾಜಮೌಳಿ ಸಿನಿಮಾ ಪ್ಲ್ಯಾನ್ ಮಾಡಿದ್ದಾರೆ. ಮಹೇಶ್ ಬಾಬು ಜೊತೆ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸಿದ್ದಾರೆ. ಈಗಾಗಲೇ ಅವರಿಬ್ಬರ ಲುಕ್ ಪಾತ್ರಗಳ ಹೆಸರು ರಿವೀಲ್ ಆಗಿದೆ. ವಿಲನ್ ಕುಂಭ ಆಗಿ ಪೃಥ್ವಿರಾಜ್ ಅಬ್ಬರಿಸಲಿದ್ದಾರೆ. ಮಂದಾಕಿನಿಯಾಗಿ ಪ್ರಿಯಾಂಕ ಚೋಪ್ರಾ ದರ್ಬಾರ್ ನಡೆಸಲಿದ್ದಾರೆ.

ಪ್ಯಾನ್ ಇಂಡಿಯಾ ಅಲ್ಲ ಇದು ಪ್ಯಾನ್ ವರ್ಲ್ಡ್ ಸಿನಿಮಾ. ಹಾಗಾಗಿ ದೊಡ್ಡಮಟ್ಟದಲ್ಲಿ ಈವೆಂಟ್ ನಡೀತಿದೆ. ಸುಮಾರು 50 ಸಾವಿರ ಜನ ಈವೆಂಟ್ನಲ್ಲಿ ಭಾಗಿ ಆಗುವ ಸಾಧ್ಯತೆಯಿದೆ. ಇತ್ತೀಚೆಗೆ ಹೆಚ್ಚು ಜನ ಸೇರುವ ಜಾಗದಲ್ಲಿ ಕಾಲ್ತುಳಿತ ರೀತಿಯ ದುರಂತಗಳು ನಡೆಯುತ್ತಿದೆ. ಹಾಗಾಗಿ ಗ್ಲೋಬ್ಟ್ರೋಟರ್ ಚಿತ್ರತಂಡಕ್ಕೆ ಹೈದರಾಬಾದ್ ಪೊಲೀಸರು ಒಂದಷ್ಟು ಷರತ್ತುಗಳನ್ನು ವಿಧಿಸಿ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದ್ದಾರೆ.
ಪೊಲೀಸರು ಷರತ್ತುಗಳ ಬಗ್ಗೆ ನಿರ್ದೇಶಕ ರಾಜಮೌಳಿ ವೀಡಿಯೋ ಮಾಡಿ ಮಾತನಾಡಿದ್ದಾರೆ. ಎಲ್ಲರಿಗೂ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಆನ್ಲೈನ್ನಲ್ಲಿ ಯಾವುದೇ ಪಾಸ್ ಮಾರಾಟ ಮಾಡುತ್ತಿಲ್ಲ. ಪಾಸ್ಗಳನ್ನು ವಿತರಿಸುತ್ತೇವೆ. ಪಾಸ್ ಇದ್ದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ. ಮೊದಲು ಬಂದವರಿಗೆ ಉತ್ತಮ ಆಸನಗಳು ಲಭಿಸಲಿದೆ. ಇನ್ನುಳಿದಂತೆ ಜಿಯೋ ಹಾಟ್ಸ್ಟರ್ನಲ್ಲಿ ಲೈವ್ ಸ್ಟ್ರೀಮಿಂಗ್ ನೋಡಿ ಎಂದು ಜಕ್ಕಣ್ಣ ಮನವಿ ಮಾಡಿದ್ದಾರೆ. 18 ವರ್ಷಕ್ಕಿಂತ ಚಿಕ್ಕವರು ಹಾಗೂ ವಯಸ್ಸಾದವರು ಬರಬೇಡಿ, ಪೊಲೀಸರು ಅನುಮತಿ ಕೊಟ್ಟಿಲ್ಲ ಎಂದು ಮೌಳಿ ಮಾಹಿತಿ ನೀಡಿದ್ದಾರೆ.
