ಯಾರದ್ದೋ ತಪ್ಪಿಗೆ ದೇವರನ್ನು ದೂಷಿಸಿದ ರಾಜಮೌಳಿ; ವೀಡಿಯೋ ವೈರಲ್
ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಟೈಟಲ್ ರಿವೀಲ್ ಆಗಿದೆ. ರಾಮೋಜಿ ಫಿಲ್ಮ್ಸಿಟಿಯಲ್ಲಿ ನಡೆದ ಗ್ಲೋಬ್ ಟ್ರಾಟರ್ ಈವೆಂಟ್ ಕಾರಣಾಂತರಗಳಿಂದ ಅಸ್ತವ್ಯಸ್ತವಾಗಿತ್ತು. 'ವಾರಣಾಸಿ' ಟೈಟಲ್ ಟೀಸರ್ ಪ್ಲೇ ಮಾಡಲು ಚಿತ್ರತಂಡ ಸಿಕ್ಕಾಪಟ್ಟೆ ಕಷ್ಟಪಡುವಂತಾಯಿತು. ಈ ಬಗ್ಗೆ ವೇದಿಕೆಯಲ್ಲಿ ರಾಜಮೌಳಿ ಬೇಸರ ವ್ಯಕ್ತಪಡಿಸಿದರು.
ನಾಸ್ತಿಕರಾದ ರಾಜಮೌಳಿ ಬೇಸರದ ಮಾತುಗಳು ವೈರಲ್ ಆಗುತ್ತಿದೆ. ನಮ್ಮ ತಂದೆ ಹೇಳಿದ್ರು ಹನುಮಂತ ಹಿಂದೆ ನಿಂತು ಎಲ್ಲವನ್ನು ಮುನ್ನಡೆಸುತ್ತಾನೆ ಅಂತ. ಈ ರೀತಿ ಆಗಿದ್ದು ನೋಡಿ ಇದೇನಾ ಹನುಮಂತ ನಡೆಸುವುದು ಅಂತ ಕೋಪ ಬಂತು ಎಂದು ರಾಜಮೌಳಿ ಬೇಸರ ವ್ಯಕ್ತಪಡಿಸಿದ್ದಾರೆ. ಯಾರದ್ದೋ ತಪ್ಪಿಗೆ ದೇವರನ್ನು ಯಾಕೆ ದೂಷಿಸುತ್ತೀರಾ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇಷ್ಟು ದೊಡ್ಡ ಕಾರ್ಯಕ್ರಮ ನಡೆಯುವಾಗ ಎಲ್ಲವನ್ನು ಸರಿಯಾಗಿ ನೋಡಿಕೊಳ್ಳಬೇಕಿತ್ತು. ತಪ್ಪು ನಿಮ್ಮದೇ ಈಗ ನೋಡಿದ್ರೆ ದೇವರ ಮೇಲೆ ಆರೋಪ ಮಾಡ್ತೀರಾ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಟ್ರೈಲರ್ ಬಿಡುಗಡೆಗೆ ವಿಲಂಬವಾಗಲು ಕಾರಣ ಏನು ಎನ್ನುವುದನ್ನು ರಾಜಮೌಳಿ ವಿವರಿಸಿದರು. ಅದಕ್ಕಾಗಿ ಕ್ಷಮೆ ಕೂಡ ಕೇಳಿದ್ದರು.
ರಾಜಮೌಳಿ ಮಾತನಾಡಿ "ವಾರಣಾಸಿ ಚಿತ್ರದ ಟ್ರೈಲರ್ ಅನ್ನು ಬಹಳ ಅದ್ಭುತವಾಗಿ ಪ್ರದರ್ಶನ ಮಾಡಬೇಕು ಎಂದು ಭಾವಿಸಿದ್ದೆವು. 100 X 130 ಅಡಿ ಸ್ಕ್ರೀನ್ ಸಿದ್ಧಪಡಿಸಿದ್ದೆವು. ಅದಕ್ಕೆ 45 ಜನರೇಟರ್ಗಳನ್ನು ತಂದು ವಿದ್ಯುತ್ ಸರಬರಾಜು ಮಾಡಿದ್ದೆವು. ಅದಕ್ಕಾಗಿ ಬಹಳ ಪ್ಲಾನಿಂಗ್ ಮಾಡಿದ್ದೆವು. ಸಾಕಷ್ಟು ಜನ ಇದಕ್ಕಾಗಿ ಕೆಲಸ ಮಾಡಿದ್ದರು. ಮಧ್ಯರಾತ್ರಿ 2 ಗಂಟೆವರೆಗೆ ಶ್ರಮಿಸಿದ್ದೆವು. ಟೀಸರ್ ಮೊದಲೇ ಲೀಕ್ ಆಗಬಾರದು ಎಂದು ಎಚ್ಚರಿಕೆ ವಹಿಸಿದ್ದೆವು. ಆದರೆ ಎಲ್ಲಿಂದಲೋ ಬಂದ ಡ್ರೋನ್ ಕ್ಯಾಮರಾ ಅದನ್ನೆಲ್ಲಾ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತೇಲಿಬಿಟ್ಟರು. ನಮ್ಮ ವರ್ಷದ ಶ್ರಮವನ್ನು ಕೆಲವೇ ಕ್ಷಣಗಳಲ್ಲಿ ಲೀಕ್ ಮಾಡಿಬಿಟ್ರು" ಎಂದು ರಾಜಮೌಳಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಈವೆಂಟ್ಗೂ ಮುನ್ನ ಎಲ್ಇಡಿ ಸ್ಕ್ರೀನ್ ಮೇಲೆ ಟೀಸರ್ ಪ್ರದರ್ಶನ ಮಾಡಿ ಟೆಸ್ಟ್ ಮಾಡಬೇಕಿತ್ತು. ಲೀಕ್ ಮಾಡಿಬಿಡ್ತಾರೆ ಎನ್ನುವ ಭಯದಿಂದ ಟೆಸ್ಟ್ ಮಾಡಲಿಲ್ಲ. ಅದೇ ಯಡವಟ್ಟಾಯ್ತು. ರಿಸ್ಕ್ ತಗೊಂಡಿದ್ದು ವರ್ಕ್ ಆಗಲಿಲ್ಲ ಎಂದು ರಾಜಮೌಳಿ ಬೇಸರ ಹೊರ ಹಾಕಿದರು. "ಪದೇ ಪದೆ ಪ್ರಯತ್ನಿಸಿದರೂ ಸಾಧ್ಯವಾಗದೇ ಇದ್ದಾಗ ಜಕ್ಕಣ್ಣ ಮತ್ತಷ್ಟು ಭಾವುಕರಾದರು. ನನಗೆ ದೇವರ ಮೇಲೆ ಅಷ್ಟು ನಂಬಿಕೆ ಇಲ್ಲ. ಆದರೆ ನಮ್ಮ ತಂದೆ ಈಗ ಹೇಳ್ತಿದ್ರು, ಹನುಮಂತ ಮುನ್ನಡೆಸುತ್ತಾನೆ ಅಂತ. ಈ ರೀತಿ ಆದಾಗ ಇದೇನಾ ಹನುಮಂತ ಮಾಡೋದು ಅನಿಸಿತು, ನನ್ನ ಪತ್ನಿಗೂ ಹನುಮ ಅಂದ್ರೆ ಭಕ್ತಿ, ಸ್ನೇಹಿತನ ರೀತಿ ಮಾತನಾಡುತ್ತಿರುತ್ತಾಳೆ. ಹನುಮಂತ ಹೀಗೆನಾ ಮಾಡೋದು ಅಂತ ಆಕೆಯ ಮೇಲೆ ಕೂಡ ಕೋಪಬಂತು" ಎಂದು ರಾಜಮೌಳಿ ಹೇಳಿದರು.
ಬಳಿಕ 'ವಾರಣಾಸಿ' ಸಿನಿಮಾ ಬಗ್ಗೆ ಮಾತನಾಡಿದ "ಮಹಾಭಾರತ, ರಾಮಾಯಣ ಅಂದ್ರೆ ಬಹಳ ಇಷ್ಟ ಅಂತ ಹೇಳ್ತಿರ್ತೀನಿ. ಮಹಾಭಾರತ ನನ್ನ ಡ್ರೀಮ್ ಪ್ರಾಜೆಕ್ಟ್. ಈ ಸಿನಿಮಾ ಆರಂಭಿಸಿದಾಗ ರಾಮಾಯಣ ಚಿತ್ರದ ಮುಖ್ಯವಾದ ಘಟ್ಟವನ್ನು ತೋರಿಸ್ತೀನಿ ಅಂದುಕೊಂಡಿರಲಿಲ್ಲ. ಆದರೆ ಪ್ರತಿ ದೃಶ್ಯ ಊಹಿಸಿಕೊಂಡರೆ ಬರೆಯುತ್ತಿದ್ದರೆ ಭೂಮಿ ಮೇಲೆ ನಿಲ್ಲುತ್ತಿರಲಿಲ್ಲ. ಗಾಳಿಯಲ್ಲಿ ತೇಲುತ್ತಿದ್ದೆ. ಮಹೇಶ್ ಬಾಬುಗೆ ಶ್ರೀರಾಮ ವೇಷ ಹಾಕಿ ಫೋಟೊಶೂಟ್ ಮಾಡಿಸಿದಾಗ ಗೂಸ್ಬಂಪ್ಸ್ ಬಂದಿತ್ತು" ಎಂದಿದ್ದಾರೆ.
ಶ್ರೀರಾಮನ ಪಾತ್ರಕ್ಕಿಂತ ಕೃಷ್ಣನ ಪಾತ್ರಕ್ಕೆ ಮಹೇಶ್ ಬಾಬು ಸೂಕ್ತ ಎಂದು ನನಗೆ ಅನ್ನಿಸುತ್ತಿತ್ತು. ರಾಮನಂತಹ ಪ್ರಶಾಂತವಾದ ಪಾತ್ರಕ್ಕೆ ಸೂಟ್ ಆಗ್ತಾರಾ ಎನ್ನುವ ಅನುಮಾನ ಇತ್ತು. ಆ ಭಾಗದ ಚಿತ್ರೀಕರಣ ಸೊಗಸಾಗಿತ್ತು. ಈಗಾಗಲೇ 60 ದಿನ ಚಿತ್ರೀಕರಣ ನಡೆದಿದೆ. ಪ್ರತಿದಿನ ಚಾಲೆಂಜ್ ಆಗಿತ್ತು. ನನ್ನ ಸಿನಿಮಾಗಳಲ್ಲೇ ಇದು ಮರೆಯಲಾಗದ್ದು. ನೀವು ಊಹಿಸಿದ್ದಕ್ಕಿಂತ ಅದ್ಭುತವಾಗಿ ಶ್ರೀರಾಮನ ಪಾತ್ರದಲ್ಲಿ ಮಹೇಶ್ ಬಾಬು ಅವರನ್ನು ನೋಡಬಹುದು ಎಂದು ಜಕ್ಕಣ್ಣ ವಿವರಿಸಿದ್ದಾರೆ.


Click it and Unblock the Notifications