ಬಹಳ ವರ್ಷಗಳಿಂದ ಮಹೇಶ್ ಬಾಬು ಹಾಗೂ ರಾಜಮೌಳಿ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೀತಿತ್ತು. ಅಂತೂ ಇಂತೂ ಆ ಸಮಯ ಈಗ ಹತ್ತಿರ ಬಂದಿದೆ. ಈಗಾಗಲೇ ಬಿಡುಗಡೆ ಆಗಿರುವ 2 ಪೋಸ್ಟರ್ಗಳಿಗೆ ಭಾರೀ ರೆಸ್ಪಾನ್ಸ್ ಸಿಕ್ಕಿದೆ. ಕುಂಭ ಪೋಸ್ಟರ್ ನೋಡಿ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮಂದಾಕಿನಿಯಾಗಿ ಪ್ರಿಯಾಂಕ ಅವತಾರಕ್ಕೆ ಫಿದಾ ಆಗಿದ್ದಾರೆ. ಇನ್ನೆರಡು ದಿನಗಳಲ್ಲಿ ಮಹೇಶ್ ಬಾಬು ಲುಕ್ ರಿವೀಲ್ ಆಗಲಿದೆ.
ಈ ಚಿತ್ರಕ್ಕಾಗಿ ಹಾಲಿವುಡ್ ಸಂಸ್ಥೆಗಳ ಜೊತೆ ರಾಜಮೌಳಿ ಒಪ್ಪಂದ ಮಾಡಿಕೊಂಡಿದ್ದಾರೆ. ದೇಶವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ಟೈಟಲ್ ಏನು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಮಾಧವನ್ ಸೇರಿ ಮತ್ತಷ್ಟು ಕಲಾವಿದರು SSMB29 ತಂಡ ಸೇರಿಕೊಳ್ಳುವ ನಿರೀಕ್ಷೆಯಿದೆ. ಎಂ. ಎಂ ಕೀರವಾಣಿ ಸಂಗೀತ ನೀಡುವುದು ಪಕ್ಕಾ ಆಗಿದೆ.
ಇತ್ತೀಚೆಗೆ 'ಸಂಚಾರಿ' ಎಂದು ಶುರುವಾಗುವ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಕೀರವಾಣಿ ಸಂಗೀತದ ಹಾಡನ್ನು ಶ್ರುತಿ ಹಾಸನ್ ಹಾಡಿದ್ದಾರೆ. ನಾಯಕನ ಪಾತ್ರವನ್ನು ವಿಜೃಂಭಿಸಿ ಮಾಡಿರುವ ಹಾಡು ಅಭಿಮಾನಿಗಳ ಮನ ಗೆದ್ದಿದೆ. ಆದರೆ ಈ ಹಾಡು ಚಿತ್ರದಲ್ಲಿ ಇರುತ್ತಾ ಅಥವಾ ಬರೀ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ. ಇನ್ನು 2027ರಲ್ಲಿ ಈ ಸಿನಿಮಾ ಬಿಡುಗಡೆ ಆಗಬಹುದು ಎನ್ನುವ ನಿರೀಕ್ಷೆಯಿದೆ.
ಈ ಸಿನಿಮಾ ಮೂಲಕ ಪ್ರಿಯಾಂಕ ಚೋಪ್ರಾ ಮತ್ತೆ ಭಾರತೀಯ ಚಿತ್ರರಂಗಕ್ಕೆ ವಾಪಸ್ ಬಂದಿದ್ದಾರೆ. 'ಗುಂಟೂರು ಖಾರಂ' ಬಳಿಕ ಯಾವುದೇ ಸಿನಿಮಾ ಒಪ್ಪಿಕೊಳ್ಳದ ಮಹೇಶ್ ಬಾಬು ಸಾಕಷ್ಟು ತಯಾರಿ ನಡೆಸಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಅವರ ಫಸ್ಟ್ ಲುಕ್ ಹೇಗಿರುತ್ತೆ? ಯಾವ ಪಾತ್ರ? ಹೆಸರೇನು? ಎಂದು ತಿಳಿದುಕೊಳ್ಳು ಅಭಿಮಾನಿಗಳು ಕಾತರರಾಗಿದ್ದಾರೆ.


Click it and Unblock the Notifications











